Hemavati Link Canal: ಅವೈಜ್ಞಾನಿಕ ಕಾಮಗಾರಿ ನಿಲ್ಲಿಸಲು ಸರ್ಕಾರಕ್ಕೆ ಗಡುವು ಕೊಟ್ಟ ವಿ.ಸೋಮಣ್ಣ
ವಿವಾದಿತ ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಫೀಡರ್ ಯೋಜನೆಯು ತುಮಕೂರು ಭಾಗದ ರೈತರಿಗೆ ಶಾಪವಾಗಿ ಪರಿಣಮಿಸಲಿದೆ. ಈ ಕೆನಾಲ್ ನಿರ್ಮಾಣದಿಂದ ಹೈಡ್ರಾಲಿಕ್ ಹೆಡ್ ಕುಸಿದು ಸಕಾಲದಲ್ಲಿ ನೀರು ಪೂರೈಕೆಯಲ್ಲಿ ಕೊರತೆಯಾಗುವ ಕುರಿತು ಜಿಲ್ಲೆಯ ವ್ಯಾಪ್ತಿಯ ರೈತರು, ತಂತ್ರಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಈ ವಿಚಾರದಲ್ಲಿ ಮೃಧು ಧೋರಣೆ ತೋರಿರುವುದು ಸರಿಯಲ್ಲ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಕರ್ನಾಟಕ ಸರ್ಕಾರದ ನಡೆ ಖಂಡಿಸಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ತುಮಕೂರಿನ ರೈತರಿಗೆ ಈ ಯೋಜನೆ ಮಾರಕವಾಗಲಿದೆ. ರೈತರ ನೆಮ್ಮದಿ ಕೆಡಿಸುವ ಈ ಅವೈಜ್ಞಾನಿಕ ಯೋಜನೆಯ ಕಾಮಗಾರಿಯನ್ನು ತಕ್ಷಣವೇ ನಿಲ್ಲಿಸಬೇಕು ಹಾಗೂ ಈ ಕಾಮಗಾರಿ ನಡೆಸುತ್ತಿರುವ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗಳಲ್ಲಿ ಅವರು ಮನವಿ ಮಾಡಿದ್ದಾರೆ.

ಮುಂದಿನ ಸಮಸ್ಯೆಗಳಿಗೆ ರಾಜ್ಯ ಸರ್ಕಾರವೇ ಹೊಣೆ!
ಆದಷ್ಟು ಶೀಘ್ರವೇ ಯೋಜನೆ ವಾಪಾಸು ಪಡೆಯದಿದ್ದಲ್ಲಿ ಮುಂದೆ ಉದ್ಭವಿಸುವ ತೊಂದರೆಗಳಿಗೆ ರಾಜ್ಯ ಸರ್ಕಾರವೇ ಸಂಪೂರ್ಣ ಹೊಣೆಯಾಗಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದ ಪತ್ರದಲ್ಲಿ ಏನೆಲ್ಲ ಅಂಶಗಳಿವೆ. ಇಲ್ಲಿದೆ ವಿವರ.
ಸಚಿವ ವಿ.ಸೋಮಣ್ಣ ಅವರು ಪತ್ರದಲ್ಲಿ ''ಕರ್ನಾಟಕ ಸರ್ಕಾರದ ವಿವಾದಿತ ಹೇಮಾವತಿ ಎಕ್ಸಪ್ರೆಸ್ ಲಿಂಕ್ ಕೆನಾಲ್ ಪೀಡರ್ ಯೋಜನೆಯಿಂದ ತುಮಕೂರು ಭಾಗದ ರೈತರಿಗಾಗುವ ಅನ್ಯಾಯದ ಬಗ್ಗೆ ಮತ್ತು ಈ ಯೋಜನೆಯ ಕಾಮಗಾರಿಯನ್ನು ತಕ್ಷಣ ನಿಲ್ಲಿಸಬೇಕಿದೆ.

ವೈಜ್ಞಾನಿಕವಾಗಿ ಅಧ್ಯಯನಗೊಂಡ ಮೂಲ ಯೋಜನೆ ಹಾಗೂ ಅನುಮೋದಿತ DPR ನಂತೆ (ಸಮಗ್ರ ಯೋಜನಾ ವರದಿ) ತುಮಕೂರು ಶಾಖಾ ಕಾಲುವೆ 70.36 ಕಿ.ಮಿ.ನಲ್ಲಿ ನೀರಿನ ಹರಿವು ಒಟ್ಟು ಸುಮಾರು 1289 ಕ್ಯೂಸೆಕ್ಸ್ ಇದೆ. ಈ ಪೈಕಿ ತುರುವೆಕೆರೆ, ಗುಬ್ಬಿ, ತುಮಕೂರು ಹಾಗೂ ತುಮಕೂರು ಗ್ರಾಮಾಂತರ ಪ್ರದೇಶಗಳ 96 ಕಿ.ಮಿ.ಉದ್ದದ ಈ ಭಾಗಕ್ಕೆ 901 ಕ್ಯೂಸೆಕ್ಸ್ ನೀರಿನ ಹರಿವು ಹಂಚಿಕೆಯಾಗಿದೆ. ಅಲ್ಲದೇ ಕುಣಿಗಲ್ ತಾಲ್ಲೂಕಿಗೆ 388 ಕ್ಯೂಸೆಕ್ಸ್ ನೀರು ಹಂಚಿಕೆಯಾಗಿರುತ್ತದೆ. ಈ ಯೋಜನೆಯಲ್ಲಿ ಲಭ್ಯವಿರುವ ಸಂಪೂರ್ಣ ನೀರನ್ನು ಈಗಾಗಲೇ ಹಂಚಿಕೆ ಮಾಡಲಾಗಿದ್ದು, ಪ್ರಸ್ತಾವಿತ ಯೋಜನೆಯ ಮೂಲಕ ಇತರ ಪ್ರದೇಶಕ್ಕೆ ನೀರು ಸರಬರಾಜು ಹೇಗೆ ಸಾಧ್ಯ? ಎಂದು ಅವರು ಪ್ರಶ್ನಿಸಿದ್ದಾರೆ.
ಹೇಮಾವತಿ ಎಕ್ಸಪ್ರೆಸ್ ಲಿಂಕ್ ಕೆನಾಲ್ ಪೀಡರ್ ಯೋಜನೆ ತುಮಕೂರಿನ ಜಿಲ್ಲೆಯ ನಾಲ್ಕು ತಾಲ್ಲೂಕಿಗೆ ಹಂಚಿಕೆಯಾದ 901 ಕ್ಯೂಸೆಕ್ಸ್ ನೀರಿನ ಹರಿವೆಗೆ ದಕ್ಕೆ ತಂದು ರಾಜ್ಯದ ನೀರಾವರಿ ಸಚಿವರ ತವರು ಜಿಲ್ಲೆಗೆ ನೀರು ಹರಿಸುವ ಅವೈಜ್ಞಾನಿಕ ಕಾರ್ಯಯೋಜನೆ ಇದಾಗಿದೆ ಎಂದು ಅವರು ವಿವರಿಸಿದರು.
ಅವೈಜ್ಞಾನಿಕ ಯೋಜನೆ ಜಾರಿ ಬೇಡ
ಕರ್ನಾಟಕ ಸರ್ಕಾರ ಅವೈಜ್ಞಾನಿಕವಾಗಿ ಹೊರ ತರುತ್ತಿರುವ ಹೇಮಾವತಿ ಎಕ್ಸಪ್ರೆಸ್ ಲಿಂಕ್ ಕೆನಾಲ್ ಪೀಡರ್ ಈ ಯೋಜನೆಯು ತುಮಕೂರು ಜಿಲ್ಲೆಯ ತುರುವೆಕೆರೆ, ಗುಬ್ಬಿ, ತುಮಕೂರು (ಗ್ರಾಮಾಂತರ) ಹಾಗೂ ತುಮಕೂರು (ನಗರ) ಭಾಗದ ಜನಸಾಮಾನ್ಯರ ಹಾಗೂ ಜಿಲ್ಲೆಯ ರೈತರ ಪಾಲಿಗೆ ಶಾಪವಾಗಿ ಪರಿಣಮಿಸಲಿದೆ. ಈ ಕೆನಾಲ್ ನಿರ್ಮಾಣದಿಂದ ಹೈಡ್ರಾಲಿಕ್ ಹೆಡ್ ಕುಸಿದು ಸಕಾಲದಲ್ಲಿ ನೀರು ಪೂರೈಕೆಯಲ್ಲಿ ಕೊರತೆಯಾಗುವ ಸಾಧ್ಯತೆ ಇದೆ. ಹೀಗಿದ್ದರೂ ಯೋಜನೆ ಬಗ್ಗೆ ರಾಜ್ಯ ಸರ್ಕಾರ ಈ ಬಗ್ಗೆ ಮೃಧು ಧೋರಣೆ ತಾಳಿರುವುದು ಖಂಡನೀಯ ಎಂದು ಅವರು ಪುನರುಚ್ಚರಿಸಿದರು.
ತುಮಕೂರು ಜಿಲ್ಲೆಯ ಅವಿಭಾಜ್ಯ ಅಂಗವಾದ ಕುಣಿಗಲ್ ಭಾಗಕ್ಕೆ ಹಂಚಿಕೆಯಾದ ನೀರಿನ ಹರಿವಿಗೆ ದಕ್ಕೆ ತಂದು ಈ ಭಾಗದ ರೈತರಿಗೂ ಅನ್ಯಾಯ ಉಂಟು ಮಾಡುವ ರಾಜ್ಯ ಸರ್ಕಾರದ ಈ ಕ್ರಮ ಅಸಂಬದ್ಧವಾಗಿದೆ. ಇನ್ನೂ ಮಾಗಡಿ, ರಾಮನಗರ ಮತ್ತು ಕನಕಪುರ ಭಾಗಕ್ಕೆ ಮಂಚನಬೆಲೆ ಮತ್ತು ತಿಪ್ಪಗೊಂಡಹಳ್ಳಿ ಜಲಾಶಯಗಳ ಮೂಲಕ ಸಾಕಷ್ಟು ನೀರು ಕಲ್ಪಿಸುವುದಕ್ಕೆ ಅವಕಾಶ ಇದೆ. ಹೀಗಿದ್ದರೂ ಸಹ ತುಮಕೂರಿನ ಭಾಗದ ಜನರನ್ನು ಅನಾವಶ್ಯಕವಾಗಿ ಗೊಂದಲಕ್ಕೆ ಒಳಪಡಿಸುವುದು ಎಷ್ಟರ ಮಟ್ಟಿಗೆ ಸರಿ?. ಯಾವ ಕಾರಣಕ್ಕೂ ತುಮಕೂರಿನ ಜಿಲ್ಲೆಯಲ್ಲಿನ ಸಮನ್ವಯತೆ ಮತ್ತು ಜನಸಾಮಾನ್ಯರ ಸಹನೆಯನ್ನು ಕೆದಕುವ ಕಾರ್ಯತಂತ್ರದ ಯೋಜನೆ ಇದಾಗಬಾರದು ಎಂದು ಹೇಳಿದರು.
ಸಾಧಕ-ಭಾದಕ ಅಭ್ಯಸಿಸದೆ ಯೋಜನೆ ಜಾರಿ ಬೇಡ
ಈ ಯೋಜನೆಯ ಸಾಧಕ-ಭಾದಕ ಅಧ್ಯಯನ ಮಾಡದೇ ಕರ್ನಾಟಕ ರಾಜ್ಯ ಸರ್ಕಾರ ತರಾತುರಿಯಲ್ಲಿ ಏಕಪಕ್ಷೀಯವಾಗಿ ತೆಗೆದುಕೊಂಡ ನಿರ್ಧಾರ ಸರಿಯಲ್ಲ. ಜನಸಾಮಾನ್ಯರು, ರೈತರು ಮತ್ತು ಬುದ್ಧಿಜೀವಿಗಳು ಈ ಯೋಜನೆಯ ವಿರುದ್ಧ ರಾಜ್ಯ ಸರ್ಕಾರದ ಈ ಕ್ರಮಕ್ಕೆ ಬೀದಿಗಿಳಿದು ಬಹಿಷ್ಕಾರ ಹಾಕುವ ಮುನ್ನವೇ, ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿಗಳಾದ ತಾವು ಕೂಡಲೇ ಮಧ್ಯ ಪ್ರವೇಶಿಸಿ ಕಾಮಗಾರಿಯನ್ನು ನಿಲ್ಲಿಸಬೇಕು.
ಸುದೀರ್ಘ ಅನುಭವವುಳ್ಳವರಾದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ವಿಷಯದಲ್ಲಿ ಕೂಡಲೇ ಮದ್ಯ ಪ್ರವೇಶಿಸಬೇಕು. ತುಮಕೂರಿನ ಜನತೆಯ ಹಿತ ಕಾಯುವ ನಿಟ್ಟಿನಲ್ಲಿ ತಕ್ಷಣವೇ ಈ ಅವೈಜ್ಞಾನಿಕ ಯೋಜನೆಯ ಕಾಮಗಾರಿಯನ್ನು ನಿಲ್ಲಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ಸರ್ಕಾರಕ್ಕೆ ಮೇ 31ರ ಗಡುವು ಕೊಟ್ಟ ಸಚಿವ
ತುಮಕೂರಿನಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿ ಅಮಾಯಕ ಜನ ಪೋಲಿಸರ ಕ್ರಮಕ್ಕೆ ಒಳಗಾಗುವ ಪರಿಸ್ಥಿತಿಯ ನಿರ್ಮಾಣಕ್ಕೆ ಅವಕಾಶವನ್ನು ನೀಡಬಾರದು. ಕಾನೂನು ಸುವ್ಯವಸ್ಥೆ ಹದಗೆಡದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಅವೈಜ್ಞಾನಿಕ ಯೋಜನೆಯನ್ನು ಕೈಗೆತ್ತಿಗೊಂಡು ಕಾಮಗಾರಿ ಪ್ರಾರಂಭಿಸಿದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಬೇಕು. ತುಮಕೂರಿನ ರೈತರ ನೆಮ್ಮದಿ ಕೆಡಿಸುವ ಈ ಯೋಜನೆಯ ಕಾಮಾಗಾರಿಯನ್ನು ಕೂಡಲೇ ನಿಲ್ಲಿಸಬೇಕು ಎಂದ ಅವರು, ಅದಕ್ಕಾಗಿ ಮೇ 31ರ ಗಡುವು ನೀಡಿದ್ದಾರೆ.












Click it and Unblock the Notifications