Waqf Amendment Bill: ರಾಜ್ಯಸಭೆಯಲ್ಲೂ ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರ
ಭಾರಿ ವಿರೋಧಕ್ಕೆ ಕಾರಣವಾಗಿರುವ ವಕ್ಫ್ (ತಿದ್ದುಪಡಿ) ಮಸೂದೆ ರಾಜ್ಯಸಭೆಯಲ್ಲೂ ಅಂಗೀಕಾರಗೊಂಡಿದೆ. ಈಗಾಗಲೇ ಲೋಕಸಭೆಯಲ್ಲಿ ಅಂಗೀಕಾರಗೊಂಡಿರುವ ಮಸೂದೆಯು ರಾಜ್ಯಸಭೆಯಲ್ಲಿ ತಡರಾತ್ರಿ ಪಾಸ್ ಆಗಿದೆ. ಈ ಮಸೂದೆಯ ಪರವಾಗಿ 128 ಮಂದಿ ಮತ ಚಲಾಯಿಸಿದರೆ, ವಿರುದ್ಧವಾಗಿ 95 ಮಂದಿ ಮತ ಚಲಾಯಿಸಿದರು. ರಾಜ್ಯಸಭೆಯಲ್ಲಿ ಇದನ್ನ ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮಂಡನೆ ಮಾಡಿದರು. ಈ ಮಸೂದೆಯು ಮುಸ್ಲಿಂ ಮಹಿಳೆಯರಿಗೆ ಬಲ ನೀಡುತ್ತದೆ. ಮುಸ್ಲಿಮರಲ್ಲಿ ಎಲ್ಲರ ಹಕ್ಕುಗಳನ್ನು ರಕ್ಷಿಸುವ ಉದ್ದೇಶ ಹೊಂದಿದ್ದು, ಈ ಮಸೂದೆಗೂ ಧರ್ಮಕ್ಕೂ ಯಾವುದೇ ಸಂಬಂಧ ಇಲ್ಲ. ಇದು ಆಸ್ತಿಗೆ ಮಾತ್ರ ಸಂಬಂಧಿಸಿದೆ ಎಂದು ರಿಜಿಜು ಸ್ಪಷ್ಟಪಡಿಸಿದ್ದಾರೆ.
ಈ ಮಸೂದೆಯನ್ನು ವಿರೋಧಿಸಿ ವಿರೋಧ ಪಕ್ಷಗಳು ಸದನದಲ್ಲಿ ಕಪ್ಪು ವಸ್ತ್ರ ಧರಿಸಿದ್ದರು. ಕೊನೆಗೂ ಇದು ಅಂತಿಮವಾಗಿ ಅಂಗೀಕಾರಗೊಂಡಿದೆ. ಈ ಮಸೂದೆಯು ಕಾನೂನು ಆಗಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಒಪ್ಪಿಗೆಗಾಗಿ ಕಾಯುತ್ತಿದೆ. ರಾಜ್ಯಸಭೆಯಲ್ಲಿ ನಡೆದ ವಿಸ್ತೃತ ಚರ್ಚೆಯ ನಂತರ ಶುಕ್ರವಾರ ಮುಂಜಾನೆ ವಕ್ಫ್ (ತಿದ್ದುಪಡಿ) ಮಸೂದೆ-2025 ಅನ್ನು ಅಂಗೀಕರಿಸಿತು. ಲೋಕಸಭೆಯಲ್ಲಿ 288 ಸಂಸದರು ಮತ್ತು 232 ಸಂಸದರು ಇದನ್ನು ಅನುಮೋದಿಸಿದ ನಂತರ, ರಾಜ್ಯಸಭೆಯಲ್ಲಿ 128 ಪರವಾಗಿ ಮತ್ತು 95 ವಿರುದ್ಧವಾಗಿ ಮತ ಪಡೆಯಿತು.

ತಿದ್ದುಪಡಿ ಮಾಡಿದ ವಕ್ಫ್ ಮಸೂದೆಯು ವಕ್ಫ್ ಸಂಸ್ಥೆಗಳ ಮಂಡಳಿಗಳಿಗೆ ಕಡ್ಡಾಯ ಕೊಡುಗೆಯನ್ನು ಶೇಕಡಾ 7ರಿಂದ ಶೇ 5ಕ್ಕೆ ಇಳಿಸುತ್ತದೆ. ಆದರೆ ರೂ. 1 ಲಕ್ಷಕ್ಕಿಂತ ಹೆಚ್ಚು ಆದಾಯ ಗಳಿಸುವ ಸಂಸ್ಥೆಗಳಿಗೆ ರಾಜ್ಯ ನೇಮಕಗೊಂಡ ಲೆಕ್ಕಪರಿಶೋಧಕರಿಂದ ಕಡ್ಡಾಯ ಲೆಕ್ಕಪರಿಶೋಧನೆಯನ್ನು ಜಾರಿಗೆ ತರುತ್ತದೆ. ಆಡಳಿತಾತ್ಮಕ ದಕ್ಷತೆ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸಲು, ಮಸೂದೆಯು ವಕ್ಫ್ ಆಸ್ತಿ ನಿರ್ವಹಣೆಗಾಗಿ ಸ್ವಯಂಚಾಲಿತ ಕೇಂದ್ರೀಕೃತ ಪೋರ್ಟಲ್ ಅನ್ನು ಸ್ಥಾಪಿಸಲಿದೆ.
2013ರ ಹಿಂದಿನ ನಿಯಮಗಳಿಗೆ ಹಿಂತಿರುಗಿ, ಮಸೂದೆಯು ಕನಿಷ್ಠ ಐದು ವರ್ಷಗಳ ಧಾರ್ಮಿಕ ಆಚರಣೆಯೊಂದಿಗೆ ಮುಸ್ಲಿಮರು ತಮ್ಮ ಆಸ್ತಿಯನ್ನು ವಕ್ಫ್ಗೆ ಅರ್ಪಿಸಲು ಅನುವು ಮಾಡಿಕೊಡುತ್ತದೆ. ಈ ಶಾಸನವು ವಕ್ಫ್ ಘೋಷಣೆಗಳಿಗೆ ಮುಂಚಿತವಾಗಿ ಮಹಿಳೆಯರ ಆನುವಂಶಿಕತೆಯನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುವ ಮೂಲಕ ಅವರ ಹಿತಾಸಕ್ತಿಗಳನ್ನು ರಕ್ಷಿಸುತ್ತದೆ. ವಿಧವೆಯರು, ವಿಚ್ಛೇದಿತ ಮಹಿಳೆಯರು ಮತ್ತು ಅನಾಥರನ್ನು ರಕ್ಷಿಸುವ ನಿರ್ದಿಷ್ಟ ನಿಬಂಧನೆಗಳನ್ನು ಹೊಂದಿದೆ ಎಂದು ಹೇಳಲಾಗಿದೆ.

ವಕ್ಫ್ ಎಂದು ಹೇಳಿಕೊಳ್ಳುವ ಆಸ್ತಿಗಳಿಗೆ ಸಂಬಂಧಿಸಿದಂತೆ ಈ ಮಸೂದೆಯು ಕಲೆಕ್ಟರ್ ಶ್ರೇಣಿಗಿಂತ ಮೇಲಿನ ಹುದ್ದೆಗಳನ್ನು ಹೊಂದಿರುವ ಅಧಿಕಾರಿಗಳಿಂದ ತನಿಖೆ ನಡೆಸುವಂತೆ ಆದೇಶಿಸಲಿದೆ. ಕೇಂದ್ರ ಮತ್ತು ರಾಜ್ಯ ವಕ್ಫ್ ಮಂಡಳಿಗಳಲ್ಲಿ ಮುಸ್ಲಿಮೇತರ ಸದಸ್ಯರನ್ನು ಸೇರಿಸಲು ಪ್ರಸ್ತಾಪಿಸುವ ಮೂಲಕ ವೈವಿಧ್ಯತೆಗಾಗಿ ಶಾಸನವು ಪ್ರತಿಪಾದಿಸುತ್ತದೆ ಎಂದು ಉಲ್ಲೇಖಿಸಿದೆ.
ಲೋಕಸಭೆಯಲ್ಲಿ ಮಧ್ಯರಾತ್ರಿ ಮತದಾನದಲ್ಲಿ ವಕ್ಫ್ ತಿದ್ದುಪಡಿ ಮಸೂದೆಗೆ ಅನುಮೋದನೆ ಪಡೆದ ನಂತರ ಸರ್ಕಾರ ರಾಜ್ಯಸಭೆಯಲ್ಲಿ ಅದನ್ನು ಪರಿಚಯಿಸಿತು. ಮುಸ್ಲಿಮರ ಹಕ್ಕುಗಳನ್ನು ಕಸಿದುಕೊಳ್ಳುವ ಉದ್ದೇಶವಿಲ್ಲ ಎಂದು ಪುನರುಚ್ಚರಿಸಿತು. ವಿರೋಧ ಪಕ್ಷಗಳು ಸರ್ಕಾರವು ಸಮುದಾಯವನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದರೂ, ಸದಸ್ಯರಲ್ಲಿ ಒಂದು ಬಿರುಕು ಇತ್ತು.

ಮಸೂದೆಯ ವಿರುದ್ಧ ಮತ ಚಲಾಯಿಸುವುದಾಗಿ ಈ ಹಿಂದೆ ಹೇಳಿದ್ದ ಬಿಜು ಜನತಾದಳ (ಬಿಜೆಡಿ), ಯಾವುದೇ ವಿಪ್ ಹೊರಡಿಸದಿರಲು ಮತ್ತು ಮತದಾನಕ್ಕೆ ಕೆಲವು ಗಂಟೆಗಳ ಮೊದಲು ತನ್ನ ಸದಸ್ಯರು ತಮ್ಮ ಆತ್ಮಸಾಕ್ಷಿಯನ್ನು ಚಲಾಯಿಸಬಹುದು ಎಂದು ನಿರ್ಧರಿಸಿತು.
ಮೇಲ್ಮನೆಯಲ್ಲಿ ಮಸೂದೆ ಮಂಡಿಸಿದ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಈ ಶಾಸನವು ಮುಸ್ಲಿಂ ಮಹಿಳೆಯರನ್ನು ಸಬಲೀಕರಣಗೊಳಿಸುವ ಮತ್ತು ಎಲ್ಲ ಮುಸ್ಲಿಂ ಪಂಗಡಗಳ ಹಕ್ಕುಗಳನ್ನು ರಕ್ಷಿಸುವ ಗುರಿಯನ್ನು ಹೊಂದಿದೆ. ವಕ್ಫ್ ಆಸ್ತಿಗಳ ನಿರ್ವಹಣೆ, ರಚನೆಯನ್ನು ಮುಸ್ಲಿಮರೇ ಮಾಡುತ್ತಾರೆ, ಫಲಾನುಭವಿಗಳು ಮುಸ್ಲಿಮರಾಗಿರುತ್ತಾರೆ. ಈ ವಿಷಯಗಳಲ್ಲಿ ಮುಸ್ಲಿಮೇತರರ ಒಳಗೊಳ್ಳುವಿಕೆಯ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಪಾರದರ್ಶಕತೆ, ಹೊಣೆಗಾರಿಕೆ ಮತ್ತು ದಕ್ಷತೆ ತರುವ ಗುರಿಯನ್ನು ಈ ಮಸೂದೆ ಹೊಂದಿದೆ. ಇದು ಧರ್ಮದೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ ಆದರೆ ಆಸ್ತಿಗಳೊಂದಿಗೆ ಮಾತ್ರ ವ್ಯವಹರಿಸುತ್ತದೆ ಎಂದರು.
ಪ್ರಜಾಪ್ರಭುತ್ವಕ್ಕೆ ಸಂದ ಜಯ: ಯತ್ನಾಳ್
ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರವನ್ನು ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ವಾಗತಿಸಿದ್ದಾರೆ. ಲೋಕಸಭೆ ಮತ್ತು ರಾಜ್ಯಸಭೆಗಳೆರಡರಲ್ಲೂ ಅಂಗೀಕಾರಗೊಂಡಿರುವ ವಕ್ಫ್ ತಿದ್ದುಪಡಿ ಮಸೂದೆಯು ವಕ್ಫ್ ಬೋರ್ಡ್ನ ನಿರಂಕುಶ ನಡೆಗಳಿಗೆ ಕಡಿವಾಣ ಹಾಕಲಿದೆ. ವಕ್ಫ್ ಕಾಯ್ದೆಯ ತಿದ್ದುಪಡಿಗೆ ಜಂಟಿ ಸಂಸತ್ ಸಮಿತಿ ರಚಿಸಿ, ತಿದ್ದುಪಡಿಗೆ ಸೂಚಿಸಿದ ಕೇಂದ್ರ ಸರ್ಕಾರಕ್ಕೂ, ಜೆಪಿಸಿ ಅಧ್ಯಕ್ಷರಿಗೂ, ಸದಸ್ಯರಿಗೂ ಸೇರಿದಂತೆ ತಿದ್ದುಪಡಿಗೆ ಕಾರಣೀಭೂತರಾದ ಎಲ್ಲರಿಗೂ ನನ್ನ ಅನಂತ ಧನ್ಯವಾದಗಳು ಎಂದಿದ್ದಾರೆ.

ತಿದ್ದುಪಡಿಯಿಂದ ರೈತರಿಗೆ, ಮಠಗಳಿಗೆ, ದೇವಸ್ಥಾನಗಳಿಗೆ, ಸರ್ಕಾರಿ ಭೂಮಿ ಹಾಗೂ ಜನ ಸಾಮಾನ್ಯರ ಭೂಮಿಯನ್ನು ವಕ್ಫ್ ಎಂದು ಘೋಷಿಸಲು ಸಾಧ್ಯವಿಲ್ಲ ಹಾಗೂ ಜಿಲ್ಲಾಡಳಿತ ಮತ್ತು ನ್ಯಾಯಾಲಯಗಳಷ್ಟೇ ಇದನ್ನು ತೀರ್ಮಾನಿಸಬಹುದು. ನಮ್ಮ ಸಾಮೂಹಿಕ ಹೋರಾಟಕ್ಕೆ ಜಯ ಸಂದಿರುವುದು ಸಾಕಷ್ಟು ಸಂತಸ ತಂದಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ವಿಜಯಪುರದಲ್ಲಿ ನಮ್ಮ ತಂಡದಿಂದ ಮೊಳಗಿದ ಹೋರಾಟ ರಾಷ್ಟ್ರವ್ಯಾಪಿ ಹರಡಿದ್ದು ಸ್ಮರಿಸಬಹುದು. ಈ ಹೋರಾಟದಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಭಾಗವಹಿಸಿ ಬೆಂಬಲ, ಪ್ರೋತ್ಸಾಹ ನೀಡಿದ ಎಲ್ಲ ನಾಯಕರಿಗೆ, ಮಠಾಧೀಶರಿಗೆ, ಜನಸಾಮಾನ್ಯರಿಗೆ, ವಿಜಯಪುರದಲ್ಲಿ ಧರಣಿ ಮಾಡುತ್ತಿರುವಾಗ ದೂರ-ದೂರುಗಳಿಂದ ರೊಟ್ಟಿ ಊಟ ಕೊಟ್ಟ ಅನ್ನದಾತರಿಗೆ, ಹೆಬ್ಬಂಡೆಯಂತೆ ನಿಂತ ನಮ್ಮ ತಂಡದ ಸದಸ್ಯರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಇದು ಪ್ರಜಾಪ್ರಭುತ್ವಕ್ಕೆ ಸಂದ ಜಯ ಎಂದು ಯತ್ನಾಳ್ ಹೇಳಿದ್ದಾರೆ.
ರಾಜ್ಯಸಭೆಯಲ್ಲೂ ಸಂಪೂರ್ಣ ಬಹುಮತದೊಂದಿಗೆ ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರಗೊಂಡಿದೆ. ವಕ್ಫ್ ಅಕ್ರಮಕ್ಕೆ ತಡೆಯೊಡ್ಡಿ, ಜನಸಾಮಾನ್ಯರ ತೊಂದರೆಗಳಿಗೆ ಇತಿಶ್ರೀ ಹಾಡಿದ ಸನ್ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಸಮಸ್ತ ಭಾರತೀಯರ ಪರವಾಗಿ ನನ್ನ ಹೃತ್ಪೂರ್ವಕ ಅಭಿನಂದನೆಗಳು ಎಂದು ಬಿಜೆಪಿ ಶಾಸಕಿ ಮಂಜುಳಾ ಅರವಿಂದ್ ಲಿಂಬಾವಳಿ ಸ್ವಾಗತಿಸಿದ್ದಾರೆ.
ಸುಪ್ರೀಂಕೋರ್ಟ್ಗೆ ಡಿಎಂಕೆ ಅರ್ಜಿ
ತಮಿಳುನಾಡಿನ ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಗುರುವಾರ ಲೋಕಸಭೆಯು 288-232 ಮತಗಳೊಂದಿಗೆ ಅಂಗೀಕರಿಸಿದ ವಿವಾದಾತ್ಮಕ ವಕ್ಫ್ (ತಿದ್ದುಪಡಿ) ಮಸೂದೆಯನ್ನು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸುವುದಾಗಿ ಹೇಳಿದೆ. ಬಹುಮತ ಪಕ್ಷಗಳ ವಿರೋಧದ ಹೊರತಾಗಿಯೂ ಲೋಕಸಭೆಯಲ್ಲಿ ಕೆಲವು ಮೈತ್ರಿ ಪಾಲುದಾರರ ಸಹಾಯದಿಂದ ಮಸೂದೆಯನ್ನು ಅಂಗೀಕರಿಸುವುದು ಭಾರತದ ಸಂವಿಧಾನದ ಮೇಲಿನ ದಾಳಿ ಎಂದು ಸ್ಟಾಲಿನ್ ವಾದಿಸಿದ್ದಾರೆ. ಇದು ದೇಶದಲ್ಲಿ ಕೋಮು ಸಾಮರಸ್ಯವನ್ನು ಕದಡುವ ಪ್ರಯತ್ನ. ಡಿಎಂಕೆ ಸುಪ್ರೀಂಕೋರ್ಟ್ನಲ್ಲಿ ಮಸೂದೆಯನ್ನು ಪ್ರಶ್ನಿಸುತ್ತದೆ ಎಂದು ಹೇಳಿದ್ದಾರೆ.
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications