ಉಡುಪಿಯಲ್ಲಿ ಡೀನ್ ಗುನರ್ಸನ್ ಸಾಹಸ ಮೆಚ್ಚಿದ ಜನರು
ಉಡುಪಿ, ಫೆ. 23 : ಶನಿವಾರ ಸಂಜೆ ಜೀವಂತ ಸಮಾಧಿಯಾಗಿದ್ದ ಜಾದೂಗಾರ ಮತ್ತು ಎಸ್ಕೇಪ್ ಆರ್ಟಿಸ್ಟ್ ಡೀನ್ ಗುನರ್ಸನ್ ಭಾನುವಾರ ಸಮಾಧಿಯಿಂದ ಸುರಕ್ಷಿತವಾಗಿ ಹೊರಬಂದಿದ್ದಾರೆ. ಸಾವಿರಾರು ಜನರು ಗುನರ್ಸನ್ ಸಮಾಧಿಯಿಂದ ಹೊರಬರುವ ಕ್ಷಣಕ್ಕೆ ಸಾಕ್ಷಿಯಾಗಿದ್ದರು.
ಕೆನಡಾದ ಜಾದೂಗಾರ ಮತ್ತು ಎಸ್ಕೇಪ್ ಆರ್ಟಿಸ್ಟ್ ಗುನರ್ಸನ್ ಭಾನುವಾರ ಸಂಜೆ 6.55ಕ್ಕೆ ಸಮಾಧಿಯಿಂದ ಹೊರಬಂದರು. ಸಮಾಧಿಯಿಂದ ಬಂದ ಬಳಿಕ ನೀರು ಮತ್ತು ಜ್ಯೂಸ್ ಕುಡಿದ ಅವರು, ಸ್ಥಳದಲ್ಲಿ ಸೇರಿದ್ದ ಜನರಿಗೆ ಹಸ್ತಲಾಘವ ನೀಡಿ ಸಂಭ್ರಮಾಚರಣೆ ಮಾಡಿದರು.

ಏನಿದು ಡೀನ್ ಸಾಹಸ : ಡೀನ್ ಗುನರ್ಸನ್ ಅವರ ಕಾರ್ಯಕ್ರಮವನ್ನು ಉಡುಪಿಯ ಕ್ರಿಶ್ಚಿಯನ್ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಆಯೋಜಿಸಲಾಗಿತ್ತು. ಶನಿವಾರ ರಾತ್ರಿ 7.30ಕ್ಕೆ ಗುನರ್ಸನ್ ಅವರನ್ನು 300 ಕೆ.ಜಿ.ಶವದ ಪೆಟ್ಟಿಗೆಯಲ್ಲಿಟ್ಟು, ಹೊಂಡ ತೋಡಿ ಮುಚ್ಚಿಹಾಕಲಾಗಿತ್ತು.
ಡೀನ್ ಅವರ ಕೈಗಳಿಗೆ ಸರಪಳಿ ಹಾಕಲಾಗಿತ್ತು. ಶವಪೆಟ್ಟಿಗೆಯನ್ನು ಸರಪಳಿಯಿಂದ ಬಿಗಿದು ಬೀಗ ಹಾಕಲಾಗಿತ್ತು. ಎರಡು ರಂಧ್ರಗಳ ಮೂಲಕ ಶವಪೆಟ್ಟಿಗೆಗೆ ಆಮ್ಲಜನಕವನ್ನು ಪೂರೈಕೆ ಮಾಡಲಾಗುತ್ತಿತ್ತು. ಕೈ ಮತ್ತು ಶವ ಪೆಟ್ಟಿಗೆಯ ಸರಪಳಿಯನ್ನು ಕಳಚಿಕೊಂಡ ಜಾದೂಗಾರ ಡೀನ್ ಭಾನುವಾರ ಸಂಜೆ ಸಮಾಧಿಯಿಂದ ಹೊರಬಂದರು.

ಸಮಾಧಿಯಿಂದ ಹೊರಬಂದ ಡೀನ್ ಬಳಲಿದ್ದರು. ಆರೋಗ್ಯ ಪರೀಕ್ಷೆ ನಡೆಸಿದ ವೈದ್ಯರು ಅವರಿಗೆ ನೀರು ಮತ್ತು ಜ್ಯೂಸ್ ನೀಡಿದರು. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಉಡುಪಿಯ ಜನರಿಗೆ ಡೀನ್ ಕೃತಜ್ಞತೆ ಸಲ್ಲಿಸಿದರು.
ಸಮಾಧಿಯಿಂದ ಹೊರಬಂದ ಡೀನ್ ಪ್ರೊ.ಶಂಕರ್ ಮತ್ತು ಅವರ ಸಹವರ್ತಿಗಳೊಡನೆ ಊಟ ಮಾಡಿದರು. ಡೀನ್ ಜೀವಂತವಾಗಿ ಸಮಾಧಿಯಾಗುವುದು ಮತ್ತು ಹೊರಬರುವುದಕ್ಕೆ ನೂರಾರು ಜನರು ಸಾಕ್ಷಿಯಾದರು.













Click it and Unblock the Notifications