ಪಂಚಮಸಾಲಿಗೆ ಮೀಸಲಾತಿ ತಡೆದಿದ್ದು ಯತ್ನಾಳ್: ಅವರ ವರ್ತನೆ ಸರಿಯಿಲ್ಲ ಎಂದು ನಿರಾಣಿ ಹೇಳಿಕೆ
ವಿಜಯಪುರ, ಜೂನ್ 29: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಸೋಲು, ಪಂಚಮಸಾಲಿ ಮೀಸಲಾತಿ ವಿಚಾರವಾಗಿ ಮಾಜಿ ಸಚಿವ ಮುರುಗೇಶ್ ನಿರಾಣಿ ಅವರು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ವಿರುದ್ಧ ಕಿಡಿ ಕಾರಿದ್ದಾರೆ. ಈ ಮೂಲಕ ಸ್ವಪಕ್ಷ ಬಿಜೆಪಿ ನಾಯಕರಲ್ಲಿ ಎಲ್ಲವು ಸರಿ ಇಲ್ಲ ಎಂಬುದನ್ನು ಜಗಜ್ಜಾಹೀರು ಮಾಡಿದ್ದಾರೆ. ಇದು ಆಡಳಿತ ಪಕ್ಷ ಕಾಂಗ್ರೆಸ್ಗೆ ಮುಂದಿನ ದಿನಗಳಲ್ಲಿ ವರದಾನವಾಗಲಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ವಿಜಯಪುರ ಜಿಲ್ಲೆಯ 07 ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋಲಲು ಸ್ಥಳಿಯ ಶಾಸಕರ ಬಸನಗೌಡ ಪಾಟೀಲ್ ಯತ್ನಾಳ್ ಕಾರಣ ಎಂದು ಮಾಜಿ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ವಾಗ್ದಾಳಿ ನಡೆಸಿದರು.

ವಿಜಯಪುರದಲ್ಲಿ ಸಂಸದ ರಮೇಶ್ ಜಿಗಜಿಣಗಿ ಅವರ ನೇತೃತ್ವದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರಾಣಿ, ಸ್ಥಳೀಯವಾಗಿ ಬಿಜೆಪಿ ಸೋಲಿಗೆ ಮತ್ತು ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವ ಪ್ರಯತ್ನ ಸಹ ತಡೆದಿದ್ದು ಯತ್ನಾಳ ಅವರೆ. ಆದರೆ ಅದಕ್ಕೆ ಗುರಿಯಾಗಿದ್ದು ಮಾತ್ರ ಬಿಜೆಪಿ ಪಕ್ಷ ಎಂದು ತಿಳಿಸಿದರು.
ಸ್ವಪಕ್ಷದವರ ವಿರುದ್ಧವು ಯತ್ನಾಳ್ ಹಗುರ ಹೇಳಿಕೆ
ಉದ್ಯಮಿ ವಿಜಯ ಸಂಕೇಶ್ವರ ಅವರ ಕುರಿತು ಮಾತನಾಡಿದ್ದಕ್ಕೆ ನ್ಯಾಯಾಲಯದಲ್ಲಿ ಇದೇ ಯತ್ನಾಳರು ಕ್ಷಮಾಪಣೆ ಕೇಳಿ ಬಂರು. ಅದಷ್ಟೇ ಅಲ್ಲದೇ ವಿವಿಧ ಸಮುದಾಯಗಳ ಬಗ್ಗೆ ಹಗುರವಾಗಿ ಆತನಾಡುತ್ತಾರೆ. ಅಷ್ಟೇ ಯಾಕೆ ಸ್ವಪಕ್ಷದ ನಾಯಕರಾದ ಬಿಎಸ್ ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಜಗದೀಶ್ ಶೆಟ್ಟರ್, ವಿ.ಸೋಮಣ್ಣ ಅವರ ಬಗ್ಗೆಯೂ ಕೇವಲವಾಗಿ ಮಾತನಾಡಿದ್ದಾರೆ.
ಈ ಶಾಸಕರಿಗೆ 'ಮಂದ್ಯಾಗ ಒದೆಯೋದು... ಸಂದ್ಯಾಗ ಕಾಲ ಹಿಡಿದುಕೊಳ್ಳುವ' ಉಕ್ತಿ ಸೂಕ್ತವಾಗುತ್ತದೆ. ಇದೊಂದು ನಾಟಕ ಕಂಪನಿ ಇದ್ದಂತೆ. ಇದು ಇವರ ಚಾಳಿಯಾಗಿದೆ. ಮುಂದಿನ ದಿನಗಳಲ್ಲಿ ಸಂದರ್ಭ ಬಂದರೆ ಎಲ್ಲ ಬಹಿರಂಗ ಮಾಡುವೆ. ಇನ್ನೂ ಹೆಲಿಕಾಪ್ಟರ್ ಕೊಟ್ಟು ಯತ್ನಾಳರನ್ನು ಚುನಾವಣೆ ಪ್ರಚಾರಕ್ಕೆ ಕಳಿಸಲಾಗಿತ್ತು. ಅವರ ಎಷ್ಟು ಸೀಟು ಗೆದ್ದುಕೊಂಡು ಬಂದರೂ ಎಂದು ನಿರಾಣಿ ಪ್ರಶ್ನಿಸಿದರು.

ಬೊಮ್ಮಾಯಿ ಕಾದರೂ ತಡವಾಗಿ ಬಂದು ಖ್ಯಾತೆ
ರಾಜ್ಯದಲ್ಲಿ ಒಬ್ಬರು ನಿಗಮದ ಅಧ್ಯಕ್ಷರಾಗಬೇಕಾದರೆ ನೂರು ಕೊಟಿ ರೂಪಾಯಿ ಕೊಡಬೇಕಿದೆ ಎಂದು ಯತ್ನಾಳರು ಹೇಳಿದ್ದರು. ಇವರ ಹೇಳಿಕೆಯಿಂದ ಪಕ್ಷಕ್ಕೆ ಹೊಡೆತ ಬಿತ್ತು. ವಿಜಯಪುರದಲ್ಲಿ ಸೋತ ಅಭ್ಯರ್ಥಿಗಳ ಸಮಾವೇಶ ನಡೆದಾಗ, ಶಾಸಕರಾಗಿ ಚುನಾಯಿತರಾದ ಯತ್ನಾಳ ಅವರು ಕಾರ್ಯಕ್ರಮಕ್ಕೆ ತಡವಾಗಿ ಬಂದರು. ಅವರಿಗಾಗಿ ಎರಡು ತಾಸು ಬಸವರಾಜ ಬೊಮ್ಮಾಯಿ ಕಾಯ್ದಿದ್ದರು. ಅಷ್ಟಾದರೂ ತಡವಾಗಿ ಬಂದು ತಗಾದೆ ತೆಗೆದಿದ್ದಕ್ಕೆ ಬೇಸರವಾಗಿ ನಾವು ಸಮಾವೇಶದಿಂದ ಹೊರನಡೆದೆವು ಎಂದು ತಿಳಿಸಿದರು.
ಮಹಾನಗರ ಪಾಲಿಕೆಯಲ್ಲಿ ಮೇಯರ್ ಮಾಡಿದರೆ ಅಧಿಕಾರ ವಿಕೇಂದ್ರಿಕರಣವಾಗುತ್ತದೆ ಎಂದು ಹಾಗೂ ಅಧಿಕಾರ ತಾವಷ್ಟೇ ಅನುಭವಿಸಲು ಚುನಾವಣೆ ನಡೆಸಲಿಲ್ಲ. ನಿಯತ್ತಿನ ಮಾತನಾಡುವ ಶಾಸಕರು ಅಧಿಕಾರಿಗಳಿಗೆ ಗೋಶಾಲೆಗೆ ಹಣ ಕೊಡಿ ಎಂದು ಹೇಳುತ್ತಾರೆ. ಬಿಜೆಪಿ ಸಾಧನೆ ಹೇಳುವ ಬದಲು ವೈಯುಕ್ತಿಕ ಪ್ರತಿಷ್ಠೆ ತೋರಿಕೊಳ್ಳುತ್ತಾರೆ ಎಂದರೆ ಅವರ ಮನಸ್ಸಿನಲ್ಲಿ ಏನಿದೆ ಎಂಬುದು ಗೊತ್ತಾಗುತ್ತದೆ ಎಂದು ಟಾಂಗ್ ನೀಡಿದರು.
ರೈತರಿಗೆ ಟೋಪಿ ಹಾಕಿ ಕಾರಿನಲ್ಲಿ ಯತ್ನಾಳ್ ಒಡಾಟ
ಈ ಶಾಸಕರು ಸಕ್ಕರೆ ಕಾರ್ಖಾನೆ ಶುರುಮಾರಿ ರೈತರಿಗೆ ಟೋಪಿ ಹಾಕಿದರು. ಹೈಪರ್ ಮಾರ್ಟ್ ಮಾಡಲು ಅಪಾರ ಹಣ ಮಾಡಿಕೊಂಡರು, ಹಣ ಬಂದ ಮೇಲೆ ಮಾರ್ಟ್ಗೆ ಬೀಗ ಹಾಕಿ ಈಗ ಕಾರಿನಲ್ಲಿ ಓಡಾಡುತ್ತಿದ್ದಾರೆ. ಪಂಚಮಸಾಲಿ ಮೀಸಲಾತಿಗಾಗಿ ನಾನು, ಸಿ.ಸಿ. ಪಾಟೀಲ, ಶಂಕರ ಪಾಟೀಲ ಮುನೇನಕೊಪ್ಪ ಸೇರಿ ಹಲವು ಪ್ರಾಮಾಣಿಕ ಪ್ರಯತ್ನ ಮಾಡಿದೆವು.
ಆಗಲೂ ನಮ್ಮ ಮೇಲೆಯೇ ಕತ್ತಿಮಸಿಯಲು ಮುಂದಾರು. ಬಿಜೆಪಿಯಲ್ಲಿದ್ದರೂ ಸ್ವಪಕ್ಷದವರ ವಿರುದ್ಧವೇ ಮಾತನಾಡಿ, ಹೋರಾಡಿತ ಇವರು ಕಾಂಗ್ರೆಸ್ ವಿರುದ್ಧ ಏಕೆ ಹೋರಾಟ ಮಾಡುತ್ತಿಲ್ಲ ಎಂದು ಅವರು ವ್ಯಂಗ್ಯ ಮಾಡಿದರು.
ಒಂದು ಕಾಲದಲ್ಲಿ ವಿಜಯಪುರ ನಗರ ಹಾಲಿ ಶಾಸಕರು ಕಾಂಗ್ರೆಸ್ ಕದ ತಟ್ಟಿದ್ದರು. ಇನ್ನೇನು ಆ ಪಕ್ಷ ಸೇರ್ಪಡೆ ಆಗಬೇಕೆನ್ನುವಷ್ಟರಲ್ಲಿ ದಿ. ಅನಂತಕುಮಾರ್ ಅವರು ಮನವೊಲಿಸಿದ ಪರಿಣಾಮ ಪಕ್ಷಕ್ಕೆ ಉಳಿದುಕೊಂಡರು. ಅದೆಲ್ಲ ಆದ ಮೇಲೆ ಬಿಜೆಪಿಗೆ, ಸ್ವತಃ ಅನಂತ್ ಕುಮಾರ್ ಅವರ ವಿರುದ್ಧವೇ ಮಾತನಾಡಿದರು.
ಶಾಸಕ ಯತ್ನಾಳ್ ಅವರ ವರ್ತನೆ ಹೀಗೆ ಮುಂದುವರೆದಿದ್ದೇ ಆದಲ್ಲಿ ಪಾಪದ ಕೊಡ ತುಂಬುತ್ತದೆ. ಈಗಾಗಲೇ ಶಾಸಕರ ವರ್ತನೆ ಜನರಿಗೆ ಗೊತ್ತಾಗಿದೆ. ಅಲ್ಲದೇ ಹಿಂದು ಹಿಂದು ಎಂದುಕೊಂಡು ಟೋಪಿ ಹಾಕಿ ನಮಾಜ್ ಮಾಡಿದ್ದನ್ನು ಜನ ನೋಡಿದ್ದಾರೆ. ಅವರಿಂದ ಬಿಜೆಪಿ ಕಾರ್ಯಕರ್ತರಿಗೂ ತೊಂದರೆಯಾಗುತ್ತಿದೆ. ಇವರ ಬಗ್ಗೆ ಬಸವರಾಜ ಬೊಮ್ಮಾಯಿ ಅವರು ಸಹ ಸಾಕಷ್ಟು ಸಹನೆಯಿಂದ ಇದ್ದಾರೆ. ಅವರ ಮೌನ ಮುರಿದರೆ ಈ ಬಗ್ಗೆ ತಮ್ಮ ನಿಲುವು ತಿಳಿಸಿದರೂ ತಿಳಿಸಬಹುದು ಎಂದು ನಿರಾಣಿ ಹೇಳಿದರು.












Click it and Unblock the Notifications