ಸಿಎಂ ಯಡಿಯೂರಪ್ಪ-ವಿಪಕ್ಷ ನಾಯಕ ಸಿದ್ದರಾಮಯ್ಯ ಮಧ್ಯೆ ಜಟಾಪಟಿ!
ಬೆಂಗಳೂರು, ಫೆ. 03: ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಹಾಗೂ ಜಿಎಸ್ಟಿ ಪಾಲಿನ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮಧ್ಯೆ ವಾಗ್ಯುದ್ಧ ನಡೆಯಿತು. ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ಮಾಡುತ್ತಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ರಾಜ್ಯ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಒಂದೊಂದಾಗಿ ಬಿಚ್ಚಿಡುತ್ತಿದ್ದರು. ಆಗ ಕಲ್ಯಾಣ ಕರ್ನಾಟಕವನ್ನು ನಿರ್ಲಕ್ಷಿಸಿದ ಆರೋಪವನ್ನೂ ಸಿದ್ದರಾಮಯ್ಯ ಅವರು ಮಾಡಿದರು. ಜೊತೆಗೆ ಜಿಎಸ್ಟಿ ಹಣದ ಪಾಲನ್ನು ಕೇಂದ್ರದಿಂದ ತರುವಲ್ಲಿ ಸಿಎಂ ಯಡಿಯೂರಪ್ಪ ಅವರು ವಿಫಲರಾಗಿದ್ದಾರೆ ಎಂಬ ಆರೋಪವನ್ನು ಸಿದ್ದರಾಮಯ್ಯ ಅವರು ಮಾಡಿದರು.
ಸಿದ್ದರಾಮಯ್ಯ ಅವರ ಹೇಳಿಕೆಯಿಂದ ತೀವ್ರವಾಗಿ ಕೆರಳಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ನಾನು ಹಣ ಬಿಡುಗಡೆ ಮಾಡಿಲ್ಲ ಎಂಬುದನ್ನು ತೋರಿಸಿದರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೋಗುತ್ತೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದರು. ಇಬ್ಬರೂ ನಾಯಕರ ಮಧ್ಯೆ ಆಗ ವಾಗ್ಯುದ್ಧ ಜೋರಾಗಿತ್ತು.
ವಿಧಾನಸೌಧದಲ್ಲಿ ಸಿಎಂ ಯಡಿಯೂರಪ್ಪ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮಧ್ಯೆ ಮಾತಿನ ಚಕಮಕಿ ಹೇಗಿತ್ತು? ಇಲ್ಲಿದೆ ಸಂಪುರ್ಣ ವಿವರ!

ಸಿದ್ದರಾಮಯ್ಯಗೆ ಯಡಿಯೂರಪ್ಪ ಸವಾಲು
ಕಲ್ಯಾಣ ಕರ್ನಾಟಕದ ಅಭಿವೃದ್ಧಿ ನಿರ್ಲಕ್ಷ ಮಾಡಿದ್ದೇನೆ ಎಂಬುದನ್ನು ಸಾಬೀತು ಮ ಆಡಿದರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೋಗುತ್ತೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು.
ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ಮಾಡುತ್ತಿದ್ದ ಸಿದ್ದರಾಮಯ್ಯ ಅವರು, ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಕುರಿತು ಪ್ರಸ್ತಾಪಿಸಿದಾಗ ಸಿಎಂ ಯಡಿಯೂರಪ್ಪ ಅವರು ಕೆರಳಿದರು. ಕಲ್ಯಾಣ ಕರ್ನಾಟಕಕ್ಕೆ ಇದುವರೆಗೆ 1,131 ಕೋಟಿ ರೂ.ಗಳ ಕ್ರಿಯಾ ಯೋಜನೆಗೆ ಮಂಜೂರಾತಿ ಕೊಡಲಾಗಿದೆ. 692 ಕೋಟಿ ರೂ.ಗಳನ್ನು ಈಗಾಗಲೇ ಬಿಒಡುಗಡೆ ಮಾಡಲಾಗಿದೆ. ನಾನು ಕೊಟ್ಟಿರುವ ಈ ಮಾಹಿತಿ ಸುಳ್ಳು ಎಂದು ಸಾಬೀತು ಪಡಿಸಿದರೆ, ನಾನು ರಾಜೀನಾಮೆ ಕೊಟ್ಟು ಹೋಗಲು ಸಿದ್ದ ಎಂದು ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದರು.
ಈಗಲೂ 308 ಕೋಟಿ ರೂ. ಠೇವಣಿ ಇಡಲಾಗಿದೆ. ಜೊತೆಗೆ 544 ಕೋಟಿ ರೂ. ಬಿಡುಗಡೆ ಆಗಿದೆ. ಒಟ್ಟು 850 ಕೋಟಿ ರೂ. ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ನಿಗಮದಲ್ಲಿ ಇದೆ ಎಂದು ಯಡಿಯೂರಪ್ಪ ಅವರು ಹೇಳಿದರು. ಸಿಎಂ ಯಡಿಯೂರಪ್ಪ ಅವರು ಅಂಕಿ ಅಂಶಗಳನ್ನು ಓದುತ್ತಿದ್ದ ಹಾಗೆ ವಿರೋಧ ಪಕ್ಷದ ಸದಸ್ಯರುಗಳಿಂದ ಆಕ್ಷೇಪ ವ್ಯಕ್ತವಾಯಿತು.

ಕೆಲಸ ಶುರುಮಾಡಿಕೊಳ್ಳಿ
ವಿರೋಧ ಪಕ್ಷಗಳ ಶಾಸಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಂತೆಯೆ ಗರಂ ಆದ ಸಿಎಂ ಯಡಿಯೂರಪ್ಪ ಅವರು, ಹಣ ಬಿಡುಗಡೆ ಮಾಡಲಾಗಿದೆ. ನಿಮ್ಮ ಕ್ಷೇತ್ರಗಳಲ್ಲಿ ಕೆಲಸ ಶುರುಮಾಡಿಕೊಳ್ಳಿ. ಒಂದೊಮ್ಮೆ ಅಧಿಕಾರಿಗಳು ಅಡ್ಡಿಪಡಿಸಿದರೆ ನಾನು ಅವರ ವಿರುದ್ಧ ಕಠಿಣಕ್ರಮ ಕೈಕೊಳ್ಳುತ್ತೇನೆ ಎಂದು ವಿರೋಧ ಪಕ್ಷಗಳ ಶಾಸಕರಿಗೆ ಸಿಎಂ ಭರವಸೆ ಕೊಟ್ಟರು. ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ಮೇಲೆ ವಾಗ್ದಾಳಿ ಮಾಡಿದ ಯಡಿಯೂರಪ್ಪ, ಸಿದ್ದರಾಮಯ್ಯ ಅವರೆ ನನ್ನ ಜಾಗದಲ್ಲಿ ನೀವು ಇದ್ದಿದ್ದರೆ ಏನು ಮಾಡುತ್ತಿದ್ದಿರಿ? ಕೊರೊನಾ ಸಂಕಷ್ಟ ಇದ್ದದ್ದು ನಿಮಗೂ ಗೊತ್ತಿದೆ. ಸಂಕಷ್ಟದ ಸಮಯದಲ್ಲಿ ಸಾರಿಗೆ ನೌಕರರಿಗೆ ಸೇರಿದಂತೆ ಎಲ್ಲಾ ನೌಕರಿಗೆ ವೇತನ ಬಿಡುಗಡೆ ಮಾಡಿದ್ದೇವೆ. ನಾನು ಹಣ ಪ್ರಿಂಟ್ ಮಾಡುವುದಕ್ಕೆ ಆಗಲ್ಲ, ನೀವೂ ಹಣ ಪ್ರಿಂಟ್ ಮಾಡುವುದಕ್ಕೆ ಆಗಲ್ಲ ಎಂದು ಸಮಜಾಯಿಸಿ ಕೊಟ್ಟರು.

ಸಿದ್ದರಾಮಯ್ಯ ತಿರುಗೇಟು
ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹೇಳಿಕೆಗೆ ತಿರುಗೇಟುನ ಕೊಟ್ಟ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ನಾನು ಮುಖ್ಯಮಂತ್ರಿ ಆಗಿದ್ದಿದ್ದರೆ ಪಾರ್ಲಿಮಟೆಂಟ್ ಎದುರು ನಮ್ಮ ಪಾಲಿನ ಜಿಎಸ್ಟಿ ಹಣಕ್ಕಾಗಿ ಧರಣಿ ಮಾಡುತ್ತಿದ್ದೆ. ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದಾಗ ಸ್ವರ್ಗವೇ ಆಗುತ್ತದೆ ಎಂದು ಹೇಳಿದ್ದಿರಿ. ಈಗ ನೋಡಿದ್ರೆ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರಗಳ ಆಡಳಿತದಿಂದ ನರಕವಾಗಿದೆ ಎಂದು ಟೀಕಿಸಿದರು.

ಕರ್ನಾಟಕದ ತೆರಿಗೆ ಪಾಲು!
ಕೇಂದ್ರಕ್ಕೆ ಕರ್ನಾಟಕವೊಂದೇ 2.50 ಲಕ್ಷ ಕೋಟಿ ರೂ. ತೆರಿಗೆ ಪಾಲು ನೀಡುತ್ತಿದೆ. ಆದರೆ ಅದಕ್ಕೆ ಪ್ರತಿಯಾಗಿ ಕರ್ನಾಟಕಕ್ಕೆ ಕೇಂದ್ರದಿಂದ ಬರುತ್ತಿರುವುದು ಎಷ್ಟು? ಪೆಟ್ರೋಲ್ ಸೆಸ್ 23.77ರೂ. ಡೀಸೆಲ್ ಸೆಸ್ 31.84 ರೂ. ಹೆಚ್ಚಳ ಮಾಡಲಾಗಿದೆ. ಇದು ಕೇಂದ್ರ ಸರ್ಕಾರ ಮಾಡುತ್ತಿರುವ ಸುಲಿಗೆ. ಯಾರ ಜೇಬಿಗೆ ಕೇಂದ್ರ ಸರ್ಕಾರ ಕೈ ಹಾಕಿದೆ ಅರ್ಥ ಮಾಡಿಕೊಳ್ಳಿ. ಪೆಟ್ರೋಲ್ ಬೆಲೆ 90 ರೂ. ಡೀಸೆಲ್ ಬೆಲೆ 80ರೂ.ಗೆ ಬಂದು ಮುಟ್ಟಿದೆ. ಪೆಟ್ರೋಲ್ ಕಚ್ಚಾ ತೈಲದ ಬೆಲೆ ಬ್ಯಾರಲ್ಗೆ 50 ಡಾಲರ್ ಗಿಂತ ಕಮ್ಮಿ ಇದೆ. ಆದರೂ ಇಷ್ಟೊಂದು ಪ್ರಮಾಣದಲ್ಲಿ ಬೆಲೆ ಏರಿಕೆ ಏಕೆ?
ಯುಪಿಎ ಸರ್ಕಾರದ ಅವಧಿಯಲ್ಲಿ ಕಚ್ಚಾತೈಲದ ಬೆಲೆ ಬ್ಯಾರಲ್ ಗೆ 100 ಡಾಲರ್ ಇದ್ದಾಗಲೂ ಪೆಟ್ರೋಲ್ ಬೆಲೆ ಇಷ್ಟೊಂದು ಏರಿಕೆಯಾಗಿರಲಿಲ್ಲ. ಈಗ ಮತ್ತೆ ಪೆಟ್ರೋಲ್ ಮೇಲೆ ಸೆಸ್ ಹಾಕಿದ್ದಾರೆ. ಅಬಕಾರಿ ಸುಂಕ ಹತ್ತು ಪಟ್ಟು ಹೆಚ್ಚಿಸಲಾಗಿದೆ ಎಂದು ಸದನಕ್ಕೆ ಸಿದ್ದರಾಮಯ್ಯ ವಿವರಿಸಿದರು.












Click it and Unblock the Notifications