ಇಲ್ಲೊಬ್ಬ ಟಿಸಿ ಅವ್ನೇ, ಅವ್ನಿಗೆ ಕರ್ನಾಟಕದ ಗಾಡಿ ಕಂಡ್ರೆ ಆಗಲ್ಲಾ
ಹೈದರಾಬಾದ್ ನಲ್ಲಿ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳು.
ಇಲ್ಲಿ ಬೆಂಗಳೂರಿನ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದಲ್ಲಿ ಪರರಾಜ್ಯದ ಬಸ್ಸುಗಳಿಗೆ ಮುಕ್ತ ಪ್ರವೇಶವಿದ್ದರೆ, ಅತ್ತ ಹೈದರಾಬಾದ್ ಬಸ್ ನಿಲ್ದಾಣದಲ್ಲಿ ಕರ್ನಾಟಕ ಬಸ್ಸುಗಳಿಗೆ ನಿರ್ಬಂಧಿತ ಪ್ರವೇಶ.
ಕಚೇರಿ ಕೆಲಸದ ನಿಮಿತ್ತ ಹೈದರಾಬಾದ್ ಗೆ ತೆರಳಿ, ಬೆಂಗಳೂರಿಗೆ ವಾಪಸ್ ಆಗಲು ಹೈದರಾಬಾದ್ ನಗರದ ಇಂಬ್ಲಿಬನ್ ಪ್ರದೇಶದಲ್ಲಿರುವ ಮಹಾತ್ಮ ಗಾಂಧಿ ಬಸ್ ಸ್ಟೇಷನ್ ನಲ್ಲಿ ಬಸ್ ಹತ್ತಲು ಹೋದಾಗ ನಮ್ಮ ರಾಜ್ಯದ ಬಸ್ಸುಗಳಿಗಾಗುತ್ತಿರುವ ಅನ್ಯಾಯದ ಪರಿಚಯವಾಯಿತು. (ಗೋಪಾಲ ಪೂಜಾರಿಗೆ ಕೆಎಸ್ಆರ್ ಟಿಸಿ ಅಧ್ಯಕ್ಷ)
ವಿಶಾಲವಾಗಿರುವ ಎಂಜಿಬಿಎಸ್ ಬಸ್ ನಿಲ್ದಾಣದಲ್ಲಿ ಕೆಎಸ್ಆರ್ಟಿಸಿ ಬಸ್ಸುಗಳಿಗೆ ನೀಡಿರುವುದು ಒಂದೇ ಒಂದು ಪ್ಲಾಟ್ ಫಾರಂ. ಇಲ್ಲಿ ಏಕಕಾಲಕ್ಕೆ ಎರಡು ಬಸ್ ನಿಲ್ಲಿಸುವ ಅವಕಾಶ ಮಾತ್ರವಿದೆ.
ಎರಡು ಬಸ್ ನಿಲ್ಲಿಸಲು ಪ್ಲಾಟ್ ಫಾರಂ ನಂ 24ರಲ್ಲಿ ತೆಲಂಗಾಣ ಸಾರಿಗೆ ಸಂಸ್ಥೆ ಅವಕಾಶ ನೀಡಿದ್ದರೂ, ಒಂದು ವೇಳೆ ಅಲ್ಲಿ ಟಿಎಸ್ಆರ್ಟಿಸಿ (ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ) ಬಸ್ಸುಗಳು ನಿಂತಿದ್ದರೆ, ಅದು ನಿಲ್ದಾಣದಿಂದ ಹೊರಡುವ ತನಕ ಕಾಯಲೇ ಬೇಕಾದ ಪರಿಸ್ಶಿತಿ ನಮ್ಮ ರಾಜ್ಯದ ಬಸ್ಸುಗಳದ್ದು.
ಇಷ್ಟೊಂದು ಕೆಎಸ್ಆರ್ಟಿಸಿ ಬಸ್ಸುಗಳು ಹೈದರಾಬಾದ್ ಗೆ ಪ್ರಯಾಣಿಸುತ್ತಿದ್ದರೂ, ನಮ್ಮ ಬಸ್ಸುಗಳಿಗೆ ಇಷ್ಟೇನಾ ಸ್ಥಳಾವಕಾಶ ನೀಡಿದ್ದು ಎಂದು ಪ್ರಶ್ನಿಸಿದಾಗ, ಚಾಲಕರು ಮತ್ತು ನಿರ್ವಾಹಕರು ಗುಂಪಾಗಿ ಬಂದು ತಮಗಾಗುತ್ತಿರುವ ತೊಂದರೆಗಳನ್ನು ಹೇಳಿಕೊಳ್ಳಲಾರಂಭಿಸಿದರು.
ಟಿಸಿಯಿಂದ (ಟ್ರಾಫಿಕ್ ಕಂಟ್ರೋಲರ್) ಹಿಡಿದು ಅಲ್ಲಿನ ಅಧಿಕಾರಿಗಳ ತಾರತಮ್ಯ ನೋಡಿ, ಈ ರೂಟ್ ನಲ್ಲಿ ಬರೋದೇ ಬೇಡ ಅನಿಸಿಬಿಟ್ಟಿದೆ ಎನ್ನುವುದು ಡ್ರೈವರ್, ಕಂಡಕ್ಟರುಗಳ ಹತಾಶೆಯ ಮಾತು.
ಪ್ರಮುಖವಾಗಿ ಇಲ್ಲಿನ ಟಿಸಿ (ಸಂಚಾರ ನಿರ್ವಾಹಕ) ನೀಡುವ ತೊಂದರೆಯೇ ಕೆಎಸ್ಆರ್ಟಿಸಿ ಸಿಬ್ಬಂದಿಗಳಿಗಾಗುತ್ತಿರುವ ದೊಡ್ಡ ತಲೆನೋವು. ನಮ್ಮ ರಾಜ್ಯದ ಬಸ್ಸುಗಳನ್ನು ಕಂಡರೆ ಅವನಿಗಾಗಲ್ಲಾ.. ಎನ್ನುವುದು ಡ್ರೈವರ್ ಮತ್ತು ಕಂಡಕ್ಟರುಗಳ ದೂರು.
ಐದು ನಿಮಿಷ ಬಸ್ಸನ್ನು ಸ್ಟ್ಯಾಂಡಿನಲ್ಲಿ ನಿಲ್ಲಿಸಲು ಬಿಡುವುದಿಲ್ಲಾ..ಅವನು ಹೇಳಿದಾಗ ಪ್ಲಾಟ್ ಫಾರಂನಿಂದ ಗಾಡಿ ತೆಗೆಯದಿದ್ದರೆ, ತೆಲುಗಿನಲ್ಲಿ ಅವಾಚ್ಯ ಪದಬಳಸಿ ಎಲ್ಲರ ಮುಂದೆ ಕೂಗಾಡುತ್ತಾನೆ, ನಮ್ಮನ್ನು ಅಸ್ಪರ್ಷ್ಯ ನಂತೆ ಕಾಣುತ್ತಾನೆ.
ಬೆಂಗಳೂರು..ಬೆಂಗಳೂರು ಎಂದು ಪ್ರಯಾಣಿಕರನ್ನು ಕರೆಯಲೂ ಬಿಡುವುದಿಲ್ಲ. ಅವನಿಗೆ ಕೆಲವೊಮ್ಮೆ ತೆಲಂಗಾಣದ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳೂ ಸಾಥ್ ನೀಡುವುದೂ ಉಂಟು. ನಮ್ಮ ಬಸ್ಸುಗಳಿಗೆ ಬೆಂಗಳೂರಿನಲ್ಲಿ ಇದೇ ರೀತಿ ತೊಂದರೆ ಮಾಡಿದ್ರೆ ಹೇಗಿರುತ್ತೆ ಎನ್ನುವ ಕನಿಷ್ಠ ಬುದ್ದಿ ನಮಗಿರ ಬೇಕೆಂದು ನಮ್ಮ ಪರವಾಗಿ ನಿಲ್ಲುವ ಅಲ್ಲಿನ ರಸ್ತೆ ಸಾರಿಗೆ ಸಿಬ್ಬಂದಿಗಳೂ ಇದ್ದಾರೆ ಎನ್ನುವುದು ನಮ್ಮ ಡ್ರೈವರ್/ ಚಾಲಕರ ಮಾತು. (5,500 ಹೊಸ ಬಸ್ಗಳ ಖರೀದಿಗೆ ಸಾರಿಗೆ ಇಲಾಖೆ ನಿರ್ಧಾರ)
ಇಲ್ಲಿ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ನೋಡಿದರೆ, ಆಂಧ್ರ ಮತ್ತು ತೆಲಂಗಾಣ ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸುಗಳಿಗೆ ಸಿಗುವ ಮರ್ಯಾದೆಯೇ ಬೇರೆ. ವೇಗದೂತ ಮತ್ತು ವೋಲ್ವೋ ಬಸ್ಸುಗಳಿಗೆ ಪ್ರತ್ಯೇಕ ಪ್ರತ್ಯೇಕವಾದ ಪ್ಲಾಟ್ ಫಾರಂ ನೀಡಿ ಕನ್ನಡಿಗರು ಮತ್ತೆ ಮತ್ತೆ ಉದಾರತೆಯನ್ನು ತೋರುತ್ತಾರೆ.
ಅಲ್ಲಿನ ಬಸ್ಸುಗಳಿಗೆ ಇಲ್ಲಿ ತೊಂದರೆ ಕೊಡಬೇಕು ಎನ್ನುವುದು ಉದ್ದೇಶವಲ್ಲದಿದ್ದರೂ, ನಮ್ಮ ಸಾರಿಗೆ ಸಂಸ್ಥೆಯ ಬಸ್ಸುಗಳಿಗೆ ಮತ್ತು ಸಿಬ್ಬಂದಿಗಳಿಗೆ ಮಿನಿಮಮ್ ಸೌಲಭ್ಯಗಳನ್ನು ಅಲ್ಲಿ ನೀಡಿದರೆ ಸಾಕು. ಮಾನ್ಯ ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿಯವರು ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಲಿ ಎನ್ನುವುದೊಂದು ಮನವಿ.