ಮದುವೆ ನಂತರ ಹುಡುಗ ಒಲ್ಲೆ ಎಂದಳಾಕೆ!
ಉಡುಪಿ, ಮೇ 21 : ಮದುವೆಯಾದ ಬಳಿಕ ಹೆಣ್ಣು ಮಕ್ಕಳು ಗಂಡನ ಮನೆಗೆ ಹೋಗುವುದು ಹಿಂದಿನಿಂದ ನಡೆದು ಬಂದ ಸಂಪ್ರದಾಯ. ಆದರೆ, ಕಾಪುವಿನಲ್ಲಿ ಮದುವೆಯಾದ ನಂತರ ವಧು ನಾನು ಗಂಡನ ಮನೆಗೆ ಹೋಗಲಾರೆ ಎಂದು ಪಟ್ಟು ಹಿಡಿದು ಕುಳಿತ ಪ್ರಸಂಗ ನಡೆದಿದೆ. ಈ ವಿಚಿತ್ರ ಪ್ರಸಂಗ ಸದ್ಯ ಕಾಪು ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.
ಸೋಮವಾರ ಕಾಪುವಿನ ಶ್ರೀ ವೀರಭದ್ರಸ್ವಾಮಿ ದೇವಾಲಯದಲ್ಲಿ ಕಾಪು ಸಮೀಪದ ಚಂದ್ರಾನಗರದ ವಧು ಮತ್ತು ಮತ್ತು ಉಚ್ಚಿಲ ಗ್ರಾಮದ ವರನ ನಡುವೆ ವಿವಾಹ ನಡೆದಿದೆ. ಆದರೆ, ಮದುವೆಯಾದ ಬಳಿಕ ವಧು ತಾನು ಗಂಡನ ಮನೆಗೆ ಹೋಗುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ.

ಸಂಭ್ರಮದಿಂದ ವಿವಾಹ ನಡೆಸಿ, ಮದುವೆಯ ಭರ್ಜರಿ ಊಟವೂ ಆದ ಬಳಿಕ ವಧು ಹೇಳಿದ ಮಾತು ಹೇಳಿ ಎರಡೂ ಕುಟುಂಬದವರೂ ಆತಂಕಗೊಂಡಿದ್ದಾರೆ.
ನನಗೆ ಹುಡುಗ ಇಷ್ಟವಿಲ್ಲ, ಆದ್ದರಿಂದ ಗಂಡನ ಮನೆಗೆ ಹೋಗುವುದಿಲ್ಲ ಎಂದು ಹಠ ಹಿಡಿದು ಕುಳಿತಿದ್ದಾಳೆ. ವಧುವಿನ ಸಂಬಂಧಿಕರು ನಡೆಸಿದ ಮನವೊಲಿಕೆ ಪ್ರಯತ್ನವೂ ವಿಫಲವಾಗಿದ್ದು, ವಧು ತನ್ನ ಪಟ್ಟು ಸಡಿಲಿಸಿಲ್ಲ.
ಈ ಕುರಿತು ಸಂಬಂಧಿಕರು ಕಾಪು ಪೊಲೀಸ್ ಠಾಣೆಗೂ ದೂರು ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಎರಡೂ ಕುಟುಂಬ ಮತ್ತು ವಧುವಿನ ಬಳಿ ಮಾತುಕತೆ ನಡೆಸಿದರು. ವಧುವಿನ ಹಠ ಕಂಡ ಪೊಲೀಸರು ಒಂದು ವಾರದೊಳಗೆ ಸಮಸ್ಯೆಯನ್ನು ಸಂಧಾನದ ಮೂಲಕ ಇತ್ಯರ್ಥಮಾಡಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.
ಸದ್ಯ ವಧು ಮತ್ತು ವರನ ಮನೆಯವರು ಈ ಸಮಸ್ಯೆಯನ್ನು ಹೇಗೆ ಬಗೆಹರಿಸುವುದು ಎಂದು ತಲೆ ಕೆಡಿಸಿಕೊಂಡಿದ್ದಾರೆ. ಘಟನೆಯಿಂದಾಗಿ ಎರಡೂ ಕುಟುಂಬದವರು ಬೇಸರಗೊಂಡಿದ್ದು, ರಾಜಿಯಲ್ಲಿ ಸಮಸ್ಯೆ ಇತ್ಯರ್ಥವಾಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.












Click it and Unblock the Notifications