ಕಾಲಚಕ್ರದ ಯಂತ್ರದಲ್ಲಿ ಸ್ವಚ್ಛಂದದ ಬಾಲ್ಯದ ನೆನಪುಗಳು
ಕಾಲಚಕ್ರದಲ್ಲಿ ಮನುಷ್ಯ ಒಂದು ಯಂತ್ರದಂತೆ ಕಾರ್ಯನಿರ್ವಹಿಸುತ್ತಾ ಹೋಗುತ್ತಾನೆ. ಆದರೂ, ನಡುನಡುವೆ ಏನೋ ಒಂದನ್ನು ಕಳೆದುಕೊಂಡಂತೆ ಭಾಸವಾಗುತ್ತಿರುತ್ತದೆ. ಅದುವೇ ನಮ್ಮ ಬಾಲ್ಯದ ಜೀವನ. ಯಾವುದರ ಚಿಂತೆಯೂ ಇಲ್ಲದೆ, ಮುಗ್ದತೆಯನ್ನು ಮೆರೆಯುತ್ತಾ, ಸ್ವಚ್ಛಂದದ ಬಾಲ್ಯ ಜೀವನ ಎಷ್ಟು ಚಂದ.
ಖಾಕಿ ಚಡ್ಡಿ, ಬಿಳಿ ಶರ್ಟು, ಹೆಗಲ ಮೇಲೊಂದು ಸ್ಕೂಲು ಬ್ಯಾಗು, ಅದರಲ್ಲಂದೊಷ್ಟು ಬುಕ್ಕು. ಶಾಲೆ ಬಿಡುವ ಟೈಂನಲ್ಲಿ ಅಟೆಂಡರ್ ಹೊಡೆಯುವ ಗಂಟೆಯ ಸದ್ದಿಗೆ ಕಾತರಿಸುತ್ತಿದ್ದ ಕಿವಿ, ಗಂಟೆಯ ಸದ್ದು ಕಿವಿಗೆ ಬೀಳುತ್ತಿದ್ದಂತೆಯೇ ಓ... ಎಂದು ಆಟದ ಮೈದಾನದತ್ತ ದೌಡು. (ಕಳೆದುಹೋದ ಬಾಲ್ಯ ಮರಳಿದರೆ ಎಷ್ಟು ಚೆನ್ನ)
ಎರಡನೇ ತರಗತಿಯಿಂದ ಏಳನೇ ತರಗತಿಯ ವರೆಗೆ ಇದೇ ದಾಟಿಯಲ್ಲಿ ಸಾಗುತ್ತಿದ್ದ ಬಾಲ್ಯದ ಜೀವನ ಅದ್ಯಾಕೋ ಈ ಬಾರಿ ಊರಿಗೆ ಹೋದಾಗ ಬಹಳ ಕಾಡಲಾರಂಭಿಸಿತು. ಸೀದಾ, ನಾ ಓದುತ್ತಿದ್ದ ಶಾಲೆಗೆ ಹೋಗಿ ಮುಖ್ಯೋಪಾಧ್ಯಾಯರಿಗೆ ವಂದಿಸಿ, ಉಪಾಧ್ಯಾಯರ ಜೊತೆ ಮಾತುಕತೆ ನಡೆಸಿ, ಶಾಲೆಯ ಸುತ್ತ, ನಾವಾಟವಾಡುತ್ತಿದ್ದ ಮೈದಾನಕ್ಕೆ ಒಂದು ರೌಂಡ್ ಹಾಕಿ ಬಂದೆ.
ಶಾಲೆಯ ಜೀವನ ಮೆಲುಕು ಹಾಕಿಕೊಂಡಾಗ ಅಚ್ಚಳಿಯದೇ ನೆನಪಿನಲ್ಲಿ ಉಳಿಯುವ ನಾವಾಡುತ್ತಿದ್ದ ಕುಟ್ಟಿದೊಣ್ಣೆ (ಗಿಲ್ಲಿದಾಂಡು), ಬ್ಯಾಟುಬಾಲು (ಕ್ರಿಕೆಟ್) ಲಗೋರಿ, ಪಿಲಿಚಂಡಿ, ಜಾರಬಂಡಿ ಆಟ, ಉತ್ಸವಗಳು, ಮನೆಯಲ್ಲಿ ಅಪ್ಪಿಮಿಡಿ ಉಪ್ಪಿನಕಾಯಿ ಹಾಕುತ್ತಿದ್ದದ್ದು ಮುಂತಾದ ನೆನಪುಗಳನ್ನು ಓದುಗರ ಜೊತೆ ಹಂಚಿಕೊಳ್ಳುತ್ತಿದ್ದೇನೆ.

(ಸಾಂದರ್ಭಿಕ ಚಿತ್ರ)
ನಾವು ಶಾಲೆಗೆ ಹೋಗುತ್ತಿದ್ದಾಗ, ಉಡುಪಿ (ನನ್ನ ಊರು) ನಗರ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಶಾಲೆಗಳು (ಖಾಸಗಿ ಶಾಲೆಗಳೂ ಸೇರಿ) ಬೇರೆ ಬೇರೆ ಧ್ವಜಾರೋಹಣ ಮಾಡದೇ, ಒಂದೇ ಕಡೆ ಸೇರಿ ಧ್ವಜಾರೋಹಣ ಮಾಡುವ ಕ್ರಮವಿತ್ತು. ಐದರಿಂದ ಹತ್ತನೇ ತರಗತಿಯವರೆಗಿನ ಎಲ್ಲಾ ವಿದ್ಯಾರ್ಥಿಗಳು ಸಮವಸ್ತ್ರದಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಕಡ್ಡಾಯವಾಗಿತ್ತು.
ನಾನು ಓದುತ್ತಿದ್ದ ಕಡಿಯಾಳಿ ಸರಕಾರೀ ಹಿರಿಯ ಪ್ರಾಧಮಿಕ ಶಾಲೆಯ ನನ್ನ ಸಹಪಾಠಿಗಳೊಂದಿಗೆ ಸ್ವಾತಂತ್ರ್ಯದಿನಾಚರಣೆ ಮತ್ತು ಗಣರಾಜ್ಯೋತ್ಸವ ಸಂದರ್ಭದಂದು ಸಾಲಿನಲ್ಲಿ ಬೋಲೋ ಭಾರತ್ ಮಾತಾಕೀ ಜೈ, ವಂದೇ ಮಾತರಂ, ಜೈ ಕರ್ನಾಟಕ ಮಾತೆ ಎಂದು ಧ್ವಜಾರೋಹಣಾ ಕಾರ್ಯಕ್ರಮ ನಡೆಯುತ್ತಿದ್ದ ಅಜ್ಜರಕಾಡಿನಲ್ಲಿರುವ ಗಾಂಧಿ ಮೈದಾನಕ್ಕೆ (ನಮ್ಮ ಶಾಲೆಯಿಂದ ಸುಮಾರು ಎರಡು ಕಿಲೋಮೀಟರ್) ನಾವು ಸಾಗುತ್ತಿದ್ದ ನೆನಪುಗಳು ಪ್ರತೀ ವರ್ಷ ಈ ಎರಡು ರಾಷ್ಟ್ರೀಯ ಹಬ್ಬದ ದಿನದಂದು ನನ್ನ ಮುಂದೆ ಹಾದುಹೋಗುತ್ತದೆ.
ಸಾಲಾಗಿ ಸಾಗುತ್ತಿದ್ದ ಶಾಲಾ ಪೆರೇಡಿಗೆ ದಾರಿಯಲ್ಲಿ ಕೆಲವು ಸ್ವಯಂಸೇವಕ ಸಂಘಟನೆಗಳು ಮೈಸೂರು ಪಾಕ್, ಲಾಡು, ಬೆಲ್ಲನೀರು, ಚಾಕೋಲೇಟ್ ವಿತರಿಸುತ್ತಿದ್ದರು. ಮೈದಾನದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರುತ್ತಿದ್ದ ಅಷ್ಟೂ ವಿದ್ಯಾರ್ಥಿಗಳಿಗೆ ಉಡುಪಿ ಪರ್ಯಾಯ ಮಠದಿಂದ ಸಿಹಿ ವಿತರಿಸುವ ಪದ್ದತಿಯೂ ಅಂದು ಚಾಲ್ತಿಯಲ್ಲಿದ್ದವು. ಸಿಹಿತಿಂಡಿಗಾಗಿ ಎರಡೆರಡು ಬಾರಿ ಕ್ಯೂನಲ್ಲಿ ನಿಂತು ಬೈಯಿಸಿಕೊಳ್ಳುತ್ತಿದ್ದ ಘಟನೆ, ಕಾರ್ಯಕ್ರಮ ಮುಗಿದ ನಂತರ ಪಕ್ಕದಲ್ಲಿರುವ ಆಟದ ಮೈದಾನದಲ್ಲಿ ಚಡ್ಡಿ ಹರಿಯುವತನಕ ಜಾರಬಂಡಿ ಆಡುತ್ತಿದ್ದ ಘಟನೆಗಳೂ ನನ್ನ ಮರೆಲಾಗದ ಬಾಲ್ಯದ ನೆನಪುಗಳು.
ಜನ್ಮಾಷ್ಟಮಿ ಸಮಯದಲ್ಲಿ ಹುಲಿವೇಷದ ಜೊತೆ ತಂದೆಯ ಕಣ್ಣುತಪ್ಪಿಸಿ ಕೊರಳಿಗೆ ಸೇವಂತಿಗೆ ಹಾರ ಹಾಕಿಕೊಂಡು, ಬಾಯಿಯಲ್ಲಿ ನಿಂಬೆಹಣ್ಣು ಇಟ್ಟುಕೊಂಡು 'ಸಂತೋಷಕೆ ಹಾಡೂ ಸಂತೋಷಕೆ'ಎಂದು ಕುಣಿಯುತ್ತಿದ್ದದ್ದೂ ಪ್ರತೀ ಜನ್ಮಾಷ್ಟಮಿಯ ಸಮಯದಲ್ಲಿ ನೆನಪಾಗುವ ಘಟನೆಗಳು.
ಚೂರ್ಣೋತ್ಸವದ (ಮಕರ ಸಂಕ್ರಾತಿಯ ಮರುದಿನ ನಡೆಯುವ ಹಗಲು ರಥೋತ್ಸವ) ವೇಳೆ ರಥಕ್ಕೆ ಭಕ್ತರು ಕಿತ್ತಾಳೆ ಹಣ್ಣನ್ನು ಬಿಸಾಕುವುದು ಪದ್ದತಿ. ಒಂದು ಬಾರಿ ರಥದಲ್ಲಿ ಕೂತಿದ್ದ ನನಗೆ ಭಕ್ತರು ಎಸೆದ ಕಿತ್ತಳೆ ಹಣ್ಣು ಮುಖಕ್ಕೆ ಬಡಿದು ಮುಖ ಆಂಜನೇಯನ ಮೂತಿಯಂತಾಗಿದ್ದನ್ನು ನನ್ನ ಮಗಳ ಬಳಿ ಅವಾಗಾವಗ ಸ್ಮರಿಸಿಕೊಳ್ಳುತ್ತಿರುತ್ತೇನೆ.
ಅಪ್ಪಿಮಿಡಿ ಉಪ್ಪಿನಕಾಯಿ ಹಾಕುವ ಕೆಲಸವನ್ನು ಅಮ್ಮ ಎಷ್ಟು ಶ್ರದ್ದೆಯಿಂದ ಮಾಡುತ್ತಿದ್ದಳು ಎಂದರೆ ಒಂದು ರೀತಿಯಲ್ಲಿ ವ್ರತದಂತೆ ಆ ಕೆಲಸವನ್ನು ಮಾಡುತ್ತಿದ್ದಳು. ಅಮ್ಮ, ಚಿಕ್ಕಮ್ಮ, ಚಿಕ್ಕಪ್ಪ, ಅಣ್ಣಅಕ್ಕಂದಿರ ಜೊತೆ ಸುಮಾರು 25-30 ಕುಟುಂಬ ಸದಸ್ಯರು ಒಟ್ಟಾಗಿ ದೊಡ್ಡದೊಡ್ಡ ಗಾತ್ರದ ಉಪ್ಪಿನಕಾಯಿ ಜಾಡಿಗಳಲ್ಲಿ ಉಪ್ಪು, ಹುಳಿ, ಖಾರವನ್ನು ಹದವಾಗಿ ಬೆರೆಸಿ ಮಾಡುತ್ತಿದ್ದ ಆ ಕೆಲಸವನ್ನು ನೋಡುವುದೇ ಒಂದು ಚೆಂದವಾಗಿತ್ತು.
ಕಾಲಗಳು ಉರುಳಿ ಹೋಗಿವೆ, ದಶಕಗಳೂ ಸಾಗಿ ಹೋಗಿವೆ. ಮತ್ತೆ ಅನುಭವಿಸಲು ಸಾಧ್ಯವಾಗದ ಆ ದಿನಗಳಲ್ಲಿನ ಘಟನೆಗಳು, ಆ ಮಧುರ ಭಾವನೆಗಳು, ಅನುಭವಗಳು, ನೆನಪುಗಳು.
-
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
ಸಿನಿಮಾ ಕಥೆಗೆ ವಿರುದ್ಧವಾಗಿ ಕುಂಭಮೇಳ ಮೊನಾಲಿಸಾ ಮದುವೆ, 10 ಕೋಟಿ ರೂ. ಸಾಲ ಮಾಡಿದ್ದೇನೆ: ನಿರ್ದೇಶಕ ಸನೋಜ್ ಮಿಶ್ರಾ ಆತಂಕ -
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್












Click it and Unblock the Notifications