ಅನಂತ್ ಕುಮಾರ್ ಹೆಗಡೆ : ಏರುವ ಏಣಿಯನ್ನು ತಾವೇ ತಳ್ಳಿದರೇ?
ದಕ್ಷಿಣಕನ್ನಡ, ಉಡುಪಿ, ಚಿಕ್ಕಮಗಳೂರು ಮತ್ತು ಉತ್ತರಕನ್ನಡ ಜಿಲ್ಲೆಯಲ್ಲಿ ಕೇಸರಿ ಹಿಡಿತ ತುಸು ಜಾಸ್ತಿಯಿರುವ ಈ ಸನ್ನಿವೇಶದ ಲಾಭವನ್ನು ಪಡೆದುಕೊಂಡು, ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಮೋದಿ ಸಂಪುಟದಲ್ಲಿ ದಿನದಿಂದ ದಿನಕ್ಕೆ ಬೆಳೆಯುವ ಸುವರ್ಣಾವಕಾಶವನ್ನು ಕಳೆದು ಕಳೆದುಕೊಂಡರಾ?
ಯಾಕೆಂದರೆ, ಕೌಶಾಲ್ಯಾಭಿವೃದ್ದಿ ಸಚಿವಾಲಯದ (ರಾಜ್ಯದಲ್ಲಿ ಒಂದು ರೀತಿ ಮುಜರಾಯಿ ಖಾತೆಯ ಇದ್ದ ಹಾಗೆ) ಉಸ್ತುವಾರಿಯನ್ನು ಹೆಗಡೆಯವರಿಗೆ ಮೋದಿ ಸರಕಾರ ನೀಡಿದ್ದರೂ, ಸಚಿವರು ಇಲಾಖೆಗೆ ಸಂಬಂಧಪಟ್ಟ ಕೆಲಸಕ್ಕಿಂತ ಇದುವರೆಗೂ ಸುದ್ದಿಯಲ್ಲಿರುವುದು ಬೇಡವಾದ ಕಾರಣಕ್ಕೆ ಎಂದರೆ ಅನಂತ್ ಕುಮಾರ್ ಹೆಗಡೆ ಮತ್ತವರ ಅಭಿಮಾನಿಗಳು ಬೇಸರಿಸಿಕೊಳ್ಳಬಾರದು.
ಕನ್ನಡ, ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಉತ್ತಮ ಹಿಡಿತವಿರುವ ಅನಂತ್ ಕುಮಾರ್ ಹೆಗಡೆ, ತಮ್ಮ ಕಟ್ಟಾ ಹಿಂದೂ ಪರ ಹೇಳಿಕೆ ಮತ್ತು ವಿರೋಧಿಗಳನ್ನು ಟೀಕಿಸುವ ಭರದಲ್ಲಿ ಮಾಡಬಾರದ ಎಡವಟ್ಟುಗಳನ್ನು ಮಾಡಿ, ವಿರೋಧಿಗಳಿಗೆ ಸುಖಾಸುಮ್ಮನೆ ಆಹಾರವಾಗುತ್ತಿರುವುದು ಮತ್ತು ಬಿಜೆಪಿ ವರಿಷ್ಠರಿಗೂ ತಲೆನೋವಾಗುತ್ತಿರುವುದು ಗೊತ್ತೇ ಇದೆ.
1996ರಿಂದ ಸತತವಾಗಿ ಲೋಕಸಭೆಗೆ ಆಯ್ಕೆಯಾಗುತ್ತಿರುವುದು ಹೆಗಡೆಯವರ ಕಮ್ಮಿ ಸಾಧನೆ ಏನೂ ಅಲ್ಲ. ಉತ್ತಮ ಸಂಘಟನಾಕಾರರು, ವಾಗ್ಮಿ ಮತ್ತು ಕಾರ್ಯಕರ್ತರನ್ನು ಒಗ್ಗೂಡಿಸುವಲ್ಲಿ ಹೆಗಡೆ ಯಶಸ್ವಿಯಾಗುತ್ತಿದ್ದರೂ, ಕೇಂದ್ರದಲ್ಲಿ ಹಂತಹಂತವಾಗಿ ಮೇಲೇರಬೇಕು ಎನ್ನುವ ಇಚ್ಚಾಶಕ್ತಿ ಅವರಿಗಿಲ್ಲವೇ? ಅಥವಾ ರಾಜ್ಯ ರಾಜಕಾರಣದ ಮೇಲೆ ಕಣ್ಣಿಟ್ಟಿದ್ದಾರೆಯೇ? ಹೆಗಡೆಗಿತ್ತು, ಇನ್ನೂ ಇದೆ ಗೋಲ್ಡನ್ ಚಾನ್ಸ್..

ಮಾರ್ಗದರ್ಶಕ ಮಂಡಳಿ ಎನ್ನುವ ವೃದ್ದಾಶ್ರಮ
ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ, ಪ್ರಧಾನಿಗಳು ಪ್ರಮುಖವಾಗಿ ಆದ್ಯತೆ ಕೊಡುತ್ತಿದ್ದದ್ದು ಮಧ್ಯಮ ಮತ್ತು ಯುವ ಸಂಸದರಿಗೆ. ಎಪ್ಪತ್ತೈದರ ಮೇಲಿನ ಹಿರಿಯ ಸದಸ್ಯರಿಗೆ ಸಂಪುಟದಲ್ಲಿ ಸ್ಥಾನ ಸಿಕ್ಕಿರಲಿಲ್ಲ. ಮಾರ್ಗದರ್ಶಕ ಮಂಡಳಿ ಎನ್ನುವ ವೃದ್ದಾಶ್ರಮಕ್ಕೆ ಅಡ್ವಾಣಿ, ಯಶವಂತ್ ಸಿನ್ಹಾ ಮತ್ತು ಮುರಳಿ ಮನೋಹರ್ ಜೋಷಿ ಅವರನ್ನು ಕಳುಹಿಸಿದಾಗಲೇ ಅವರ ಸಂದೇಶ ಸ್ಪಷ್ಟವಾಗಿತ್ತು. ಸಿನ್ಹಾ, ಮೋದಿ ವಿರುದ್ದ ತಿರುಗಿ ನಿಂತಿದ್ದು ಆಮೇಲಿನ ವಿಚಾರ.

ಹಿರಿಯ ಕ್ಯಾಬಿನೆಟ್ ಮತ್ತು ಇತರ ದರ್ಜೆಯ ಸಚಿವರಿದ್ದಾರೆ
ಆದರೂ, ಮೋದಿ ಕ್ಯಾಬಿನೆಟ್ ನಲ್ಲಿ ಎಪ್ಪತ್ತರ ಆಸುಪಾಸಿನಲ್ಲಿರುವವರು ಇನ್ನೂ ತುಂಬಾ ಹಿರಿಯ ಕ್ಯಾಬಿನೆಟ್ ಮತ್ತು ಇತರ ದರ್ಜೆಯ ಸಚಿವರಿದ್ದಾರೆ. ಸುಷ್ಮಾ ಸ್ವರಾಜ್, ಉಮಾಭಾರತಿ ಈಗಾಗಲೇ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎನ್ನುವ ಮಾತನ್ನು ಹೇಳಿದ್ದಾರೆ. ಇನ್ನು ಅರುಣ್ ಜೇಟ್ಲಿ ಆರೋಗ್ಯ ಸಮಸ್ಯೆ ಇರುವುದರಿಂದಲೇ ಮಧ್ಯಂತರ ಬಜೆಟ್ ಅನ್ನು ಪಿಯೂಶ್ ಗೋಯಲ್ ಮಂಡಿಸಿದ್ದು.

ಗೌಡ್ರು, ಜಿಗಜಿಣಗಿ ಗರಿಷ್ಠ ಪದವಿಗೇರುವ ಸಾಧ್ಯತೆ ಕಮ್ಮಿ
ನಿತಿನ್ ಗಡ್ಕರಿಯವರಿಗೂ ಆವಾಗಾವಾಗ ಆರೋಗ್ಯ ಕೈಕೊಡುವುದು ಗೊತ್ತಿರುವ ವಿಚಾರ. ಕರ್ನಾಟಕದ ಹಿರಿಯ ಮುಖಂಡರಾದ ಸದಾನಂದ ಗೌಡ್ರು, ರಮೇಶ್ ಜಿಗಜಿಣಗಿ ಈಗಿರುವ ಹುದ್ದೆಗಿಂತ ಇನ್ನೂ ಗರಿಷ್ಠ ಪದವಿಗೇರುವ ಸಾಧ್ಯತೆ ಕಮ್ಮಿ ಅಥವಾ ಅವರಿಗೂ ಅದು ಬೇಕಾಗಿದೆಯೋ ಇಲ್ಲವೋ? ಇನ್ನು, 60-70ರ ಆಸುಪಾಸಿನಲ್ಲಿ ಮುಕ್ಕಾಲು ಪಾಲು ಸಚಿವರಿದ್ದಾರೆ. ಸರಕಾರದಲ್ಲಿ ಇನ್ನೂ ಪ್ರಭಾವಿಯಾಗಬೇಕು ಎನ್ನುವ ಆಕಾಂಕ್ಷಿಗಳಿಗೆ ಈ ಲೆಕ್ಕಾಚಾರ ಒಂದೇ ಸಾಕಾಗಬೇಕಿತ್ತು.

ಅನಂತ್ ಕುಮಾರ್ ಹೆಗಡೆ ಮಾಡಿದ ಹೆಸರು ಕಮ್ಮಿನೇ?
ಮೋದಿ ಸರಕಾರದಲ್ಲಿರುವ ಕಿರಿಯ ವಯಸ್ಸಿನ ಸಚಿವರೆಂದರೆ ಸ್ಮೃತಿ ಇರಾನಿ, ರಾಜವರ್ಧನ್ ರಾಥೋಡ್, ಧರ್ಮೇಂದ್ರ ಪ್ರಧಾನ್, ಜಯಂತ್ ಸಿನ್ಹಾ, ಕಿರಣ್ ರಿಜು, ಅನುಪ್ರಿಯಾ ಪಟೇಲ್, ಬಾಬುಲಾಲ್ ಸುಪ್ರಿಯೋ ಮುಂತಾದವರು. ರಾಷ್ಟ್ರ ರಾಜಕಾರಣದಲ್ಲಿ ಇವರ ಹೆಸರು ಚಾಲ್ತಿಯಲ್ಲಿರುವುದನ್ನು ಗಮನಿಸಿದರೆ, ಹೆಚ್ಚುಕಮ್ಮಿ ಇದೇ ವಯಸ್ಸಿನ ಅನಂತ್ ಕುಮಾರ್ ಹೆಗಡೆ ಮಾಡಿದ ಹೆಸರು ಕಮ್ಮಿನೇ?

ಸಮರ್ಥವಾಗಿ ಇಲಾಖೆಯನ್ನು ನಿಭಾಯಿಸುವ ಸಚಿವರ ಕೊರತೆ
ಸಮರ್ಥವಾಗಿ ಇಲಾಖೆಯನ್ನು ನಿಭಾಯಿಸುವ ಸಚಿವರ ಕೊರತೆ ಮೋದಿ ಸರಕಾರಕ್ಕೆ ಕಾಡುತ್ತಿದೆ ಎನ್ನುವುದಕ್ಕೆ ಕೊಡಬಹುದಾದ ಮೊಟ್ಟಮೊದಲ ಉದಾಹರಣೆಯೆಂದರೆ ಪಿಯೂಶ್ ಗೋಯಲ್. ಆಯಕಟ್ಟಿನ ಹುದ್ದೆಯನ್ನು ನಿಭಾಯಿಸಿ ಪಿಯೂಶ್ ಸೈ ಎನಿಸಿಕೊಂಡರು. ನಮ್ಮ ರಾಜ್ಯದಿಂದ ಪ್ರತಿನಿಧಿಸುವ ಸಂಸದರು (ದಿ. ಅನಂತ್ ಕುಮಾರ್ ಹೊರತು ಪಡಿಸಿ) ಯಾರೂ ಆ ಹಂತಕ್ಕೆ ಪ್ರಯತ್ನಿಸಲೇ ಇಲ್ಲ, including ಅನಂತ್ ಕುಮಾರ್ ಹೆಗಡೆ.

ಮತ್ತದೇ ಮುಸ್ಲಿಂ ಹೆಂಡತಿಯ ಹಿಂದೆ ಬೀಳಬಾರದು
ಮತ್ತೆ ಚುನಾವಣೆ ಎದುರಾಗುತ್ತಿದೆ, ಉತ್ತರ ಕನ್ನಡ ಕ್ಷೇತ್ರದಿಂದ ಬಹುತೇಕ ಅನಂತ್ ಕುಮಾರ್ ಹೆಗಡೆಯವರೇ ಬಿಜೆಪಿ ಅಭ್ಯರ್ಥಿ. ಮೋದಿ, ಶಾ ಗೆದ್ದೇ ಗೆಲ್ಲುತ್ತೇವೆ ಎನ್ನುವ ವಿಶ್ವಾಸದಲ್ಲಿದ್ದಾರೆ. ಚುನಾವಣೆ ಕಥೆ ಏನೇ ಇರಲಿ. ರಾಷ್ಟ್ರ ರಾಜಕಾರಣದಲ್ಲಿ ಪ್ರಭಾವಿಯಾಗಲು ಹೆಗಡೆಗೆ ಒಂದಲ್ಲಾ ಒಂದು ಬಾಗಿಲು ತೆರೆದಿರುತ್ತದೆ. ಅದನ್ನು ಹೆಗಡೆ ಹೇಗೆ ಬಳಸಿಕೊಳ್ಳುತ್ತಾರೆ ಎನ್ನುವುದಿಲ್ಲಿ ಪ್ರಶ್ನೆ? ರಾಜಕೀಯದಲ್ಲಿ ಆರೋಪ, ಪ್ರತ್ಯಾರೋಪ ಸಹಜ.. ಆದರೆ ಹೆಗಡೆ.ಮತ್ತದೇ ಮುಸ್ಲಿಂ ಹೆಂಡತಿಯ ಹಿಂದೆ ಹೋದರೆ?












Click it and Unblock the Notifications