ಕ್ರಾಸ್ ವೋಟಿಂಗ್ ಭೀತಿ: ಜೆಡಿಎಸ್ ಶಾಸಕರು ಪಂಚತಾರಾ ಹೋಟೆಲಿಗೆ ಶಿಫ್ಟ್?
ದಿನಕ್ಕೊಂದು, ಕ್ಷಣಕ್ಕೊಂದು ತಿರುವನ್ನು ರಾಜ್ಯಸಭಾ ಚುನಾವಣೆ ಪಡೆಯುತ್ತಿದೆ. ಮೂರೂ ಪ್ರಮುಖ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಲು ಬೇಕಾದ ರಣತಂತ್ರವನ್ನು ಹಣೆಯುತ್ತಿದೆ. ಇದರ ಜೊತೆಗೆ ಕ್ರಾಸ್ ವೋಟಿಂಗ್ ಭೀತಿ ಕೂಡಾ ಎದುರಾಗಿದೆ.
ಜೆಡಿಎಸ್ ನೀಡುತ್ತಿರುವ ಕೊನೆಯ ಕ್ಷಣದ ಆಫರ್ಗೆ ಕಾಂಗ್ರೆಸ್ ಯಾವ ರೀತಿ ಸ್ಪಂದಿಸಲಿದೆ ಎನ್ನುವುದು ಮತದಾನದ ಮುನ್ನಾದಿನವಾದ ಗುರುವಾರ ಗೊತ್ತಾಗಲಿದೆ. ಏನೆಲ್ಲಾ ರಾಜಕೀಯ ಬೆಳವಣಿಗೆಗಳು ನಡೆಯಲಿದೆ ಎನ್ನುವುದರ ಮೇಲೆ 4ನೇ ಅಭ್ಯರ್ಥಿಯಾಗಿ ಯಾರು ರಾಜ್ಯಸಭೆಗೆ ಆಯ್ಕೆಯಾಗಲಿದ್ದಾರೆ ಎನ್ನುವುದರ ಭವಿಷ್ಯ ನಿರ್ಧಾರವಾಗಲಿದೆ.
ಬುಧವಾರ (ಜೂನ್ 8) ಸಾಕಷ್ಟು ಬೆಳವಣಿಗೆಗಳು ಜೆಡಿಎಸ್ ಮತ್ತು ಕಾಂಗ್ರೆಸ್ ಪಾಳಯದಲ್ಲಿ ನಡೆದಿದೆ. ತಮ್ಮ ಎರಡನೇ ಪ್ರಾಶಸ್ತ್ಯ ಮತ ನೀಡಲು ಸಿದ್ದ ಎಂದು ಜೆಡಿಎಸ್ ಆಫರ್ ಕೊಟ್ಟಿದ್ದರೂ,ಕಾಂಗ್ರೆಸ್ ಕಡೆಯಿಂದ ಇನ್ನೂ ಸ್ಪಂದನೆ ದೊರೆತಿಲ್ಲ.
ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಬೇಕೆನ್ನುವ ಗುರಿಯಿದ್ದರೆ, ನಮ್ಮ ಆಫರ್ ಅನ್ನು ಸ್ವೀಕರಿಸಿ ಎಂದು ಎಚ್. ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಇವೆಲ್ಲದರ ನಡುವೆ ಕ್ರಾಸ್ ವೋಟಿಂಗ್ ಅಥವಾ ತನ್ನ ಶಾಸಕರನ್ನು ಒಂದೆಡೆ ಸೇರಿಸಲು ಜೆಡಿಎಸ್ ಶಾಸಕರು ಪಂಚತಾರಾ ಹೋಟೆಲಿಗೆ ಬುಧವಾರ ರಾತ್ರಿ ಶಿಫ್ಟ್ ಆಗಿದ್ದಾರೆ ಎನ್ನುವ ಸುದ್ದಿ ಇದೆ.

ರಾಜ್ಯಸಭೆಗೆ ದೇವೇಗೌಡರನ್ನು ಕಣಕ್ಕಿಳಿಸಲು ಮೊದಲು ಆಫರ್ ನೀಡಿದ್ದೇ ಬಿಜೆಪಿ
ಕುಮಾರಸ್ವಾಮಿಯವರನ್ನು ಸಿಎಂ ಮಾಡಿದ್ದೇವೆ, ದೇವೇಗೌಡರು ರಾಜ್ಯಸಭೆಗೆ ಆಯ್ಕೆಯಾಗಲೂ ನಾವು ಬೆಂಬಲ ನೀಡಿದ್ದೇವೆ, ಈಗ ನಮ್ಮ ಅಭ್ಯರ್ಥಿಯನ್ನು ಬೆಂಬಲಿಸಲಿ ಎನ್ನುವ ಸಿದ್ದರಾಮಯ್ಯ ಮತ್ತು ಡಿ. ಕೆ. ಶಿವಕುಮಾರ್ ಹೇಳಿಕೆಗೆ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. "ರಾಜ್ಯಸಭೆಗೆ ದೇವೇಗೌಡರನ್ನು ಕಣಕ್ಕಿಳಿಸಲು ಮೊದಲು ಆಫರ್ ನೀಡಿದ್ದೇ ಬಿಜೆಪಿ ಹೊರತು ಕಾಂಗ್ರೆಸ್ ಅಲ್ಲ. ಅಂದು ಸಿಎಂ ಆಗಿದ್ದ ಯಡಿಯೂರಪ್ಪನವರು ಕರೆಮಾಡಿ ಬಿಜೆಪಿ ವರಿಷ್ಠರ ಸಂದೇಶವನ್ನು ನನಗೆ ತಿಳಿಸಿದ್ದರು. ಬಿಜೆಪಿಯವರು ದೇವೇಗೌಡರ ವಿರುದ್ದ ಅಭ್ಯರ್ಥಿ ಹಾಕುವುದಿಲ್ಲ ಎನ್ನುವುದು ಖಚಿತವಾಗುತ್ತಿದ್ದಂತೆಯೇ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ನಿಲ್ಲಿಸಲಿಲ್ಲ"ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಕೆಲವು ಶಾಸಕರು ಜೆಡಿಎಸ್ ತೊರೆಯುವ ಮಾತನಾಡಿದ್ದು
ಮೂರು ಪಕ್ಷಗಳಲ್ಲಿ ಅದರಲ್ಲೂ ಪ್ರಮುಖವಾಗಿ ಅಡ್ಡಮತದಾನದ ಭೀತಿ ಕಾಡುತ್ತಿರುವುದು ಜೆಡಿಎಸ್ ಪಕ್ಷಕ್ಕೆ. ಈಗಾಗಲೇ ಕೆಲವು ಶಾಸಕರು ಜೆಡಿಎಸ್ ತೊರೆಯುವ ಮಾತನಾಡಿದ್ದು ಜೊತೆಗೆ, ಸಿದ್ದರಾಮಯ್ಯವರ ಜೊತೆಗೆ ಉತ್ತಮ ಭಾಂದವ್ಯವನ್ನು ಇಟ್ಟುಕೊಂಡಿರುವುದರಿಂದ ಎಲ್ಲಾ 32 ಶಾಸಕರ ಮೊದಲ ಪ್ರಾಶಸ್ತ್ಯದ ಮತ ಸಿಗುವುದು ಖಚಿತವಿಲ್ಲ ಎನ್ನುವ ಭಯ ದಳಪತಿಗಳಿಗೆ ಕಾಡುತ್ತಿದೆ. ಈ ಹಿನ್ನಲೆಯಲ್ಲಿ ಜೆಡಿಎಸ್ ಶಾಸಕರನ್ನು ಮತದಾನಕ್ಕೆ ಪೂರ್ವಭಾವಿಯಾಗಿ ಒಂದೆಡೆ ಸೇರಿಸಲು ನಿರ್ಧರಿಸಿದೆ.

ದೇವೇಗೌಡರ ನಿವಾಸದಲ್ಲಿ ಸುಮಾರು ಒಂದು ಗಂಟೆ ಚರ್ಚೆ
ಬೆಂಗಳೂರಿನ ಪದ್ಮನಾಭ ನಗರದ ದೇವೇಗೌಡರ ನಿವಾಸದಲ್ಲಿ ಸುಮಾರು ಒಂದು ಗಂಟೆ ಚರ್ಚಿಸಿ ಕುಮಾರಸ್ವಾಮಿಯವರು ವೈಟ್ ಫೀಲ್ಡ್ ನಲ್ಲಿರುವ ತಾಜ್ ವಿವಾಂತ ಹೋಟೆಲಿಗೆ ತೆರಳಿದ್ದಾರೆ ಎಂದು ವರದಿಯಾಗಿದೆ. ಅಲ್ಲಿ ಆಗಲೇ ಹಲವು ಜೆಡಿಎಸ್ ಶಾಸಕರನ್ನು ಕರೆತರಲಾಗಿದೆ ಮತ್ತು ಎಲ್ಲಾ ಶಾಸಕರು ಅಲ್ಲಿ ಸೇರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಕುಮಾರಸ್ವಾಮಿಯವರು ತಮ್ಮ ಶಾಸಕರ ಜೊತೆಗೆ ಮತ್ತೆ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ರಾಜ್ಯಸಭಾ ಚುನಾವಣೆ ಭಾರೀ ಕುತೂಹಲಕ್ಕೆ ಕಾರಣವಾಗಿದೆ
ಜೆಡಿಎಸ್ ಮತ್ತು ಕಾಂಗ್ರೆಸ್ ಪಾಳಯದಲ್ಲಿ ರಾಜಕೀಯ ಚಟುವಟಿಕೆಗೆ ತೀವ್ರವಾಗಿದ್ದರೆ, ಬಿಜೆಪಿ ಮಾತ್ರ ಸೈಲೆಂಟ್ ಆಗಿದೆ. ಬಿಜೆಪಿಯಲ್ಲಿ ಅಡ್ಡಮತದಾನದ ಭೀತಿ ಇಲ್ಲ, ಜೊತೆಗೆ ಖಚಿತ ಗೆಲುವಿನ ವಿಶ್ವಾಸದಲ್ಲಿರುವ ಕಮಲದ ಪಾಳಯ, ಯಾವ ಪಕ್ಷದ ಶಾಸಕರಿಗೆ ಗಾಳ ಹಾಕುತ್ತಿದೆ ಎನ್ನುವ ಭಯ ಎರಡೂ ಪಕ್ಷದಲ್ಲಿ ಕಾಡುತ್ತಿದೆ. ಈ ಎಲ್ಲಾ ಬೆಳವಣಿಗೆಗಳಿಂದ, ರಾಜ್ಯಸಭಾ ಚುನಾವಣೆ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಶುಕ್ರವಾರ ಚುನಾವಣೆ ನಡೆಯಲಿದ್ದು, ಸಂಜೆಯೇ ಮತ ಎಣಿಕೆ ಸಹ ನಡೆದು ಫಲಿತಾಂಶ ಘೋಷಣೆಯಾಗಲಿದೆ.












Click it and Unblock the Notifications