ಸಾಮಾಜಿಕ ಜಾಲತಾಣದ ಕರೆಗೆ ಓಗೊಟ್ಟ ಹೆಚ್.ಡಿ.ಕುಮಾರಸ್ವಾಮಿ: ನಂಜನಗೂಡಿನ ಹುಲ್ಲಳ್ಳಿಯ ನೊಂದ ಕುಟುಂಬಕ್ಕೆ ಅಭಯ
ನಂಜನಗೂಡು: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಒಂದು ವಿಡಿಯೋ ಕೇಂದ್ರ ಸಚಿವರನ್ನು ಹಳ್ಳಿಯೊಂದರ ಬಡ ಕುಟುಂಬದ ಮನೆ ಬಾಗಿಲಿಗೆ ಕರೆತಂದಿದೆ. ತೀವ್ರ ಅನಾರೋಗ್ಯ ಮತ್ತು ಬಡತನದಿಂದ ಕಂಗೆಟ್ಟಿದ್ದ ನಂಜನಗೂಡು ತಾಲೂಕಿನ ಹುಲ್ಲಳ್ಳಿ ಗ್ರಾಮದ ಪೂಜಾ ಎಂಬುವವರ ನಿವಾಸಕ್ಕೆ ಶುಕ್ರವಾರ ಭೇಟಿ ನೀಡಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಸಂಕಷ್ಟದಲ್ಲಿರುವ ಕುಟುಂಬಕ್ಕೆ ಆಸರೆಯಾಗಿ ನಿಲ್ಲುವ ಭರವಸೆ ನೀಡಿದರು.
ವಿಡಿಯೋ ನೋಡಿ ಆಗಮನ
ಬೆನ್ನುಮೂಳೆಯ ಸಮಸ್ಯೆ ಹಾಗೂ ಶಸ್ತ್ರಚಿಕಿತ್ಸೆಯ ಅಡ್ಡಪರಿಣಾಮದಿಂದ ಕಳೆದ ಹಲವು ತಿಂಗಳುಗಳಿಂದ ಹಾಸಿಗೆ ಹಿಡಿದಿರುವ 24 ವರ್ಷದ ಪೂಜಾ ಅವರ ಸ್ಥಿತಿಯ ಬಗ್ಗೆ ಚೇತನ್ ಎಂಬ ಯುವಕ ವಿಡಿಯೋ ಮಾಡಿ ಜಾಲತಾಣದಲ್ಲಿ ಹಂಚಿಕೊಂಡಿದ್ದ. ಈ ವಿಡಿಯೋ ಗಮನಿಸಿದ ಸಚಿವರು, ಕೂಡಲೇ ಸ್ಪಂದಿಸಿ ಪೂಜಾ ಅವರ ಮನೆಗೆ ಭೇಟಿ ನೀಡಿದರು. ಸಚಿವರನ್ನು ಕಂಡ ಕೂಡಲೇ ಪೂಜಾ ಮತ್ತು ಅವರ ಪೋಷಕರು ಭಾವೋದ್ವೇಗಕ್ಕೊಳಗಾಗಿ ಕಣ್ಣೀರಿಟ್ಟರು. ಸುಮಾರು ಮುಕ್ಕಾಲು ಗಂಟೆ ಕಾಲ ಅವರೊಂದಿಗೆ ಚರ್ಚಿಸಿದ ಸಚಿವರು, "ಧೈರ್ಯವಾಗಿರಿ, ನಿಮ್ಮ ಜೊತೆ ನಾನಿದ್ದೇನೆ" ಎಂದು ಧೈರ್ಯ ತುಂಬಿದರು.

ವಾಸಕ್ಕೆ ಸೂರು ಹಾಗೂ ಆರ್ಥಿಕ ನೆರವು
ಚಿಕಿತ್ಸೆಗಾಗಿ ಮನೆ-ಮಠ ಮಾರಿ ಈಗ ಬಾಡಿಗೆ ಮನೆಯಲ್ಲಿರುವ ಪೂಜಾ ಕುಟುಂಬಕ್ಕೆ ವಾಸದ ವ್ಯವಸ್ಥೆ ಕಲ್ಪಿಸಿಕೊಡುವುದಾಗಿ ಸಚಿವರು ಭರವಸೆ ನೀಡಿದರು. ಬಾಡಿಗೆ ಕಟ್ಟಲಾಗದೆ ತೊಂದರೆಯಲ್ಲಿದ್ದ ಕುಟುಂಬದ ಪರವಾಗಿ ಮನೆ ಮಾಲೀಕರಿಗೆ ಕರೆ ಮಾಡಿ ಮಾತನಾಡಿದ ಅವರು, ತಾವು ಲೀಸ್ ಮೊತ್ತ ಭರಿಸುವುದಾಗಿ ತಿಳಿಸಿದರು. ಅಂತಿಮವಾಗಿ ಪರ್ಯಾಯ ವಸತಿ ವ್ಯವಸ್ಥೆ ಮಾಡಲು ಸ್ಥಳೀಯ ಮುಖಂಡರು ಹಾಗೂ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು. ಅಲ್ಲದೆ ಸ್ಥಳದಲ್ಲಿಯೇ ಚಿಕಿತ್ಸೆಗೆ ಅಗತ್ಯವಾದ ಧನಸಹಾಯ ಮಾಡಿದರು.
ಪೂಜಾ ಅವರ ಪತಿ ರವಿ ಕೂಡ ಕೆಎಸ್ಆರ್ಟಿಸಿ ಬಸ್ ಅಪಘಾತದಲ್ಲಿ ಗಾಯಗೊಂಡು ದುಡಿಯಲಾಗದ ಸ್ಥಿತಿಯಲ್ಲಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಕುಮಾರಸ್ವಾಮಿ ಅವರು, ಕೂಡಲೇ ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಕರೆ ಮಾಡಿ, ಲೋಕ ಅದಾಲತ್ ಮೂಲಕ ಪ್ರಕರಣ ಇತ್ಯರ್ಥಪಡಿಸಿ ಸಂತ್ರಸ್ತರಿಗೆ ಕೂಡಲೇ ಪರಿಹಾರ ಕೊಡಿಸಲು ಸೂಚಿಸಿದರು.
ಪೂಜಾ ಅವರ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ವಿಧಾನ ಪರಿಷತ್ ಸದಸ್ಯ ಎಸ್.ಎನ್. ಮಂಜೇಗೌಡ ಅವರು ವಹಿಸಿಕೊಂಡಿದ್ದಾರೆ. ಕುಟುಂಬದ ಜೀವನೋಪಾಯಕ್ಕೆ ಅನುಕೂಲವಾಗುವಂತೆ ಸಣ್ಣ ಅಂಗಡಿಯೊಂದನ್ನು ವ್ಯವಸ್ಥೆ ಮಾಡಲು ತಹಶೀಲ್ದಾರ್ ಅವರಿಗೆ ಸೂಚಿಸಲಾಗಿದೆ. ಮೈಸೂರಿನಲ್ಲಿ ಪೂಜಾ ಮತ್ತು ಅವರ ಪತಿಗೆ ಉತ್ತಮ ಚಿಕಿತ್ಸೆ ಕೊಡಿಸಲು ಸ್ಥಳೀಯ ಮುಖಂಡರಿಗೆ ಜವಾಬ್ದಾರಿ ನೀಡಲಾಗಿದೆ.
ಇದಕ್ಕೂ ಮುನ್ನ ಬೆಳಿಗ್ಗೆ ಪತ್ನಿ ಅನಿತಾ ಕುಮಾರಸ್ವಾಮಿ ಅವರೊಂದಿಗೆ ಚಾಮುಂಡಿ ಬೆಟ್ಟ ಮತ್ತು ನಂಜನಗೂಡಿನ ಶ್ರೀನಂಜುಂಡೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಕುಮಾರಸ್ವಾಮಿ ಅವರು ಲೋಕ ಕಲ್ಯಾಣಕ್ಕಾಗಿ ವಿಶೇಷ ಪೂಜೆ ಸಲ್ಲಿಸಿದರು. ಆಗ ಶಾಸಕ ಹರೀಶ್ ಗೌಡ, ವಿಧಾನ ಪರಿಷತ್ ಸದಸ್ಯ ಮಂಜೇಗೌಡ, ಮಾಜಿ ಶಾಸಕರಾದ ಮಹದೇವ್, ಅಶ್ವಿನ್ ಕುಮಾರ್ ಸೇರಿದಂತೆ ಹಲವು ಜೆಡಿಎಸ್ ಮುಖಂಡರು ಹಾಜರಿದ್ದರು.












Click it and Unblock the Notifications