ರಸ್ತೆಗಿಳಿಯದ ಲಾರಿಗಳು, ಜನರಿಗೆ ಬೆಲೆ ಏರಿಕೆ ಬಿಸಿ?
ಬೆಂಗಳೂರು, ಜ.12 : ಮರಳು ಲಾರಿ ಮಾಲೀಕರು ನಡೆಸುತ್ತಿದ್ದ ಮುಷ್ಕರಕ್ಕೆ ಅಡುಗೆ ಅನಿಲ, ಡೀಸೆಲ್, ಪೆಟ್ರೋಲ್ ಹಾಗೂ ಇನ್ನಿತರೆ ಸರಕು ಸಾಗಣೆ ವಾಹನಗಳು ಬೆಂಬಲ ನೀಡಿದ್ದು, ಶನಿವಾರ ಮಧ್ಯರಾತ್ರಿಯಿಂದ ಸಂಚಾರ ಸ್ಥಗಿತಗೊಳಿಸಿ ಮುಷ್ಕರ ಆರಂಭಿಸಿವೆ. ಭಾನುವಾರ ಸಂಜ ಲಾರಿ ಮಾಲೀಕರೊಂದಿಗೆ ಸರ್ಕಾರ ಮತ್ತೊಂದು ಸುತ್ತಿನ ಮಾತುಕತೆ ನಡೆಸುವ ಸಾಧ್ಯತೆ ಇದೆ.
ಸರ್ಕಾರ ಲಾರಿ ಮಾಲೀಕರೊಂದಿಗೆ ಶುಕ್ರವಾರ ನಡೆಸಿದ ಸಂಧಾನ ಸಭೆ ವಿಫಲವಾಗಿತ್ತು. ಶನಿವಾರ ಸಂಜೆವರೆಗೆ ಸರ್ಕಾರ ಮಾತುಕತೆಗೆ ಆಹ್ವಾನಿಸದ ಹಿನ್ನೆಲೆಯಲ್ಲಿ ಕಟ್ಟಡ ಸಾಮಗ್ರಿ, ಡೀಸೆಲ್, ಪೆಟ್ರೋಲ್, ಅಡುಗೆ ಅನಿಲ ಸಾಗಣೆ ವಾಹನಗಳು, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್ ಮಾಲೀಕರು ಮುಷ್ಕರ ಆರಂಭಿಸಿದ್ದಾರೆ. [ಲಾರಿ ಮುಷ್ಕರ, ಮರಳು ಬೆಲೆ ಹೆಚ್ಚಳ]

ಆದರೆ, ಹಾಲು, ಔಷಧ, ತರಕಾರಿ, ಆ್ಯಂಬುಲೆನ್ಸ್ ಮತ್ತು ಪತ್ರಿಕೆ ಸಾಗಣೆ ವಾಹನಗಳು ಸಂಚರಿಸಲಿವೆ. ಒಪ್ಪಂದದ ಆಧಾರದ ಮೇಲೆ ಐಟಿ-ಬಿಟಿ ಕಂಪೆನಿಗಳಿಗೆ ಸಂಚರಿಸುತ್ತಿರುವ ವಾಹನಗಳು ಕೂಡ ಮುಷ್ಕರದಲ್ಲಿ ಭಾಗವಹಿಸುತ್ತಿದ್ದು, ಇದರ ಬಿಸಿ ಸೋಮವಾರ ಕಂಪನಿಗಳಿಗೆ ತಟ್ಟುವ ಸಾಧ್ಯತೆ ಇದೆ. ಹೊರರಾಜ್ಯಗಳ 40 ಸಾವಿರ ವಾಹನಗಳು ಶನಿವಾರ ಸಂಜೆಯೇ ಸಂಚಾರ ಸ್ಥಗಿತಗೊಳಿಸಿವೆ.
ಪ್ರವಾಸಿ ವಾಹನಗಳು ಬುಕ್ಕಿಂಗ್ ಆದ ಕಾರಣ ಅವುಗಳನ್ನು ಓಡಿಸಲು ನಿರ್ಧರಿಸಲಾಗಿದೆ. ಆದರೆ, ಡೀಸೆಲ್ ಮತ್ತು ಪೆಟ್ರೋಲ್ ಕೊರತೆ ಉಂಟಾಗುವುದರಿಂದ ಪ್ರವಾಸಿ ವಾಹನಗಳು ಸ್ಥಗಿತಗೊಳ್ಳುವ ಸಾದ್ಯತೆ ಇದೆ. ಬೆಂಗಳೂರು ವಿಮಾನ ನಿಲ್ದಾಣಕ್ಕೆ ಸಾಗುವ ಟ್ಯಾಕ್ಸಿಗಳು ಮುಷ್ಕರಕ್ಕೆ ಬೆಂಬಲ ನೀಡಿವೆ. ಮರಳು ಲಾರಿ ಮುಷ್ಕರ ಆರಂಭವಾಗಿ 22 ದಿನ ಕಳೆದಿದ್ದು, ಶನಿವಾರದಿಂದ ಉಳಿದ ಲಾರಿ ಮಾಲೀಕರು ಮುಷ್ಕರಕ್ಕೆ ಬೆಂಬಲ ನೀಡಿದೆ.
ಈಗಾಗಲೇ ಲಾರಿ ಮುಷ್ಕರದ ಬಿಸಿ ಜನರಿಗೆ ತಟ್ಟಿದೆ. ಒಂದು ಲಕ್ಷ ರೂ. ನೀಡಿದರೂ ಮರಳು ಸಿಗದ ಪರಿಸ್ಥಿತಿ ಬೆಂಗಳೂರಿನಲ್ಲಿ ನಿರ್ಮಾಣವಾಗಿದೆ. ಇದರಿಂದ ಕಟ್ಟಡ ಮಾಲೀಕರು ಕೆಲಸ ಸ್ಥಗಿತಗೊಳಿಸಿದ್ದಾರೆ. ಈಗ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಸಾಗಣೆ ಲಾರಿಗಳು ಮರಳು ಲಾರಿ ಮಾಲೀಕರಿಗೆ ಬೆಂಬಲ ನೀಡಿರುವುದರಿಂದ ಸಂಕ್ರಾತಿ ಹಬ್ಬಕ್ಕೆ ಜನರಿಗೆ ಬೆಲೆ ಏರಿಕೆ ಬಿಸಿ ತಟ್ಟುವ ಸಾಧ್ಯತೆ ಇದೆ.
ಭಾನುವಾರ ಲಾರಿ ಮಾಲೀಕರ ಜೊತೆ ಸರ್ಕಾರ ಮತ್ತೊಂದು ಸುತ್ತಿನ ಮಾತುಕತೆ ನಡೆಸುವ ಸಾಧ್ಯತೆ ಇದ್ದು, ಸಂಧಾನ ಸಫಲವಾದರೆ ಲಾರಿ ಮಾಲೀಕರು ಮುಷ್ಕರ ಹಿಂಪಡೆಯುವ ಸಾಧ್ಯತೆ ಇದೆ. ಟ್ಯಾಕ್ಸಿಗಳು ಮುಷ್ಕರಕ್ಕೆ ಬೆಂಬಲ ನೀಡಿದ್ದು, ಇದರಿಂದ ಖಾಸಗಿ ಕಂಪನಿಗಳ ನೌಕರರಿಗೂ ಮುಷ್ಕರದ ಬಿಸಿ ತಟ್ಟಲಿದೆ.












Click it and Unblock the Notifications