ಉಡುಪಿಯಲ್ಲೂ ನೀರಿಗೆ ಬರ, ಶ್ರೀ ಕೃಷ್ಣನಿಗೆ ಕೇಳುವುದೇ ಮೊರೆ?
ಉಡುಪಿ, ಮೇ 05 : ಉಡುಪಿ ನಗರದಲ್ಲಿ ನೀರಿನ ಸಮಸ್ಯೆ ಆರಂಭವಾಗಿದೆ. ನಗರಕ್ಕೆ ನೀರು ಪೂರೈಕೆ ಮಾಡುವ ಎರಡು ಪ್ರಮುಖ ಜಲಾಶಯಗಳು ಬರಿದಾಗತೊಡಗಿದ್ದು, ಉಡುಪಿ ನಗರಸಭೆ ಮೇ 15 ರವರೆಗೆ ನೀರು ಪೂರೈಕೆ ಮಾಡಬಹುದು ಎಂದು ಹೇಳಿದೆ. ಮಳೆಗಾಗಿ ಶ್ರೀ ಕೃಷ್ಣನನ್ನು ಪ್ರಾರ್ಥಿಸುವುದು ಮಾತ್ರ ಮುಂದಿನ ದಾರಿಯಾಗಿದೆ.
ಶೀರೂರು ಜಲಾಶಯ ಸಂಪೂರ್ಣವಾಗಿ ಬತ್ತಿ ಹೋಗಿದೆ. ಬಜೆ ಡ್ಯಾಂನಲ್ಲಿ ಅಲ್ಪಸ್ವಲ್ಪ ನೀರು ಉಳಿದಿದೆ. ಶಿರೂರು ಜಲಾಶಯದಿಂದ ನೀರನ್ನು ಬಜೆ ಡ್ಯಾಂಗೆ ಬಿಡಲಾಗುತ್ತಿತ್ತು. ಹೀಗಾಗಿ ಶೀರೂರು ಡ್ಯಾಂ ಸಂಪೂರ್ಣ ಬತ್ತಿ ಹೋಗಿದೆ. ಇದರಿಂದಾಗಿ ನೀರಿನ ಸಂಕಷ್ಟ ಎದುರಾಗಿದೆ. [ಮನಕಲಕುವ ಚಿತ್ರಕ್ಕೆ ಸ್ನೇಹಿತರ ಅದ್ಭುತ ಪ್ರತಿಸ್ಪಂದನೆ]

ಸಾಮಾನ್ಯವಾಗಿ ಶೀರೂರು ಜಲಾಶಯದಿಂದ ನೀರು ಹರಿಸುವುದನ್ನು ಫೆ.2 ಇಲ್ಲವೇ 3 ರಂದು ನಿಲ್ಲಿಸಲಾಗುತ್ತಿತ್ತು. ಆದರೆ, ಈ ಬಾರಿ ಸಾಕಷ್ಟು ನೀರು ಹರಿಸಿ, ಡ್ಯಾಂಗೆ ಅಳವಡಿಸಿದ ಹಲಗೆಗಳನ್ನು ತೆಗೆದು ಬಜೆ ಅಣೆಕಟ್ಟಿಗೆ ನೀರು ಹರಿಸಲಾಗಿದೆ. ಎಲ್ಲಾ ಹಲಗೆಗಳನ್ನು ತೆರವುಗೊಳಿಸಲಾಗಿದ್ದು, ಇದೀಗ ಜಲಾಶಯ ಸಂಪೂರ್ಣ ಖಾಲಿಯಾಗಿದೆ. [ಕುಕ್ಕೆ ಸುಬ್ರಹ್ಮಣ್ಯನ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ಆತಂಕ ಬೇಡ]
ಬಜೆ ಡ್ಯಾಂನಲ್ಲಿ ಅಲ್ಪ ಸ್ವಲ್ಪ ನೀರಿದ್ದರೂ ಮುಂದಿನ ಒಂದೆರಡು ವಾರದೊಳಗೆ ಮಳೆ ಬಾರದೆ ಇದ್ದಲ್ಲಿ ಇದರ ನೀರು ಖಾಲಿಯಾಗಿ ಸಂಕಷ್ಟ ಎದುರಾಗಲಿದೆ. 'ಮೇ 15 ರವರೆಗೆ ಉಡುಪಿ ನಗರಕ್ಕೆ ನೀರಿನ ಸಮಸ್ಯೆ ಕಾಡದು . ಈ ನಡುವೆ ಮಳೆ ಬಾರದೆ ಇದ್ದಲ್ಲಿ ನೀರಿನ ಸಮಸ್ಯೆ ಕಾಡಲಿದೆ' ಎಂದು ಉಡುಪಿ ನಗರ ಸಭೆ ನೀರಾವರಿ ವಿಭಾಗದ ಇಂಜಿನಿಯರ್ ಗಣೇಶ್ ಹೇಳಿದ್ದಾರೆ. [ಮಂಗಳೂರು : ಮಳೆಗಾಗಿ ಮುಸ್ಲಿಂ ಬಾಂಧವರಿಂದ ನಮಾಜ್]
'ಸ್ವರ್ಣ ನದಿಯ ಎರಡನೇ ಹಂತದ ಯೋಜನೆ ಪೂರ್ಣಗೊಳಿಸುವುದು ಮಾತ್ರ ಉಡುಪಿ ನೀರಿನ ಸಮಸ್ಯೆ ಬಗೆಹರಿಸಲು ಇರುವ ದಾರಿ. ಅಲ್ಲದೆ ಈ ಯೋಜನೆ ಇತರ 7 ಪಂಚಾಯಿತಿಗೂ ಉಪಯೋಗವಾಗಲಿದೆ. ಪ್ರತಿ ವರ್ಷ ನೀರಿನ ಸಂಪರ್ಕ ಹೆಚ್ಚಾಗುತ್ತಿದ್ದು, ನೀರಿನ ಬೇಡಿಕೆಯೂ ಹೆಚ್ಚುತ್ತಿದೆ. ಪ್ರತ್ಯೇಕ ವ್ಯವಸ್ಥೆ ಮಾಡಲೇಬೇಕಾಗಿದೆ" ಎಂದು ಗಣೇಶ್ ತಿಳಿಸಿದ್ದಾರೆ.
ಉಡುಪಿ ಮಠದ ಆವರಣದಲ್ಲಿನ ಕಲ್ಯಾಣಿಯಲ್ಲಿಯೂ ನೀರು ಕಡಿಮೆಯಾಗುತ್ತಿದೆ. ಕೊಳವೆ ಬಾವಿಗಳ ಮೂಲಕ ನೀರನ್ನು ತಂದು ಕಲ್ಯಾಣಿಗೆ ಹರಿಸಲಾಗುತ್ತಿದೆ. ನೀರಿನ ಕೊರತೆ ಹಿನ್ನಲೆಯಲ್ಲಿ ತೆಪ್ಪೋತ್ಸವ ನಡೆಸುವುದನ್ನು ನಿಲ್ಲಿಸಲು ಮಠದವರು ಚಿಂತನೆ ನಡೆಸುತ್ತಿದ್ದಾರೆ.












Click it and Unblock the Notifications