ಬಜೆಟ್ ಬಳಿಕ ವಾಹನ ಸವಾರರಿಗೆ ಶಾಕ್ ನೀಡಲಿದೆ ರಾಜ್ಯ ಸರ್ಕಾರ
ಬೆಂಗಳೂರು, ಫೆಬ್ರವರಿ 12: ರಾಜ್ಯ ಬಜೆಟ್ ಬಳಿಕ ವಾಹನ ಸವಾರರ ಮೇಲೆ ದಂಡದ ಹೊರೆ ಹೊರಿಸಲು ರಾಜ್ಯ ಸರ್ಕಾರ ಸಜ್ಜಾಗಿದೆ.
Recommended Video
ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಮಾಡಿ ಸಂಚಾರ ನಿಯಮ ಉಲ್ಲಂಘನೆ ದಂಡದ ಮೊತ್ತವನ್ನು ಕೇಂದ್ರಸರ್ಕಾರವು ಹೆಚ್ಚಿಸಿತ್ತು. ಆದರೆ ಹಲವು ರಾಜ್ಯಗಳು ಕೇಂದ್ರ ವಿಧಿಸಿದ್ದ ದಂಡದ ಪ್ರಮಾಣವನ್ನು ಕಡಿತಗೊಳಿಸಿದ್ದವು. ಇದರಲ್ಲಿ ಕರ್ನಾಟಕವು ಸೇರಿತ್ತು.
ಆದರೆ ಈಗ ರಾಜ್ಯ ಸರ್ಕಾರವು ತನ್ನ ನಿರ್ಧಾರವನ್ನು ಬದಲಿಸಿದ್ದು, ಸಂಚಾರ ನಿಯಮ ಉಲ್ಲಂಘನೆ ದಂಡದ ಪ್ರಮಾಣವನ್ನು ಮತ್ತೆ ಏರಿಕೆ ಮಾಡಲು ಮುಂದಾಗಿದೆ. ಈ ಬಗ್ಗೆ ಲಕ್ಷ್ಮಣ ಸವದಿ ಮಾಹಿತಿ ನೀಡಿದ್ದಾರೆ.
ಮಾಧ್ಯಮಗಳೊಟ್ಟಿಗೆ ಮಾತನಾಡಿದ ಸಾರಿಗೆ ಸಚಿವ ಲಕ್ಷ್ಮಣ ಸವದಿ, 'ರಸ್ತೆ ಸುರಕ್ಷತಾ ಕಾಯ್ದೆಯಡಿ ನಿಯಮಗಳನ್ನು ಉಲ್ಲಂಘಿಸುವ ವಾಹನ ಸವಾರರಿಗೆ ವಿಧಿಸುತ್ತಿರುವ ದಂಡ ಪ್ರಮಾಣವನ್ನು ಬಜೆಟ್ ಮಂಡನೆಯಾದ ಬಳಿಕ ಹೆಚ್ಚಳ ಮಾಡುವ ಬಗ್ಗೆ ಚಿಂತನೆ ನಡೆದಿದೆ' ಎಂದಿದ್ದಾರೆ.
'ಮೊದಲಿಗೆ ಜನರಲ್ಲಿ ಜಾಗೃತಿ ಮೂಡಿಸಿ ಆಮೇಲೆ ದಂಡದ ಪ್ರಮಾಣ ಹೆಚ್ಚಳ ಮಾಡಲಾಗುತ್ತದೆ. ನಮಗೆ ದಂಡಕ್ಕಿಂತಲೂ ಜನರ ಜೀವನ ಉಳಿಯುವುದು ಮುಖ್ಯ' ಎಂದು ಲಕ್ಷ್ಮಣ ಸವದಿ ಹೇಳಿದ್ದಾರೆ.
ಮುಂದುವರೆದು ಮಾತನಾಡಿದ ಅವರು, 'ಹುಬ್ಬಳ್ಳಿ ಮತ್ತು ಗುಲ್ಬರ್ಗ ಕೆಆರ್ಟಿಸಿ , ಬಿಎಂಟಿಸಿ ವಿಭಾಗಕ್ಕೆ ಮಾರ್ಚ್ 31ರೊಳಗೆ 1200 ಬಸ್ಗಳನ್ನು ಖರೀದಿಸಲಿದ್ದೇವೆ. ಒಟ್ಟು ಮೂರು ಸಾವಿರ ಬಸ್ಸುಗಳನ್ನು ಖರೀದಿಸಲು ತೀರ್ಮಾನಿಸಲಾಗಿತ್ತು. ಏಕಕಾಲದಲ್ಲಿ ಇಷ್ಟೊಂದು ಬಸ್ಸುಗಳನ್ನು ನೀಡಲು ಕಷ್ಟಕರವಾಗುತ್ತದೆ ಎಂಬ ಕಾರಣಕ್ಕಾಗಿ ಮೊದಲ ಹಂತದಲ್ಲಿ 1200 ಬಸ್ಸುಗಳನ್ನು ನೀಡಲು ಕಂಪೆನಿಯವರು ಒಪ್ಪಿದ್ದಾರೆ. ಮಾ.31ರೊಳಗೆ ಬಸ್ಸುಗಳು ರಸ್ತೆಗಿಳಿಯಲಿವೆ ಎಂದರು.
'ಎಲೆಕ್ಟ್ರಿಕ್ ಬಸ್ಗಳನ್ನು ಸಹ ಖರೀದಿ ಮಾಡುವ ಇರಾದೆ ಇದ್ದು, ಹಲವು ಸಂಸ್ಥೆಗಳು ಎಲೆಕ್ಟ್ರಿಕ್ ಬಸ್ಸುಗಳನ್ನು ನೀಡಲು ಮುಂದೆ ಬಂದಿವೆ. ಸರ್ಕಾರವು ಈ ಬಗ್ಗೆ ಸಂಸ್ಥೆಗಳೊಂದಿಗೆ ಮಾತು-ಕತೆ ನಡೆಸುತ್ತಿದೆ' ಎಂದರು.