ಮಳೆ ಆರ್ಭಟ ಕಡಿಮೆ: ಬಹುತೇಕ ಜಲಾಶಯಗಳು ಭರ್ತಿ
ಬೆಂಗಳೂರು,ಆ.4: ರಾಜ್ಯದಲ್ಲಿ ಮಳೆ ಆರ್ಭಟ ಸ್ವಲ್ಪ ಕಡಿಮೆಯಾಗಿದೆ. ಆದರೆ ಜಲಾಶಯಗಳಲ್ಲಿ ಹೆಚ್ಚುವರಿ ನೀರನ್ನು ನದಿಗೆ ಹರಿಸಿದ್ದರಿಂದ ಪ್ರವಾಹ ಭೀತಿ ಮುಂದುವರಿದಿದೆ.
ಹೊಸಪೇಟೆ ಬಳಿಯ ತುಂಗಭದ್ರಾ ಜಲಾಶಯ ಭರ್ತಿಯಾಗಿದ್ದು ಒಳಹರಿವು ಭಾನುವಾರ 1,70,000 ಕ್ಯೂಸೆಕ್ಗೆ ಹೆಚ್ಚಿದೆ. ಎಲ್ಲ 33 ಗೇಟುಗಳನ್ನು ತೆರೆದು 1,90,000 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದ್ದು, ಹಂಪಿಯಲ್ಲಿ ಕೆಲವು ಸ್ಮಾರಕಗಳು ಮುಳುಗಡೆಯಾಗಿದೆ.
ಹಂಪಿಯ ಪುರಂದರದಾಸರ ಮಂಟಪ ಮುಳುಗಿದ್ದು, ರಾಮ ಲಕ್ಷ್ಮಣ ದೇವಸ್ಥಾನಕ್ಕೆ ನೀರು ನುಗ್ಗಿದೆ. ಸುಗ್ರೀವ ಗುಹೆ ಹಾಗೂ ಸೀತೆ ಸೆರಗು ಜಲಾವೃತಗೊಂಡಿವೆ.
ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಟ್ಟಿದ್ದರಿಂದ ತುಂಗಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಹೂವಿನಹಡಗಲಿ ತಾಲ್ಲೂಕಿನ ಹಲವಾರು ಗ್ರಾಮಗಳಿಗೆ ನೀರು ನುಗ್ಗಿದೆ.
ಲಿಂಗನಮಕ್ಕಿ ಜಲಾಶಯ: ಶಿವಮೊಗ್ಗ ಜಿಲ್ಲೆಯ ಲಿಂಗನಮಕ್ಕಿ ಜಲಾಶಯದ ನೀರಿನಮಟ್ಟ ಭಾನುವಾರ 1,801.10 ಅಡಿಗೆ ಏರಿಕೆಯಾಗಿದ್ದು ಭರ್ತಿಯಾಗಲು 18 ಅಡಿ ನೀರು ಸಂಗ್ರಹವಾಗಬೇಕಿದೆ.
ಭದ್ರಾ ಜಲಾಶಯ: ಭದ್ರಾ ಜಲಾಶಯಕ್ಕೆ 25,772 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು ಜಲಾಶಯ ಭರ್ತಿಯಾಗಲು ಆರು ಅಡಿ ನೀರು ಸಂಗ್ರಹವಾಗಿದೆ.ಭದ್ರಾ ಜಲಾಶಯದ ನೀರಿನಮಟ್ಟ ಭಾನುವಾರ 182.7 ಅಡಿಗೆ ಏರಿಕೆಯಾಗಿದೆ.
ಕೆಆರ್ಎಸ್: ಕೃಷ್ಣರಾಜಸಾಗರ ಜಲಾಶಯದ ನೀರಿನ ಮಟ್ಟ 118.9 ಅಡಿಗೆ ತಲುಪಿದೆ. 44,000 ಕ್ಯೂಸೆಕ್ ನೀರು ಜಲಾಶಯಕ್ಕೆ ಬರುತ್ತಿದ್ದು, ಭರ್ತಿಯಾಗಲು ಇನ್ನು ಆರು ಅಡಿ ನೀರು ಸಂಗ್ರಹವಾಗಬೇಕಿದೆ.
ಮಳೆಗೆ ಬಲಿ: ಮಳೆಯಿಂದ ಮನೆ ಕುಸಿದ 2 ಪ್ರತ್ಯೇಕ ಪ್ರಕರಣ ಗಳಲ್ಲಿ ತಲಾ ನಾಲ್ವರು ಮೃತಪಟ್ಟಿದ್ದಾರೆ. ಹುಬ್ಬಳ್ಳಿಯಲ್ಲಿ ಒಬ್ಬರು ಹಾಗೂ ಉಡುಪಿಯಲ್ಲಿ ಮೂವರು ಮಳೆ ಸಂಬಂಧಿ ದುರಂತದಲ್ಲಿ ಸಾವನ್ನಪ್ಪಿದ್ದಾರೆ.

ಯಾವ ಜಲಾಶಯದಲ್ಲಿ ಎಷ್ಟು ನೀರಿದೆ:
| ಯಾವ ಜಲಾಶಯದಲ್ಲಿ ಎಷ್ಟು ನೀರಿದೆ? | |||||
| ಜಲಾಶಯ | ಗರಿಷ್ಠ ಮಟ್ಟ | ಇಂದಿನ ನೀರಿನ ಮಟ್ಟ | ಕಳೆದ ವರ್ಷದ ಮಟ್ಟ | ||
| ಲಿಂಗನಮಕ್ಕಿ | 1819 | 1801.10 | 1816.75 | ||
| ತುಂಗಭದ್ರಾ | 1633.00 | 1633 | 1631. 02 | ||
| ಕೆಆರ್ಎಸ್ | 124.80 | 118.90 | 124.80 | ||
| ಹೇಮಾವತಿ | 2922 | 2,918.41 | 2,921.40 | ||
| ಮಾಣಿ | 594.36ಮೀ. | 585.05 ಮೀ. | 2590.88.ಮೀ | ||
| ಭದ್ರಾ | 186.00 | 182.07 | 184.10 | ||

ಜಲಾಶಯ ಭರ್ತಿ:
ಹೊಸಪೇಟೆ ಸಮೀಪದ 1633 ಅಡಿ ಎತ್ತರದ ಟಿಬಿ ಡ್ಯಾಂಗೆ 1,54,033 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, 33 ಕ್ರಸ್ಟ್ ಗೇಟ್ ತೆರದು 1,58,602 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ.

ಜಲಾಶಯಕ್ಕೆ ಬಾಗಿನ ಅರ್ಪಣೆ:
ತುಂಗಭದ್ರಾ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ರಾಜ್ಯ ಕಾರ್ಮಿಕ ಸಚಿವರಾದ ಪರಮೇಶ್ವರ ನಾಯಕ್, ಸಣ್ಣ ನೀರಾವರಿ ಸಚಿವರಾದ ಶಿವರಾಜ್ ಎಸ್ ತಂಗಡಗಿ, ಕೊಪ್ಪಳ ಸಂಸದ ಸಂಗಣ್ಣ ಕರಡಿ, ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಸೇರಿದಂತೆ ಹಲವು ಗಣ್ಯರು ತುಂಗಭದ್ರಾ ನದಿಗೆ ಬಾಗಿನ ಅರ್ಪಿಸಿದರು.

ಹಂಪಿಯ ಸ್ಮಾರಕಗಳು ಮುಳುಗಡೆ:
ನದಿಗೆ ಹೆಚ್ಚಿನ ನೀರನ್ನು ಹರಿಸಿದ್ದರಿಂದ ತುಂಗಭದ್ರಾ ನದಿಯಲ್ಲಿ ಪ್ರವಾಹ ಹೆಚ್ಚಾಗಿದ್ದು, ಹಂಪಿಯ ಪುರಂದರದಾಸರ ಮಂಟಪ ಮುಳುಗಿದ್ದು, ರಾಮ ಲಕ್ಷ್ಮಣ ದೇವಸ್ಥಾನಕ್ಕೆ ನೀರು ನುಗ್ಗಿದೆ. ಸುಗ್ರೀವ ಗುಹೆ ಹಾಗೂ ಸೀತೆ ಸೆರಗು ಜಲಾವೃತಗೊಂಡಿವೆ.

130.76 ಕೋಟಿ ವೆಚ್ಚದ ಜಲಾಶಯ:
130.76 ಕೋಟಿ ವೆಚ್ಚದಲ್ಲಿ 1953 ರಲ್ಲಿ ಈ ಜಲಾಶಯ ನಿರ್ಮಾಣಗೊಂಡಿದೆ. ಜಲಾಶಯ 28,180 ಚದರ ಕಿಮೀ ವಿಸ್ತೀರ್ಣ ಹೊಂದಿದೆ. 133 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಹೂಳು ತುಂಬಿರುವುದರಿಂದ ಜಲಾಶಯ ನೀರಿನ ಸಂಗ್ರಹ ಸಾಮರ್ಥ್ಯ 100.855 ಟಿಎಂಸಿಗೆ ಕುಸಿದಿದೆ.












Click it and Unblock the Notifications