ಪಾರ್ಕಿಂಗ್ ಶುಲ್ಕ ಜಾರಿಗೆ ಧೈರ್ಯತೋರದ ಮೇಯರ್ ಕಟ್ಟೆ
ಬೆಂಗಳೂರು, ಸೆಪ್ಟೆಂಬರ್ 24: ರಾಜಧಾನಿಯಲ್ಲಿ ವಾಹನಗಳ ಮೇಲೆ ಪಾರ್ಕಿಂಗ್ ಶುಲ್ಕ ವಿಧಿಸುವ ನಿರ್ಧಾರದಿಂದ ನೂತನ ಮೇಯರ್ ಕಟ್ಟೆ ಸತ್ಯನಾರಾಯಣ ಅವರು ಹಿಂಜರಿದಿದ್ದು, 2014ರ ನಂತರ ಬೇಕಾದರೆ ಅದು ಜಾರಿಯಾಗಲಿ ಎಂದು ಹೇಳಿದ್ದಾರೆ. ಇದರಿಂದ ಸದ್ಯಕ್ಕಂತೂ ವಾಹನ ಸವಾರರು ನಿರಾಳವಾಗಬಹುದು.
ಸದ್ಯದಲ್ಲೇ ದುಬಾರಿ ಪೇ ಅಂಡ್ ಪಾರ್ಕ್ ಯೋಜನೆ ಜಾರಿಗೆ ತರಲು ಬಿಬಿಎಂಪಿ ಜಾರಿಗೆ ತರಲು ಉದ್ದೇಶಿಸಿತ್ತು. ಆದರೆ ತಮ್ಮ ಕಾಲಾವಧಿಯಲ್ಲಿ ಪಾರ್ಕಿಂಗ್ ಶುಲ್ಕ ವಿಧಿಸುವುದಿಲ್ಲ ಎಂದು ಮೇಯರ್ ಸತ್ಯನಾರಾಯಣ ಅವರು ಸ್ಪಷ್ಟಪಡಿಸಿದ್ದಾರೆ.
ಮೂಲಗಳ ಪ್ರಕಾರ ಬಿಬಿಎಂಪಿ ದುಬಾರಿ ಪಾರ್ಕಿಂಗ್ ಶುಲ್ಕ ವಿಧಿಸಿದರೆ ಸಾರ್ವಜನಿಕರಿಂದ ತೀವ್ರ ವಿರೋಧ ಎದುರಿಸಬೇಕಾಗುತ್ತದೆ. ಇದು ಮುಂಬರುವ ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹಾಗಾಗಿ ಸದ್ಯಕ್ಕೆ ದುಬಾರಿ ಶುಲ್ಕ ವಿಧಿಸುವುದು ಬೇಡ ಎಂದು ಬಿಜೆಪಿಯ ಮುಖಂಡರೇ ಸಲಹೆ ನೀಡಿದ್ದಾರೆ. ಹಾಗಾಗಿ ಮೇಯರ್ ಕಟ್ಟೆ ಪಾರ್ಕಿಂಗ್ ಶುಲ್ಕದಿಂದ ವಿಮುಖರಾಗಿದ್ದಾರೆ ಎನ್ನಲಾಗಿದೆ.

ನಗರದಲ್ಲಿ A, B ಮತ್ತು C ಎಂದು ಮೂರು ವರ್ಗ ಮಾಡಿ ದುಬಾರಿ ಪಾರ್ಕಿಂಗ್ ಶುಲ್ಕ ವಿಧಿಸಲು ಬಿಬಿಎಂಪಿಗೆ ಸರ್ಕಾರ ಸೂಚನೆ ನೀಡಿತ್ತು. ಸರ್ಕಾರದ ಆದೇಶವನ್ನು ಪಾಲಿಕೆ ಸಭೆಯಲ್ಲಿ ದಾಖಲಿಸಿ ಅನುಮೋದನೆಯನ್ನು ಸಹ ಪಡೆಯಲಾಗಿತ್ತು. ಈ ಯೋಜನೆ ಯಾವುದೇ ಕ್ಷಣದಲ್ಲಿ ಜಾರಿಯಾಗಬಹುದು ಎಂಬ ಭೀತಿಯೂ ನಾಗರಿಕರನ್ನು ಕಾಡುತ್ತಿತ್ತು.
ಸಂಘ-ಸಂಸ್ಥೆಗಳು, ವಾಹನ ಸವಾರರ ಒಕ್ಕೂಟಗಳು ದುಬಾರಿ ಪಾರ್ಕಿಂಗ್ ಶುಲ್ಕ ನೀತಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಹಾಗಾಗಿ ಸದ್ಯಕ್ಕೆ ದುಬಾರಿ ಪಾರ್ಕಿಂಗ್ ಶುಲ್ಕ ಜಾರಿಯಾಗುತ್ತಿಲ್ಲ. ಮೇಯರ್ ಕಟ್ಟೆ ಸತ್ಯನಾರಾಯಣ ಈ ಬಗ್ಗೆ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿ, ಸರ್ಕಾರ ಸೂಚಿಸಿದ್ದನ್ನು ನಾವು ಅನುಮೋದನೆ ಮಾಡಿದ್ದೆವು.
ಇದರ ಬಗ್ಗೆ ಚರ್ಚಿಸಿ, ನಿರ್ಣಯಿಸಲು 90 ದಿನಗಳು ಕಾಲಾವಧಿಯಿರುತ್ತದೆ.
ನಂತರ ಪಾಲಿಕೆಯಲ್ಲಿ ಚರ್ಚಿಸಿ ಸಂಘ-ಸಂಸ್ಥೆಗಳು, ಸಾರ್ವಜನಿಕರು, ಪರಿಣಿತರೊಂದಿಗೆ ಮಾತುಕತೆ ನಡೆಸುತ್ತೇವೆ. ದುಬಾರಿ ಶುಲ್ಕ ಕಡಿಮೆಗೊಳಿಸುವಂತೆ ಒಮ್ಮತದ ಅಭಿಪ್ರಾಯ ಬಂದರೆ ಅದರಂತೆ ಹೊಸ ಪಾರ್ಕಿಂಗ್ ನೀತಿ ತರಲಾಗುವುದು. ಸದ್ಯಕ್ಕಂತೂ ಯಾರೂ ದುಬಾರಿ ಪಾರ್ಕಿಂಗ್ ಶುಲ್ಕದ ಬಗ್ಗೆ ಆತಂಕ ಪಡುವುದು ಬೇಡ, ನಿರಾತಂಕವಾಗಿರಿ ಎಂದು ಅಭಯ ನೀಡಿದ್ದಾರೆ.
ಈಗಾಗಲೇ ನಗರದ ಖಾಸಗಿ ಕಟ್ಟಡಗಳು, ಸಂಕೀರ್ಣಗಳಲ್ಲಿ ದುಬಾರಿ ವಾಹನ ಶುಲ್ಕ ವಸೂಲಿ ಮಾಡುತ್ತಿದ್ದಾರೆ. ಆದರೆ ಈ ಬಗ್ಗೆ ನಮಗಾಗಲೀ ಅಥವಾ ಪೊಲೀಸರಿಗೆ ಯಾರೂ ದೂರು ನೀಡುವುದಿಲ್ಲ. ಆದರೆ ಪಾಲಿಕೆ ಶುಲ್ಕ ವಿಧಿಸ ಹೊರಟರೆ ವಿರೋಧ ವ್ಯಕ್ತವಾಗುತ್ತದೆ ಎಂದು ಹೇಳಿದರು. ಒಟ್ಟಾರೆ 90 ದಿನಗಳ ನಂತರ ಚರ್ಚೆ ಮಾಡಿಯೇ ನಾವು ಶುಲ್ಕ ವಿಧಿಸುವ ಕುರಿತು ನಿರ್ಧರಿಸುತ್ತೇವೆ ಎಂದು ತಿಳಿಸಿದರು.












Click it and Unblock the Notifications