ಲಿಂಗಾಯತರ ವಿರುದ್ದ ಮಾತನಾಡಿದರೇ C.T.Ravi? ಚುನಾವಣೆಯ ವೇಳೆ ವೀರಶೈವ ಸಮಾಜ ಕೊತಕೊತ
ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (C.T.Ravi) ನೀಡಿದ್ದಾರೆಂದು ಹೇಳಲಾಗುತ್ತಿರುವ ಹೇಳಿಕೆಯೊಂದು ವೀರಶೈವ - ಲಿಂಗಾಯತ (Veerashaiva - Lingayat) ಸಮಾಜವನ್ನು ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿದೆ. ಏನದು? ಇಲ್ಲಿದೆ ವರದಿ..
ಚುನಾವಣೆಯ ವೇಳೆ ಬಹಳ ಎಚ್ಚರಿಕೆಯಿಂದ ಇರಬೇಕಾದ ಸಮಯ, ಹೇಳಿಕೆಗಳನ್ನು ನೀಡುವಾಗ ಅಳೆದು ತೂಗಿ ನೀಡಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (C.T.Ravi) ನೀಡಿದ್ದಾರೆಂದು ಹೇಳಲಾಗುತ್ತಿರುವ ಹೇಳಿಕೆಯೊಂದು ವೀರಶೈವ - ಲಿಂಗಾಯತ (Veerashaiva - Lingayat) ಸಮಾಜವನ್ನು ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿದೆ.
ಜಾತಿವಾರು ಲೆಕ್ಕಾಚಾರದಲ್ಲಿ ರಾಜ್ಯದಲ್ಲಿ ಮೊದಲನೇ ಸ್ಥಾನದಲ್ಲಿ ನಿಲ್ಲುವ ಈ ಸಮುದಾಯದ ಪ್ರಮುಖರು ಸಿಟ್ಟು ಹೊರಹಾಕುತ್ತಿದ್ದಂತೆಯೇ ಸಿ.ಟಿ.ರವಿ ಟ್ವೀಟ್ ಮೂಲಕ ಸ್ಪಷ್ಟನೆಯನ್ನು ನೀಡಿದ್ದಾರೆ. ಕಾಂಗ್ರೆಸ್ಸಿನ ಸುಳ್ಳಿನ ಫ್ಯಾಕ್ಟರಿಯಿಂದ ಹೊರ ಬಂದಿರುವ ಮತ್ತೊಂದು ಸುಳ್ಳು ಎನ್ನುವ ಸ್ಪಷ್ಟನೆ ರಾಜ್ಯ ಬಿಜೆಪಿ ಮತ್ತು ಖುದ್ದು ರವಿಯವರಿಂದ ಬಂದಿದೆ.

"ಲಿಂಗಾಯತ ಸಮುದಾಯದ ಒಗ್ಗಟ್ಟನ್ನು ಒಡೆಯುವ ಕಾಂಗ್ರೆಸ್'ನ ಚಾಳಿ ಎಲ್ಲರಿಗೂ ತಿಳಿದದ್ದೇ ಮತ್ತು ಅದಕ್ಕಾಗಿ ಸುಳ್ಳು ಸುದ್ದಿ ಹಬ್ಬಿಸಲೂ ಹೇಸದ ಹಂತ ತಲುಪಿದ್ದಾರೆ. ಲಿಂಗಾಯತ ಸಮುದಾಯದಲ್ಲಿ ಬಿಜೆಪಿಯ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸಲು ಪತ್ರಿಕೆಯಲ್ಲಿ ಪ್ರಕಟವಾದ ರೀತಿ ಸುಳ್ಳು ಸೃಷ್ಟಿಸಿ, ಮಾಧ್ಯಮಗಳಿಗೂ ಅಪಚಾರ ಎಸಗಲಾಗಿದೆ"ಎಂದು ಸಿ.ಟಿ.ರವಿ ಸ್ಪಷ್ಟನೆಯನ್ನು ನೀಡಿದ್ದಾರೆ.
ಕಳೆದ ಕೆಲವು ದಿನಗಳಿಂದ ಯಡಿಯೂರಪ್ಪ ಮತ್ತು ಬಿ.ವೈ.ವಿಜಯೇಂದ್ರ ವಿಚಾರದಲ್ಲಿ ಪರೋಕ್ಷವಾಗಿ ಸಿ.ಟಿ.ರವಿಯವರು ನೀಡಿದ ಹೇಳಿಕೆ ಬಿಜೆಪಿಯಲ್ಲಿನ ಒಂದು ಬಣದ ಆಕ್ರೋಶಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಸಿ.ಟಿ.ರವಿ ನೀಡಿದ್ದಾರೆ ಎಂದು ಹೇಳಲಾಗುತ್ತಿರುವ ಲಿಂಗಾಯತ ವಿರೋಧಿ ಸುದ್ದಿ ಹಲವು ಆಯಾಮಗಳನ್ನು ಪಡೆದುಕೊಳ್ಳುತ್ತಿದೆ.

'ಲಿಂಗಾಯತ ಸಮುದಾಯ ಬಿಜೆಪಿಯಿಂದ ದೂರವಾಗುತ್ತಿದೆ, ಈ ಸಮಾಜದ ನಾಯಕರಿಗೆ ಪ್ರಾಮುಖ್ಯತೆಯನ್ನು ಕೊಡಬೇಕಾಗಿಲ್ಲ. ಯಡಿಯೂರಪ್ಪನವರ ತಂಡ ಕೂಡಾ ಬಿಜೆಪಿ ಹೈಕಮಾಂಡ್ ಹೇಳಿದಂತೆ ನಡೆಯಬೇಕು' ಎನ್ನುವ ಹೇಳಿಕೆಯನ್ನು ಸಿ.ಟಿ.ರವಿ ನೀಡಿದ್ದಾರೆಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು. ಇದಕ್ಕೆ ಬಿಜೆಪಿ ಮತ್ತು ಸಿ.ಟಿ.ರವಿ ಸ್ಪಷ್ಟನೆಯನ್ನು ನೀಡಿದ್ದರು ಕೂಡಾ ಅದು ವೀರಶೈವ - ಲಿಂಗಾಯತ ಸಮುದಾಯದ ಭಾರೀ ಆಕ್ರೋಶಕ್ಕೆ ಕಾರಾಣವಾಗಿದೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿಕೆ
"ಯಾರೇ ಆಗಲಿ ಈ ರೀತಿಯ ಹೇಳಿಕೆಯನ್ನು ನೀಡಬಾರದು. ನಾವು ಸಿ.ಟಿ.ರವಿಯವರನ್ನು ಕರೆಸಿ ಮಾತನಾಡುತ್ತೇನೆ. ಎಲ್ಲಾ ವರ್ಗದ ಜನರ ಬೆಂಬಲದಿಂದಲೇ ನಾವು ಅಧಿಕಾರಕ್ಕೆ ಬಂದಿರುವುದು"ಎನ್ನುವ ಹೇಳಿಕೆಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೀಡಿದ್ದಾರೆ. ಬಿಜೆಪಿಯಲ್ಲಿ ಟಿಕೆಟ್ ವಿಚಾರ ಯಾರ ಮನೆಯ ಅಡುಗೆ ಮನೆಯಲ್ಲಿ ನಿರ್ಧಾರವಾಗುವುದಲ್ಲ, ಅದಕ್ಕೆಂದು ಬಿಜೆಪಿ ಸಂಸದೀಯ ಮಂಡಳಿಯಿದೆ. ಅಲ್ಲಿ ನಿರ್ಧಾರವಾಗುತ್ತದೆ ಎನ್ನುವ ಹೇಳಿಕೆಯನ್ನು ರವಿ ನೀಡಿದ್ದರು.

ವೀರಶೈವ ಲಿಂಗಾಯತ ಸಂಘಟನಾ ವೇದಿಕೆ
ಈ ಹೇಳಿಕೆಯ ಬೆನ್ನಲ್ಲೇ ಸಿ.ಟಿ.ರವಿಯವರು ಆಡಿದ್ದಾರೆ ಎನ್ನುವ ಸುದ್ದಿ ಮುನ್ನಲೆಗೆ ಬಂದಿದೆ. ರವಿಯವರ ಪರವಾಗಿ ಸಮುದಾಯದ ಬಿಜೆಪಿ ನಾಯಕರು ಸಮರ್ಥನೆಗೆ ಬಂದಿಲ್ಲ ಎನ್ನುವುದು ಒಂದು ಕಡೆಯಾದರೆ, ಲಿಂಗಾಯತ ಸಮುದಾಯದ ನಾಯಕರ ಆಕ್ರೋಶ ಹೆಚ್ಚಾಗುತ್ತಿದೆ. "ಸಿ.ಟಿ.ರವಿ ಚುನಾವಣಾ ಪ್ರಚಾರದಲ್ಲಿ ಕಂಡು ಬಂದರೆ ಮುತ್ತಿಗೆ ಹಾಕುವುದು, ಜೊತೆಗೆ, ಕಿತ್ತೊದ ಸಿ.ಟಿ.ರವಿಎನ್ನುವ ಘೋಷಣೆಯನ್ನು ಕೂಗಬೇಕು. ವಾರದೊಳಗೆ ಅವರು ಕ್ಷಮೆಯಾಚಿಸಬೇಕು" ಎಂದು ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಅಧ್ಯಕ್ಷರಾದ ಪ್ರದೀಪ್ ಕಂಕಣವಾಡಿ ಪತ್ರಿಕಾ ಹೇಳಿಕೆಯನ್ನು ನೀಡಿದ್ದಾರೆ.
ಬಿಜೆಪಿಗೆ ಇದು ಮುಜುಗರದ ಪರಿಸ್ಥಿತಿ
ಒಟ್ಟಾರೆಯಾಗಿ, ಚುನಾವಣೆಯ ವೇಳೆ ಬಿಜೆಪಿಗೆ ಇದು ಮುಜುಗರದ ಪರಿಸ್ಥಿತಿಯನ್ನು ತಂದೊಡ್ಡಿದೆ. ಮತಬ್ಯಾಂಕಿನ ವಿಚಾರದಲ್ಲಿ ಬಿಜೆಪಿಗೆ ಇದು ಅತ್ಯಂತ ಪ್ರಮುಖ ಜಾತಿಯಾಗಿದೆ. ವಿಪಕ್ಷಗಳು ಈ ವಿಚಾರವನ್ನು ಇಟ್ಟುಕೊಂಡು ಬಿಜೆಪಿ ವಿರುದ್ದ ತಿರುಗಿಬೀಳುವುದು ನಿಶ್ಚಿತ. ರವಿಯವರ ಹೇಳಿಕೆ ಮತ್ತು ಜೊತೆಗೆ, ಯಡಿಯೂರಪ್ಪನವರ ಕಿಚನ್ ನಲ್ಲಿ ಟಿಕೆಟ್ ನಿರ್ಧಾರವಾಗುವುದಿಲ್ಲ ಎನ್ನುವ ಅವರ ಮಾತು ಚುನಾವಣೆಯ ವೇಳೆ ಯಾವಯಾವ ರೀತಿಯಲ್ಲಿ ತಿರುವನ್ನು ಪಡೆದುಕೊಳ್ಳಲಿದೆ ಎನ್ನುವುದು ಕುತೂಹಲಕ್ಕೆ ಕಾರಣವಾದ ಅಂಶವಾಗಿದೆ.












Click it and Unblock the Notifications