ಲೋಕ ಚುನಾವಣೆಯಲ್ಲಿ ಪಂಚಮಸಾಲಿಗಳಿಗೆ ಪ್ರಾಧಾನ್ಯತೆ ನೀಡುವಂತೆ ಎರಡು ಪಕ್ಷಗಳಿಗೆ ವಚನಾನಂದ ಶ್ರೀ ಆಗ್ರಹ
ದಾವಣಗೆರೆ, ಫೆಬ್ರವರಿ 01: 2024ರ ಲೋಕಸಭೆ ಚುನಾವಣೆಯಲ್ಲಿ ಲಿಂಗಾಯತ ಪಂಚಮಸಾಲಿ ಸಮುದಾಯದ ಟಿಕೆಟ್ ಆಕಾಂಕ್ಷಿಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡುವಂತೆ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ರಾಷ್ಟ್ರೀಯ ಪಕ್ಷಗಳಾಗಿರುವ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಆಗ್ರಹಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಿಹರದ ಪಂಚಮಸಾಲಿ ಪೀಠದಲ್ಲಿ ಪೀಠದ ಟ್ರಸ್ಟ್ ನ ಪದಾಧಿಕಾರಿಗಳೊಂದಿಗೆ ಸುದ್ದಿಗೋಷ್ಠಿ ನಡೆಸಿದ ವಚನಾನಂದ ಸ್ವಾಮೀಜಿ ಈ ಆಗ್ರಹವನ್ನ ಮಾಡಿದ್ದಾರೆ. ಪಂಚಮಸಾಲಿ ಸಮುದಾಯಕ್ಕೆ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕು.

ದಾವಣಗೆರೆ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದ ಬಾಗಲಕೋಟೆ, ವಿಜಯಪುರ, ಧಾರವಾಡ, ಗದಗ ಬೆಳಗಾವಿ, ಕೊಪ್ಪಳ, ಚಿಕ್ಕೋಡಿ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ನಮ್ಮವರೆ ಹೆಚ್ಚಾಗಿದ್ದಾರೆ. ಲಿಂಗಾಯತರಲ್ಲಿ ಅತಿ ಹೆಚ್ಚಿರುವುದು ಪಂಚಮಸಾಲಿ ಸಮುದಾಯದರೆ. ರಾಜ್ಯದಲ್ಲಿ ಸುಮಾರು 80 ಲಕ್ಷಕ್ಕೂ ಹೆಚ್ಚು ಸಮುದಾಯವಿದೆ ಎಂದು ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ನಮ್ಮವರಿಗೆ ರಾಜಕೀಯವಾಗಿ ಮಾನ್ಯತೆ ಸಿಕಿಲ್ಲ. ಹೀಗಾಗಿ, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಪಂಚಮಸಾಲಿ ಸಮುದಾಯಕ್ಕೂ ಸಾಮಾಜಿಕ ನ್ಯಾಯ ಸಿಗಬೇಕು. ಈ ಕೆಲಸವನ್ನ ಎರಡು ರಾಷ್ಟ್ರೀಯ ಪಕ್ಷಗಳು ಮಾಡಬೇಕು. ಯಾವ ಕ್ಷೇತ್ರಕ್ಕೆ ಕೊಡ್ತಾರೋ, ಯಾವ ವ್ಯಕ್ತಿಗೆ ಟಿಕೆಟ್ ಕೊಡ್ತಾರೋ ಅದು ಪಕ್ಷಕ್ಕೆ ಬಿಟ್ಟ ವಿಚಾರ. ಪಕ್ಷಕ್ಕೆ ನಿಷ್ಠರಿದ್ದವರಿಗೆ ಮತ್ತು ಯೋಗ್ಯತೆ ಇರುವವರಿಗೆ ಟಿಕೆಟ್ ನೀಡಲಿ. ನಮ್ಮ ಸೋದರ ಸಮುದಾಯಗಳು ಜನಸಂಖ್ಯೆ ಕಡಿಮೆ ಇದ್ದರೂ ಹೆಚ್ಚಿನ ಪಾಲನ್ನ ಪಡೆಯುತ್ತಿದ್ದಾರೆ.
ನಮ್ಮ ಸಮುದಾಯ ಕೇವಲ ಮತಕ್ಕೆ ಮಾತ್ರ ಸೀಮಿತವಾದಂತಿದೆ. ಹೀಗಾಗಿ, ನಮ್ಮ ಸಮುದಾಯಕ್ಕೆ ಈ ಚುನಾವಣೆಯಲ್ಲಿ ಸಾಮಾಜಿಕ ನ್ಯಾಯ ಸಿಗಬೇಕು. ಅದಕ್ಕಾಗಿಯೇ ಸುದ್ದಿಗೋಷ್ಠಿ ಕರೆದಿದ್ದು, ಒಟ್ಟಿನಲ್ಲಿ ನಮ್ಮ ಸಮುದಾಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ಬೇಕು. ಇದರಲ್ಲಿ ಹರಿಹರ ಪೀಠ ಬೇರೆ ಪೀಠದ ವ್ಯಕ್ತಿಯ ಮಾತಿಲ್ಲ. ಪಂಚಮಸಾಲಿ ಸಮುದಾಯದ ವ್ಯಕ್ತಿಗೆ ನೀಡಬೇಕು. ಎರಡು ಪಕ್ಷಗಳು ನಮ್ಮ ಸಮಾಜದ ವ್ಯಕ್ತಿಗಳಿಗೆ ನೀಡಿದರೆ ನಾವೇ ಹೊಂದಾಣಿಕೆ ಮಾಡಿಕೊಳ್ಳುತ್ತೇವೆ. ಯಾರಾದರೂ ಒಬ್ಬ ವ್ಯಕ್ತಿಯನ್ನ ಗೆಲ್ಲಿಸುತ್ತೇವೆ. ಕೂಡಲ ಸಂಗಮ ಪೀಠದ ಭಕ್ತರಿಗೆ ಕೊಟ್ಟರೂ ಓಕೆ, ನಾವು ಸಪೋರ್ಟ್ ಮಾಡುತ್ತೇವೆ ಎಂದು ಮುಖಂಡರು ಹೇಳಿದ್ದಾರೆ.












Click it and Unblock the Notifications