ಟಿಪ್ಪು ಸುಲ್ತಾನ್ ಪ್ರತಿಮೆ ರಾಜಕೀಯ; ಕಾಂಗ್ರೆಸ್, ಬಿಜೆಪಿ ಜಟಾಪಟಿ
ಬೆಂಗಳೂರು, ನವೆಂಬರ್ 13: ನಾಡಪ್ರಭು ಕೆಂಪೇಗೌಡ ಪ್ರತಿಮೆ ಅನಾವರಣದ ವಿಚಾರದಲ್ಲಿ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ವಾದ ಪ್ರತಿವಾದ ನಡೆಯುತ್ತಿದೆ. ಇದೀಗ ಟಿಪ್ಪು ಸುಲ್ತಾನ್ ಪ್ರತಿಮೆ ನಿರ್ಮಾಣ ವಿಚಾರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ.
ಹೌದು, ಮೈಸೂರಿನಲ್ಲಿ 100 ಅಡಿ ಎತ್ತರದ ಟಿಪ್ಪು ಸುಲ್ತಾನ್ ಪ್ರತಿಮೆಯನ್ನು ಸ್ಥಾಪಿಸುವುದಾಗಿ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ನೀಡಿದ ಹೇಳಿಕೆ ಇದೀಗ ರಾಜಕೀಯ ಜಟಾಪಟಿಗೆ ಕಾರಣವಾಗಿದೆ.
ಮೈಸೂರಿನಲ್ಲಿ 100 ಅಡಿ ಎತ್ತರದ ಟಿಪ್ಪು ಸುಲ್ತಾನ್ ಪ್ರತಿಮೆ ನಿರ್ಮಾಣ: ತನ್ವೀರ್ ಸೇಠ್
ಒಂದು ಕಡೆ ತನ್ವೀರ್ ಸೇಠ್ ಹೇಳಿಕೆಯನ್ನು ಕಾಂಗ್ರೆಸ್ ಹಿರಿಯ ನಾಯಕರಾದ ಸಿದ್ದರಾಮಯ್ಯ, ಡಾ. ಜಿ. ಪರಮೇಶ್ವರ, ಎಂ. ಬಿ. ಪಾಟೀಲ್ ಬೆಂಬಲಿಸಿದ್ದರೆ, ಇತ್ತ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ಮುಖಂಡರು ತೀವ್ರವಾಗಿ ವಿರೋಧಿಸಿದ್ದಾರೆ.
ಟಿಪ್ಪು ಪ್ರತಿಮೆ ಮಾಡಿದರೇ ತಪ್ಪೇನು?: "ಟಿಪ್ಪು ಸುಲ್ತಾನ್ ಪ್ರತಿಮೆ ನಿರ್ಮಿಸುವುದಾಗಿ ತನ್ವೀರ್ ಸೇಠ್ ಹೇಳಿದ್ದರೆ ಮಾಡಲಿ ಬಿಡಿ. ಅದರಲ್ಲಿ ತಪ್ಪೇನು?" ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಇದೇ ವಿಚಾರವಾಗಿ ಮಾತನಾಡಿದ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ್ ಮಾತನಾಡಿ, "ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ಧ ಹೋರಾಡಿದವರು. ಹೋರಾಟಗಾರರಿಗೆ ಎಲ್ಲರೂ ಗೌರವ ಕೊಡಬೇಕು. ಅವರ ಪ್ರತಿಮೆ ನಿರ್ಮಿಸಿದರೆ ಯಾರೂ ವಿರೋಧಿಸಬಾರದು" ಎಂದು ಹೇಳಿದ್ದಾರೆ.
ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಮಾತನಾಡಿ, "ಬಿಜೆಪಿಯವರು ಮೊದಲಿನಿಂದ ಟಿಪ್ಪು ಅವರನ್ನು ವಿರೋಧ ಮಾಡಿದ್ದಾರೆ. ಟಿಪ್ಪು ಸುಲ್ತಾನ್ ಪ್ರತಿಮೆ ವಿಚಾರವಾಗಿ ಮಾತು ಕೇಳಿ ಬಂದ ಕೂಡಲೇ ಬಿಜೆಪಿಯವರು ಮುಗಿಬಿದ್ದಿದ್ದಾರೆ, ಅವರು ಮುಗಿ ಬೀಳಲೇಬೇಕು. ಇನ್ನು ತನ್ವೀರ್ ಸೇಠ್ ಯಾವ ಅರ್ಥದಲ್ಲಿ ಹೇಳಿದ್ದಾರೆ ಎಂದು ಚರ್ಚೆ ಮಾಡಬೇಕು. ಮುಂದೆ ಸರ್ಕಾರ ಬಂದಾಗ ಮಾಡುವುದು ಎಂದರೆ, ಅದು ಮುಂದಿನ ತೀರ್ಮಾನ ಆಗುತ್ತದೆ. ಅವರ ಸಲಹೆಯನ್ನು ಅವರು ಹೇಳಿದ್ದಾರೆ. ಅದರ ಬಗ್ಗೆ ನಾವು ಚರ್ಚೆ ಮಾಡುತ್ತೇವೆ" ಎಂದು ತಿಳಿಸಿದ್ದಾರೆ.
ಇನ್ನೂ ಇದೇ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮಾತನಾಡಿ, "ಈ ಬಗ್ಗೆ ತನ್ವೀರ್ ಸೇಠ್ ಜತೆ ಮಾತನಾಡುತ್ತೇನೆ" ಎಂದಷ್ಟೇ ಹೇಳಿದರು.
ಟಿಪ್ಪು ಸುಲ್ತಾನ್ ಪ್ರತಿಮೆ ನಿರ್ಮಿಸಿದರೆ ಕೆಡವುತ್ತೇವೆ ಎಂಬ ಶ್ರೀರಾಮಸೇವೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿ. ಕೆ. ಶಿವಕುಮಾರ್, "ಈ ವಿಚಾರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ತರಿಸಬೇಕು, ಬೊಮ್ಮಾಯಿ ಅವರು ಎಲ್ಲಾ ವರ್ಗದವರ ರಕ್ಷಣೆ ಮಾಡುತ್ತೇವೆ ಎಂದು ಪ್ರತಿಜ್ಞೆ ಮಾಡಿದ್ದು, ಇದು ಅವರ ಕರ್ತವ್ಯವಾಗಿದೆ" ಎಂದರು.
ಟಿಪ್ಪು ಪ್ರತಿಮೆ ನಿರ್ಮಿಸಿದರೆ ಜನರಿಂದ ತಕ್ಕ ಪಾಠ: ಪ್ರಹ್ಲಾದ್ ಜೋಶಿ
ಮೈಸೂರಿನಲ್ಲಿ ಟಿಪ್ಪು ಸುಲ್ತಾನ್ ಪ್ರತಿಮೆ ಸ್ಥಾಪನೆಗೆ ನಮ್ಮ ವಿರೋಧ ಇದೆ. ಟಿಪ್ಪು ಪ್ರತಿಮೆ ಸ್ಥಾಪನೆಗೆ ಬೆಂಬಲ ನೀಡುವವರನ್ನು ಮನೆಗೆ ಕಳುಹಿಸಿ ಜನರೇ ತಕ್ಕ ಉತ್ತರ ನೀಡುತ್ತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾಸ್ ಜೋಶಿ ತಿರುಗೇಟು ನೀಡಿದರು. ಟಿಪ್ಪು ಒಬ್ಬ ಮತಾಂಧ, ಹಿಂದೂ ವಿರೋಧಿ, ದೇಶ ದ್ರೋಹಿ ಹಾಗೂ ಕನ್ನಡ ವಿರೋಧಿ ಎಂಬುದು ನನ್ನ ವೈಯಕ್ತಿಕ ಹಾಗೂ ಪಕ್ಷದ ಸ್ಪಷ್ಟನಿಲುವಾಗಿದೆ. ಯಾವುದೇ ಪ್ರತಿಮೆ ಸ್ಥಾಪನೆಗೆ ಸರ್ಕಾರದ ಅನುಮತಿ ಬೇಕು. ಟಿಪ್ಪು ಪ್ರತಿಮೆ ನಿರ್ಮಿಸಿ ಪೂಜಿಸಿ, ಆರತಿ ಮಾಡುತ್ತಾರೆಯೇ ನೋಡೋಣ ಎಂದು ಪ್ರಶ್ನಿಸಿದ ಅವರು, ಇದಕ್ಕೆ ಜನ ತಕ್ಕ ಉತ್ತರ ನೀಡಲಿದ್ದಾರೆ. ನಾವು ಯಾವಾಗ ಉತ್ತರ ನೀಡಬೇಕೋ ಆಗ ನೀಡುತ್ತೇವೆ. ತುಷ್ಟೀಕರಣದ ರಾಜಕಾರಣಕ್ಕಾಗಿ ಹೀಗೆಲ್ಲ ಮಾಡಲಾಗುತ್ತಿದೆ ಎಂದು ಟೀಕಿಸಿದರು.
ಒಡೆದು ಹಾಕುತ್ತೇವೆ: "ಮೈಸೂರಿನಲ್ಲಿ ಟಿಪ್ಪು ಸುಲ್ತಾನ್ ಪ್ರತಿಮೆ ನಿರ್ಮಾಣಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಒಂದು ವೇಳೆ ನಿರ್ಮಾಣ ಮಾಡಿದರೆ ಒಡೆದು ಹಾಕುತ್ತೇವೆ" ಎಂದು ಶ್ರೀ ರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.
"ಮೈಸೂರಿನಲ್ಲಿ ಶಾಸಕ ತನ್ವೀರ್ ಸೇಠ್ ಟಿಪ್ಪು ಪ್ರತಿಮೆ ನಿರ್ಮಿಸುವುದಾಗಿ ಹೇಳಿದ್ದಾರೆ. ಸರಕಾರ ಅದಕ್ಕೆ ಅವಕಾಶ ನೀಡಬಾರದ. ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗುರುವಾರ ಟಿಪ್ಪು ಜಯಂತಿ ಆಚರಿಸಿದ್ದು ತಪ್ಪು. ಟಿಪ್ಪು ಒಬ್ಬ ಮತಾಂಧ, ದೇಶದ್ರೋಹಿ, ಕನ್ನಡ ವಿರೋಧಿಯಾಗಿದ್ದು, ಮೈದಾನವನ್ನು ಗೋಮೂತ್ರದಿಂದ ಶುದ್ಧೀಕರಣ ಮಾಡಿದ್ದೇವೆ" ಎಂದರು.
ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಹೇಳಿದ್ದೇನು?; "ಟಿಪ್ಪು ಜಯಂತಿ ಆಚರಣೆಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ ಟಿಪ್ಪು ಜಯಂತಿ ಆಚರಣೆಯನ್ನೇ ರದ್ದು ಮಾಡಿದೆ. ಆದರೆ, 100 ಅಡಿ ಎತ್ತರದ ಟಿಪ್ಪು ಸುಲ್ತಾನ್ ಪ್ರತಿಮೆ ನಿರ್ಮಾಣ ಮಾಡುವುದು ಖಚಿತ. ಮೈಸೂರು ಅಥವಾ ಶ್ರೀರಂಗಪಟ್ಟಣದಲ್ಲಿ ಪ್ರತಿಮೆಯನ್ನು ನಿರ್ಮಾಣ ಮಾಡಲಾಗುವುದು. ಯಾರ ವಿರೋಧಕ್ಕೂ ನಾವು ಬಗ್ಗುವುದಿಲ್ಲ" ಎಂದು ತನ್ವೀರ್ ಸೇಠ್ ಹೇಳಿದ್ದರು.