ವಯಸ್ಸು 82, ಆದರೂ ಹೋರಾಟ ಬಲು ಜೋರು: ಭಲೇ ವಾಟಾಳ್!
ಕಾವೇರಿ ಹೋರಾಟದ ಮೂಲಕ ಮತ್ತೆ ರಾಜ್ಯ ಸರ್ಕಾರದ ವಿರುದ್ಧ ವಾಟಾಳ್ ನಾಗರಾಜ್ ಗುಡುಗಿದ್ದಾರೆ. ಪ್ರತಿಬಾರಿ ವಿಭಿನ್ನವಾಗಿ ಪ್ರತಿಭಟನೆ ನಡೆಸುವ ಮೂಲಕ ಗಮನ ಸೆಳೆಯುವ ಕನ್ನಡದ ಕಟ್ಟಾಳು ವಾಟಾಳ್, ಇಂದಿನ ಕರ್ನಾಟಕ ಬಂದ್ ವೇಳೆಯೂ ಅದೇ ರೀತಿ ತಮ್ಮ ವಿಭಿನ್ನ ಹೋರಾಟದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಹಾಗಾದರೆ ಸರ್ಕಾರಕ್ಕೆ ಈ ಬಾರಿ ವಾಟಾಳ್ ಕೊಟ್ಟ ಎಚ್ಚರಿಕೆ ಹೇಗಿತ್ತು?
ಅವರಿಗೆ ವಯಸ್ಸು 82, ಆದರೂ ಹೋರಾಟ ಬಲು ಜೋರು. ವಾಟಾಳ್ ಒಮ್ಮೆ ಗುಟುರು ಹಾಕಿದರೆ ಮುಗಿದೋಯ್ತು. ಕರ್ನಾಟಕವೂ ಬಂದ್ ಆಗುತ್ತೆ, ಬೆಂಗಳೂರು ಕೂಡ ಬಂದ್ ಆಗುತ್ತೆ. ಹಲವು ದಶಕಗಳಿಂದಲು ವಾಟಾಳ್ ನಾಗರಾಜ್ ಹೀಗೆ ಕನ್ನಡದ ಪರ ಗಟ್ಟಿಯಾದ ಹೋರಾಟ ಕಟ್ಟಿಕೊಂಡು ಬಂದಿದ್ದಾರೆ. ಅದರಲ್ಲೂ ಕಾವೇರಿ ವಿಚಾರಕ್ಕೆ ತಮಿಳುನಾಡಿನ ಕಿರಿಕ್ ಜೋರಾದರೆ ತಕ್ಷಣ ಅದಕ್ಕೆ ತಕ್ಕ ಉತ್ತರ ಕೊಡುತ್ತಿರುವ ಹೋರಾಟಗಾರ ಎಂದರೆ ಅದು ವಾಟಾಳ್. ಹೀಗೆ ಈ ಬಾರಿ ಕೂಡ ಕರ್ನಾಟಕಕ್ಕೆ ಅನ್ಯಾಯ ಆಗುತ್ತಿರುವ ಕಾರಣಕ್ಕೆ ವಾಟಾಳ್ ಗುಟುರು ಹಾಕಿದ್ದಾರೆ.

ಸಿಎಂ, ಡಿಸಿಎಂ, ಹೋಂಗೆ ಕ್ಲಾಸ್!
ಈ ಬಾರಿ ಬುರ್ಖಾ ತೊಟ್ಟು ಕಾವೇರಿ ಹೋರಾಟ ಅಖಾಡಕ್ಕೆ ಇಳಿದಿದ್ದ ವಾಟಾಳ್, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಅದರಲ್ಲೂ ಕಾವೇರಿ ಹೋರಾಟಗಾರರಿಗೆ ಎಚ್ಚರಿಕೆ ನೀಡಿ, ಪ್ರತಿಭಟನೆ ಮಾಡದಂತೆ ಸರ್ಕಾರ ತಡೆಯುತ್ತಿದೆ ಅಂತಾ ವಾಟಾಳ್ ಇದೇ ವೇಳೆ ಗರಂ ಆದರು. ಹೀಗೆ ಸಿಎಂ, ಡಿಸಿಎಂ ಹಾಗೂ ಹೋಂ ಮಿನಿಸ್ಟರ್ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ ವಾಟಾಳ್, ರಾಜ್ಯಕ್ಕೆ ಅನ್ಯಾಯ ಆಗುತ್ತಿದ್ರೂ ನೀವೆಲ್ಲಾ ಸೈಲೆಂಟ್ ಆಗಿದ್ದೀರಿ. ಆದರೆ ಹೋರಾಟ ಮಾಡುವ ಕನ್ನಡ ಪರ ಹೋರಾಟಗಾರರಿಗೆ ಈ ರೀತಿಯಾಗಿ ಎಚ್ಚರಿಕೆ ನೀಡೋದು ಸರಿನಾ? ಎಂದು ಖಡಕ್ ಪ್ರಶ್ನೆ ಎಸೆದಿದ್ದಾರೆ.
144 ಸೆಕ್ಷನ್ ವಿರುದ್ಧ ವಾಟಾಳ್ ಕೆಂಡ
ಹಾಗೇ ರಾಜ್ಯದಲ್ಲಿ 144 ಸೆಕ್ಷನ್ ಹಾಕಿರುವ ವಿಚಾರಕ್ಕೂ ವಾಟಾಳ್ ನಾಗರಾಜ್ ಆಕ್ರೋಶ ಹೊರಹಾಕಿದ್ದಾರೆ. 144 ಸೆಕ್ಷನ್ ಜಾರಿ ಮಾಡಿ ಪೊಲೀಸ್ ರಾಜ್ಯ ಮಾಡಲು ಹೊರಟಿದ್ದಾರೆ. ಟೌನ್ ಹಾಲ್ನಿಂದ ಮೆರವಣಿಗೆ ಮಾಡಬಾರದಂತೆ. ಆದರೆ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ಮಾಡಬೇಕಾ? ನಾವು ಶಾಂತಿಯುತ ಮೆರವಣಿಗೆ ಮೂಲಕ ಮನವಿ ಸಲ್ಲಿಸಲು ಸಿದ್ಧತೆಗಳನ್ನು ಮಾಡಿಕೊಂಡಿದ್ದೆವು. ಆದರೂ ಅವರು ನಮ್ಮ ಜೊತೆ ಚರ್ಚಿಸಿಲ್ಲ. ಸಚಿವರುಗಳು ಏನು ಪಾಳೇಗಾರರಾ? ಬಂದ್ಗೆ ಅವಕಾಶವಿಲ್ಲ ಎನ್ನುವ ಗೃಹಮಂತ್ರಿಗಳೇ ನೀವು ಯಾವತ್ತಾದರೂ ಹೋರಾಟ ಮಾಡಿದ್ದೀರಾ? ಪರಮೇಶ್ವರನೇ ಹೀಗಾದರೆ ಸಾಮಾನ್ಯರ ಗತಿಯೇನು? ಎಂದರು.
ಬುರ್ಖಾ ಅಂತಲೂ ಕರೆಯಬಹುದು...
ಹಾಗೇ ತಮ್ಮ ವಾಗ್ದಾಳಿಯನ್ನ ಮುಂದುವರಿಸಿ, ಪರಮೇಶ್ವರನೇ ಹೀಗಾದ್ರೆ ಜನರ ಗತಿ ಏನು? ಮತ್ತೊಬ್ಬರು ದೇವರ ಮಗ ಶಿವಕುಮಾರ, ನೀವು ಕರುಣೆ ತೋರದಿದ್ರೆ ಸಾಮಾನ್ಯರ ಗತಿಯೇನು? ಒಂದು ಕಡೆ ಪರಮೇಶ, ಮತ್ತೊಂದ್ಕಡೆ ಅವರ ಪುತ್ರ ಶಿವಕುಮಾರ ನಮಗೆ ಕರುಣೆ ತೋರಲಿಲ್ಲ. ಇದೆಲ್ಲ ಬಿಡಿ ಅತ್ತ ಸಿದ್ದರಾಮೇಶ್ವರನು ಕರುಣೆ ತೋರುತ್ತಿಲ್ಲ ಎನ್ನುವ ಮೂಲಕ ಕರ್ನಾಟಕ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಹಾಗೇ ತಾವು ತೊಟ್ಟಿರುವ ಉಡುಪಿನ ಬಗ್ಗೆ ಕೂಡ ಮಾತನಾಡಿದ ವಾಟಾಳ್, ಇದನ್ನ ಬುರ್ಖಾ ಅಂತಲೂ ಕರೆಯಬಹುದು ಇದರ ಜತೆ ನ್ಯಾಯದೇವತೆಯ ಸಂಕೇತ ಎಂದು ಕೂಡ ಕರೆಯಬಹುದು ಎಂದರು.
ಒಟ್ನಲ್ಲಿ 82ರ ಇಳಿ ವಯಸ್ಸಿನಲ್ಲಿ ಕೂಡ ವಾಟಾಳ್ ನಾಗರಾಜ್ ಅವರು ಮತ್ತೆ ಕಾವೇರಿಯ ರಕ್ಷಣೆಗಾಗಿ ಹೋರಾಟಕ್ಕೆ ಎಂಟ್ರಿ ಕೊಟ್ಟಿದ್ದಾರೆ. ನೀರೇ ಇಲ್ಲದೆ ಕರ್ನಾಟಕದ ಜನತೆ ಇದೀಗ ನರಳುವ ಸ್ಥಿತಿ ಬಂದಿದೆ. ಆದರೂ ಕರ್ನಾಟಕ ಸರ್ಕಾರ ತಮಿಳುನಾಡಿಗೆ ನೀರು ಹರಿಸುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಹಾಗೇ ತಮ್ಮನ್ನು ಕೂಡ ಸರ್ಕಾರ ಬಂಧಿಸಲಿ ಎಂದು ಇದೇ ವೇಳೆ ವಾಟಾಳ್ ನಾಗರಾಜ್ ಕರ್ನಾಟಕ ಸರ್ಕಾರಕ್ಕೆ ನೇರ ಸವಾಲು ಹಾಕಿದ್ದಾರೆ.












Click it and Unblock the Notifications