ಇಬ್ಬರು ಬಿಜೆಪಿ, ಒಬ್ಬರು ಜೆಡಿಎಸ್ ನಾಯಕರ ಕುಟುಂಬ ರಾಜಕಾರಣ: ಎಲ್ಲಾ ಟಿಕೆಟಿಗಾಗಿ!
ಒಂದು ಕಾಲವಿತ್ತು, ರಾಜ್ಯ ರಾಜಕಾರಣದಲ್ಲಿ ಕುಟುಂಬ ರಾಜಕಾರಣ ಎಂದಾದಾಗ ಬರೀ ಜೆಡಿಎಸ್ ವರಿಷ್ಠರ ಕುಟುಂಬವನ್ನು ಮಾತ್ರ ಬೊಟ್ಟು ಮಾಡಲಾಗುತ್ತಿತ್ತು. ಈಗ, ಹಾಗಲ್ಲಾ.. ಯಾವ ಪಕ್ಷವೂ ಇದಕ್ಕೆ ಹೊರತಾಗಿಲ್ಲ ಎನ್ನುವುದಕ್ಕೆ ನಮ್ಮ ರಾಜಕೀಯ ವೈಭವವೇ ಸಾಕ್ಷಿ.
ತೀರಾ ಇತ್ತೀಚಿನ ಉಪ ಚುನಾವಣೆಯನ್ನು ನೋಡುವುದಾದರೆ, ಸಿಂಧಗಿಯಲ್ಲಿ ಅಶೋಕ್ ಮನಗೂಳಿಯವರಿಗೆ ಮತ್ತು ಬಸವಕಲ್ಯಾಣದಲ್ಲಿ ಮಾಲಾ ನಾರಾಯಣ ರಾವ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತು. ಇದರಲ್ಲಿ, ಅಶೋಕ್ ಅವರು ನಿಧನರಾದ ಜೆಡಿಎಸ್ ಶಾಸಕ ಎಂ.ಸಿ.ಮನಗೂಳಿಯವರ ಪುತ್ರರು ಮತ್ತು ಮಾಲಾ ಅವರು ಕಾಂಗ್ರೆಸ್ ಶಾಸಕ ಬಿ.ನಾರಾಯಣ ರಾವ್ ಅವರ ಪತ್ನಿ.
ಈ ಕುಟುಂಬ ರಾಜಕಾರಣ ಎನ್ನುವುದು ಮತ್ತೆ ಸದ್ದು ಮಾಡುತ್ತಿರುವುದು ವಿಧಾನ ಪರಿಷತ್ತಿನ 25 ಕ್ಷೇತ್ರಗಳಿಗೆ ಚುನಾವಣಾ ದಿನಾಂಕ ಘೋಷಣೆಯಾದ ನಂತರ. ಕುಟುಂಬ ರಾಜಕಾರಣಕ್ಕೆ ನಮ್ಮಲ್ಲಿ ಅವಕಾಶವಿಲ್ಲ ಎಂದು ಬಿಜೆಪಿಯವರು ಹೇಳುತ್ತಿದ್ದರೂ, ಬೆಳಗಾವಿ ಲೋಕಸಭಾ ಚುನಾವಣೆಯಲ್ಲಿ ಮಾಡಿದ್ದೇನು?
ಈಗ, ಬಿಜೆಪಿಯ ಇಬ್ಬರು ಹಿರಿಯ ಮಾಜಿ ಸಚಿವರು ಮತ್ತು ಒಬ್ಬರು ಜೆಡಿಎಸ್ಸಿನ ಹಿರಿಯ ಮುಖಂಡರು ತಮ್ಮತಮ್ಮ ಪಕ್ಷದ ಟಿಕೆಟಿಗಾಗಿ ಭಾರೀ ಲಾಬಿಯನ್ನು ನಡೆಸುತ್ತಿದ್ದಾರೆ. ಇದು, ಪಕ್ಷದೊಳಗೆ ಅಲ್ಲಲ್ಲಿ ಅಪಸ್ವರಕ್ಕೂ ಕಾರಣವಾಗಿದೆ. ಹಾಗಾದರೆ, ಕುಟುಂಬಕ್ಕಾಗಿ ಟಿಕೆಟ್ ಹಿಂದೆ ಬಿದ್ದಿರುವ ಆ ಮೂವರು ಯಾರು?

ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡದಿರಲು ಬಿಜೆಪಿ ಕೋರ್ ಕಮಿಟಿ ನಿರ್ಧಾರ
ಒಂದೇ ಕುಟುಂಬದ ಇನ್ನೊಂದು ಸದಸ್ಯರಿಗೆ ಟಿಕೆಟ್ ನೀಡದಿರಲು ಬಿಜೆಪಿ ಕೋರ್ ಕಮಿಟಿ ನಿರ್ಧರಿಸಿತ್ತು ಎನ್ನುವ ಮಾಹಿತಿಯಿದೆ. ಸಂಸದ, ಶಾಸಕ, ಸಚಿವ ಸ್ಥಾನವನ್ನು ಹೊಂದಿರುವವರ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡಲಾಗುವುದಿಲ್ಲ. ಆ ಮೂಲಕ, ವಂಶಪಾರಂಪರ್ಯ ರಾಜಕಾರಣಕ್ಕೆ ಸಂಪೂರ್ಣ ತಿಲಾಂಜಲಿ ಹಾಡುವ ನಿರ್ಧಾರಕ್ಕೆ ಬಿಜೆಪಿಯ ವರಿಷ್ಠರು ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕೆ, ಪಕ್ಷದೊಳಗೆ ಅಪಸ್ವರವೂ ಕೇಳಿ ಬಂದಿತ್ತು, ಯಾಕೆಂದರೆ ಕುಟುಂಬದ ಇನ್ನೊಂದು ಸದಸ್ಯರಿಗೆ ವಿಧಾನ ಪರಿಷತ್ತಿನ ಟಿಕೆಟ್ ಗಿಟ್ಟಿಸಿಕೊಳ್ಳುವ ಸಲುವಾಗಿ.

ಪ್ರದೀಪ್ ಶೆಟ್ಟರ್ ಅವರಿಗೆ ಪರಿಷತ್ತಿನ ಟಿಕೆಟ್ ಕೊಡಿಸಲು ಲಾಬಿ
ಬಿಟ್ ಕಾಯಿನ್ ವಿಚಾರದಲ್ಲಿ ಸಿಎಂ ಬೊಮ್ಮಾಯಿ ದೆಹಲಿಗೆ ಹೋಗಿ ಬಂದ ಬೆನ್ನಲ್ಲೇ ಮಾಜಿ ಸಚಿವ, ಹಿರಿಯ ಶಾಸಕ ಜಗದೀಶ್ ಶೆಟ್ಟರ್ ದೆಹಲಿಗೆ ದೌಡಾಯಿಸಿದ್ದರು. ಇದು ಭಾರೀ ಚರ್ಚೆಗೆ ಕಾರಣವಾಗಿತ್ತು. ಬಿಟ್ ಕಾಯಿನ್ ವಿಚಾರದಲ್ಲಿ ಮಾಹಿತಿಯನ್ನು ಪಡೆದುಕೊಳ್ಳಲು ಶೆಟ್ಟರ್ ಅವರನ್ನು ಹೈಕಮಾಂಡ್ ಕರೆಸಿಕೊಂಡರು ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ, ಅವರ ಸಹೋದರ ಪ್ರದೀಪ್ ಶೆಟ್ಟರ್ ಅವರಿಗೆ ಪರಿಷತ್ತಿನ ಟಿಕೆಟ್ ಕೊಡಿಸಲು ಲಾಬಿ ನಡೆಸುವ ಸಲುವಾಗಿ ಶೆಟ್ಟರ್ ದೆಹಲಿಗೆ ಹೋಗಿದ್ದಾರೆ ಎನ್ನುವ ಮಾತೂ ಕೇಳಿ ಬರುತ್ತಿದೆ.

ಸಹೋದರ ಲಖನ್ ಜಾರಕಿಹೊಳಿ ಪರಿಷತ್ತಿನ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ
ಜಗದೀಶ್ ಶೆಟ್ಟರ್ ಒಬ್ಬರಾದರೆ, ಬಿಜೆಪಿ ಸರಕಾರವನ್ನು ಅಧಿಕಾರಕ್ಕೆ ತರಲು ನಾನೇ ಕಾರಣವೆಂದು ತಿರುಗಾಡುತ್ತಿದ್ದ ರಮೇಶ್ ಜಾರಕಿಹೊಳಿ ಕೂಡಾ ತನ್ನ ತಮ್ಮನಿಗಾಗಿ ಲಾಬಿ ಆರಂಭಿಸಿದ್ದಾರೆ. ಈ ಸಂಬಂಧ, ಸಿಎಂ ಬೊಮ್ಮಾಯಿ ಮನೆಗೆ ಹೋಗಿ ಜಾರಕಿಹೊಳಿ ಒತ್ತಡ ಹೇರುತ್ತಿದ್ದಾರೆ. ಇವರ ಸಹೋದರ ಲಖನ್ ಜಾರಕಿಹೊಳಿ ಪರಿಷತ್ತಿನ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಹದಿನೇಳು ಕ್ಷೇತ್ರದ ವಿಧಾನಸಭಾ ಉಪ ಚುನಾವಣೆಯ ಸಂದರ್ಭದಲ್ಲಿ ಲಖನ್ ಅವರು ರಮೇಶ್ ಜಾರಕಿಹೊಳಿ ವಿರುದ್ದ ಕಾಂಗ್ರೆಸ್ ಟಿಕೆಟಿನಿಂದ ಸ್ಪರ್ಧಿಸಿದ್ದರು. ಆಗ, "ನನ್ನ ಸಹೋದರ ಲಖನ್ ಮುಖವನ್ನು ಇನ್ನೆಂದೂ ನೋಡುವುದಿಲ್ಲ" ಎಂದು ರಮೇಶ್ ಶಪಥ ಮಾಡಿದ್ದನ್ನು ಇಲ್ಲಿ ಒಮ್ಮೆ ಸ್ಮರಿಸಿಕೊಂಡು ಬಿಡೋಣ.

ರೇವಣ್ಣ ಅವರ ಪುತ್ರ ಸೂರಜ್ ರೇವಣ್ಣ ಅಥವಾ ಪತ್ನಿ ಭವಾನಿ
ಇದು ಬಿಜೆಪಿಯ ಕಥೆಯಾಗಿದ್ದರೆ, ಜೆಡಿಎಸ್ ಕುಟುಂಬ ರಾಜಕಾರಣದ ಒತ್ತಡವೂ ಎಚ್.ಡಿ.ದೇವೇಗೌಡ್ರ ಮೇಲಿದೆ. ಹಾಸನದಿಂದ ದೇವೇಗೌಡ್ರ ಕುಟುಂಬದ ಕುಡಿ, ಎಚ್.ಡಿ.ರೇವಣ್ಣ ಅವರ ಪುತ್ರ ಸೂರಜ್ ರೇವಣ್ಣ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇದಲ್ಲದೇ, ಒಂದೋ ತನ್ನ ಪುತ್ರ ಸೂರಜ್ ಗೆ ಅಥವಾ ಪತ್ನಿ ಭವಾನಿಗೆ ಟಿಕೆಟ್ ನೀಡಬೇಕೆಂದು ರೇವಣ್ಣ ಹಠ ಹಿಡಿದಿದ್ದಾರೆ ಎನ್ನುವ ಮಾಹಿತಿಯಿದೆ. ತನ್ನ ಮಗನ ಒತ್ತಡವನ್ನು ದೇವೇಗೌಡ್ರು ಯಾವರೀತಿ ತಡೆದುಕೊಳ್ಳುತ್ತಾರೋ ಎನ್ನುವ ಸುದ್ದಿಯ ನಡುವೆ, ನನ್ನ ಮರ್ಯಾದೆ ತೆಗೆಯಬೇಡಿ ಎಂದು ಗೌಡ್ರು ಗುಡುಗಿದ್ದಾರೆ ಎಂದು ಹೇಳಲಾಗುತ್ತಿದೆ.












Click it and Unblock the Notifications