ಪಕ್ಷದ ನಾಯಕತ್ವಕ್ಕಾಗಿ ಬಿಜೆಪಿಯಲ್ಲಿ ಆಂತರಿಕ ಸಂಘರ್ಷ?
ಬೆಂಗಳೂರು, ಸೆ 10: ಬಿಜೆಪಿಯಲ್ಲಿ ಆಂತರಿಕ ಒಳಜಗಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಪಕ್ಷದ ಮೊದಲ ಪಂಕ್ತಿಯ ನಾಯಕರಲ್ಲಿ ನಾಯಕತ್ವ ಪಟ್ಟಕ್ಕಾಗಿ ಸಂಘರ್ಷ ನಡೆಯುತ್ತಿದೆ ಎಂದು ಸಚಿವ, ಬೆಂಗಳೂರು ಉಸ್ತುವಾರಿ ರಾಮಲಿಂಗ ರೆಡ್ಡಿ ಹೇಳಿದ್ದಾರೆ.
ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ಗೆಲುವು ಅಸಾಧ್ಯ ಎನ್ನುವುದನ್ನು ಅರಿತಿರುವ ಬಿಜೆಪಿ, ವಿನಾಕಾರಣ ಪ್ರತಿಭಟನೆ ನಡೆಸುತ್ತಿದೆ. ಮೇಲ್ನೋಟಕ್ಕೆ ಇದು ಕಾಂಗ್ರೆಸ್ - ಜೆಡಿಎಸ್ ಮೈತ್ರಿಯ ವಿಚಾರವಾದರೂ ನಿಜಾಂಶ ಬೇರೇನೇ ಇದೆ ಎಂದು ರೆಡ್ಡಿ ಹೇಳಿದ್ದಾರೆ.
ಬಿಜೆಪಿಯಲ್ಲಿ ಸುಮಾರು ಐದು ವಿವಿಧ ಬಣಗಳಿವೆ. ಈ ಬಣಗಳ ನಡುವೆ ಹೊಂದಾಣಿಕೆಯಿಲ್ಲ. ಇದನ್ನು ಮುಚ್ಚಿಡಲು ಬಿಜೆಪಿ, ಕಾಂಗ್ರೆಸ್ ವಿರುದ್ದ ಟೀಕೆ ಮಾಡುತ್ತಿದೆ ಎಂದು ರಾಮಲಿಂಗ ರೆಡ್ಡಿ ಲೇವಡಿ ಮಾಡಿದ್ದಾರೆ. (ಡಿಕೆಶಿ ಭೇಟಿ ಮಾಡಿದ ಬಿಜೆಪಿ ಕಾರ್ಪೋರೇಟರುಗಳು)
ರಾಜಕೀಯ ಎಂದ ಮೇಲೆ ಹೊಂದಾಣಿಕೆ ಮೈತ್ರಿ ಸಹಜ, ಇದು ಬಿಜೆಪಿ ನಾಯಕರಿಗೂ ಅರಿತಿದೆ. ತಮ್ಮೊಳಗಿನ ಆಂತರಿಕ ಸಂಘರ್ಷವನ್ನು ಮರೆಮಾಚಲು ಬಿಜೆಪಿ ಬಿಬಿಎಂಪಿ ಮೇಯರ್ ಚುನಾವಣೆಯನ್ನು ನೆಪ ಮಾಡಿಕೊಂಡಿದೆ ಅಷ್ಟೇ..
ರಾಜ್ಯದ 130ಕ್ಕೂ ಹೆಚ್ಚು ತಾಲೂಕುಗಳಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿಯವರಿಗೆ ಇದರ ಬಗ್ಗೆ ಚಿಂತೆ ಇದೆಯಾ, ಕೇಂದ್ರದಿಂದ ಪರಿಹಾರ ತರಿಸಿಕೊಡಲು ವಸ್ತುನಿಷ್ಟ ಪ್ರಯತ್ನ ಬಿಜೆಪಿಯಿಂದ ನಡೆದಿದೆಯಾ ಎಂದು ರಾಮಲಿಂಗ ರೆಡ್ಡಿ ಪ್ರಶ್ನಿಸಿದ್ದಾರೆ.
ರಾಮಲಿಂಗ ರೆಡ್ಡಿ ಪ್ರಕಾರ ಬಿಜೆಪಿಯಲ್ಲಿರುವ ಐದು ಬಣಗಳಾವುವು? ಮುಂದೆ ಓದಿ..

ಮೋದಿ ವಿರುದ್ದ ಕಿಡಿಕಾರಿದ ರೆಡ್ಡಿ
ಬಿಹಾರ ಚುನಾವಣೆ ಗೆಲ್ಲಲೆಂದೇ 1.25 ಲಕ್ಷ ಕೋಟಿ ವಿಶೇಷ ಪ್ಯಾಕೇಜನ್ನು ಮೋದಿ ಬಿಹಾರಕ್ಕೆ ಘೋಷಿಸುತ್ತಾರೆ. ಇದು ಬರೀ ಚುನಾವಣಾ ಗಿಮಿಕ್ ಅಲ್ಲದೇ ಮತ್ತಿನ್ನೇನು - ರಾಮಲಿಂಗ ರೆಡ್ಡಿ ಪ್ರಶ್ನೆ.

ನಾವು ಕೇಳಿದ್ದು, ಅವರು ಕೊಟ್ಟಿದ್ದು
ಬಿಹಾರಕ್ಕೆ ಲಕ್ಷ ಕೋಟಿ ನೀಡುವ ಕೇಂದ್ರ ಸರಕಾರಕ್ಕೆ ನಮ್ಮ ಸರಕಾರದ ಮೇಲೆ ಪ್ರೀತಿಯಿಲ್ಲ. ನಾವು 3050 ಕೋಟಿ ಪರಿಹಾರ ನೀಡಿ ಎಂದು ಅಂಗಲಾಚಿದ್ದಕ್ಕೆ ಕೇಂದ್ರ ಸರಕಾರ ಕೊಟ್ಟಿದ್ದು ಕೇವಲ 105 ಕೋಟಿ - ರಾಮಲಿಂಗ ರೆಡ್ಡಿ.

ರಾಜ್ಯ ಬಿಜೆಪಿಯಲ್ಲಿ ಐದು ಬಣವಿದೆ
ರಾಜ್ಯ ಬಿಜೆಪಿಯಲ್ಲಿ ಐದು ಬಣವಿದೆ, ಪಕ್ಷದಲ್ಲಿ ಆಂತರಿಕ ಸಮಸ್ಯೆಯಿದೆ. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಆರ್ ಅಶೋಕ್, ಅನಂತ್ ಕುಮಾರ್ ಮತ್ತು ಪ್ರಲ್ಹಾದ್ ಜೋಷಿಯವರ ನೇತೃತ್ವದಲ್ಲಿ ಐದು ಬೇರೆ ಬೇರೆ ಬಣಗಳಿವೆ ಎಂದು ರಾಮಲಿಂಗ ರೆಡ್ಡಿ ಹೇಳಿದ್ದಾರೆ.

ಉಪಮುಖ್ಯಮಂತ್ರಿ ಆಗಿದ್ದವರಿಗೆ ಬುದ್ದಿ ಇರಲಿಲ್ಲವೇ?
ಬಿಬಿಎಂಪಿ ಮೇಯರ್ ಚುನಾವಣೆಗೆ 131 ಮಂದಿ ಮತಹಾಬೇಕು ಎನ್ನುವ ಕನಿಷ್ಠ ಬುದ್ದಿ ಬಿಜೆಪಿ ನಾಯಕರಿಗೆ ಇರಲಿಲ್ಲವೇ ? ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಆಗಿದ್ದವರು ಯಾಕೆ ಅಜ್ಞಾನಿಗಳಂತೆ ವರ್ತಿಸುತ್ತಿದ್ದಾರೆ - ರಾಮಲಿಂಗ ರೆಡ್ಡಿ.

ಗುರುವಾರ ಮೇಯರ್ ಅಭ್ಯರ್ಥಿ ಅಖೈರು
ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಆಧ್ಯಕ್ಷ ಪರಮೇಶ್ವರ್ ಜೊತೆ ಚರ್ಚಿಸಿ ಗುರುವಾರ (ಸೆ 10) ಸಂಜೆಯೊಳಗಾಗಿ ಮೇಯರ್ ಅಭ್ಯರ್ಥಿಯನ್ನು ಅಖೈರುಗೊಳಿಸುವುದಾಗಿ ರಾಮಲಿಂಗಾರೆಡ್ಡಿ ಹೇಳಿದ್ದಾರೆ.












Click it and Unblock the Notifications