ವಿಧಾನಸೌಧದಲ್ಲಿ ಹಣ ಸಿಕ್ಕ ಪ್ರಕರಣಕ್ಕೆ ಸ್ಫೋಟಕ ತಿರುವು!
ಬೆಂಗಳೂರು, ಜನವರಿ 27 : ವಿಧಾನಸೌಧದಲ್ಲಿ 25.7 ಲಕ್ಷ ಹಣ ಸಿಕ್ಕ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗ ಶೆಟ್ಟಿ ಅವರ ಕೊರಳಿಗೆ ಪ್ರಕರಣ ಸುತ್ತಿಕೊಳ್ಳುವ ಸಾಧ್ಯತೆ ಇದ್ದು, ರಾಜೀನಾಮೆ ಪಡೆಯಲೂಬಹುದು.
ಜನವರಿ 4ರಂದು ವಿಧಾನಸೌಧದ ಆವರಣದಲ್ಲಿ ಹಣ ಸಾಗಣೆ ಮಾಡುತ್ತಿದ್ದ ಮೋಹನ್ ಕುಮಾರ್ ಎಂಬ ವ್ಯಕ್ತಿಯನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದರು. ಮೋಹನ್ ಕುಮಾರ್ ಸಚಿವ ಪುಟ್ಟರಂಗ ಶೆಟ್ಟಿ ಅವರ ಕಚೇರಿಯಲ್ಲಿ ಕ್ಲರ್ಕ ಆಗಿ ಕೆಲಸ ಮಾಡುತ್ತಿದ್ದ.
ಬಂಧಿತ ವ್ಯಕ್ತಿ ಸಚಿವರ ಕಚೇರಿಯಲ್ಲಿ ಕೆಲಸ ಮಾಡುತ್ತಿರುವುದರಿಂದ ಪ್ರಕರಣವನ್ನು ಪೊಲೀಸರು ಎಸಿಬಿಗೆ ವರ್ಗಾವಣೆ ಮಾಡಿದ್ದರು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರಿಗೆ ಸ್ಫೋಟಕ ಮಾಹಿತಿಯನ್ನು ಸಂಗ್ರಹಿಸಿದ್ದಾರೆ.
ಸೋಮವಾರದ ಬಳಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯಾಗಲಿದೆ. ಸಚಿವರ ಕೊರಳಿಗೂ ಪ್ರಕರಣ ಸುತ್ತಿಕೊಂಡಿದ್ದು, ಎಸಿಬಿ ಪೊಲೀಸರು ಅವರನ್ನು ವಿಚಾರಣೆ ನಡೆಸುವ ಸಾಧ್ಯತೆ ಇದೆ.

ಹಣ ಸಚಿವರಿಗೆ ಸೇರಿದ್ದು
ಎಸಿಬಿ ಪೊಲೀಸರು ವಿಚಾರಣೆ ನಡೆಸುವ ವೇಳೆ ಹಣವನ್ನು ಗುತ್ತಿಗೆದಾರರಾದ ನಂದ, ಅನಂತು, ಶ್ರೀನಿಧಿ ಹಾಗೂ ಕೃಷ್ಣಮೂರ್ತಿ ಅವರು ಸಚಿವರಿಗೆ ತಲುಪಿಸಲು ಕೊಟ್ಟಿದ್ದರು ಎಂದು ಬಂಧಿತ ಮೋಹನ್ ಕುಮಾರ್ ಹೇಳಿಕೆ ನೀಡಿದ್ದಾರೆ. ಇದರಿಂದಾಗಿ ಸಚಿವ ಪುಟ್ಟರಂಗ ಶೆಟ್ಟಿ ಅವರಿಗೆ ಹೊಸ ಸಂಕಷ್ಟ ಎದುರಾಗಿದೆ.

ಎಸಿಬಿಯಿಂದ ನೋಟಿಸ್
ಎಸಿಬಿ ಗುತ್ತಿಗೆದಾರರಾದ ಅನಂತು, ಶ್ರೀನಿಧಿ, ಕೃಷ್ಣಮೂರ್ತಿ ಅವರಿಗೆ ವಿಚಾರಣೆಗೆ ಹಾಜರಾಗಬೇಕು ಎಂದು ನೋಟಿಸ್ ನೀಡಿದೆ. ಸೋಮವಾರ ಮೂವರು ಹಾಜರಾಗಲಿದ್ದು, ವಿಚಾರಣೆ ಬಳಿಕ ಸಚಿವರ ವಿಚಾರಣೆ ನಡೆಸುವ ಬಗ್ಗೆ ಎಸಿಬಿ ಪೊಲೀಸರು ತೀರ್ಮಾನ ಕೈಗೊಳ್ಳಲಿದ್ದಾರೆ.

ಸಚಿವರ ರಾಜೀನಾಮೆ ಸಾಧ್ಯತೆ
ಒಂದು ವೇಳೆ ಸಚಿವರ ಪಾತ್ರ ಇರುವುದು ಖಚಿತವಾದರೆ ಅವರ ರಾಜೀನಾಮೆಯನ್ನು ಪಡೆಯುವ ಸಾಧ್ಯತೆ ಇದೆ. ಈಗಾಗಲೇ ವಿಧಾನಸೌಧದಲ್ಲಿ ಹಣ ಪತ್ತೆಯಾದ ತಕ್ಷಣ ಪ್ರತಿಪಕ್ಷ ಬಿಜೆಪಿ ಸಚಿವ ಪುಟ್ಟರಂಗ ಶೆಟ್ಟಿ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿತ್ತು.
|
ಬಿಜೆಪಿ ಕರ್ನಾಟಕ ಟ್ವೀಟ್
ವಿಧಾನಸೌಧದಲ್ಲಿ ಹಣ ಪತ್ತೆ ಪ್ರಕರಣವನ್ನು ಮುಂದಿಟ್ಟುಕೊಂಡು ಬಿಜೆಪಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದೆ. ಸಚಿವರ ರಾಜೀನಾಮೆ ಪಡೆಯಿರಿ ಎಂದು ಆಗ್ರಹಿಸಿದೆ.












Click it and Unblock the Notifications