ಬಿಎಸ್ವೈ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗೆಸ್ಸಿನಿಂದ question ಬ್ಯಾಂಕ್
ಬೆಂಗಳೂರು, ಸೆ 17: ಬರುವ ಸೋಮವಾರದಿಂದ ಆರಂಭವಾಗಲಿರುವ ಅಸೆಂಬ್ಲಿ ಅಧಿವೇಶನದಲ್ಲಿ ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್ ಪೂರ್ವ ತಯಾರಿಯನ್ನು ನಡೆಸುತ್ತಿದ್ದು, ಈ ಸಂಬಂಧ ಪ್ರಶ್ನೆಗಳ ಪಟ್ಟಿಯನ್ನು ಸಿದ್ದಪಡಿಸಿಕೊಂಡಿದೆ.
ಪ್ರಮುಖವಾಗಿ, ಕೊರೊನಾ ನಿರ್ವಹಣೆ, ಕೆ ಜೆ ಹಳ್ಳಿ, ನೆರೆ ಪರಿಹಾರ, ಡ್ರಗ್ಸ್, ಭೂ ಸುಧಾರಣಾ ಕಾಯಿದೆ ಮತ್ತು ಜಿಎಸ್ಟಿಯಿಂದ ರಾಜ್ಯಕ್ಕಾಗಿರುವ ಅನ್ಯಾಯವನ್ನು ಪ್ರಮುಖವಾಗಿ ಕಾಂಗ್ರೆಸ್ ಪ್ರಸ್ತಾವಿಸಲಿದೆ ಎಂದು ತಿಳಿದುಬಂದಿದೆ.
ಎಲ್ಲಕ್ಕಿಂತೂ ಪ್ರಮುಖವಾಗಿ, ಆಡಳಿತ ಪಕ್ಷವನ್ನು ಕಟ್ಟಿ ಹಾಕಲು ಕೊರೊನಾ ಅವ್ಯವಹಾರವನ್ನು ಕಾಂಗ್ರೆಸ್ ಪ್ರಯೋಗಿಸುವ ಸಾಧ್ಯತೆಯಿದೆ. ಈ ಸಂಬಂಧ, ಹತ್ತು ಹಲವು ದಾಖಲೆಗಳನ್ನು ಕಾಂಗ್ರೆಸ್ ಸಿದ್ದಪಡಿಸಿಕೊಂಡಿದೆ.

ಸೀಮಿತ ಅವಧಿಗೆ ಅಧಿವೇಶನ ನಡೆಯುತ್ತಿರುವುದರಿಂದ, ಇರುವ ಸಮಯವನ್ನು ಸದ್ಬಳಕೆ ಮಾಡಿಕೊಳ್ಳಲು ಕಾಂಗ್ರೆಸ್ ತಮ್ಮ ಶಾಸಕರಿಗೆ ಸೂಚಿಸಿದ್ದು, ಅಧಿವೇಶನದಲ್ಲಿ ಏನೇನು ಪ್ರಶ್ನೆಗಳನ್ನು ಕೇಳಬೇಕೆಂದು 'ಪ್ರಶ್ನೆಗಳ ಬ್ಯಾಂಕ್'ಅನ್ನು ಸಿದ್ದಪಡಿಸಿಕೊಂಡಿದೆ.
ಪ್ರಶ್ನೋತ್ತರ ಮತ್ತು ಶೂನ್ಯ ವೇಳೆಯ ಸಮಯದಲ್ಲಿ ಪರಿಣಾಕಾರಿಯಾದ ಪ್ರಶ್ನೆಗಳನ್ನು ಸರಕಾರದ ಮುಂದಿಡಬೇಕು ಎನ್ನುವ ಸೂಚನೆ ಕೆಪಿಸಿಸಿ ಅಧ್ಯಕ್ಷರಿಂದ ಶಾಸಕರಿಗೆ ಹೋಗಿದೆ ಎನ್ನುವ ಮಾಹಿತಿಯಿದೆ.
ಬೆಂಗಳೂರು ನಗರ ಹೊರವಲಯ ಮಾದಾವರದ ಬಳಿ ತಲೆ ಎತ್ತಿದ್ದ ಬಿಐಇಸಿ ಕೋವಿಡ್ ಕೇರ್ ಸೆಂಟರ್ ಸ್ಥಾಪನೆಯ ಹಿಂದೆ ಭಾರೀ ಭ್ರಷ್ಟಾಚಾರ ನಡೆದಿದೆ ಎಂದು ಕಾಂಗ್ರೆಸ್, ದಾಖಲೆ ಸಮೇತ ಆರೋಪಿಸಿತ್ತು. ಮುಂಬರುವ ಅಧಿವೇಶನದಲ್ಲಿ ಕಾಂಗ್ರೆಸ್ಸಿಗೆ ಇದು ಬ್ರಹ್ಮಾಸ್ತ್ರವಾಗಲಿದೆ.












Click it and Unblock the Notifications