ಡಿ.ವಿ.ಸದಾನಂದ ಗೌಡ, ಜೆಡಿಎಸ್ ನಡುವೆ ಟ್ವಿಟರ್ ಸಮರ!
ಬೆಂಗಳೂರು, ಜೂನ್ 25 : ನಾಮಫಲಕವೊಂದರ ವಿಚಾರದಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಮತ್ತು ಜೆಡಿಎಸ್ ನಡುವೆ ಟ್ವಿಟರ್ನಲ್ಲಿ ಸಮರ ನಡೆಯುತ್ತಿದೆ. ಈಗಿನ ದಾಸರಹಳ್ಳಿ ಶಾಸಕರು ಯಾರು ಎಂಬುದು ನಿಮಗೆ ತಿಳಿದಿಲ್ಲವೇ? ಎಂದು ಜೆಡಿಎಸ್ ಪ್ರಶ್ನೆ ಮಾಡಿದೆ.
ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಸಂಸದ ಮತ್ತು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದ ಗೌಡ ಅವರು ಮಾಡಿರುವ ಟ್ವೀಟ್ ಒಂದು ಜೆಡಿಎಸ್ ಆಕ್ರೋಶಕ್ಕೆ ಕಾರಣವಾಗಿದೆ. ಸಚಿವರ ಟ್ವೀಟ್ಗೆ ಜೆಡಿಎಸ್ ತಿರುಗೇಟು ನೀಡಿದೆ.
ಸದಾನಂದ ಗೌಡರು ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಕೇಂದ್ರವನ್ನು ಉದ್ಘಾಟಿಸಿದ್ದರು. ಆದರೆ, ಕೇಂದ್ರಕ್ಕೆ ಹಾಕಿದ್ದ ನಾಮಫಲಕವನ್ನು ಬಿಬಿಎಂಪಿ ತೆರವು ಮಾಡಿತ್ತು. ಇದಕ್ಕೆ ಅಕ್ರೋಶ ವ್ಯಕ್ತಪಡಿಸಿ ಸದಾನಂದ ಗೌಡರು ಸರಣಿ ಟ್ವೀಟ್ ಮಾಡಿದ್ದರು.

ಸದಾನಂದ ಗೌಡರ ಟ್ವೀಟ್ : 'ನಾನು ಕಳೆದ ಭಾನುವಾರ ದಾಸರಹಳ್ಳಿ ಯಲ್ಲಿ ಉದ್ಘಾಟಿಸಿದ್ದ ಪ್ರಧಾನ ಮಂತ್ರಿ ಜನ ಔಷದಿ ಕೇಂದ್ರದ ನಾಮ ಫಲಕವನ್ನು ಇಂದು ಬಿಬಿಎಂಪಿಯ ಪ್ರಹರಿ ದಳದವರು ಕಿತ್ತೊಯ್ದದ್ದು ಯಾವ ಕಾರಣಕ್ಕೆ ಎಂದು ತಿಳಿಸಿರಿ . ಬಡ ಜನರಿಗೋಸ್ಕರ ಇರುವ ಈ ಸೌಲಭ್ಯವನ್ನು ತಿಳಿಸುವ ನಾಮ ಫಲಕ ಕೀಳಿಸಿದ ರೋಗ ಗ್ರಸ್ತ ಮನಸ್ಸು ಯಾವುದು ತಿಳಿಸಿರಿ'

ಮತ್ತೊಂದು ಟ್ವೀಟ್ ಮಾಡಿದ್ದ ಸದಾನಂದ ಗೌಡರು, 'ಪ್ರಧಾನ ಮಂತ್ರಿ ಮೋದಿಯವರು ಪ್ರಾರಂಭಿಸಿರುವ ಬಡವರ ಯೋಜನೆಗೆ ಅಡ್ಡಿ ಬಂದರೆ, ನಿಮ್ಮ ಮಾನ್ಯ ಮುಖ್ಯಮಂತ್ರಿ ಹೆಸರಿನ ನಾಮ ಫಲಕವನ್ನು ಇದೇ ಜನ ಸಾಮಾನ್ಯರು ಜನಾದೇಶದ ಮೂಲಕ ಕೆಳಕ್ಕಿಳಿಸುತ್ತಾರೆ ಅನ್ನೋ ಆಲೋಚನೆ ನಿಮ್ಮ ಪಕ್ಷದ ಮಾನ್ಯ ದಾಸರಹಳ್ಳಿ ಶಾಸಕರಿಗೆ ಇಲ್ಲದಿರುವುದು ದುರದೃಷ್ಟಕರ' ಎಂದು ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಜೆಡಿಎಸ್, 'ಕೇಂದ್ರ ಸಚಿವರಾಗಿದ್ದು ಅದರಲ್ಲೂ ಬೆಂಗಳೂರಿಂದ ಗೆದ್ದ ನಿಮಗೆ ಫ್ಲೆಕ್ಸ್ ಬೋರ್ಡ್, ಫ್ಲೆಕ್ಸ್ ಬ್ಯಾನರ್ ನಿಷೇಧ ತಿಳಿದಿಲ್ಲ ಅನ್ನೋದು ದುರದೃಷ್ಟಕರ. ಈಗಿನ ದಾಸರಹಳ್ಳಿ ಶಾಸಕರು ಮಂಜುನಾಥ್ ಅವರು ಅಲ್ವೇ? ಹಾಗಾದರೆ ನಿಮ್ಮ ಪಕ್ಕ ಫೋಟೋದಲ್ಲಿ ಇರುವವರು ಯಾರು? ಕೇರಳದ ಅಧಿಕಾರಿ ಮೇಲೆ ಒತ್ತಡ ಹೇರಿದ ಹಾಗೆ ಇಲ್ಲೂ ಒತ್ತಡ ಹೇರುವ ಪ್ರಯತ್ನ ಮಾಡಬೇಡಿ' ಎಂದು ಉತ್ತರ ಕೊಟ್ಟಿದೆ.












Click it and Unblock the Notifications