ಸಮಿಶ್ರ ಅಪಸ್ವರ:ದಿನೇಶ್ ಗುಂಡೂರಾವ್ ಗೆ ರೇವಣ್ಣ ಕೊಟ್ಟ ಖಡಕ್ ವಾರ್ನಿಂಗ್
Recommended Video

ಬೆಂಗಳೂರು, ಜ 4 : ಸುಳ್ಳುಸುಳ್ಳು ಆರೋಪ ಮಾಡಿದರೆ ಕಾಂಗ್ರೆಸ್ಸಿನವರು ಏಟು ತಿಂತಾರೆ ಎಂದು ವಾರದ ಹಿಂದೆ ಹೇಳಿದ್ದ ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಮತ್ತೆ ಕಾಂಗ್ರೆಸ್ ಮುಖಂಡರ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ.
ಈ ಬಾರಿ, ನೇರ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಟಾರ್ಗೆಟ್ ಮಾಡಿರುವ ರೇವಣ್ಣ, ಮೊದಲು ನಿಮ್ಮ ಪಕ್ಷದ ಶಾಸಕರನ್ನು ಹತೋಟಿಯಲ್ಲಿಡಿ, ಆಮೇಲೆ ನನಗೆ ಹೇಳಲು ಬನ್ನಿ ಎಂದು ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದಲ್ಲಿ ಶುಕ್ರವಾರ (ಜ 4) ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ರೇವಣ್ಣ, ಐದು ಬಾರಿ ಶಾಸಕನಾಗಿರುವ ನನಗೆ ರಾಜಕೀಯ ಹೇಗೆ ಮಾಡಬೇಕು ಎನ್ನುವುದು ಗೊತ್ತಿದೆ ಎಂದು ರೇವಣ್ಣ ಹೇಳಿದ್ದಾರೆ.
'ನಾನು ಮಂತ್ರಿಗಿರಿಗೆ ಕೇರ್ ಮಾಡುವನಲ್ಲ, ನನ್ನ ಮೇಲೆ ಸುಳ್ಳು ಆರೋಪ ಮಾಡಿದ್ರೆ ಕಾಂಗ್ರೆಸ್ನವರು ಏಟು ತಿಂತಾರಷ್ಟೆ' ಎಂದು ಸಮ್ಮಿಶ್ರ ಸರಕಾರದ ಪಾಲುದಾರ ಪಕ್ಷ ಕಾಂಗ್ರೆಸ್ ವಿರುದ್ದ ರೇವಣ್ಣ ಕಿಡಿಕಾರಿದ್ದರು.

ಬೇರೆ ಇಲಾಖೆಯಲ್ಲಿ ಮೂಗು ತೂರಿಸುತ್ತೇನೆ ಎಂಬುದು ಅಪ್ಪಟ ಸುಳ್ಳು
ನನ್ನ ಇಲಾಖೆಯಲ್ಲಿಯೇ ನನಗೆ ಮಾಡಲು ಸಾಕಷ್ಟು ಕೆಲಸಗಳಿವೆ, ನಾನು ಬೇರೆ ಇಲಾಖೆಯಲ್ಲಿ ಮೂಗು ತೂರಿಸುತ್ತೇನೆ ಎಂಬುದು ಅಪ್ಪಟ ಸುಳ್ಳು, ಉದ್ದೇಶಪೂರ್ವಕವಾಗಿ ಈ ಆರೋಪಗಳನ್ನು ಮಾಡಲಾಗುತ್ತಿದೆ. ಬೇರೆ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿದ್ದೇನೋ ಇಲ್ಲವೋ ಎಂದು ನೇರವಾಗಿ ಪರಮೇಶ್ವರ್ ಅವರನ್ನೇ ಕೇಳಿ ನೋಡಿ ಎಂದು ವಾರದ ಹಿಂದೆ ರೇವಣ್ಣ, ಕಾಂಗ್ರೆಸ್ ವಿರುದ್ದ ಗರಂ ಆಗಿದ್ದರು.

ಎಚ್ ಡಿ ರೇವಣ್ಣ ಮತ್ತು ದಿನೇಶ್ ಗುಂಡೂರಾವ್
ದಿನೇಶ್ ಗುಂಡೂರಾವ್ ಅವರಿಂದ ಎಚ್ಚರಿಕೆ ಪಡೆಯುವ ಅವಶ್ಯಕತೆ ನನಗಿಲ್ಲ. ನನ್ನನ್ನು ನೋಡಿಕೊಳ್ಳುವ ತೊಂದರೆ ಅವರಿಗೆ ಬೇಡ, ಅದನ್ನು ದೇವೇಗೌಡ್ರು ನೋಡಿಕೊಳ್ಳುತ್ತಾರೆ. ತಮ್ಮ ಪಕ್ಷದ ಶಾಸಕರನ್ನು ಮತ್ತು ಮುಖಂಡರನ್ನು ಕೆಪಿಸಿಸಿ ಅಧ್ಯಕ್ಷರಾಗಿ, ದಿನೇಶ್ ಗುಂಡೂರಾವ್ ಹತೋಟಿಯಲ್ಲಿ ಇಟ್ಟುಕೊಳ್ಳಲಿ - ಎಚ್ ಡಿ ರೇವಣ್ಣ.

ಪುಟಗೋಸಿ ಮಂತ್ರಿಗಿರಿಗೆಲ್ಲಾ ನಾನು ತಲೆಕೆಡಿಸಿಕೊಳ್ಳುವುದಿಲ್ಲ
ನಾನು ಬೇರೆ ಇಲಾಖೆಯ ಅಧಿಕಾರಿಗಳನ್ನು ವರ್ಗಾವಣೆ ಮಾಡಿಸಿದ್ದೇನೆ ಎಂಬುದೆಲ್ಲಾ ಸುಳ್ಳು ಎಂದ ಅವರು, 'ಪುಟಗೋಸಿ ಮಂತ್ರಿಗಿರಿಗೆಲ್ಲಾ ನಾನು ತಲೆಕೆಡಿಸಿಕೊಳ್ಳುವುದಿಲ್ಲ'. ಪರಮೇಶ್ವರ್ ಅವರಿಂದ ಗೃಹಖಾತೆ ಕಿತ್ತುಕೊಳ್ಳಬಾರದಿತ್ತು ಎಂದ ಅವರು, ಆರು ತಿಂಗಳಲ್ಲಿ ಅವರು ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಅವರು ದಲಿತರೆಂಬ ಕಾರಣಕ್ಕೆ ಅವರನ್ನು ವ್ಯವಸ್ಥಿತವಾಗಿ ತುಳಿಯಲಾಗುತ್ತಿದೆ ಎಂದು ರೇವಣ್ಣ ಹೇಳಿದ್ದರು.

ವಾರ್ನಿಂಗ್ ಕೊಡುವುದಕ್ಕೆ ಗೌಡ್ರು ಮತ್ತು ಮುಖ್ಯಮಂತ್ರಿಗಳಿದ್ದಾರೆ
ಯಾವುದೇ ನಿಗಮ ಮಂಡಳಿಯ ನೇಮಕದ ವಿಚಾರದಲ್ಲಿ ನಾನು ಹಸ್ತಕ್ಷೇಪ ಮಾಡುತ್ತಿಲ್ಲ ಎನ್ನುವುದನ್ನು ಒತ್ತಿಒತ್ತಿ ಹೇಳುತ್ತಿದ್ದೇನೆ. ದಿನೇಶ್ ಗುಂಡೂರಾವ್ ಅವರು ಮೊದಲು ಸತ್ಯವನ್ನು ಅರಿತು ಮಾತನಾಡಲಿ, ನನಗೆ ವಾರ್ನಿಂಗ್ ಕೊಡುವುದಕ್ಕೆ ಗೌಡ್ರು ಮತ್ತು ಮುಖ್ಯಮಂತ್ರಿಗಳಿದ್ದಾರೆ - ರೇವಣ್ಣ.

ಭಾವನಾತ್ಮಕವಾಗಿ ಕಣ್ಣೀರು
ದೇವೇಗೌಡ್ರು ಅರವತ್ತು ವರ್ಷದಿಂದ ರಾಜಕೀಯದಲ್ಲಿ ಇದ್ದಾರೆ. ಅಧಿಕಾರವಿದ್ದರೂ ಜನರ ಕಷ್ಟ ಸರಿಪಡಿಸಲು ಆಗುತ್ತಿಲ್ಲ ಎಂದು ಕಣ್ಣೀರು ಹಾಕಿದ್ದಾರೆ. ನಮಗಿರುವ ಆರ್ಥಿಕತೆಯ ಇತಿಮಿತಿಯ ಚೌಕಟ್ಟಿನಲ್ಲಿ ಕೆಲಸ ಮಾಡಬೇಕಾಗುತ್ತದೆ - ರೇವಣ್ಣ.












Click it and Unblock the Notifications