ಮುಖ್ಯಮಂತ್ರಿಗಳ ಬದಲಾವಣೆ; ದೆಹಲಿಯಿಂದ ಬಂತು ಸ್ಪಷ್ಟನೆ
ಬೆಂಗಳೂರು, ಡಿಸೆಂಬರ್ 22; ಕರ್ನಾಟಕದಲ್ಲಿ ಕಳೆದ ವಾರದಿಂದ ಮತ್ತೆ ಮುಖ್ಯಮಂತ್ರಿ ಬದಲಾವಣೆ ಸುದ್ದಿಗಳು ಹಬ್ಬಿವೆ. ಜುಲೈ 26ರಂದು ಯಡಿಯೂರಪ್ಪ ರಾಜೀನಾಮೆ ನೀಡಿದ ಬಳಿಕ ಜುಲೈ 28ರಂದು ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದರು.
ಬುಧವಾರ ಧಾರವಾಡ ಸಂಸದ ಮತ್ತು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಮುಖ್ಯಮಂತ್ರಿಗಳ ಬದಲಾವಣೆ ಬಗ್ಗೆ ಹಬ್ಬಿರುವ ಗಾಳಿ ಸುದ್ದಿಗಳಿಗೆ ತೆರೆ ಎಳೆದರು. "2023ರ ತನಕ ಬಸವರಾಜ ಬೊಮ್ಮಾಯಿ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ" ಎಂದು ಸ್ಪಷ್ಟಪಡಿಸಿದರು.
2021ರ ಹಿನ್ನೋಟ; ವರ್ಷದ ವ್ಯಕ್ತಿ ಬಸವರಾಜ ಬೊಮ್ಮಾಯಿ
"ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬದಲಾವಣೆ ಮಾಡುವ ಪ್ರಸ್ತಾಪ ಹೈಕಮಾಂಡ್ ಮಟ್ಟದಲ್ಲಿ ಇಲ್ಲ. ಸಿಎಂ ಬೊಮ್ಮಾಯಿ ಭಾವನಾತ್ಮಕವಾಗಿ ಮಾತನಾಡಿದ್ದಾರೆ. ಈ ರೀತಿಯಾಗಿ ಹತ್ತು ಸಲ ಮಾತನಾಡಿರುವುದನ್ನು ಕೇಳಿದ್ದೇನೆ" ಎಂದು ದೆಹಲಿಯಲ್ಲಿ ಪ್ರಹ್ಲಾದ್ ಜೋಶಿ ಹೇಳಿದರು.
'ಜಂಗಮರು ಶಾಪ ಹಾಕುತ್ತಿದ್ದೇವೆ': ಸಿಎಂ ಬೊಮ್ಮಾಯಿ ಅಧಿಕಾರ ಕಳೆದುಕೊಳ್ಳಲಿದ್ದಾರೆ!
ಕುತೂಹಲ ಹುಟ್ಟಿಸಿದ್ದ ಹೇಳಿಕೆ; ಭಾನುವಾರ ಹಾವೇರಿ ಜಿಲ್ಲೆಯ ಶಿಗ್ಗಾಂವಿ ಪಟ್ಟಣದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಪುತ್ಥಳಿ ಅನಾವರಣ ಮತ್ತು ಪಂಚಮಸಾಲಿ ಸಮುದಾಯ ಭವನ ಸಮಾರಂಭವಿತ್ತು. ಸ್ವಕ್ಷೇತ್ರದಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಾಲ್ಗೊಂಡಿದ್ದರು.
ಪಂಚಮಸಾಲಿ 2ಎ ಮೀಸಲಾತಿ: ಬೆಳಗಾವಿಯಲ್ಲಿ ಸಿಎಂ ಹೇಳಿದ್ದೇನು?
ಸಮಾರಂಭದಲ್ಲಿ ಮಾತನಾಡಿದ್ದ ಮುಖ್ಯಮಂತ್ರಿಗಳು, "ಕ್ಷೇತ್ರದ ಜನರ ಋಣ ತೀರಿಸಲು ಸಾಧ್ಯವೇ ಇಲ್ಲ. ನಿಮ್ಮ ಪ್ರೀತಿ, ವಿಶ್ವಾಸದ ಮುಂದೆ ಯಾವ ಅಧಿಕಾರವೂ ಮಹತ್ವದ್ದಲ್ಲ. ಅಧಿಕಾರ, ಸ್ಥಾನಮಾನ ಶಾಶ್ವತವಲ್ಲ. ಬಸವರಾಜ ಬೊಮ್ಮಾಯಿ ಎಂಬುದಷ್ಟೇ ಶಾಶ್ವತ. ಹಿಂದಿರುವ ಪದನಾಮವಲ್ಲ" ಎಂದು ಹೇಳಿದ್ದರು.
"ನನಗೆ ದೊಡ್ಡ ಆಸೆ ಏನಿಲ್ಲ, ನಿಮ್ಮ ಪ್ರೀತಿ ವಿಶ್ವಾಸವನ್ನು ಶಾಶ್ವತವಾಗಿ ಉಳಿಸಿಕೊಳ್ಳಬೇಕು ಎಂಬುದೇ ನನ್ನ ಆಸೆಯಾಗಿದೆ. ನಿಮ್ಮ ಪ್ರೀತಿ, ವಿಶ್ವಾಸದ ಮುಂದೆ ಯಾವ ಅಧಿಕಾರವೂ ಮಹತ್ವದ್ದಲ್ಲ. ಭಾವನಾತ್ಮಕವಾಗಿ ಮಾತನಾಡಬಾರದು ಎಂದು ಪ್ರಯತ್ನಿಸುತ್ತೇನೆ. ಆದರೆ ನಿಮ್ಮನ್ನೆಲ್ಲ ನೋಡಿದಾಗ ಭಾವನೆಗಳು ಬರುತ್ತದೆ. ಮೊದಲಿನಂತೆ ಪದೇ ಪದೇ ಕ್ಷೇತ್ರಕ್ಕೆ ಬಂದು ನಿಮ್ಮನ್ನು ನೋಡಲು ಆಗುತ್ತಿಲ್ಲ" ಎಂದು ಬಸವರಾಜ ಬೊಮ್ಮಾಯಿ ಭಾಷಣದಲ್ಲಿ ತಿಳಿಸಿದ್ದರು.
"ನಿಮ್ಮ ಆಶೀರ್ವಾದಲ್ಲಿ ಬಹುದೊಡ್ಡ ಶಕ್ತಿ ಇದೆ. ಅದೇ ನನ್ನನ್ನು ಇಲ್ಲಿಗೆ ತಂದು ನಿಲ್ಲಿಸಿದೆ. ಈಗಿರುವ ಸವಾಲುಗಳನ್ನು ಎದುರಿಸಲು ನಿಮ್ಮ ಆಶೀರ್ವಾದವೇ ಪ್ರೇರಣೆಯಾಗಿ ನಿಲ್ಲಲಿದೆ. ಕ್ಷೇತ್ರದ ಹೊರಗೆ ನಾನು ಮುಖ್ಯಮಂತ್ರಿ, ಇಲ್ಲಿ ಕೇವಲ ಬಸವರಾಜ ಬೊಮ್ಮಾಯಿ ಮಾತ್ರ. ಬಸವರಾಜ ಬೊಮ್ಮಾಯಿ ಶಾಶ್ವತವೇ ಹೊರತು ಹಿಂದಿರುವ ಪದನಾಮವಲ್ಲ" ಎಂದು ಭಾವುಕವಾಗಿ ಬಸವರಾಜ ಬೊಮ್ಮಾಯಿ ಮಾತನಾಡಿದ್ದರು.
ಮುಖ್ಯಮಂತ್ರಿಗಳ ಹೇಳಿಕೆ ಬಳಿಕ ರಾಜ್ಯ ರಾಜಕೀಯದಲ್ಲಿ ಚರ್ಚೆಗಳು ಆರಂಭವಾಗಿದ್ದವು. ಹೈಕಮಾಂಡ್ನಿಂದ ಸಂದೇಶ ಬಂದಿದೆ. ಮುಖ್ಯಮಂತ್ರಿಗಳು ಬದಲಾವಣೆಯಾಗಲಿದ್ದಾರೆ. 2022ರ ಫೆಬ್ರವರಿಯಲ್ಲಿ ಹೊಸ ಮುಖ್ಯಮಂತ್ರಿ ಆಯ್ಕೆಯಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು.
ಮುಖ್ಯಮಂತ್ರಿಗಳ ಬದಲಾವಣೆ; ಬಿಜೆಪಿ ಹೈಕಮಾಂಡ್ ಮುಖ್ಯಮಂತ್ರಿಗಳ ಬದಲಾವಣೆ ಮಾಡಿ ವರ್ಷಗಳು ಸಹ ಕಳೆದಿಲ್ಲ. 2019ರಲ್ಲಿ ಪಕ್ಷ ಅಧಿಕಾರಕ್ಕೆ ಬಂದಾಗ ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರು. ಸರ್ಕಾರ 2021ರ ಜುಲೈ 26ರಂದು ಎರಡು ವರ್ಷ ಪೂರೈಸಿತು. ಸರ್ಕಾರದ ಸಾಧನಾ ಸಮಾವೇಶದಲ್ಲಿಯೇ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ರಾಜೀನಾಮೆ ಘೋಷಣೆ ಮಾಡಿದ್ದರು.
ಬಳಿಕ ಜುಲೈ 27ರಂದು ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು. ಜುಲೈ 28ರಂದು ಪ್ರಮಾಣ ವಚನ ಸ್ವೀಕಾರ ಮಾಡಿದ್ದರು. 2023ರಲ್ಲಿ ವಿಧಾನಸಭೆ ಚುನಾವಣೆಯನ್ನು ಮುಂದಿಟ್ಟುಕೊಂಡು ಬಿಜೆಪಿ ಈಗ ಮತ್ತೆ ಮುಖ್ಯಮಂತ್ರಿ ಬದಲಾವಣೆಗೆ ಏಕೆ ಕೈ ಹಾಕುತ್ತಿದೆ? ಎಂಬ ಪ್ರಶ್ನೆ ಎದ್ದಿದೆ.
ಹೇಳಿಕೆಗಳು
* ಬಿಟ್ ಕಾಯಿನ್ ವಿಚಾರ ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿದ್ದಂತಹ ಸಂದರ್ಭದಲ್ಲಿ ಬೊಮ್ಮಾಯಿಯವರು ದೆಹಲಿಗೆ ಹೋಗಿದ್ದರು. ಬೊಮ್ಮಾಯಿ ವಿರುದ್ಧವೂ ವಿಪಕ್ಷಗಳು ವಾಗ್ದಾಳಿ ನಡೆಸಿ ಆರೋಪ ಹೊರೆಸಿದ್ದವು. ಇದಲ್ಲದೆ, ಇದು ಪರ್ಸಂಟೇಜ್ ಸರ್ಕಾರ ಎಂದು ವಿಪಕ್ಷಗಳು ಆರೋಪ ಮಾಡಿದ್ದವು, ಇದಕ್ಕೂ ಪ್ರಹ್ಲಾದ್ ಜೋಶಿ ಈ ಹಿಂದೆಯೇ ಪ್ರತಿಕ್ರಿಯಿಸಿ, ಮೋದಿ ಸರ್ಕಾರ ಯಾವುದೇ ರೀತಿ ಭ್ರಷ್ಟಾಚಾರ ಸಹಿಸಲ್ಲ ಎಂದಿದ್ದರು.
* ಕೆಲವು ದಿನಗಳ ಹಿಂದೆ ಸಚಿವ ಕೆ. ಎಸ್. ಈಶ್ವರಪ್ಪ ಮುರುಗೇಶ್ ನಿರಾಣಿ ಮುಂದಿನ ಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ ಎಂಬರ್ಥದಲ್ಲಿ ಹೇಳಿಕೆಯನ್ನು ನೀಡಿ ನಂತರ ವಾಪಸ್ ಪಡೆದಿದ್ದರು.ಇದು ಸಿಎಂ ಬೊಮ್ಮಾಯಿ ರಾಜೀನಾಮೆ ನೀಡಲಿದ್ದಾರೆ ಎನ್ನುವ ಸುದ್ದಿಗೆ ಪೂರಕವಾಗಿತ್ತು.
* "ಕೆಲವರು ನಾನೇ ಮುಂದಿನ ಮುಖ್ಯಮಂತ್ರಿ ಎಂದು ಹೇಳಿಕೊಂಡು ಸುವರ್ಣಸೌಧದ ಪಡಸಾಲೆಯಲ್ಲಿ ತಿರುಗಾಡಿಕೊಂಡಿದ್ದಾರೆ"ಎಂದು ನಿರಾಣಿ ಹೆಸರನ್ನು ಉಲ್ಲೇಖಿಸದೇ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಯನ್ನು ನೀಡಿದ್ದರು.