ಕೊಡಗು ಜಿಲ್ಲೆಯಾದ್ಯಂತ ಅಘೋಷಿತ ಬಂದ್
ಕೊಡಗು, ನವೆಂಬರ್ 11 : ಕೊಡಗು ಜಿಲ್ಲೆಯಾದ್ಯಂತ ಅಘೋಷಿತ ಬಂದ್ ಏರ್ಪಟ್ಟಿದೆ. ಮಂಗಳವಾರ ರಣರಂಗವಾಗಿ ಮಾರ್ಪಟ್ಟಿದ್ದ ಮಡಿಕೇರಿಯಲ್ಲಿ ನೀರವ ಮೌನ ಮನೆ ಮಾಡಿದ್ದು, ಬಿಕೋ ಎನ್ನುತ್ತಿದೆ. ಯಾವುದೇ ವಾಹನ ರಸ್ತೆಗಿಳಿದಿಲ್ಲ. 144 ಸೆಕ್ಷನ್ ಜಾರಿ ಮಾಡಲಾಗಿದ್ದು, ಎಲ್ಲೆಡೆ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.
ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆ. ಗುರುವಾರ ಮಧ್ಯರಾತ್ರಿವರೆಗೂ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಮಾದಾಪುರದಲ್ಲಿ ಮಂಗಳವಾರ ಮೃತಪಟ್ಟ ಕುಟ್ಟಪ್ಪ ಅವರ ಅಂತ್ಯಕ್ರಿಯೆ ಬುಧವಾರ ಮಧ್ಯಾಹ್ನ ಮುಕ್ತಾಯಗೊಂಡಿದೆ. [ಕುಟ್ಟಪ್ಪ ಸಾವು: ಆಕಸ್ಮಿಕವೋ, ಪೂರ್ವ ನಿಯೋಜಿತವೋ?]

ದುಷ್ಕರ್ಮಿಗಳಿಂದ ಕಾರಿಗೆ ಬೆಂಕಿ : ಗೋಣಿಕೊಪ್ಪದಲ್ಲಿ ಹೋಟೆಲ್ ಮುಂದೆ ನಿಲ್ಲಿಸಿದ್ದ ಮಾರುತಿ ಓಮಿನಿ ಕಾರಿಗೆ ಮಂಗಳವಾರ ಮುಂಜಾನೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಗೋಣಿಕೊಪ್ಪ, ವೀರಾಜಪೇಟೆ, ಸೋಮವಾರಪೇಟೆ, ಕುಶಾಲನಗರ ಸೇರಿದಂತೆ ಜಿಲ್ಲೆಯಾದ್ಯಂತ ಬಂದ್ ವಾತಾವರಣವಿದೆ. [ಕೊಡಗು: ಶಾಂತಿ ಕಾಪಾಡುವಂತೆ ಪರಮೇಶ್ವರ ಮನವಿ]
ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಮಾಜಿ ಸಚಿವ ಸಿ.ಟಿ.ರವಿ, ಶೋಭಾ ಕರಂದ್ಲಾಜೆ, ಶಾಸಕ ಅಪ್ಪಚ್ಚುರಂಜನ್, ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, ಶಾಸಕ ಕೆ.ಜಿ.ಬೋಪಯ್ಯ ಸೇರಿದಂತೆ ಹಲವು ಮುಖಂಡರು ಬುಧವಾರ ಕುಟ್ಟಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದ್ದಾರೆ.

ಸರ್ಕಾರವೇ ನೇರ ಹೊಣೆ : ಕುಟಪ್ಪ ಅವರಿಗೆ ಅಂತಿಮ ನಮನ ಸಲ್ಲಿಸಿದ ಬಳಿಕ ಮಾತನಾಡಿದ ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದಗೌಡ ಅವರು, 'ಮಡಿಕೇರಿಯಲ್ಲಿ ನಡೆದ ಘಟನೆಗೆ ರಾಜ್ಯ ಸರ್ಕಾರ ನೇರ ಹೊಣೆ. ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಬೇಕು. ಗುಪ್ತಚರ ಇಲಾಖೆ ವರದಿ ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ ಜಿಲ್ಲಾಡಳಿತ ಮೌನವಾಗಿರುವುದೇ ಘಟನೆ ನಡೆಯಲು ಕಾರಣವಾಗಿದೆ' ಎಂದು ಆರೋಪಿಸಿದರು.

ಪೂರ್ವ ನಿಯೋಜಿತ ಕೃತ್ಯ : 'ಕುಟ್ಟಪ್ಪ ಅವರ ಸಾವು ಪೂರ್ವ ನಿಯೋಜಿತ ಕೊಲೆ. ಸರ್ಕಾರ ಉನ್ನತ ಮಟ್ಟದ ತನಿಖೆ ನಡೆಸಬೇಕು. ತಪ್ಪತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು. ಸರ್ಕಾರದ ವೈಫಲ್ಯದಿಂದಲೇ ಘಟನೆ ನಡೆದಿದೆ' ಎಂದು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ದೂರಿದ್ದಾರೆ.












Click it and Unblock the Notifications