ಜುಲೈ 12ರಿಂದ ಕರ್ನಾಟಕದಿಂದ ಕೇರಳಕ್ಕೆ ಸರ್ಕಾರಿ ಬಸ್ ಸೇವೆ ಆರಂಭ
ಬೆಂಗಳೂರು, ಜುಲೈ 09: ರಾಜ್ಯದಿಂದ ಕೇರಳಕ್ಕೆ ಬರೋಬ್ಬರಿ 2 ತಿಂಗಳ ಬಳಿಕ ಬಸ್ಗಳನ್ನು ಓಡಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮುಂದಾಗಿದೆ.
ಇದೇ ಜುಲೈ 12ರಿಂದ ಕೇರಳಕ್ಕೆ ಬಸ್ ಸಂಚಾರ ಆರಂಭಗೊಳ್ಳಲಿದೆ. ಪ್ರಯಾಣ ಮಾಡಲು ಇಚ್ಛಿಸುವರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಟಿಕೆಟ್ಗಳನ್ನು ಕಾಯ್ದಿರಿಸುವ ಬಗ್ಗೆಯೂ ವಿವರಗಳನ್ನು ಒದಗಿಸಿದೆ.
ಪ್ರಯಾಣ ಬೆಳೆಸಲು ಇಚ್ಛಿಸುವವರು ಮುಂಗಡವಾಗಿ ಟಿಕೆಟ್ಗಳನ್ನು ಆನ್ಲೈನ್ನಲ್ಲಿ ksrtc.karnataka.gov.in / www.ksrtc.in ಮೂಲಕ ಬುಕ್ ಮಾಡಬಹುದು. ಅಲ್ಲದೆ ಟಿಕೆಟ್ಗಳನ್ನು ಕೆಎಸ್ಆರ್ಟಿಸಿ ಫ್ರಾಂಚೈಸಿ ಮತ್ತು ಮುಂಗಡ ಟಿಕೆಟ್ ಬುಕಿಂಗ್ ಕೌಂಟರ್ಗಳಲ್ಲಿ ಬುಕ್ ಮಾಡಬಹುದು ಎಂದು ತಿಳಿಸಲಾಗಿದೆ.

ಕರ್ನಾಟಕದಲ್ಲಿ ಲಾಕ್ಡೌನ್ ಅನ್ಲಾಕ್ 3.Oದಲ್ಲಿ ಜುಲೈ 5ರಿಂದ ವಿವಿಧ ರಾಜ್ಯಗಳಿಗೆ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗಿತ್ತು.
ಇದೀಗ ಕೇರಳಕ್ಕೆ ಬಸ್ ಸಂಚಾರ ಆರಂಭಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮುಂದಾಗಿದೆ, ಆದರೆ ಕೇರಳದಲ್ಲಿ ದಿನೇ ದಿನೇ ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿವೆ, 24 ಗಂಟೆಯಲ್ಲಿ 13ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ.
ಬೆಂಗಳೂರು, ಮಂಗಳೂರು, ಪುತ್ತೂರು, ಮೈಸೂರಿನಿಂದ ಬಸ್ಗಳು ಕೇರಳಕ್ಕೆ ತೆರಳಲಿವೆ. ವಿದ್ಯಾರ್ಥಿಗಳು ಮತ್ತು ವ್ಯಾಪಾರ ಹಾಗೂ ಇನ್ನಿತರ ಕಾರಣಗಳಿಗೆ ಪ್ರತಿನಿತ್ಯ ಕೇರಳ-ಕರ್ನಾಟಕ ನಡುವೆ ಓಡಾಡುವ ಜನರು ಕಡ್ಡಾಯವಾಗಿ 15 ದಿನಗಳಿಗೊಮ್ಮೆ ಆರ್ಟಿ-ಪಿಸಿಆರ್ ಟೆಸ್ಟ್ ಮಾಡಿಸಿಕೊಳ್ಳುತ್ತಿರಬೇಕು ಮತ್ತು ತಮ್ಮೊಂದಿಗೆ ಕೊವಿಡ್-19 ನೆಗೆಟಿವ್ ವರದಿ ಹೊಂದಿರಬೇಕು ಎಂದು ಸಹ ಕೆಎಸ್ಆರ್ಟಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಅಲ್ಲದೆ ಪ್ರಯಾಣಿಕರೆಲ್ಲ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು ಮತ್ತು ಕರ್ನಾಟಕ ಸರ್ಕಾರ ಜಾರಿಗೊಳಿಸಿರುವ ಎಲ್ಲ ಕೋವಿಡ್-19 ಮಾರ್ಗಸೂಚಿಗಳನ್ನು ಪ್ರಯಾಣಿಸುವಾಗ ಪಾಲಿಸಬೇಕು ಎಂದು ಕೆಎಸ್ಆರ್ಟಿಸಿ ಪ್ರಕಟಣೆಯಲ್ಲಿ ಹೇಳಲಾಗಿದೆ.
ಕೇರಳದಿಂದ ಕರ್ನಾಟಕಕ್ಕೆ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಪ್ರಯಾಣ ಬೆಳೆಸುವವರು ಕರ್ನಾಟಕ ಸರ್ಕಾರ ಜಾರಿಗೊಳಿಸಿರುವ ಮಾರ್ಗಸೂಚಿ ಪ್ರಕಾರ, ಕೊರೊನಾ ನೆಗೆಟಿವ್ ವರದಿ ಹೊಂದಿರಬೇಕು.












Click it and Unblock the Notifications