ಕಾವೇರಿ ನೀರಿಗಾಗಿ ಗಡಿ ಗ್ರಾಮದಲ್ಲಿ ತಮಿಳುನಾಡು ರೈತರ ಪ್ರತಿಭಟನೆ
ಬೆಂಗಳೂರು, ಏಪ್ರಿಲ್ 08: ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸುವಂತೆ ಆಗ್ರಹಿಸಿ ತಮಿಳುನಾಡಿನ ಗೋವಿಂದಪಾಡಿಯಲ್ಲಿ ಭಾನುವಾರ ರೈತರು ಪ್ರತಿಭಟನೆ ನಡೆಸಿದರು.
ಈ ಸಂಬಂಧ ಸುಮಾರು 120 ಮಂದಿ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದರು.
ಚಾಮರಾಜನಗರ ಜಿಲ್ಲೆಯ ಗಡಿ ಭಾಗದಲ್ಲಿರುವ ಪಾಲಾರ್ನಿಂದ 6 ಕಿ.ಮೀ. ದೂರದಲ್ಲಿರುವ ಗೋವಿಂದಪಾಡಿ ಗ್ರಾಮದ ವೃತ್ತದಲ್ಲಿ ಮಧ್ಯಾಹ್ನ 12 ಗಂಟೆಗೆ ಪ್ರತಿಭಟನಾಕಾರರು ಸಮಾವೇಶಗೊಂಡರು.
ಕಾವೇರಿ ವಿವಾದ: ಮರಳಿನ ರಾಶಿಯಲ್ಲಿ ಶವದಂತೆ ಮಲಗಿದ ರೈತರು
ಕೇಂದ್ರ ಸರ್ಕಾರ ಕೂಡಲೇ ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸಬೇಕು. ಮಂಡಳಿ ರಚನೆಯಾಗದಿದ್ದರೆ ನೀರು ಹಂಚಿಕೆ ವಿಚಾರದಲ್ಲಿ ತಮಿಳುನಾಡಿಗೆ ಅನ್ಯಾಯವಾಗಲಿದೆ. ಆದ್ದರಿಂದ ಕೂಡಲೇ ಮಂಡಳಿ ರಚಿಸಿ ರೂಪುರೇಷೆಗಳನ್ನು ತಯಾರಿಸಬೇಕು ಎಂದು ಆಗ್ರಹಿಸಿದರು.
ಕೆಲವು ಗಂಟೆ ಪ್ರತಿಭಟನೆ ನಡೆಯಿತು. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ತಮಿಳುನಾಡಿನ ಕೊಳತ್ತೂರು ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ವೆಂಕಟಾಚಲ ಪ್ರತಿಭಟನೆ ನಡೆಸುತ್ತಿದ್ದ 120ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದರು.
ಪ್ರತಿಭಟನೆಯ ಕಾರಣದಿಂದ ಮುಂಜಾಗ್ರತಾ ಕ್ರಮವಾಗಿ ರಾಜ್ಯದಿಂದ ತಮಿಳುನಾಡಿಗೆ ಸಂಚರಿಸುತ್ತಿದ್ದ ಸಾರಿಗೆ ಬಸ್ ಸಂಚಾರವನ್ನು ಕೆಲ ಗಂಟೆಗಳ ಕಾಲ ಸ್ಥಗಿತಗೊಳಿಸಲಾಗಿತ್ತು. ಮಧ್ಯಾಹ್ನ 12 ಗಂಟೆಯಿಂದ 1:30ರವರೆಗೆ ಬಸ್ ಸಂಚಾರ ನಿಲ್ಲಿಸಲಾಗಿತ್ತು.
ಪ್ರತಿಭಟನೆ ಅಂತ್ಯಗೊಂಡ ಬಳಿಕ ಬಳಿಕ ಎಂದಿನಂತೆ ಬಸ್ ಸಂಚಾರ ಆರಂಭವಾಯಿತು.