ತಂದೆಯ 'ತುರ್ತು ನಿರ್ಗಮನ'ದ ನೋವಲ್ಲಿ ಹುಟ್ಟಿದ ಕಥೆಯಿದು!
ಯಾವುದೇ ಒಂದು ಸಿನಿಮಾ ಶುರುವಾಗಬೇಕೆಂದರು ಅದಕ್ಕೊಂದು ಅನುಭವ ಸೇರಲೇಬೇಕು. ನೋಡಿದ್ದಾಗಲಿ, ಕೇಳಿದ್ದಾಗಲಿ, ಅನುಭವಿಸಿದ್ದಾಗಲಿ ಅದಕ್ಕೊಂದು ಬರವಣಿಗೆಯ ರೂಪಕೊಟ್ಟು, ಶ್ರದ್ಧೆ ನೀಡಿ ಮುನ್ನುಡಿ ಬರೆದರೆ ಕಥೆಯ ರೂಪ ತಾನಾಗಿಯೇ ತಾಳುತ್ತದೆ. ಒಂದು ಸಿನಿಮಾದ ಕಥೆ ಹುಟ್ಟಲು ಕಾರಣವಂತೂ ಬೇಕು.
ಸದ್ಯ ಗಾಂಧಿನಗರದಲ್ಲೆಲ್ಲಾ ತುರ್ತು ನಿರ್ಗಮದ ಟಾಕ್ ಶುರುವಾಗಿದೆ. ಈ ಸಿನಿಮಾ ಕಥೆ ಹುಟ್ಟಿದ್ದೇಗೆ ಎಂದು ಒಮ್ಮೆ ಕಣ್ಣಾಡಿಸಿದರೆ, ಕಿವಿಕೊಟ್ಟು ಆಲಿಸಿದರೆ ಖಂಡಿತ ಮನಸ್ಸಿನ ಮೂಲೆಯಲ್ಲಿ ಧಸಕ್ಕನೆ ನೋವೊಂದು ಶುರುವಾಗುತ್ತದೆ.
ಎಲ್ಲರಿಗೂ ತಂದೆ ಮೊದಲ ಹೀರೋ. ಅವರಿಂದ ಸಾಕಷ್ಟು ಸ್ಫೂರ್ತಿಗೊಳಗಾಗಿರುತ್ತಾರೆ. ಅತಿಯಾಗಿ ಪ್ರೀತಿಸುವ, ಅವರ ಸಲಹೆ, ಸೂಚನೆಗಾಗಿ ಕಾಯುವ ಕ್ಷಣಗಳೇ ಜೊತೆಗಿರುವಾಗಲೇ 'ತುರ್ತು ನಿರ್ಗಮಿಸಿ'ದರೆ ಮನಸ್ಸು ಹೇಗಾಗಬೇಡ. ಆ ನೋವು ಮರೆಯುವುದಕ್ಕೆ ತಾನೇ ಸಾಧ್ಯವಾ. ಆ ನೋವೇ ಅಕ್ಷರ ರೂಪ ತಾಳಿದರೆ, ಹೃದಯದ ಕದ ತಟ್ಟದೆ ಇರುತ್ತದೆಯೇ?

ಸದ್ಯ ಟ್ರೇಲರ್ ಮೂಲಕ ಗುಲ್ಲೆಬ್ಬಿಸಿರುವ ತುರ್ತು ನಿರ್ಗಮನ ಸಿನಿಮಾ ಮೂಲಕ ಎಕ್ಸ್ ಕ್ಯೂಸ್ಮೀ ಖ್ಯಾತಿಯ ಸುನೀಲ್ ರಾವ್ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಈ ವಿಶೇಷತೆ ಜೊತೆಗೆ ನಿರ್ದೇಶಕನಾಗಬೇಕೆಂಬ ಕನಸು ಹೊತ್ತಿದ್ದ ಹೇಮಂತ್ ಕುಮಾರ್ ಸ್ವತಂತ್ರವಾಗಿ ನಿರ್ದೇಶನಕ್ಕೆ ಇಳಿದಿದ್ದಾರೆ.
ಈ ಮುಂಚೆ ಜಾಹೀರಾತು ವಲಯದಲ್ಲಿದ್ದ ಹೇಮಂತ್ ಕುಮಾರ್, 'ಲವ್ ಚುರುಮುರಿ' ಎಂಬ ಸಿನಿಮಾದಲ್ಲಿ ಒಂದಷ್ಟು ಅನುಭವ ಪಡೆದುಕೊಂಡಿದ್ದರು. ಆದರೆ ಆ ಸಿನಿಮಾ ಅದ್ಯಾಕೋ ರಿಲೀಸ್ ಆಗಲಿಲ್ಲ. ಬಳಿಕ ಗೋಧಿಬಣ್ಣ ಸಾಧಾರಣ ಮೈಕಟ್ಟು ಎಂಬ ಹಿಟ್ ಚಿತ್ರದಲ್ಲಿ ನಿರ್ದೇಶನದ ವಿಭಾಗದಲ್ಲಿ ತೊಡಗಿಸಿಕೊಂಡವರು. ಬಳಿಕ ಕಥೆ ಹೆಣೆದು, ಸ್ವತಂತ್ರ ನಿರ್ದೇಶಕರಾಗಲು ತಯಾರಿ ನಡೆಸಿದರು.

ಎಲ್ಲವೂ ಸರಿಯಾಗಿಯೇ ನಡೆಯುತ್ತಿತ್ತು. ಕಥೆಯ ಹಾದಿ ಸಾಗುತ್ತಿತ್ತು. ಆದರೆ ಹೇಮಂತ್ ಕುಮಾರ್ ತಂದೆ ತೀರಿಕೊಂಡರು. ಅದು ಅವರ ಪಾಲಿಗೆ ದೊಡ್ಡ ಆಘಾತ. ಬದುಕಿಗೆ ದಿಕ್ಕಾಗಿದ್ದ ತಂದೆಯಿಲ್ಲದ ಶುಷ್ಕ ವಾತಾವರಣವೇ ಅವರನ್ನು ಬೇರೆ ಬೇರೆ ರೀತಿಯಲ್ಲಿ ಆಲೋಚನೆಗೆ ಹಚ್ಚಿತ್ತು. ಬದುಕಿಗೆ ಎರಡನೇ ಛಾನ್ಸ್ ಇರಬೇಕಿತ್ತೆಂಬಂಥಾ ಗುಂಗು ಹತ್ತಿಕೊಂಡು ಆಲೋಚನೆಗಳು ನಾನಾ ಬಗೆಯಲ್ಲಿ ಹರಿದಾಡಿದ್ದವು.
ಅಂಥಾದ್ದೊಂದು ಶುಷ್ಕ ವಾತಾವರಣದಲ್ಲಿ ಹುಟ್ಟಿಕೊಂಡ ಆಲೋಚನೆಗಳೆಲ್ಲವೂ ಅಕ್ಷರ ರೂಪಕ್ಕಿಳಿದ ಪರಿಣಾಮವಾಗಿ ಹುಟ್ಟಿಕೊಂಡಿದ್ದ ಅದ್ಭುತ ಕಥಾನಕವೇ ಕೆಲವೇ ದಿನಗಳಲ್ಲಿ ತುರ್ತು ನಿರ್ಗಮನ ಚಿತ್ರವಾಗಿ ಉದ್ಭವಿಸಿತ್ತು.

ಈ ಸಿನಿಮಾ ಹೊಸದೊಂದು ಅದ್ಭುತ ಜಗತ್ತನ್ನೇ ನಿಮ್ಮ ಇಡುವಲ್ಲಿ ನೋ ಡೌಟ್. ಊಹೆಗೂ ಮೀರಿದ ಕಥೆಯೊಂದು ಈ ಸಿನಿಮಾದಲ್ಲಿದೆ. ಸದ್ಯ ಟ್ರೇಲರ್ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡುತ್ತಾ ಇದೆ. ಇದೇ ತಿಂಗಳ 24ಕ್ಕೆ ಸಿನಿಮಾ ರಿಲೀಸ್ ಆಗಲಿದೆ.
ಸಂಯುಕ್ತಾ ಹೆಗಡೆ, ಹಿತಾ, ಸುಧಾ ರಾಣಿ, ಚಂದ್ರಶೇಖರ್, ಅರುಣಾ ಬಾಲರಾಜ್, ನಾಗೇಂದ್ರ ಶಾನ್, ಅಮೃತಾ ರಾಮಮೂರ್ತಿ ಮುಂತಾದ ಕಲಾವಿದರ ದಂಡೇ ತುರ್ತು ನಿರ್ಗಮನದಲ್ಲಿದೆ. ಭರತ್ ಕುಮಾರ್ ಮತ್ತು ಹೇಮಂತ್ ಕುಮಾರ್ ಎಲ್ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಶರತ್ ಭಗವಾನ್ ಕಾರ್ಯಕಾರಿ ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ. ತಾಂತ್ರಿಕ ವರ್ಗ ಕೂಡ ತುಂಬಾ ಸ್ಟ್ರಾಂಗ್ ಆಗಿದೆ.











Click it and Unblock the Notifications