ಸಾರಿಗೆ ನೌಕರರಿಗೆ ಬುಧವಾರದ ಗಡುವು ಕೊಟ್ಟ ಸರ್ಕಾರ
ಬೆಂಗಳೂರು, ಜುಲೈ 26 : ಶೇ 35ರಷ್ಟು ವೇತನ ಪರಿಷ್ಕರಣೆ ಸೇರಿದಂತೆ 42 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿರುವ ಸಾರಿಗೆ ನಿಗಮದ ನೌಕರರಿಗೆ ಕೆಲಸಕ್ಕೆ ಹಾಜರಾಗಲು ಬುಧವಾರದ ತನಕ ಗಡುವು ನೀಡಲಾಗಿದೆ.
ಸರಕಾರ ಮತ್ತು ಕೆಎಸ್ಸಾರ್ಟಿಸಿ ಹಾಗು ಬಿಎಂಟಿಸಿ ಸಿಬ್ಬಂದಿಯ ನಡುವಿನ ವೇತನ ಸಮರ ಮುಂದುವರಿದಿರುವುದರಿಂದ ಬುಧವಾರ ಕೂಡ ಬೆಂಗಳೂರಿನಲ್ಲಿ ಶಾಲಾ ಕಾಲೇಜುಗಳಿಗೆ ರಜಾ ಘೋಷಿಸಲಾಗಿದೆ. ಆದರೆ, ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಶಾಲೆಗಳು ಎಂದಿನಂತೆ ತೆರೆದಿರುತ್ತವೆ.
ವಿಧಾನಸೌಧದಲ್ಲಿ ಮಂಗಳವಾರ ಸಂಜೆ ಸಚಿವ ಸಂಪುಟ ಸಭೆ ನಡೆಯಿತು. ಸಭೆಯ ಬಳಿಕ ಮಾತನಾಡಿದ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು, 'ಮುಷ್ಕರದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ. ನೌಕರರ ಮನವೊಲಿಕೆ ಪ್ರಯತ್ನ ಮುಂದುವರಿಸಲಾಗುವುದು. ನೌಕರರಿಗೆ ಕೆಲಸಕ್ಕೆ ಹಾಜರಾಗಲು ಇನ್ನೊಂದು ಗಡುವು ನೀಡಲಾಗುವುದು' ಎಂದು ಹೇಳಿದರು.[ಎಸ್ಮಾ ಎಂದರೇನು? ಜಾರಿಯಾದರೆ ಪರಿಣಾಮ ಏನಾಗತ್ತೆ?]
ಸಭೆಯ ಬಳಿಕ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು, 'ಮುಷ್ಕರ ನಿರತ ನೌಕರರ ಜೊತೆ ಬುಧವಾರ ಮತ್ತೊಂದು ಸುತ್ತಿನ ಮಾತುಕತೆ ನಡೆಸಲಾಗುವುದು. ಎಸ್ಮಾ ಜಾರಿಗೊಳಿಸುವ ಆಯ್ಕೆ ಇದೆ. ಆದರೆ, ಅದನ್ನು ಜಾರಿಗೆ ತರುವ ಪ್ರಸ್ತಾವನೆ ನಮ್ಮ ಮುಂದಿಲ್ಲ' ಎಂದು ಸ್ಪಷ್ಟಪಡಿಸಿದರು.[ಸಾರಿಗೆ ಮುಷ್ಕರ : ಮಂಗಳವಾರದ 10 ಬೆಳವಣಿಗೆಗಳು]
'ಮುಷ್ಕರ ಇಂದು ಇರುತ್ತದೆ ನಾಳೆ ಮುಗಿಯುತ್ತದೆ, ಮುಷ್ಕರದ ಬಳಿಕವೂ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಆದ್ದರಿಂದ, ನೌಕರರ ಜೊತೆ ಮಾತುಕತೆ ನಡೆಸುತ್ತೇವೆ. ಮಾತುಕತೆ ಮೂಲಕ ಸಮಸ್ಯೆ ಬಗೆರಿಯುವ ವಿಶ್ವಾಸವಿದೆ' ಎಂದರು....

'ಸಿದ್ದರಾಮಯ್ಯ ದೆಹಲಿಗೆ ಹೋಗುವುದಿಲ್ಲ'
'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಪರಿಷತ್ ನಾಮ ನಿರ್ದೇಶನದ ಬಗ್ಗೆ ಚರ್ಚೆ ನಡೆಸಲು ಬುಧವಾರ ದೆಹಲಿಗೆ ಹೋಗುವುದಿಲ್ಲ. ಬೆಂಗಳೂರಿನಲ್ಲೇ ಇರಲಿದ್ದು, ಸಾರಿಗೆ ಇಲಾಖೆ ನೌಕರರ ಜೊತೆ ಮಾತುಕತೆ ನಡೆಸಲಿದ್ದಾರೆ' ಎಂದು ರಾಮಲಿಂಗಾ ರೆಡ್ಡಿ ಹೇಳಿದರು.

ಶಾಲಾ-ಕಾಲೇಜುಗಳಿಗೆ ರಜೆ
'ಬುಧವಾರವೂ ಮುಷ್ಕರ ಮುಂದುವರೆಯುವ ಹಿನ್ನಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ನೀಡಲು ನಿರ್ಧರಿಸಲಾಗಿದೆ. ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳುವ ಅಧಿಕಾರವನ್ನು ಆಯಾ ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ' ಎಂದು ಹೇಳಿದರು.

'ವೇತನ ಹೆಚ್ಚಳ ಸಾಧ್ಯವೇ ಇಲ್ಲ'
'ಯಾವುದೇ ಸಾರಿಗೆ ಸಂಸ್ಥೆ ತನ್ನ ಸಾರ್ಮಥ್ಯಕ್ಕಿಂತ ಹೆಚ್ಚಿನ ವೇತನ ನೀಡಲು ಸಾಧ್ಯವಿಲ್ಲ. ಶೇ 30ರಷ್ಟು ಹೆಚ್ಚಳ ಮಾಡುವುದು ಸಾಧ್ಯವೇ ಇಲ್ಲ. ಶೇ 10ರಷ್ಟು ವೇತನ ಮಾತ್ರ ಹೆಚ್ಚಳ ಮಾಡಲಾಗುತ್ತದೆ. ಶೇ 12.5ರಷ್ಟು ಏರಿಕೆ ಮಾಡುವ ಪ್ರಸ್ತಾವನೆಯೂ ಸರ್ಕಾರದ ಮುಂದಿಲ್ಲ' ಎಂದು ಸಚಿವರು ಹೇಳಿದರು.

ಮುಷ್ಕರ ವಾಪಸ್ ಪಡೆಯಿರಿ
'ವೇತನ ಪರಿಷ್ಕರಣೆ ಮಾಡದೇ ಲಾಭ ಮಾಡುವ ಉದ್ದೇಶ ಸಾರಿಗೆ ಇಲಾಖೆಗೆ ಇಲ್ಲ. ದಯವಿಟ್ಟು ನೌಕರರು ಹಠಮಾರಿ ಧೋರಣೆ ಬಿಟ್ಟು, ಜನರ ಹಿತದೃಷ್ಠಿಯಿಂದ ಮುಷ್ಕರ ವಾಪಸ್ ಪಡೆಯಿರಿ' ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

'ಇದಕ್ಕಿಂತ ಹೆಚ್ಚಳ ಸಾಧ್ಯವಿಲ್ಲ'
'ಸಾರಿಗೆ ಮುಷ್ಕರದಿಂದಾಗಿ ಜನರಿಗೆ ತೊಂದರೆ ಆಗುತ್ತಿದೆ ಎಂದು ತಿಳಿದಿದೆ. ಆದ್ದರಿಂದಲೇ ಶೇ.8 ರಿಂದ ಶೇ.10 ರಷ್ಟು ವೇತನ ಹೆಚ್ಚಳ ಮಾಡಲು ನಾವು ಒಪ್ಪಿದ್ದೇವೆ. ಇದಕ್ಕಿಂತ ಹೆಚ್ಚಳ ಸಾಧ್ಯವಿಲ್ಲ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.












Click it and Unblock the Notifications