Assembly Session: ಹೇಯ್ ಕೂತ್ಕೊಳ್ಳಯ್ಯ ಸಾಕು; ಯತ್ನಾಳ್ ವಿರುದ್ಧ ಡಿಕೆ ಶಿವಕುಮಾರ್ ಏಕ ವಚನದಲ್ಲೇ ವಾಗ್ದಾಳಿ
ಬೆಂಗಳೂರು, ಜುಲೈ 11: ವಿಜಯಪುರ ಮಹಾನಗರ ಪಾಲಿಗೆ ಆಯುಕ್ತರ ವರ್ಗಾವಣೆ ವಿಚಾರವಾಗಿ ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ವಿಧಾನಸಭೆಯಲ್ಲಿ ಪ್ರಸ್ತಾಪ ನಡೆಸಿದ್ದು, ಆಡಳಿತ ಹಾಗೂ ವಿಪಕ್ಷಗಳ ನಡುವಿನ ತೀವ್ರ ವಾಕ್ಸಮರಕ್ಕೆ ಕಾರಣವಾಯಿತು.
ವರ್ಗಾವಣೆ ಆರೋಪದ ಕುರಿತು ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರು ಸರ್ಕಾರದ ವಿರುದ್ಧ ಪ್ರತಿಭಟನೆ ಆರಂಭಿಸಿದರು. ಇದರಿಂದ ಕೋಪಗೊಂಡ ಡಿಸಿಎಂ ಡಿ.ಕೆ. ಶಿವಕುಮಾರ್,ಏಯ್ ಕೂತ್ಕಳ್ಳಯ್ಯ ಸಾಕು ಎಂದು ಏಕವಚನದಲ್ಲೇ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ಈ ವೇಳೆ ಡಿ ಕೆ ಶಿವಕುಮಾರ್ ಹಾಗೂ ಬಿಜೆಪಿ ನಾಯಕರ ನಡುವೆ ಮಾತಿನ ವಾಕ್ಸಮರ ಜೋರಾಗಿಯೇ ನಡೆಯಿತು.

ನಿನ್ನ ನಾಲಿಗೆ ಮೇಲೆ ಹಿಡಿತವಿರಬೇಕು, ನನ್ನಂತವನು ಆಗಿದ್ರೆ 24 ಗಂಟೆಯಲ್ಲಿ ನಿನ್ನನ್ನು ಪಕ್ಷದಿಂದ ಅಮಾನತ್ತು ಮಾಡ್ತಿದ್ದೆ. ಹಿಂದೆ ನೀನು ಚೀಫ್ ಮಿನಿಸ್ಟರ್ ಹುದ್ದೆಗೆ 2000 ಕೋಟಿ ಡೀಲ್ ಅಂದವನು ಎಂದರು. ಇದಕ್ಕೆ ತಿರುಗೇಟು ನೀಡಿದ ಬಸನಗೌಡ ಪಾಟೀಲ್ ಯತ್ನಾಳ್, ನೀವು ಭ್ರಷ್ಟಾಚಾರದ ಬಂಡೆ ಎಂದರು, ಮಧ್ಯ ಪ್ರವೇಶಿಸಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಏನ್ ಮಾಡ್ತಾರೆ ನೋಡೇ ಬಿಡೋಣ. ಅಧಿಕಾರ ಶಾಶ್ವತ ಅಲ್ಲ ಎಂದರು.
ಈ ಹಿಂದೆ ಇದ್ದ ಅಧಿಕಾರಿಯನ್ನು ವರ್ಗಾವಣೆ ಮಾಡಿ ಅರ್ಹತೆ ಇಲ್ಲದ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ವರ್ಗಾವಣೆಯಲ್ಲಿ ನೀವು ವ್ಯಾಪಾರ ಮಾಡಿರಬಹುದು, ನಾವು ಮಾಡಿಲ್ಲ ಎಂದು ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಕ್ಕೆ ಸಚಿವ ಬೈರತಿ ಸುರೇಶ್ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ನೀವು ವ್ಯಾಪಾರ ಮಾಡಿದ್ದೀರಿ, ನಾವು ಮಾಡಿಲ್ಲ ಎಂದರೆ ಹೇಗೆ? ನೀವು ಮಾತ್ರ ಸತ್ಯ ಹರಿಶ್ಚಂದ್ರರು ಅಂತಾನಾ? ಸುಮ್ಮನೆ ಏನೋ ಹೇಳ್ತಿರಲ್ವಾ? ಎಂದು ತಿರುಗೇಟು ನೀಡಿದರು.
ಇನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಹಿರಿಯ ನಾಯಕರಾಗಿ ನಿಯಮಾವಳಿ ಪ್ರಕಾರ ನಡೆದುಕೊಳ್ಳಬೇಕು. ನೀವು ವ್ಯಾಪಾರ ಮಾಡಿದ್ದೀರಿ ನಾವು ಮಾಡಿಲ್ಲ ಅಂದರೆ ಹೇಗೆ? ಎಂದು ಪ್ರಶ್ನಿಸಿದರು.

ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಗರಂ ಆದ ಸಚಿವ ಬೈರತಿ ಸುರೇಶ್, ವ್ಯಾಪಾರ ವಹಿವಾಟು ಮಾಡಲು ಯತ್ನಾಳ್ ಅವರೇ ದರ್ದು ನಿಮಗೆ ಇರಬಹುದು, ನನಗಿಲ್ಲ. ನನ್ನ ಬಳಿ ಸೌಜನ್ಯಕ್ಕಾದರೂ ಅಧಿಕಾರಿ ಬಂದು ಮಾತನಾಡಿಲ್ಲ ಅಂದಿದ್ದಾರೆ. ಹಾಗಾದರೆ ವ್ಯವಹಾರ ಮಾಡಲು ಬಿಡಬೇಕಾ ನಿಮ್ಮ ಬಳಿ ಎಂದು ಬೈರತಿ ಯತ್ನಾಳ್ ವಿರುದ್ಧ ಕಿಡಿಕಾರಿದರು. ಇದಕ್ಕೆ ಬಿಜೆಪಿ ಸದಸ್ಯರು ತೀಕ್ಷ್ಣ ಪ್ರತಿಕ್ರಿಯೆ ನೀಡಿದಾಗ ಸದನದಲ್ಲಿ ಕೋಲಾಹಲಕ್ಕೆ ಕಾರಣವಾಯಿತು.
ಇನ್ನೂ ಏಕ ವಚನದಲ್ಲೇ ವಾಗ್ದಾಳಿ ನಡೆಸಿರುವುದಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಬೈರತಿ ಸುರೇಶ್ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ಸದಸ್ಯರು ಪಟ್ಟುಹಿಡಿದರು. ಸದನದ ಬಾವಿಗಿಳಿದು ಸರ್ಕಾರದ ವಿರುದ್ದ ಧರಣಿ ನಡೆಸಲು ಮುಂದಾದರು, ಈ ಸಮಯದಲ್ಲಿ ಗದ್ದಲ ವಿಪರೀತವಾಗಿ 10 ನಿಮಿಷ ಮುಂದೂಡಲಾಯಿತು. ನಂತರ ಸ್ಪೀಕರ್ ಕಚೇರಿಯಲ್ಲಿ ಸಂಧಾನಸಭೆ ಕರೆಯಲಾಗಿತ್ತಾದರೂ ಬಿಜೆಪಿ ಸದಸ್ಯರು ಬಹಿಷ್ಕರಿಸಿದರು.












Click it and Unblock the Notifications