ಗೋವಿಂದರಾಜನಗರ: ಪವಿತ್ರ ಮೃತ್ತಿಕೆ ಸಂಗ್ರಹ ಅಭಿಯಾನಕ್ಕೆ ವಿ.ಸೋಮಣ್ಣ ಚಾಲನೆ
ಬೆಂಗಳೂರು, ನವೆಂಬರ್ 5: ರಾಜ್ಯ ರಾಜಧಾನಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ಅನಾವರಣದ ಪ್ರಯುಕ್ತ ರಾಜ್ಯದ ಎಲ್ಲೆಡೆಯಿಂದ ಪವಿತ್ರ ಮೃತ್ತಿಕೆ ಸಂಗ್ರಹ ಅಭಿಯಾನದಡಿ ರಥಯಾತ್ರೆಯನ್ನು ಹಮ್ಮಿಕೊಳ್ಳಲಾಗಿದ್ದು, ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿಂದು ವಸತಿ ಹಾಗೂ ಮೂಲಸೌಲಭ್ಯ ಸಚಿವರಾದ ವಿ.ಸೋಮಣ್ಣ ರವರು ಕಳಸಪೂಜೆ ನೆರವೇರಿಸಿ ರಥಯಾತ್ರೆ ಅಭಿಯಾನಕ್ಕೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಸಚಿವರು, ಐತಿಹಾಸಿಕ ಹಿನ್ನೆಲೆಯುಳ್ಳ ಪುಣ್ಯಪುರುಷನ ಇತಿಹಾಸವನ್ನು ರಾಷ್ಟ್ರಕ್ಕೆ, ವಿಶ್ವಕ್ಕೆ ಪರಿಚಯಿಸುವಂತಹ ಉತ್ತಮ ತೀರ್ಮಾನವನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿರವರು ಕೈಗೊಂಡಿದ್ದಾರೆ. ನಾಡಿನಾದ್ಯಂತ ನಾಡಪ್ರಭು ಕೆಂಪೇಗೌಡರ ಸ್ಮರಣೆಯನ್ನು ಮಾಡುತ್ತಾ ಪವಿತ್ರ ಸ್ಥಳಗಳಲ್ಲಿ ಪವಿತ್ರ ಮೃತ್ತಿಕೆಯನ್ನು ಸಂಗ್ರಹಣೆ ಮಾಡುವ ಕಾರ್ಯವನ್ನು ಕೈಗೊಳ್ಳಲಾಗಿದೆ. ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಂಗಳೂರಿನ ನಿರ್ಮಾತೃ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಬೃಹತ್ ಕಂಚಿನ ಪ್ರತಿಮೆ ಅನಾವರಣ ಮಾಡುವ ಮಹತ್ವದ ನಿರ್ಣಯವನ್ನು ಸರ್ಕಾರ ಕೈಗೊಂಡಿದ್ದು ಪವಿತ್ರ ಮೃತ್ತಿಕೆಯನ್ನು ಸಮರ್ಪಣೆ ಮಾಡಲಾಗುತ್ತಿದೆ. ಯುವಕರು ನಮ್ಮ ಪೂರ್ವಜರ ಸಂದೇಶಗಳನ್ನು ಅಳವಡಿಸಿಕೊಳ್ಳುವ ಕೆಲಸವಾಗಬೇಕು ಎಂದು ಹೇಳಿದರು.
ತದನಂತರ ಸಚಿವರು ಬೈಕ್ ಜಾಥಾಗೆ ಚಾಲನೆ ನೀಡಿದರು. ಡಿಜೆ, ಡೊಳ್ಳು ಕುಣಿತ, ನಗಾರಿ ವಾದ್ಯ ಸೇರಿದಂತೆ ವಿವಿಧ ಕಲಾತಂಡಗಳು ಮೆರುಗು ನೀಡಿದವು. ಬಾವುಟಗಳನ್ನು ಹಿಡಿದು 1000 ಕ್ಕೂ ಹೆಚ್ಚು ದ್ವಿಚಕ್ರ ವಾಹನ ಸವಾರರು ಬೈಕ್ ಜಾಥಾದಲ್ಲಿ ಪಾಲ್ಗೊಂಡು ಪವಿತ್ರ ಮೃತ್ತಿಕೆ ಸಂಗ್ರಹ ಅಭಿಯಾನದಲ್ಲಿ ಪಾಲ್ಗೊಂಡರು.
ಡಾ ರಾಜ್ ಕುಮಾರ್ ವಾರ್ಡಿನ ಗಣೇಶ ದೇವಸ್ಥಾನದ ಆವರಣದಲ್ಲಿ ಪ್ರಾರಂಭವಾದ ರಥಯಾತ್ರೆ ಹಾಗೂ ಬೈಕ್ ಜಾಥಾ ಅಗ್ರಹಾರ ದಾಸರಹಳ್ಳಿ ವಾರ್ಡ್, ಗೋವಿಂದರಾಜನಗರ ವಾರ್ಡ್, ಕಾವೇರಿಪುರ ವಾರ್ಡ್, ಮೂಡಲಪಾಳ್ಯ ವಾರ್ಡ್, ಮಾರೇನಹಳ್ಳಿ ವಾರ್ಡ್, ಮಾರುತಿಮಂದಿರ ವಾರ್ಡ್, ನಾಗರಬಾವಿ ವಾರ್ಡ್, ನಾಯಂಡಹಳ್ಳಿ ವಾರ್ಡ್ ಗಳಲ್ಲಿ ಸಂಚರಿಸಿದ ಭವ್ಯ ರಥದಲ್ಲಿ ಪವಿತ್ರ ಮೃತ್ತಿಕೆಯೊಂದಿಗೆ ಶ್ರೀ ಸೊಲ್ಲಾಪುರದಮ್ಮ ದೇವಾಲಯದ ಆವರಣವನ್ನು ತಲುಪಿತು.
ಈ ಸಂದರ್ಭದಲ್ಲಿ ಜಂಟಿ ಆಯುಕ್ತರಾದ ಯೋಗೇಶ್, ಗೋವಿಂದರಾಜನಗರ ಮಂಡಲ ಬಿ.ಜೆ.ಪಿ.ಅಧ್ಯಕ್ಷರಾದ ವಿಶ್ವನಾಥಗೌಡ, ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಗಂಗಭೈರಯ್ಯ, ಕೆ.ಉಮೇಶ್ ಶೆಟ್ಟಿ, ವಾಗೇಶ್, ದಾಸೇಗೌಡ, ರಾಮಪ್ಪ, ಜಯರತ್ನ ಮತ್ತು ಬಿ.ಜೆ.ಪಿ. ಮುಖಂಡರಾದ ರಾಜಪ್ಪ, ಶ್ರೀಧರ್ ರವರು ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.