ಸಾರಿಗೆ ನೌಕರರಿಗೆ ಎಚ್ಚರಿಕೆ: ಕೊವಿಡ್ ನಿಯಮ ಪಾಲಿಸಿ, ಇಲ್ಲವೇ ‘ನೋ ವರ್ಕ್ ನೋ ಪೇ’ ಜಾರಿ
ಬೆಂಗಳೂರು, ಏಪ್ರಿಲ್ 6: ಸಾರಿಗೆ ನೌಕರರು ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಬಾರದು ಎಂದು ಮನವಿ ಮಾಡುತ್ತೇವೆ. ಈಗಾಗಲೇ 9 ಬೇಡಿಕೆಗಳಲ್ಲಿ ಒಂದು ಬೇಡಿಕೆ ಬಿಟ್ಟು ಎಲ್ಲಾ ಬೇಡಿಕೆ ಈಡೇರಿಸಿದ್ದೇವೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಹೇಳಿದ್ದಾರೆ.
ನಾಳೆ(ಏ.7)ಯಿಂದ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ತುರ್ತು ಸಭೆ ಕರೆದಿರುವ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ನಾಲ್ಕು ನಿಗಮಗಳ ವ್ಯವಸ್ಥಾಪಕ ನಿರ್ದೇಶಕರ ಜೊತೆ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿದ್ದಾರೆ. ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಮುಂದಿನ ನಿರ್ಧಾರದ ಬಗ್ಗೆ ಚರ್ಚೆ ಮಾಡಲಾಯಿತು.
ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್, ಸಾರಿಗೆ ಇಲಾಖೆ ಎಸಿಎಸ್ ಅಂಜುಂ ಪರ್ವೇಜ್, ಕೆಎಸ್ಸಾರ್ಟಿಸಿ ಎಂಡಿ ಶಿವಯೋಗಿ ಕಳಸದ್, ಬಿಎಂಟಿಸಿ ಎಂಡಿ ಶಿಖಾ, ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

ನಾಳೆಯಿಂದ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಾರಿಗೆ ನೌಕರರ 6ನೇ ವೇತನ ಆಯೋಗ ಶಿಫಾರಸ್ಸು ಜಾರಿ ಮಾಡಲು ಆಗಲ್ಲ. ಶೇ.8 ವೇತನ ಹೆಚ್ಚಳ ಮಾಡುತ್ತೇವೆ. ಚುನಾವಣಾ ಆಯೋಗ ಅನುಮತಿ ಕೊಡಬೇಕು. ಆಯೋಗದ ಅನುಮತಿಯನ್ನು ಕೇಳಿದ್ದೇವೆ. ಚುನಾವಣಾ ನೀತಿ ಸಂಹಿತೆ ಇರುವ ಕಾರಣ ಸಂಬಳ ಹೆಚ್ಚಳ ಮಾಡಲು ಆಗುತ್ತಿಲ್ಲ. ಪ್ರತಿಭಟನೆಗೆ ತೆರಳಬಾರದು ಎಂದು ಮನವಿ ಮಾಡಿದ್ದೇವೆ ಎಂದರು.
ಪ್ರತಿಭಟನೆಗೆ ಹೋದರೆ ಸಾರಿಗೆ ಇಲಾಖೆ ಬೇರೆ ವ್ಯವಸ್ಥೆ ಮಾಡಲಿದೆ. ಸಾರಿಗೆ ಪ್ರತಿಭಟನೆಯನ್ನು ಕಠಿಣವಾಗಿ ಡೀಲ್ ಮಾಡುತ್ತೇವೆ. ಈ ಕುರಿತಾಗಿ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಮಾತುಕತೆ ಅಥವಾ ಸಂಧಾನಕ್ಕೆ ಹೋಗುವ ಪ್ರಶ್ನೆಯೇ ಇಲ್ಲ. ಬಸ್ಸಿಗೆ ಹಾನಿ ಮಾಡಿದರೂ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಎಸ್ಮಾ ಜಾರಿ ಬಗ್ಗೆ ಚರ್ಚೆ ಆಗುತ್ತಿದೆ ಎಂಬ ಎಚ್ಚರಿಕೆಯನ್ನು ಮುಖ್ಯ ಕಾರ್ಯದರ್ಶಿ ಎನ್.ರವಿಕುಮಾರ್ ನೀಡಿದರು.
ಕೋವಿಡ್ ನಿಯಮಗಳನ್ನು ಪಾಲಿಸಬೇಕು, ಇಲ್ಲ ವಿಪತ್ತು ನಿರ್ವಹಣಾ ಕಾಯ್ದೆಯಂತೆ ಕ್ರಮ 'ನೋ ವರ್ಕ್ ನೋ ಪೇ' ಜಾರಿ ಮಾಡುತ್ತೇವೆ. ಚುನಾವಣಾ ಆಯೋಗಕ್ಕೆ ನಿನ್ನೆಯೇ ಪತ್ರ ಬರೆದಿದ್ದೇವೆ. ಶೇ.8ರಷ್ಟು ಸಂಬಳ ಹೆಚ್ಚಳ ಮಾಡುತ್ತೇವೆ. ಆದರೆ ಅವರು ಅನುಮತಿ ಕೊಡಬೇಕು ಎಂದು ಸಿಎಸ್ ತಿಳಿಸಿದರು.
ಖಾಸಗಿ ವಾಹನಗಳ ಬಳಕೆ, ಮ್ಯಾಕ್ಸಿಕ್ಯಾಬ್, ಖಾಸಗಿ ಬಸ್, ಸ್ಕೂಲ್ ಬಸ್ ಗಳನ್ನು ಬಳಸಿಕೊಳ್ಳುತ್ತೇವೆ. ಎಲ್ಲ ವಾಹನಗಳ ಪ್ರಯಾಣ ದರ ಸರ್ಕಾರ ಫಿಕ್ಸ್ ಮಾಡಿದರೆ ಹೆಚ್ಚು ಕೇಳುವಂತಿಲ್ಲ ಎಂದಿದ್ದಾರೆ.












Click it and Unblock the Notifications