ಮಂಡ್ಯ ರಾಜಕೀಯದಲ್ಲಿ ಗೆದ್ದವನೇ 'ಗೌಡ', ಪ್ರಜ್ವಲ್ ರೇವಣ್ಣಗೆ ಅಲ್ಲೂ ಕಷ್ಟಕಷ್ಟ
Recommended Video

ತಮ್ಮ ಅಪ್ರತಿಮ ರಾಜಕೀಯ ಹೆಜ್ಜೆಗಳಿಂದ ವಿರೋಧಿಗಳನ್ನು ತಬ್ಬಿಬ್ಬುಗೊಳಿಸುವ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರಿಗೆ, ತಮ್ಮ ಮೊಮ್ಮಗ, ಎಚ್ ಡಿ ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣಗೆ ಸೂಕ್ತ ರಾಜಕೀಯ ವೇದಿಕೆ ಕಲ್ಪಿಸಲು ಸಾಧ್ಯವಾಗುತ್ತಿಲ್ಲವೇ? ಗೌಡರ ತಲೆಯಲ್ಲಿ ಏನು ರಾಜಕೀಯ ಲೆಕ್ಕಾಚಾರ ಓಡುತ್ತಿರಬಹುದು.
ಪಕ್ಷದ ಯುವ ಮುಖಂಡ ಮತ್ತು ಸಾಕಷ್ಟು ಹಿಂಬಾಲಕರನ್ನೂ ಹೊಂದಿದ್ದರೂ ಪ್ರಜ್ವಲ್ ಗೆ ರಾಜಕೀಯ ಮುನ್ನಲೆಗೆ ಬರಲು ಸಾಧ್ಯವಾಗುತ್ತಿಲ್ಲ. ಕಳೆದ ವಿಧಾನಸಭಾ ಚುನಾವಣೆಯ ವೇಳೆ, ಮೊದಲು ಬೇಲೂರು, ಆನಂತರ ಹುಣಸೂರು ಮತ್ತು ಅದೂ ಆಗದಿದ್ದಾಗ ಬೆಂಗಳೂರು ರಾಜರಾಜೇಶ್ವರಿ ನಗರದಿಂದ ಪಕ್ಷದ ಟಿಕೆಟ್ ಪಡೆಯಲು ಪ್ರಜ್ವಲ್ ಮತ್ತು ಭವಾನಿ ರೇವಣ್ಣ ಇನ್ನಿಲ್ಲದ ಪ್ರಯತ್ನ ನಡೆಸಿದ್ದರೂ ಅದು ಸಾಧ್ಯವಾಗಲಿಲ್ಲ.
ಕೊನೆಗೆ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ನನ್ನ ಉತ್ತರಾಧಿಕಾರಿಯಾಗಿ ಪ್ರಜ್ವಲ್ ಸ್ಪರ್ಧಿಸಲಿದ್ದಾನೆಂದು ದೇವೇಗೌಡರು ಹೇಳಿಕೆ ನೀಡಿ, ಕುಟುಂಬದೊಳಗಿದ್ದ 'ಭಿನ್ನಮತ'ವನ್ನು ತಾತ್ಕಾಲಿಕವಾಗಿ ಶಮನ ಮಾಡಿದ್ದರು.
ಆದರೆ, ನಾನು ಮತ್ತೆ ಹಾಸನದಿಂದ ಸ್ಪರ್ಧಿಸಿದರೂ ಸ್ಪರ್ಧಿಸಬಹುದು ಎನ್ನುವ ಹೇಳಿಕೆಯನ್ನು ದೇವೇಗೌಡರು ನೀಡಿದಾಗ, ಪ್ರಜ್ವಲ್ ರೇವಣ್ಣಗೆ ಮಂಡ್ಯದಿಂದ ಟಿಕೆಟ್ ಸಿಗುವ ಸಾಧ್ಯತೆಯಿದೆ ಎನ್ನುವ ಸುದ್ದಿ ಹರಿದಾಡ ತೊಡಗಿತು. ಈಗ, ಜೆಡಿಎಸ್ ನಿಂದ ಅಲ್ಲೂ ಇನ್ನೊಂದು ಪ್ರಮುಖ ಹೆಸರು ಕೇಳಿಬರುತ್ತಿರುವುದರಿಂದ, ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರದಲ್ಲಿ ಪ್ರಜ್ವಲ್ ಭವಿಷ್ಯ ಏನು ಎನ್ನುವುದು ಈಗ ಜೆಡಿಎಸ್ ಪಾಳಯದಲ್ಲಿ ಚರ್ಚೆಯ ವಿಷಯವಾಗಿದೆ.
ಕಾಂಗ್ರೆಸ್ ಮತ್ತು ಜೆಡಿಎಸ್, ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದು ಬಹುತೇಕ ಅಂತಿಮವಾಗಿದ್ದು, ಕಾಂಗ್ರೆಸ್ 20 ಮತ್ತು ಜೆಡಿಎಸ್ 8ಕ್ಷೇತ್ರದಲ್ಲಿ ಜಂಟಿಯಾಗಿ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ. ಈ ನಡುವೆ, ದೇವೇಗೌಡರ ಸೊಸೆಯ ಸಹೋದರ, ಮಂಡ್ಯ ಕ್ಷೇತ್ರದ ಟಿಕೆಟಿಗೆ ಭಾರೀ ಲಾಬಿ ನಡೆಸುತ್ತಿದ್ದಾರೆ ಎನ್ನುವ ಮಾಹಿತಿಯಿದೆ.

ಜೆಡಿಎಸ್ ಪಕ್ಷಕ್ಕಾಗುತ್ತಿರುವ ದೊಡ್ಡ ತಲೆನೋವುಗಳಲ್ಲೊಂದು
ಕಾಂಗ್ರೆಸ್ ಜೊತೆ ಹೊಂದಾಣಿಕೆಯ ನಂತರವೂ ಜೆಡಿಎಸ್ ಪಕ್ಷಕ್ಕಿರುವ ಇನ್ನೊಂದು ಸಮಸ್ಯೆ ಏನಂದರೆ ಅದು ರೆಬೆಲ್ ಸ್ಟಾರ್ ಅಂಬರೀಷ್. ಸಿದ್ದರಾಮಯ್ಯನವರ ಸರಕಾರದಿಂದ ವಸತಿ ಖಾತೆಯಿಂದ ಕೊಕ್ ಆದ ನಂತರ, ಅಷ್ಟೇನೂ ಸಕ್ರಿಯ ರಾಜಕಾರಣದಲ್ಲಿ ತಮ್ಮನ್ನು ತೊಡಗಿಸಿಕೊಳ್ಳದ ಅಂಬರೀಷ್ ರನ್ನು ಕಾಂಗ್ರೆಸ್ ಪಕ್ಷದಿಂದ ಮಂಡ್ಯದಿಂದ ಕಣಕ್ಕಿಳಿಸಲು ಭಾರೀ ಪ್ರಯತ್ನವೂ ನಡೆಯುತ್ತಿರುವುದು, ಜೆಡಿಎಸ್ ಪಕ್ಷಕ್ಕಾಗುತ್ತಿರುವ ದೊಡ್ಡ ತಲೆನೋವುಗಳಲ್ಲೊಂದು. ಯಾಕೆಂದರೆ, ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಜೆಡಿಎಸ್ ಇಲ್ಲಿ ಕ್ಲೀನ್ ಸ್ವೀಪ್ ಮಾಡಿತ್ತು.

ಸಚಿವ ಡಿ ಸಿ ತಮ್ಮಣ್ಣ ಪುತ್ರ ಸಂತೋಶ್ ಅವರಿಗೆ ಮಂಡ್ಯ ಕ್ಷೇತ್ರದ ಟಿಕೆಟ್
ದೇವೇಗೌಡರ ಕಿರಿಯ ಮಗ ಡಾ. ರಮೇಶ್ ಅವರ ಭಾವಮೈದ (ಸಾರಿಗೆ ಸಚಿವ ಡಿ ಸಿ ತಮ್ಮಣ್ಣ ಪುತ್ರ) ಸಂತೋಶ್ ಅವರಿಗೆ ಮಂಡ್ಯ ಕ್ಷೇತ್ರದ ಟಿಕೆಟ್ ನೀಡಬೇಕು ಎಂದು ಗೌಡ್ರ ಬೀಗರಾದ ಡಿ ಸಿ ತಮ್ಮಣ್ಣ ತೀವ್ರ ಲಾಬಿ ನಡೆಸುತ್ತಿದ್ದಾರೆ ಎನ್ನುವ ಮಾಹಿತಿಯಿದೆ. ಕುಮಾರಸ್ವಾಮಿಯವರ ಸಚಿವ ಸಂಪುಟ ವಿಸ್ತರಣೆಯ ಪಟ್ಟಿಯಲ್ಲಿ ತಮ್ಮಣ್ಣ ಅವರ ಹೆಸರು ಮೊದಲು ಇರಲಿಲ್ಲ. ಆದರೆ, ಸಚಿವರ ಪ್ರಮಾಣವಚನದ ಮುನ್ನಾ ದಿನ, ತೀವ್ರ ಕುಟುಂಬದ ಒತ್ತಡದ ನಂತರ, ತಮ್ಮಣ್ಣ ಹೆಸರು ಕೊನೇ ಗಳಿಗೆಯಲ್ಲಿ ಸೇರ್ಪಡೆಯಾಯಿತು.

ತಮ್ಮಣ್ಣ ಅವರ ಪುತ್ರ ಕ್ಷೇತ್ರದಲ್ಲಿ ಸಕ್ರಿಯ ರಾಜಕಾರಣದಲ್ಲಿ ತೊಡಗಿದ್ದಾರೆ
ಹೀಗಿರುವಾಗ, ತಮ್ಮಣ್ಣ ಅವರ ಮನವಿಗೆ ಗೌಡ್ರು ಒಂದು ವೇಳೆ ಅಸ್ತು ಅಂದರೆ, ಪ್ರಜ್ವಲ್ ರೇವಣ್ಣಗೆ ಲೋಕಸಭಾ ಚುನಾವಣೆಗಾದರೂ ಸ್ಪರ್ಧಿಸುವ ಆಸೆ ಕಮರಿ ಹೋಗುವ ಸಾಧ್ಯತೆಯಿಲ್ಲದಿಲ್ಲ. ಆದರೆ, ತಮ್ಮಣ್ಣ ಅವರ ಪುತ್ರನಿಗೆ ಟಿಕೆಟ್ ನೀಡಲು, ಜಿಲ್ಲೆಯ ಮತ್ತೋರ್ವ ಪ್ರಭಾವಿ ಮುಖಂಡ ಸಿ ಎಸ್ ಪುಟ್ಟರಾಜು ಮತ್ತು ಅಲ್ಲಿನ ಕಾರ್ಯಕರ್ತರ ವಿರೋಧವಿದೆ ಎನ್ನುವ ಮಾತು ಕೇಳಿಬರುತ್ತಿದೆ. ತಮ್ಮಣ್ಣ ಅವರ ಪುತ್ರ ಕ್ಷೇತ್ರದಲ್ಲಿ ಸಕ್ರಿಯ ರಾಜಕಾರಣದಲ್ಲಿ ತೊಡಗಿದ್ದಾರೆ.

ಸಿ ಎಸ್ ಪುಟ್ಟರಾಜು ಮತ್ತು ಡಿ ಸಿ ತಮ್ಮಣ್ಣ ಇಬ್ಬರೂ ಪ್ರಭಾವಿ ಮುಖಂಡರು
ಮಂಡ್ಯದಲ್ಲಿ ಸಿ ಎಸ್ ಪುಟ್ಟರಾಜು ಮತ್ತು ಡಿ ಸಿ ತಮ್ಮಣ್ಣ ಇಬ್ಬರೂ ಪ್ರಭಾವಿ ಮುಖಂಡರು ಮತ್ತು ದೇವೇಗೌಡರ ಕುಟುಂಬದ ಜೊತೆಗೆ ಉತ್ತಮ ಒಡನಾಟವನ್ನು ಇಟ್ಟುಕೊಂಡವರು. ಹೀಗಿರುವಾಗ, ಒಂದು ವೇಳೆ ತಮ್ಮಣ್ಣ ಪುತ್ರನಿಗೆ ಟಿಕೆಟ್ ನೀಡಿದರೆ, ಪಕ್ಢದೊಳಗೆ ಎದುರಿಸಬೇಕಾಬಹುದಾದ ಸಮಸ್ಯೆಗಳನ್ನು ಅಳೆದುತೂಗಿ, ಜೊತೆಗೆ ಇಬ್ಬರೂ ಈ ಮುಖಂಡರಿಗೆ ಒಪ್ಪಿಗೆಯಾಗುವ ಹೆಸರು ಸೂಚಿಸಿ ಗೌಡರು ಅಂತಿಮ ನಿರ್ಧಾರಕ್ಕೆ ಬರಬಹುದು.

ಅಡ್ವಾಣಿಯವರು ತಮ್ಮ 91ನೇ ವಯಸ್ಸಿನಲ್ಲಿ ಮತ್ತೆ ಸ್ಪರ್ಧಿಸಲಿದ್ದಾರೆ
ಎಲ್ ಕೆ ಅಡ್ವಾಣಿಯವರು ತಮ್ಮ 91ನೇ ವಯಸ್ಸಿನಲ್ಲಿ ಮತ್ತೆ ಲೋಕಸಭಾ ಚುನಾವಣೆಗೆ ಗಾಂಧಿನಗರದಿಂದ ಸ್ಪರ್ಧಿಸಲು ಸಜ್ಜಾಗಿದ್ದಾರೆ. ನಾನು ಅವರಿಗಿಂತಲೂ ವಯಸ್ಸಿನಲ್ಲಿ ಸಣ್ಣವ. ಹೀಗಿರುವಾಗ ನಾನು ಮತ್ತೆ ಸ್ಪರ್ಧಿಸಿದರೆ ತಪ್ಪೇನು? ಚುನಾವಣೆಗೆ ನಿಲ್ಲಬೇಕೇ, ನಿಂತರೂ ಹಾಸನದಿಂದ ಸ್ಪರ್ಧಿಸಬೇಕೇ ಎನ್ನುವುದನ್ನು ಮುಂದಿನ ದಿನಗಳಲ್ಲಿ ಹೇಳುತ್ತೇನೆ ಎಂದು ಗೌಡರು ಹೇಳಿರುವುದರಿಂದ, ಪ್ರಜ್ವಲ್, ಹಾಸನದಿಂದ ಸ್ಪರ್ಧಿಸುವ ವಿಚಾರದಲ್ಲಿನ ಅನಿಶ್ಚಿತತೆ ಹಾಗೇ ಮುಂದುವರಿದಿದೆ.












Click it and Unblock the Notifications