ಕರಾವಳಿಗೆ ಬಂತು ಒಮಾನ್ ಬೂತಾಯಿ ಮೀನು!
ಉಡುಪಿ, ಮೇ 21 : ದೇಶದ ಪಶ್ಚಿಮ ಕರಾವಳಿಯಲ್ಲಿ ಈ ಬಾರಿ ಬೂತಾಯಿ ಮೀನು ವಿಪರೀತ ಕಡಿಮೆಯಾಗಿದ್ದು, ಇದನ್ನು ಸರಿದೂಗಿಸಲು ಓಮನ್ನಿಂದ ಬೂತಾಯಿ ಬಂದಿದೆ. ಅದಕ್ಕೂ ವಿಪರೀತ ಬೇಡಿಕೆ ಬಂದಿದೆ.
ಇಲ್ಲಿನ ಬೂತಾಯಿಯ ಎರಡು ಪಟ್ಟು ದೊಡ್ಡದಿರುವ ಸಾಧಾರಣ ಬಂಗುಡೆಯಷ್ಟು ಈ ಒಮಾನ್ ಬೂತಾಯಿ ತೂಗುತ್ತಿದೆ. ಸಣ್ಣ ಬಂಗುಡೆ ಮತ್ತು ದೊಡ್ಡ ಬೂತಾಯಿ ರುಚಿ ಕಡಿಮೆ. ದೊಡ್ಡ ಬಂಗುಡೆ, ಸಣ್ಣ ಬೂತಾಯಿ ರುಚಿ ಜಾಸ್ತಿ ಎಂಬ ಮಾತಿಗೆ ವ್ಯತಿರಿಕ್ತವಾಗಿ ಈ ಬೂತಾಯಿ ಇದೆ. ಬೂತಾಯಿ ದೊಡ್ಡದಿದ್ದರೂ ರುಚಿಯಲ್ಲಿ ಇಲ್ಲಿನ ಬೂತಾಯಿಯಷ್ಟೆಯಿರುವುದರಿಂದ ಬೇಡಿಕೆಯೂ ಹೆಚ್ಚಿದೆ. [ಹಾರಂಗಿಯಲ್ಲಿ ದೇವರ ಮೀನಿನ ರಕ್ಷಣೆಗೆ ಮತ್ಸ್ಯಧಾಮ]

ಪ್ರತಿ ದಿನ ಒಮಾನ್ನಿಂದ ಕೊಚ್ಚಿಗೆ ಬಂದು, ಅಲ್ಲಿಂದ ಮಲ್ಪೆಗೆ ಎರಡು ಕಂಟೈನರ್ ಒಮಾನ್ ಬೂತಾಯಿ ಬರುತ್ತಿದೆ. ಮಲ್ಪೆ ಮಾತ್ರವಲ್ಲದೇ ರತ್ನಗಿರಿ, ಗೋವಾ, ಪಾಂಡಿಚೇರಿ, ಮಂಗಳೂರು, ಕೇರಳಕ್ಕೂ ಒಮಾನ್ ಬೂತಾಯಿ ಸರಬರಾಜು ಆಗುತ್ತಿದೆ. [ಉಡುಪಿಯಲ್ಲಿ ಗಗನಕ್ಕೇರಿದ ಮೀನಿನ ಬೆಲೆ]
ಸಮುದ್ರ ಬದಲಾದಾಗ ಮೀನಿನ ಆಕಾರ, ರುಚಿ, ಬದಲಾಗುತ್ತದೆ. ಹಾಗಾಗಿ ಅರಬ್ಬೀ ಸಮುದ್ರದ ಮೀನಿಗಿರುವ ರುಚಿ ಬಂಗಾಳಕೊಲ್ಲಿಯಲ್ಲಿ ಸಿಗುವ ಮೀನಿಗಿಲ್ಲ. ಅದಕ್ಕಾಗಿಯೇ ತಮಿಳುನಾಡು, ಆಂಧ್ರದಿಂದ ಬರುವ ಮೀನುಗಳಿಗೆ ಬೇಡಿಕೆ ಕಡಿಮೆ ಇರುತ್ತದೆ. [ವ್ಯಾಪಾರಿಗಳ ಜಗಳದಲ್ಲಿ ಜನರಿಗೆ ಮೀನಿನ ಲಾಭ]
ಆದರೆ, ಒಮಾನ್ ಮತ್ತು ಭಾರತ ಪಶ್ಚಿಮ ಕರಾವಳಿ ಒಂದೇ ಸಮುದ್ರದ ಎರಡು ದಡದಲ್ಲಿದೆ. ಒಂದೇ ಸಮುದ್ರದ ಎರಡು ತುದಿಯಲ್ಲಿ ಒಂದೇ ಮೀನು ಎರಡು ಆಕಾರದಲ್ಲಿ ಇರುವುದು ಸೋಜಿಗ ತಂದಿದೆ. ರುಚಿಯಲ್ಲಿ ಮಾತ್ರ ಯಾವುದೇ ವ್ಯತ್ಯಾಸವಿಲ್ಲ ಎನ್ನುತ್ತಾರೆ ಮೀನು ಸವಿದವರು. [ಅಮ್ಮಾ ಇಡ್ಲಿಗೆ ಸವಾಲ್, ನಮೋ ಫಿಶ್ ಸ್ಟಾಲ್ ಆರಂಭ!]
ಪಶ್ಚಿಮ ಕರಾವಳಿಯಲ್ಲಿ ಮತ್ಸ್ಯ ಸಂಪತ್ತು ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಾ ಹೋಗುತ್ತದೆ. ಈ ವರ್ಷ ಬೂತಾಯಿ ಬಹಳ ಕಡಿಮೆ ಸಿಕ್ಕಿದೆ. ಹಾಗಾಗಿ ಬೂತಾಯಿಗೆ ಬೇಡಿಕೆ ಜಾಸ್ತಿಯಾಗಿರುವುದನ್ನು ಕಂಡಿರುವ ಗೋವಾ, ರತ್ನಗಿರಿಯ ಮೀನು ವ್ಯವಹಾರಸ್ಥರು ಒಮಾನ್ ನಿಂದ ಬೂತಾಯಿ ಆಮದು ಮಾಡಿಕೊಂಡು ಬೇಡಿಕೆ ಇರುವಲ್ಲಿಗೆ ಕಳುಹಿಸುತ್ತಿದ್ದಾರೆ.
'ಪಶ್ಚಿಮ ಕರಾವಳಿ ದೊಡ್ಡದಾಗುವುದಿಲ್ಲ. ಆದರೆ, ಬೋಟ್ಗಳ ಸಂಖ್ಯೆ ವಿಪರೀತ ಜಾಸ್ತಿಯಾಗುತ್ತಿರುವುದು ಮತ್ತು ಮೀನು ಹಿಡಿಯುವ ಹೊಸ ಹೊಸ ತಂತ್ರಜ್ಞಾನಗಳು ವೇಗವಾಗಿ ಬರುತ್ತಿವೆ. ಇದರಿಂದ ಮೀನುಗಳು ವಿಪರೀತ ಕಡಿಮೆಯಾಗಿವೆ. ಬೂತಾಯಿ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆಯಾಗಿದೆ' ಎನ್ನುತ್ತಾರೆ ಮೀನಿನ ವ್ಯಾಪಾರಿ ಕಿಶೋರ್ ಪಾಳೆಕಟ್ಟ.












Click it and Unblock the Notifications