ನಾಳೆಯಿಂದ ಜಂಟಿ ಅಧಿವೇಶನ; ಸರ್ಕಾರಕ್ಕೆ ಮಹತ್ವದ ಸಂದೇಶ ಕೊಟ್ಟ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ!
ಬೆಂಗಳೂರು, ಜ. 27: ನಾಳೆ(ಜ.28)ಯಿಂದ ವಿಧಾನ ಮಂಡಲ ಜಂಟಿ ಅಧಿವೇಶನ ಆರಂಭವಾಗಿಲಿದ್ದು, ಮುಖ್ಯಮಂತ್ರಿ ಹಾಗೂ ಸಚಿವರಿಗೆ ಮಹತ್ವದ ಸಂದೇಶವನ್ನು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ರವಾನಿಸಿದ್ದಾರೆ. ನಾಳೆ ಬೆಳಗ್ಗೆ 11 ಗಂಟೆಗೆ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲ ವಜೂಬಾಯಿ ವಾಲಾ ಅವರು ಭಾಷಣ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಇವತ್ತು (ಜ.27) ರಂದು ರಾಜ್ಯಪಾಲರನ್ನು ಭೇಟಿ ಮಾಡಿ ಜಂಟಿ ಅಧಿವೇಶನಕ್ಕೆ ಆಗಮಿಸುವಂತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮನವಿ ಮಾಡಿದ್ದಾರೆ.
ಜನವರಿ 28 ರಿಂದ ಫೆಬ್ರುವರಿ 5ರ ವರೆಗೆ ಒಟ್ಟು 7 ದಿನಗಳ ಕಾಲ ಅಧಿವೇಶನ ನಡೆಯಲಿದೆ. ಅಧಿವೇಶನ ನಡೆಸಲು ವಿಧಾನಸಭೆ ಸಚಿವಾಲಯ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ರಾಜ್ಯಪಾಲರ ಭಾಷಣದ ನಂತರ ಇತ್ತೀಚೆಗೆ ನಿಧನರಾದ ಗಣ್ಯವ್ಯಕ್ತಿಗಳಿಗೆ ಸಂತಾಪ ಸಲ್ಲಿಸಲಾಗುವುದು ಎಂದು ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಹಾಗೂ ಸಚಿವರಿಗೆ ಕಾಗೇರಿ ಅವರು ಮಹತ್ವದ ಸಂದೇಶ ರವಾನಿಸಿದ್ದಾರೆ. ಏನದು ಸಂದೇಶ? ಮುಂದೆ ಓದಿ.
ಸರ್ಕಾರಕ್ಕೆ ಖಡಕ್ ಸಂದೇಶ ರವಾನೆ
ಈ ಜಂಟಿ ಅಧಿವೇಶನದಲ್ಲಿ 3 ಸುಗ್ರೀವಾಜ್ಞೆಗಳು ಸೇರಿದಂತೆ ಒಟ್ಟು 11 ವಿಧೇಯಕಗಳು ಚರ್ಚೆಗೆ ಬರಲಿವೆ. ವಿಧಾನಸಭೆಯಲ್ಲಿ ಮಂಡನೆ ಆಗುವ ವಿಧೇಯಕಗಳನ್ನು ಆದಷ್ಟು ಬೇಗ ಕೊಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಎಲ್ಲಾ ಸಚಿವರಿಗೆ ವಿನಂತಿಸಿದ್ದೇನೆ ಎಂದು ಸ್ಪೀಕರ್ ಕಾಗೇರಿ ಅವರು ಹೇಳಿದ್ದಾರೆ. ಮತ್ತೊಮ್ಮೆ ಮಾಧ್ಯಮಗಳ ಮೂಲಕ ಇದೇ ಸಂದೇಶವನ್ನು ರವಾನಿಸುತ್ತೇನೆ. ಕಾನೂನು ರಚನೆ ಮಾಡುವುದೇ ನಮ್ಮ ಕೆಲಸ.
ಹೀಗಾಗಿ ವಿಧೇಯಕಗಳ ಮೇಲೆ ಚರ್ಚೆ ನಡೆಯಬೇಕು. ಚರ್ಚೆ ನಡೆಯಲು ವಿಧೇಯಕಗಳನ್ನು ಬೇಗನೆ ಕೊಡಬೇಕು ಎಂದು ಸ್ಪೀಕರ್ ಕಾಗೇರಿ ಅವರು ಸರ್ಕಾರಕ್ಕೆ ಸೂಚಿಸಿದ್ದಾರೆ.
ಕೋವಿಡ್ ಪರೀಕ್ಷೆ ಕುರಿತು ಸ್ಪಷ್ಟನೆ
ಕೋವಿಡ್ ಹಿನ್ನೆಲೆಯಲ್ಲಿ ಈ ಭಾರಿಯ ಅಧಿವೇಶನದಲ್ಲಿ ಈ ಹಿಂದಿನ ಅಧಿವೇಶನಗಳಂತೆ ಮುನ್ನಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಹೀಗಾಗಿ ಕಲಾಪ ವೀಕ್ಷಣೆಗೆ ಸಾರ್ವಜನಿಕರಿಗೆ ಪ್ರವೇಶವಿರುವುದಿಲ್ಲ. ಅಧಿವೇಶನದಲ್ಲಿ ಪಾಲ್ಗೊಳ್ಳಲು ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಹಾಗೂ ಮಾಧ್ಯಮಪ್ರತಿನಿಧಿಗಳಿಗೆ ಕಡ್ಡಾಯ ಕೋವಿಡ್ ಪರೀಕ್ಷೆಯ ಅವಶ್ಯಕತೆ ಇರುವುದಿಲ್ಲ. ಆದರೆ, ಮಾಸ್ಕ್, ಸ್ಯಾನಿಟೈಸರ್ ಸೇರಿದಂತೆ ಮುಂಜಾಗರೂಕತಾ ಕ್ರಮಗಳನ್ನು ಪಾಲಿಸಬೇಕು, ಅನಾರೋಗ್ಯ ಅಥವಾ ಕೋವಿಡ್ ಲಕ್ಷಣಗಳು ಕಂಡು ಬಂದಲ್ಲಿ ಅಧಿವೇಶನದ ಆವರಣದಲ್ಲಿ ಸ್ಥಾಪಿಸಲಾಗಿರುವ ಕೋವಿಡ್ ಪರೀಕ್ಷೆ ವಿಶೇಷ ಘಟಕದಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬಹುದು ಎಂದು ಸ್ಪೀಕರ್ ಕಾಗೇರಿ ಅವರು ತಿಳಿಸಿದರು.
ದೆಹಲಿ ಘಟನೆ ಖಂಡಿಸಿದ ಸ್ಪೀಕರ್
ಜನವರಿ 26 ರಂದು ನವದೆಹಲಿಯಲ್ಲಿ ನಡೆದ ರೈತ ಚಳುವಳಿಯ ಹಿಂಸಾತ್ಮಕ ಘಟನೆಯನ್ನು ಖಂಡಿಸುವುದಾಗಿ ಸಗಪೀಕರ್ ಕಾಗೇರಿ ಅವರು ಹೇಳಿದರು. ಸಂವಿಧಾನಾತ್ಮಕ ವಾಗಿ ಪ್ರತಿಭಟನೆ ಮಾಡಲು ಎಲ್ಲರಿಗೂ ಅವಕಾಶವಿದ್ದು ಈ ರೀತಿಯ ಘಟನೆ ಮರುಕಳಿಸದಂತೆ ಎಲ್ಲರೂ ಜವಾಬ್ದಾರಿ ವಹಿಸಬೇಕಾದ ಅವಶ್ಯಕತೆ ಇದೆ. ದೆಹಲಿಯಲ್ಲಿ ಗಣರಾಜ್ಯೋತ್ಸವದಂದು ನಡೆದ ಘಟನೆ ಒಂದು ಕಪ್ಪು ಚುಕ್ಕೆ. ಕೆಂಪುಕೋಟೆ ಮೇಲೆ ಇನ್ಯಾವುದೇ ಧ್ವಜ ಹಾರಿರುವುದನ್ನು ನಾನು ಖಂಡಿಸುತ್ತೇನೆ. ಈ ರೀತಿಯ ಕೃತ್ಯ ಮಾಡುವಂತಹ ಕೆಲಸ ಯಾರಿಂದಲೂ ಆಗಬಾರದು. ನಮ್ಮ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಘಟನೆಗಳು ನಡೆಯುತ್ತಿವೆ ಎಂದು ದೆಹಲಿ ಘಟನೆ ಕುರಿತು ಕಾಗೇರಿ ಅವರು ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.
Recommended Video
ಸಂಸದೀಯ ವ್ಯವಸ್ಥೆ ಬಗ್ಗೆ ಚರ್ಚೆ
ವಿಧಾನ ಪರಿಷತ್ ಘಟನೆ ಸೇರಿದಂತೆ ಸಂಸದೀಯ ವ್ಯವಸ್ಥೆ ಬಗ್ಗೆ ಗಂಭೀರವಾಗಿ ಚರ್ಚೆಯನ್ನು ಮಾಡಬೇಕಾದ ಅಗತ್ಯವಿದೆ. ಈ ಬಗ್ಗೆ ಸಮಾಲೋಚನಾ ಸಭೆಯನ್ನು ಈ ಅಧಿವೇಶನದ ಬಳಿಕ ಹಾಗೂ ಬಜೆಟ್ ಅಧಿವೇಶನದ ಮೊದಲು ಮಾಡುತ್ತೇವೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿಕೆ ನೀಡಿದ್ದಾರೆ.