ಕರ್ನಾಟಕ ಹೈಕೋರ್ಟ್ನ ಇಬ್ಬರು ನ್ಯಾಯಮೂರ್ತಿಗಳ ಪ್ರಮಾಣವಚನ
ಕರ್ನಾಟಕ ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕರ್ನಾಟಕ ಹೈಕೋರ್ಟ್ನ ಇಬ್ಬರು ಹೆಚ್ಚುವರಿ ನ್ಯಾಯಮೂರ್ತಿಗಳಿಗೆ ಪ್ರಮಾಣ ವಚನ ಬೋಧಿಸಿದರು.
ಬೆಂಗಳೂರು, ಜನವರಿ 25; ಕರ್ನಾಟಕ ಹೈಕೋರ್ಟ್ಗೆ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ನೇಮಕಗೊಂಡಿರುವ ರಾಮಚಂದ್ರ ದತ್ತಾತ್ರೇಯ ಹುದ್ದಾರ್ ಹಾಗೂ ವೆಂಕಟೇಶ್ ನಾಯ್ಕ ತಾವರ್ಯನಾಯ್ಕ ಮಂಗಳವಾರ ಪ್ರಮಾಣ ವಚನ ಸ್ವೀಕರಿಸಿದರು.
ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೆಚ್ಚುವರಿ ನ್ಯಾಯಮೂರ್ತಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಈ ಇಬ್ಬರು ನ್ಯಾಯಮೂರ್ತಿಗಳ ಸೇರ್ಪಡೆಯಿಂದಾಗಿ ನ್ಯಾಯಮೂರ್ತಿಗಳ ಸಂಖ್ಯೆ 51ಕ್ಕೆ ಏರಿಕೆಯಾಗಿದೆ.
ಬೆಂಗಳೂರಿನ ಪ್ರಧಾನ ಪೀಠ, ಕಲಬುರಗಿ ಮತ್ತು ಧಾರವಾಡ ಪೀಠಗಳಿಗೆ ಸೇರಿ ಒಟ್ಟು 62 ನ್ಯಾಯಮೂರ್ತಿಗಳ ಹುದ್ದೆ ಮಂಜೂರಾಗಿವೆ. ಕಳೆದ ವಾರ ಸಿಜೆಐ ಡಿ. ವೈ. ಚಂದ್ರಚೂಡ್ ಅಧ್ಯಕ್ಷತೆಯಲ್ಲಿ ನಡೆದ ಸುಪ್ರೀಂಕೋರ್ಟ್ ಕೊಲಿಜಿಯಂ ಸಭೆ ನಡೆದಿದೆ.

ವಕೀಲರಾದ ವಿಜಯಕುಮಾರ್ ಅಡಗೌಡ ಪಾಟೀಲ್, ರಾಜೇಶ್ ರೈ ಕಲ್ಲಂಗಾಲ ಮತ್ತು ತಜಲಿ ಮೌಲಾಸಾಬ್ ನಡಾಫ್ ನೇಮಕಕ್ಕೆ ಶಿಫಾರಸು ಮಾಡಲು ತೀರ್ಮಾನ ಮಾಡಲಾಗಿದೆ. ಅವರ ನೇಮಕವಾದರೆ ಜಡ್ಜ್ಗಳ ಸಂಖ್ಯೆ 54ಕ್ಕೆ ಹೆಚ್ಚಳವಾಗಲಿದ್ದು, ಇನ್ನೂ 8 ಹುದ್ದೆ ಖಾಲಿ ಇರುತ್ತವೆ.
ನ್ಯಾಯಮೂರ್ತಿಗಳ ಪ್ರಮಾಣ ವಚನ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ. ಬಿ. ವರ್ಲೆ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಮತ್ತಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಮಾರ್ಗಸೂಚಿ ರೂಪಿಸಲು ನಿರ್ದೇಶನ: ಪೌರಕಾರ್ಮಿಕರ ಬಡ್ತಿಯಲ್ಲಿ ಮೀಸಲಾತಿಗೆ ಸಂಬಂಧಿಸಿದ ಕಾನೂನುಗಳ ಅನುಷ್ಠಾನದಲ್ಲಿನ ಅಸ್ಪಷ್ಟತೆಗಳನ್ನು ನಿವಾರಿಸಲು ಹೊಸ ಮಾರ್ಗಸೂಚಿ ರೂಪಿಸಲು ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ.

ರಾಜ್ಯದ ನಾಗರಿಕ ಸೇವಾ ಕಾಯಿದೆ, 2017 ರನ್ವಯು ಮೀಸಲಾತಿಯ ಆಧಾರದ ಮೇಲೆ ಸರ್ಕಾರಿ ನೌಕರರಿಗೆ ಬಡ್ತಿ ನೀಡಲು ಯಾವುದೇ ಅಸ್ಪಷ್ಟತೆಗಳಿಲ್ಲದೆ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರವು ತಾಜಾ ಮತ್ತು ಸಮಗ್ರ ಮಾರ್ಗಸೂಚಿಗಳನ್ನು ಹೊರಡಿಸುವುದು ಸೂಕ್ತ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.
2017ರ ಕಾಯಿದೆಯನ್ನು ಜಾರಿಗೆ ತರಲು ಜೂನ್ 24, 2019 ರಂದು ಹೊರಡಿಸಲಾದ ಸರ್ಕಾರಿ ಆದೇಶವು ಜಿಓ ಕೆಲವು ಅಸ್ಪಷ್ಟತೆಗಳನ್ನು ಹೊಂದಿದೆ ಎಂದು ಹೇಳಿದ ನ್ಯಾಯಾಲಯ, ಸರ್ಕಾರವು ಜಿಓ ಹಿಂಪಡೆಯುವುದು ಸೂಕ್ತವಾಗಿದೆ ಮತ್ತು ಹೊಸದನ್ನು ರೂಪಿಸುವ ಸ್ವಾತಂತ್ರ್ಯವಿದೆ ಎಂದು ಹೇಳಿದೆ.
ರಾಜ್ಯ ಸರ್ಕಾರದ ವಿವಿಧ ವಿದ್ಯುತ್ ಕಂಪನಿಗಳಲ್ಲಿ ಮುಖ್ಯ ಎಂಜಿನಿಯರ್ಗಳು, ನಿರ್ದೇಶಕರು, ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾಮಾನ್ಯ ವರ್ಗಕ್ಕೆ ಸೇರಿದ ಬಿ. ಗುರುಮೂರ್ತಿ ಮತ್ತು ಇತರ ಹಿರಿಯ ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿಗಳನ್ನು ತಿರಸ್ಕರಿಸಿ ನ್ಯಾಯಮೂರ್ತಿ ಎಸ್. ಸುನೀಲ್ ದತ್ ಯಾದವ್ ಈ ಆದೇಶ ನೀಡಿದ್ದಾರೆ.
ಹೊಸ ಜಿಓ ಸರ್ವೋಚ್ಚ ನ್ಯಾಯಾಲಯದ ಎಲ್ಲಾ ತೀರ್ಪುಗಳನ್ನು ಗಮನದಲ್ಲಿಟ್ಟುಕೊಂಡು ಸಮಗ್ರ ಮಾರ್ಗಸೂಚಿ ಒಳಗೊಂಡಿರಬೇಕು, ಬಡ್ತಿಯಲ್ಲಿನ ಬ್ಯಾಕ್ಲಾಗ್ ಖಾಲಿ ಹುದ್ದೆಗಳ ಭರ್ತಿ, ನಂತರದ ಮೀಸಲಾತಿ, ಮೀಸಲಾತಿ ವರ್ಗದವರು ಸಾಮಾನ್ಯವಾಗಿ ಅರ್ಹರಾಗಿರುತ್ತಾರೆ ಎಂಬ ಸಮಸ್ಯೆಯನ್ನು ಪರಿಹರಿಸಲು ಕ್ರಮ ಕೈಗೊಳ್ಳಬೇಕೆಂದು ನ್ಯಾಯಾಲಯು ಹೇಳಿದೆ.












Click it and Unblock the Notifications