ಬಿಜೆಪಿಯಲ್ಲಿ ಸ್ಪೋಟಕ ತಿರುವು ಪಡೆದುಕೊಂಡ ಮುಂದಿನ ಮುಖ್ಯಮಂತ್ರಿ ಆಯ್ಕೆ!
ಬೆಂಗಳೂರು, ಜು. 27: ಅಂದುಕೊಂಡಂತೆ ಬಿಜೆಪಿ ಹೈಕಮಾಂಡ್ ಬಿ.ಎಸ್. ಯಡಿಯೂರಪ್ಪ ಅವರ ರಾಜೀನಾಮೆ ಪಡೆದುಕೊಂಡಿದೆ. ಆದರೆ ಮುಂದಿನ ಮುಖ್ಯಮಂತ್ರಿ ಯಾರು? ಎಂಬ ಪ್ರಶ್ನೆ ಬಿಜೆಪಿ ಕಾರ್ಯಕರ್ತರನ್ನು ಮಾತ್ರವಲ್ಲ ಹೈಕಮಾಂಡ್ನ್ನೂ ಕಾಡುತ್ತಿದೆ. ಅದಕ್ಕೆ ಕಾರಣಗಳು ಬಹಳಷ್ಟಿವೆ. ಆದರೆ ಮುಂದಿನ ಮುಖ್ಯಮಂತ್ರಿ ಆಯ್ಕೆಯ ಮೇಲೆ ಕರ್ನಾಟಕದಲ್ಲಿ ಬಿಜೆಪಿ ಭವಿಷ್ಯ ನಿಂತಿದೆ ಎಂಬುದು ಸುಳ್ಳಲ್ಲ. ಆದರಿಂದಲೇ ಬಿಜೆಪಿ ಹೈಕಮಾಂಡ್ ಮುಂದಿನ ಮುಖ್ಯಮಂತ್ರಿ ಆಯ್ಕೆಯಲ್ಲಿ ಎಚ್ಚರಿಕೆ ಹೆಜ್ಜೆ ಇಡುತ್ತಿದೆ. ಇದೇ ಸಂದರ್ಭದಲ್ಲಿ ಸ್ಪೋಟಕ ಮಾಹಿತಿಯೊಂದು 'ಒನ್ಇಂಡಿಯಾ ಕನ್ನಡ'ಕ್ಕೆ ಲಭ್ಯವಾಗಿದೆ.
Recommended Video
ಆರಂಭದಲ್ಲಿ ಯಡಿಯೂರಪ್ಪ ಬಳಿಕ ಯಾರು? ಎಂಬ ಪ್ರಶ್ನೆಗೆ ಬಹಳಷ್ಟು ಹೆಸರುಗಳು ಕೇಳಿ ಬಂದಿದ್ದವು. ಬಿಜೆಪಿ ಹೈಕಮಾಂಡ್ ಕೂಡ ಕಳೆದ ಎರಡು ತಿಂಗಳುಗಳಿಂದಲೇ ಯಡಿಯೂರಪ್ಪ ಅವರ ಬಳಿಕ ಯಾರು? ಎಂಬ ಹುಡುಕಾಟ ನಡೆಸಿತ್ತು. ಯಡಿಯೂರಪ್ಪ ಅವರು ಸಿಎಂ ಸ್ಥಾನದಿಂದ ಇಳಿದ ತಕ್ಷಣ ಎದುರಾಗುವ ವಿರೋಧದ ಬಗ್ಗೆಯೂ ಮೊದಲೇ ವರದಿ ತರಿಸಿಕೊಂಡಿತ್ತು. ಹೀಗಾಗಿ ಮುಂದಿನ ಮುಖ್ಯಮಂತ್ರಿ ಆಯ್ಕೆಯಿಂದ ಬಿಜೆಪಿಗೆ ಹಿನ್ನಡೆ ಆಗುವ ಬದಲು, ಅದರಿಂದ ಲಾಭವಾಗುವಂತೆ ಎಚ್ಚರಿಕೆಯ ಹೆಜ್ಜೆ ಇಟ್ಟಿತ್ತು. ಹೀಗಾಗಿಯೇ ಕೇಂದ್ರದಲ್ಲಿ ಸಮರ್ಥವಾಗಿ ಸಂಸದೀಯ ಸಚಿವರಾಗಿ ಕೆಲಸ ನಿರ್ವಹಿಸುತ್ತಿರುವ ಪ್ರಲ್ಹಾದ್ ಜೋಶಿ ಅವರನ್ನು ಮುಂದಿನ ಮುಖ್ಯಮಂತ್ರಿ ಮಾಡಲು ಒಂದು ಹಂತದಲ್ಲಿ ಬಿಜೆಪಿ ಹೈಕಮಾಂಡ್ ನಿರ್ಧಾರ ಮಾಡಿತ್ತು.
ಆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರನ್ನೂ ಹೈಕಮಾಂಡ್ ಕೇಳಿತ್ತು. ಆದರೆ ಇದೀಗ ಸ್ಥಿತಿ ಬದಲಾಗಿದೆ ಎಂಬ ಮಾಹಿತಿ ಬಂದಿದೆ. ಅಷ್ಟಕ್ಕೂ ಕೇಂದ್ರದ ನಾಯಕರಿಗೆ ಪ್ರಲ್ಹಾದ್ ಜೋಶಿ ಅವರು ಹೇಳಿದ್ದೇನು?
ಎರಡು ತಿಂಗಳುಗಳ ಹಿಂದಿನ ಮಾತು
ಯಡಿಯೂರಪ್ಪ ಬದಲಾವಣೆ ಕುರಿತು ಬಿಜೆಪಿ ಹೈಕಮಾಂಡ್ ದಿಢೀರ್ ನಿರ್ಧಾರ ಕೈಗೊಂಡಿಲ್ಲ. ಕಳೆದ ಎರಡು ತಿಂಗಳುಗಳ ಹಿಂದೆಯೆ ಈ ಕುರಿತು ಸ್ಪಷ್ಟ ನಿರ್ಧಾರಕ್ಕೆ ಬಿಜೆಪಿ ಹೈಕಮಾಂಡ್ ಬಂದಿತ್ತು. ಹೀಗಾಗಿ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಇಳಿಸಿದ ತಕ್ಷಣ ಯಾರನ್ನು ಮುಂದಿನ ಮುಖ್ಯಮಂತ್ರಿ ಎಂದು ಘೋಷಣೆ ಮಾಡಬೇಕು? ಎಂಬ ಚರ್ಚೆಯನ್ನು ಬಿಜೆಪಿ ಹೈಕಮಾಂಡ್ ಮಾಡಿತ್ತು.
ಆ ಸಂದರ್ಭದಲ್ಲಿಯೇ ಪ್ರಲ್ಹಾದ್ ಜೋಶಿ ಅವರನ್ನು ಈ ಬಗ್ಗೆ ಸ್ವತಃ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೇಳಿದ್ದರು. ಜೊತೆಗೆ ಕರ್ನಾಟಕದ ಮುಂದಿನ ಮುಖ್ಯಮಂತ್ರಿಯಾಗಿ ಕೆಲಸ ಮಾಡಲು ಸಿದ್ಧರಾಗಿರಿ ಎಂದು ಸೂಚನೆಯನ್ನೂ ಕೊಟ್ಟಿದ್ದರು. ಆದರೆ ಅದಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ತಮ್ಮ ಅಭಿಪ್ರಾಯ ಕೊಟ್ಟಿದರು. ಪ್ರಲ್ಹಾದ್ ಜೋಶಿ ಅವರು ಅಮಿತ್ ಶಾ ಅವರಿಗೆ ಏನು ಹೇಳಿದ್ದರು ಎಂಬುದು ಮುಂದಿದೆ.
ಮುಖ್ಯಮಂತ್ರಿಯಾಗುವ ಕುರಿತು ಜೋಶಿ ಅಭಿಪ್ರಾಯ
ಕರ್ನಾಟಕದ ಮುಖ್ಯಮಂತ್ರಿಯಾಗಿ ನೀವು ಕೆಲಸ ಮಾಡಿ ಎಂದು ಬಿಜೆಪಿ ಹೈಕಮಾಂಡ್ ಪ್ರಲ್ಹಾದ್ ಜೋಶಿ ಅವರಿಗೆ ಸೂಚಿಸಿತ್ತು. ಆದರೆ "ರಾಜ್ಯ ರಾಜಕೀಯಕ್ಕೆ ಹೋಗಲು ಮನಸ್ಸಿಲ್ಲ. ಬೇರೆಯವರನ್ನು ಆ ಸ್ಥಾನಕ್ಕೆ ಯೋಚನೆ ಮಾಡಿ" ಎಂದು ಹೈಕಮಾಂಡ್ಗೆ ಪ್ರಲ್ಹಾದ್ ಜೋಶಿ ತಿಳಿಸಿದ್ದರು ಎನ್ನಲಾಗಿದೆ. "ಕೇಂದ್ರದಲ್ಲಿ ಸಂಸದೀಯ ಸಚಿವನಾಗಿ ಕೆಲಸ ಮಾಡುತ್ತಿದ್ದೇನೆ. ಹೀಗಾಗಿ ಇಲ್ಲಿಯೇ ಕೆಲಸ ಮಾಡುತ್ತೇನೆ ಎಂದು ಪ್ರಲ್ಹಾದ್ ಜೋಶಿ ಅವರು ಹೈಕಮಾಂಡ್ಗೆ ಹೇಳಿದ್ದರು. ಆದರೆ ಯಾವ ಕಾರಣಕ್ಕಾಗಿ ಜೋಶಿ ಅವರು ಮುಖ್ಯಮಂತ್ರಿಯಾಗಲು ಒಪ್ಪಿರಲಿಲ್ಲ ಎಂಬುದು ಗಮನಿಸಬೇಕಾದ ಅಂಶ.
ಯಡಿಯೂರಪ್ಪ ಬಳಿಕ ಎದುರಾಗುವ ವಿರೋಧ!
ಲಿಂಗಾಯತ ಸಮುದಾಯದ ಬಿ.ಎಸ್. ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವುದರಿಂದ ಆ ಸಮುದಾಯದಿಂದ ವಿರೋಧ ವ್ಯಕ್ತವಾಗುತ್ತದೆ ಎಂಬುದು ಪ್ರಲ್ಹಾದ್ ಜೋಶಿ ಅವರಿಗೆ ಗೊತ್ತಿತ್ತು. ಹೀಗಾಗಿಯೇ ತಮ್ಮ ಆಪ್ತರ ಬಳಿ ರಾಜ್ಯ ರಾಜಕಾರಣಕ್ಕೆ ನಾನು ಬರುವುದಿಲ್ಲ. ಜೊತೆಗೆ ಇನ್ನು ಉಳಿದಿರುವುದು ಕೇವಲ 18 ತಿಂಗಳುಗಳ ಅವಧಿ ಮಾತ್ರ. ಅಷ್ಟರಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡುವುದು ಕಷ್ಟಸಾಧ್ಯ. ಹೀಗಾಗಿ ನಾನು ಕೇಂದ್ರ ರಾಜಕೀಯದಲ್ಲಿಯೇ ಇರಲು ಬಯಸುತ್ತೇನೆ" ಎಂದಿದ್ದರಂತೆ.
ಪ್ರಲ್ಹಾದ್ ಜೋಶಿ ಅವರು ರಾಜ್ಯ ರಾಜಕಾರಣವನ್ನು ಹತ್ತಿರದಿಂದ ನೋಡಿದವರು. ಹೀಗಾಗಿ ಸಹಜವಾಗಿಯೇ ಮುಂದಿನದನ್ನು ಅರಿತಿದ್ದರು. ಆದರಿಂದಲೇ ಸದ್ಯಕ್ಕೆ ನಾನು ರಾಜ್ಯ ರಾಜಕಾರಣಕ್ಕೆ ಬರುವುದಿಲ್ಲ ಎಂದಿದ್ದರಂತೆ. ಅಷ್ಟಕ್ಕೂ ಅವರು ಮುಖ್ಯಮಂತ್ರಿ ಆಗಲ್ಲ ಎಂದು ಹೈಕಮಾಂಡ್ಗೆ ಖಡಾಖಂಡಿತವಾಗಿ ಹೇಳಿದ್ದಾರಾ?
ಸ್ಪೋಟಕ ತಿರುವು ಪಡೆದುಕೊಂಡ ಸಿಎಂ ಆಯ್ಕೆ!
ಪ್ರಲ್ಹಾದ್ ಜೋಶಿ ಅವರು ಕೇಂದ್ರದ ಸಚಿವರಾಗಿಯೇ ಮುಂದುವರೆಯುವುದಾಗಿ ಹೈಕಮಾಂಡ್ಗೆ ತಿಳಿಸಿದ್ದಾರಂತೆ. ಆದರೆ ಹೈಕಮಾಂಡ್ ಸೂಚಿಸಿದಲ್ಲಿ ಮುಖ್ಯಮಂತ್ರಿಯಾಗಲು ಅವರು ಒಪ್ಪಿದ್ದಾರೆ ಎಂಬ ಮಾಹಿತಿಯೂ ಇದೆ. ಹೈಕಮಾಂಡ್ ಸೂಚಿಸಿದಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಬರಲು ಜೋಶಿ ಒಪ್ಪಿಕೊಂಡಿದ್ದಾರೆ ಎಂಬ ಮಾಹಿತಿಯೂ ಇದೆ. ಹೀಗಾಗಿ ಒಂದೊಮ್ಮೆ ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ್ ಜೋಶಿ ಅವರು ಮುಂದಿನ ಮುಖ್ಯಮಂತ್ರಿ ಎಂದು ಬಿಜೆಪಿ ಹೈಕಮಾಂಡ್ ತೀರ್ಮಾನ ಮಾಡಿದಲ್ಲಿ ರಾಜ್ಯಕ್ಕೆ ಹೊಸ ಮುಖ್ಯಮಂತ್ರಿ ಬರುವುದು ಸ್ವಾತಂತ್ರ್ಯ ದಿನಾಚರಣೆಯ ಬಳಿಕವೇ ಎನ್ನಲಾಗುತ್ತಿದೆ.
ಜುಲೈ 19ಕ್ಕೆ ಆರಂಭವಾಗಿರುವ ಸಂಸತ್ ಅಧಿವೇಶನ ಬರುವ ಆಗಸ್ಟ್ 13ಕ್ಕೆ ಮುಗಿಯಲಿದೆ. ಹೀಗಾಗಿ ಪ್ರಲ್ಹಾದ್ ಜೋಶಿ ಅವರು ಕರ್ನಾಟಕದ ಮುಂದಿನ ಸಿಎಂ ಎಂದು ತೀರ್ಮಾನ ಆದಲ್ಲಿ ಪ್ರಮಾಣವಚನ ಕಾರ್ಯಕ್ರಮ ಆಗಸ್ಟ್ 15ರ ಬಳಿಕ ಆಗಲಿದೆ. ಅಷ್ಟರೊಳಗೆ ಆಷಾಢ ಮಾಸವೂ ಕಳೆಯುತ್ತದೆ. ಹೀಗಾಗಿ ಪ್ರಲ್ಹಾದ್ ಜೋಶಿ ಅವರೇ ಮುಂದಿನ ಮುಖ್ಯಮಂತ್ರಿ ಎಂದಾದಲ್ಲಿ ರಾಜ್ಯಕ್ಕೆ ಇನ್ನೂ 15 ದಿನಗಳ ಕಾಲ ಯಡಿಯೂರಪ್ಪ ಅವರೇ ಹಂಗಾಮಿ ಮುಖ್ಯಮಂತ್ರಿಗಳಾಗಿ ಮುಂದುವರೆಯಲಿದ್ದಾರೆ.