ಯಡಿಯೂರಪ್ಪ ಬದಲಾವಣೆ ಸುದ್ದಿ; ನಡೆಯಿತು ಮಹತ್ವದ ಸಭೆ!
ಬೆಂಗಳೂರು, ನವೆಂಬರ್ 02: ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಬದಲಾವಣೆಯಾಗಲಿದೆಯೇ?. ಕರ್ನಾಟಕ ಬಿಜೆಪಿಯಲ್ಲಿ ಆಗಾಗ ಈ ಪ್ರಶ್ನೆ ಕೇಳಿ ಬರುತ್ತಿದೆ. ಇದನ್ನು ತಳ್ಳಿ ಹಾಕುವ ನಾಯಕರ ಸಂಖ್ಯೆಯೂ ಪಕ್ಷದಲ್ಲಿಯೇ ದೊಡ್ಡದಿದೆ.
ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದರೆ ಮುಂದೇನು?. ಭಾನುವಾರ ಬೆಂಗಳೂರಿನಲ್ಲಿ ಈ ಕುರಿತು ಮಹತ್ವದ ಸಭೆಯೊಂದು ನಡೆದಿದೆ. ಯಡಿಯೂರಪ್ಪ ಬಳಿಕ ಲಿಂಗಾಯತ-ವೀರಶೈವ ಸಮುದಾಯದವೇ ಸಿಎಂ ಆಗಬೇಕು ಎಂದು ತೀರ್ಮಾನ ಕೈಗೊಳ್ಳಲಾಗಿದೆ.
ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅಶೋಕ ಬಿ. ಹಿಂಚಿಗೇರಿ ಅಧ್ಯಕ್ಷತೆಯಲ್ಲಿ ಲಿಂಗಾಯತ-ವೀರಶೈವ ಸಮಾಜದ ಮುಖಂಡರ ಸಭೆ ನಡೆಯಿತು. ಸರ್ವಭೂಷಣ ಮಠದ ಮಲ್ಲಿಕಾರ್ಜುನ ದೇವರು ಸೇರಿದಂತೆ ಸಮಾಜದ ವಿವಿಧ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.
"ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮಗನ ಉದ್ಧಾರಕ್ಕಾಗಿ ಸಮಾಜವನ್ನು ಬಲಿಕೊಡುತ್ತಿದ್ದಾರೆ. ಬಿ. ವೈ. ವಿಜಯೇಂದ್ರ ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ" ಎಂದು ಹೈಕೋರ್ಟ್ನ ಹಿರಿಯ ವಕೀಲ ಗಂಗಾಧರ ಅವರು ಹೇಳಿದರು.

ಸಮಾಜದ ಮೊತ್ತೊಬ್ಬರನ್ನು ಪರಿಗಣಿಸಿ
ಕಾರಣಾಂತರದಿಂದ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರೆ ಆ ಸ್ಥಾನಕ್ಕೆ ಲಿಂಗಾಯತ-ವೀರಶೈವ ಸಮಾಜದ ಮತ್ತೊಬ್ಬ ಗಟ್ಟಿ ನಾಯಕನನ್ನು ಬಿಜೆಪಿ ಹೈಕಮಾಂಡ್ ಪರಿಗಣಿಸಬೇಕೆಂದು ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.

ಸಂವಾದದಲ್ಲಿ ಪಾಲ್ಗೊಂಡರು
ಲಿಂಗಾಯತ-ವೀರಶೈವ ಸಮನ್ವಯ ವೇದಿಕೆ ವತಿಯಿಂದ 'ಲಿಂಗಾಯತ-ವೀರಶೈವರ ಭವಿಷ್ಯದ ರಾಜಕೀಯ ನಾಯಕರು ಯಾರು?" ಎಂಬ ಸಂವಾದದಲ್ಲಿ ಸಮಾಜದ ಅನೇಕ ಮುಖಂಡರು ಪಾಲ್ಗೊಂಡರು. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅಶೋಕ ಬಿ. ಹಿಂಚಿಗೇರಿ ಅಧ್ಯಕ್ಷತೆಯಲ್ಲಿ ಈ ಸಂವಾದ ನಡೆಯಿತು.

ಸಮುದಾಯ ಒಪ್ಪಿಕೊಂಡಿದ್ದು ಏಕೆ?
ಜೆಡಿಎಸ್ ದ್ರೋಹ ಬಗೆದಿದೆ ಎಂಬ ಕಾರಣಕ್ಕಾಗಿ ಅನುಕಂಪದ ಆಧಾರದಲ್ಲಿ ಯಡಿಯೂರಪ್ಪ ಅವರನ್ನು ಸಮುದಾಯದ ನಾಯಕ ಎಂದು ಒಪ್ಪಿಕೊಂಡಿತು. ಡಿಸೆಂಬರ್ನಲ್ಲಿ ಅವರ ನಾಯಕತ್ವ ಕೊನೆಯಾಗುವ ಲಕ್ಷಣಗಳು ಕಾಣುತ್ತಿವೆ ಎಂದು ಸಂವಾದದಲ್ಲಿ ಚರ್ಚೆ ನಡೆಯಿತು.

ಹೈಕಮಾಂಡ್ ಚಿಂತನೆ ನಡೆಸಬೇಕು
ಮುಂದಿನ ದಿನಗಳಲ್ಲಿ ಮೌಲ್ಯಯುತ ಹಾಗೂ ಗಟ್ಟಿ ನಾಯಕರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಬೇಕಾಗಿದೆ. ಆ ನಿಟ್ಟಿನಲ್ಲಿ ಬಿಜೆಪಿ ಹೈಕಮಾಂಡ್ ಕೂಡ ಚಿಂತನೆ ನಡೆಸಬೇಕೆಂಬ ವಿಷಯ ಸಭೆಯಲ್ಲಿ ತೀರ್ಮಾನವಾಯಿತು.
Recommended Video

ಹೇಳಿಕೆ ನೀಡುವುದು ತಪ್ಪೇ
ಯತ್ನಾಳ್ ಅವರ ನೇರ, ನಿಷ್ಠುರ ಹೇಳಿಕೆಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು. ಹೇಳಿಕೆಗಳು ಹೇಗೆ ವಿವಾದ ಆಗಲು ಸಾಧ್ಯ?. ವಿವಾದಗಳು ಇಲ್ಲದೆ ನಾಯಕನಾಗುವುದಾದರೂ ಹೇಗೆ? ಎಂದು ಸಭೆಯಲ್ಲಿ ಚರ್ಚಿಸಲಾಯಿತು.












Click it and Unblock the Notifications