ಸಚಿವ ಆರ್. ಅಶೋಕ್ ಮೇಲೆ ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿ ಗರಂ!
ಬೆಂಗಳೂರು, ಡಿ. 07: ಕಂದಾಯ ಸಚಿವ ಆರ್. ಅಶೋಕ್ ಅವರ ಮೇಲೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ್ ಹೆಗಡೆ ಕಾಗೇರಿ ಅವರು ಗರಂ ಆಗಿದ್ದ ಘಟನೆ ವಿಧಾನಸಭೆಯಲ್ಲಿ ನಡೆಯಿತು. ಮೊದಲ ದಿನದ ಕಲಾಪದಲ್ಲಿ ಶಾಸಕರ ಸಂಖ್ಯೆಯೂ ವಿರಳವಾಗಿತ್ತು. ಹೆಚ್ಚಿನ ಸಚಿವರೂ ಕಲಾಪಕ್ಕೆ ಗೈರುಹಾಜರಾಗಿದ್ದರು. ಇದೇ ಸಂದರ್ಭದಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಸಚಿವ ಆರ್. ಅಶೋಕ್ ಅವರು ಶೃಂಗೇರಿ ಶಾಸಕ ರಾಜೇಗೌಡ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಸದನದಲ್ಲಿ ಉತ್ತರಿಸುತ್ತಿದ್ದರು.
ಪಹಣಿ ದಾಖಲಿಸುವ ಸಾಫ್ಟ್ವೇರ್ ಕಳೆದ ಒಂದು ವರ್ಷದಿಂದ ಹಾಳಾಗಿದೆ. ಅದು ಸರಿ ಆಗೋದು ಯಾವಾಗ? ಎಂದು ಶೃಂಗೇರಿ ಶಾಸಕ ರಾಜೇಗೌಡ ಪ್ರೆಶ್ನೆ ಕೇಳಿದ್ದರು. ಶೀಘ್ರ ಸಮಸ್ಯೆಯನ್ನು ಸರಿಪಡಿಸುವ ಭರವಸೆಯನ್ನು ಕಂದಾಯ ಸಚಿವ ಅಶೋಕ್ ಅವರು ಸದನಕ್ಕೆ ನೀಡಿದರು. ಆಗ ಮಧ್ಯ ಪ್ರವೇಶ ಮಾಡಿದ ಸ್ಪೀಕರ್ ಕಾಗೇರಿ ಅವರು ಅಸಮಾಧಾನ ವ್ಯಕ್ತಪಡಿಸಿದರು.

ನಿಮ್ಮ ಅಧಿಕಾರಿಗಳು ಹೇಳಿದ್ದನ್ನು ತಂದು ಇಲ್ಲಿ ಓದಿದರೆ ಆಗಲ್ಲ. ನೀವು ಬಹಳಷ್ಟು ಅನುಭವ ಇರುವ ಸಚಿವರು. ಈ ಸಮಸ್ಯೆಯಿಂದಾಗಿ ರೈತರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಖಾಸಗಿ ಎಜೆನ್ಸಿಯವರು ಸರ್ಕಾರದ ಮರ್ಯಾದೆ ಹಾಳು ಮಾಡಿ ಬಿಡುತ್ತಾರೆ ಎಂದು ಕಂದಾಯ ಸಚಿವ ಅಶೋಕ್ ಅವರ ಕಾರ್ಯವೈಖರಿ ಕುರಿತು ಸ್ಪೀಕರ್ ಅಸಮಾಧಾನ ವ್ಯಕ್ತಪಡಿಸಿದರು. ಸ್ಪೀಕರ್ ಜೊತೆಗೂಡಿ ಮಲೆನಾಡು ಭಾಗದ ಶಾಸಕರೂ ಅಶೋಕ್ ಅವರ ಮೇಲೆ ವಾಗ್ದಾಳಿ ನಡೆಸಿದರು. ಆ ಸಂದರ್ಭದಲ್ಲಿ ಸಚಿವ ಆರ್ ಅಶೋಕ್ ಅವರ ನೆರವಿಗೆ ಉಳಿದವರಾರೂ ಬರಲಿಲ್ಲ ಎಂಬುದು ವಿಶೇಷ.

ಇದನ್ನೇ ತಮ್ಮ ಫೇಸ್ಬುಕ್ ಖಾತೆಯಲ್ಲಿಯೂ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಹಂಚಿಕೊಂಡಿದ್ದಾರೆ. ಇಂದಿನಿಂದ ಪ್ರಾರಂಭವಾದ ಅಧಿವೇಶನದಲ್ಲಿ, ಪಹಣಿ ಪತ್ರಿಕೆಯಲ್ಲಿ ಬೆಳೆ ಮಾಹಿತಿ ಹಾಗೂ ಪಹಣಿ ಪತ್ರಿಕೆಯ ಕುರಿತಾಗಿ ಉಂಟಾಗುತ್ತಿರುವ ಇನ್ನಿತರ ಗೊಂದಲಗಳನ್ನು ಮಾನ್ಯ ಕಂದಾಯ ಸಚಿವರಾದ ಆರ್. ಅಶೋಕ ಅವರ ಗಮನಕ್ಕೆ ತಂದು, ರೈತರಿಗೆ ಉಂಟಾಗುತ್ತಿರುವ ಈ ಸಮಸ್ಯೆಗಳನ್ನು ಬಗೆಹರಿಸುವಂತೆ ಸೂಚಿಸಿದ್ದೇನೆ ಎಂದು ಹಂಚಿಕೊಂಡಿದ್ದಾರೆ.












Click it and Unblock the Notifications