ಬಿಜೆಪಿ ಪರ ಪ್ರಚಾರಕ್ಕೆ ಧುಮುಕಲಿದ್ದಾರೆ 50,000 ಆರೆಸ್ಸೆಸ್ ಸ್ವಯಂ ಸೇವಕರು
ಬೆಂಗಳೂರು, ಏಪ್ರಿಲ್ 15: ಕರ್ನಾಟಕದಲ್ಲಿ ಬಿಜೆಪಿ ಗೆಲುವಿಗೆ ಆರ್.ಎಸ್.ಎಸ್ ಪಣತೊಟ್ಟಿದೆ. ಪ್ರತೀ ವ್ಯಕ್ತಿಯನ್ನು ತಲುಪುವ ಯೋಜನೆಯನ್ನು ಆರ್.ಎಸ್.ಎಸ್ ಹಾಕಿಕೊಂಡಿದ್ದು, ಗುಜರಾತ್ ಮಾದರಿಯಲ್ಲಿ ಕರ್ನಾಟಕದಲ್ಲೂ ಕಮಲ ಪಕ್ಷಕ್ಕೆ ಗೆಲುವಿನ ಉಡುಗೊರೆ ನೀಡಲು ಸಜ್ಜಾಗಿದೆ.
ಈಗಾಗಲೇ ತಳಮಟ್ಟದಲ್ಲಿ 20,000 ಸ್ವಯಂ ಸೇವಕರು ಬಿಜೆಪಿ ಪರ ಪ್ರಚಾರದಲ್ಲಿ ತೊಡಗಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತೆ 30,000 ಸ್ವಯಂ ಸೇವಕರು ಪ್ರಚಾರಕ್ಕೆ ಧುಮುಕಲಿದ್ದಾರೆ. ಹಿಂದೂ ಏಕತೆಯ ಮಂತ್ರವನ್ನು ಆರ್.ಎಸ್.ಎಸ್ ಸ್ವಯಂ ಸೇವಕರು ಜಪಿಸಲಿದ್ದಾರೆ.
ಬಿಜೆಪಿ ಪಾಲಿಗೆ ಈ ಬಾರಿ ಕರ್ನಾಟಕದ ಚುನಾವಣೆ ಎಂಥ ಚದುರಂಗದಾಟ!
ಆರ್.ಎಸ್.ಎಸ್ ದೊಡ್ಡ ಮಟ್ಟದಲ್ಲಿ ಯುವಕರನ್ನು ತಲುಪಲು ಉದ್ದೇಶಿಸಿದೆ. ಜೊತೆಗೆ ಪ್ರತಿಯೊಬ್ಬರನ್ನು ಮುಖಾಮುಖಿ ಭೇಟಿಯಾಗಲು ಆರ್.ಎಸ್.ಎಸ್ ನಿರ್ಧರಿಸಿದೆ. ಇದಕ್ಕೆ ಸಾಮಾಜಿಕ ಸದ್ಭಾವ ಆಂದೋಲನ ಎಂದು ಹೆಸರಿಡಲಾಗಿದೆ. ಇದಲ್ಲದೆ 2,000 ಬೂತ್ ಗಳನ್ನೂ ರಚನೆ ಮಾಡಲಾಗಿದೆ.
ಪ್ರತ್ಯೇಕ ಲಿಂಗಾಯತ ಧರ್ಮದ ಸ್ಥಾನಮಾನಕ್ಕೆ ಶಿಫಾರಸ್ಸು ಮಾಡಿರುವ ತೀರ್ಮಾನಕ್ಕೆ ಆರ್.ಎಸ್.ಎಸ್ ಅಸಮಧಾನ ವ್ಯಕ್ತಪಡಿಸಿದೆ. ಮನೆ ಮನೆ ಭೇಟಿ ವೇಳೆ ಹಿಂದೂಗಳನ್ನು ಒಡೆಯುವ ಯತ್ನ ಇದು ಎಂದು ಸ್ವಯಂ ಸೇವಕರು ಮನವರಿಕೆ ಮಾಡಲಿದ್ದಾರೆ. ಇದರ ಜತೆಗೆ ರಾಷ್ಟ್ರೀಯ ಪಕ್ಷಕ್ಕೆ ಮತ ಹಾಕುವಂತೆಯೂ ಸ್ವಯಂ ಸೇವಕರು ಮನವಿ ಮಾಡಲಿದ್ದಾರೆ.