ಬಸವರಾಜುಗೆ ಎಂಪಿ ಆಗೋ ಯೋಗ್ಯತೆಯಿಲ್ಲ, ಅವನೊಬ್ಬ ಅನ್ ಫಿಟ್: ರೇವಣ್ಣ ಉವಾಚ
ಹಾಸನ, ಜೂನ್ 4: 'ರೀ.. ಆ ಬಸವರಾಜುಗೆ ಏನ್ರೀ ಗೊತ್ತು..ಅವನು ಸಂಸದನಾಗಲು ಅನ್ ಫಿಟ್, ಪ್ರಾಕ್ಟಿಕಲ್ ನಾಲ್ಡೆಜ್ ಆತನಿಗೆ ಏನಾದರೂ ಇದೆಯಾ', ಇದು, ತಮ್ಮ ತಂದೆಯನ್ನು ಸೋಲಿಸಿದ, ತುಮಕೂರು ಸಂಸದರ ವಿರುದ್ದ ರೇವಣ್ಣ ಏಕವಚನದಲ್ಲಿ ಹರಿಹಾಯ್ದ ಪರಿ..
ಈ ಬಾರಿಯ ತುಮಕೂರು ಲೋಕಸಭಾ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರವಹಿಸಿದ್ದು ಮೋದಿ ಮತ್ತು ಹೇಮಾವತಿ ನದಿನೀರಿನ ವಿಚಾರ. ಹೇಮಾವತಿ ವಿಚಾರದ ಮೇಲೆ, ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಿದ್ದ ರೇವಣ್ಣ, ಈಗ ಅವನು ಎಂಪಿ ಆಗಿದ್ದಾನಲ್ಲಾ.. ಹೇಮಾವತಿ ನೀರು ಬಿಟ್ಟುಕೊಳ್ಳಲಿ ಎಂದು ಜಿ ಎಸ್ ಬಸವರಾಜು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕಳೆದ ಚುನಾವಣೆಯಲ್ಲಿ ಮುದ್ದಹನುಮೇಗೌಡರ ವಿರುದ್ದ ಸೋತಾಗ, ಕೆಳಮಟ್ಟದ ರಾಜಕೀಯ ಮಾಡಬಾರದು ಎಂದು ಹೇಳಿದ್ದ ಬಸವರಾಜು ಈ ಬಾರಿ ಮಾಡಿದ್ದೇನು, ಇವರಿಗೆಲ್ಲಾ ನಾಚಿಕೆಯಾಗುವುದಿಲ್ಲವೇ ಎಂದು ಲೋಕೋಪಯೋಗಿ ಸಚಿವ ರೇವಣ್ಣ, ಬಸವರಾಜು ವಿರುದ್ದ ಕಿಡಿಕಾರಿದ್ದಾರೆ.

ಆರೋಪ ಮಾಡುವ ಮೊದಲು ಆಲೋಚಿಸಿ ಮಾತನಾಡಬೇಕು. ಹಿಂದೆ ಟ್ವೆಂಟಿ : 20 ಸರಕಾರವಿದ್ದಾಗ, ತುಮಕೂರಿಗೆ ನೀರಾವರಿ ಯೋಜನೆ ಕಲ್ಪಿಸಿದವರು ಯಾರು? ಹೇಮಾವತಿ ಬ್ಯಾರೇಜ್ ಕೀ ಕೊಡುತ್ತೇನೆ, ನೀರು ಬಿಟ್ಟುಕೊಳ್ಳಲಿ ಎಂದು ರೇವಣ್ಣ, ಬಸವರಾಜುಗೆ ಸವಾಲೆಸೆದಿದ್ದಾರೆ.
ಟ್ರಿಬ್ಯುನಲ್ ಕಮಿಟಿಯಲ್ಲಿ ನಲ್ಲಿ 24.5 ಟಿಎಂಸಿ ನೀರು ಕೊಡಬೇಕೆನ್ನುವ ಆದೇಶ ಬಂದಿದೆ. ಆದೇಶವನ್ನು ಪಾಲಿಸಿಲ್ಲಾಂದರೆ, ಕಮಿಟಿಯವರು ಒದ್ದು ನೀರನ್ನು ತುಮಕೂರಿಗೆ ಬಿಡಿಸುತ್ತಾರೆ ಎನ್ನುವ ಹೇಳಿಕೆಯನ್ನು ತುಮಕೂರು ಸಂಸದ ಜಿ ಎಸ್ ಬಸವರಾಜು ನೀಡಿದ್ದರು.
ದೇವೇಗೌಡರ ಕುಟುಂಬದ ವಿರುದ್ದ ಪರೋಕ್ಷವಾಗಿ ಕಿಡಿಕಾರಿದ್ದ ಬಸವರಾಜು, ಕಮಿಟಿಯ ಆದೇಶವನ್ನು ಪಾಲಿಸದೇ ಇದ್ದಲ್ಲಿ, ನಾವು ಮತ್ತೆ ದೂರನ್ನು ನೀಡಬೇಕಾಗುತ್ತದೆ ಎಂದು ಹೇಳಿದ್ದಾರೆ.
ಈ ಬಾರಿಯ ಲೋಕಸಭಾ ಚುನಾವಣೆಯ ಅಚ್ಚರಿಯ ಫಲಿತಾಂಶದಲ್ಲಿ, ತುಮಕೂರಿನಿಂದ ಸ್ಪರ್ಧಿಸಿದ್ದ, ಜೆಡಿಎಸ್ ವರಿಷ್ಠ ದೇವೇಗೌಡ್ರು, ಬಿಜೆಪಿಯ ಜಿ ಎಸ್ ಬಸವರಾಜು ವಿರುದ್ದ 13,339 ಮತಗಳ ಅಂತರದಿಂದ ಸೋಲುಂಡಿದ್ದರು.












Click it and Unblock the Notifications