ಅಭಿಮಾನದ ಅತಿರೇಕ: ಮೂವರು ಪುನೀತ್ ಅಭಿಮಾನಿಗಳ ಸಾವು
ಬೆಂಗಳೂರು, ಅ.30: ನಟ ಪುನೀತ್ ರಾಜ್ಕುಮಾರ್ ಅಗಲಿಕೆ ಕನ್ನಡ ಚಿತ್ರಪ್ರೇಮಿಗಳನ್ನು, ಅಭಿಮಾನಿಗಳನ್ನು ಬಹುವಾಗಿ ಕಾಡುತ್ತಿದ್ದು, ಇದುವರೆಗೆ ಮೂವರು ಅಭಿಮಾನಿಗಳು ಸಾವನ್ನಪ್ಪಿದ್ದರೆ, ಮೂವರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶುಕ್ರವಾರ ಸಂಜೆಯಿಂದ ವರದಿಯಾಗಿದೆ.
ತಮ್ಮ ನೆಚ್ಚಿನ ನಟ ಅಥವಾ ನಾಯಕನನ್ನು ಕಳೆದುಕೊಂಡಾಗ ಅಭಿಮಾನಿಗಳು ಆತಂಕಗೊಳ್ಳುವುದು ಸಹಜ. ಆದರೆ, ಕೆಲವರು ಇದನ್ನು ಮನಸ್ಸಿನ ಮೇಲೆ ತೀವ್ರವಾಗಿ ತೆಗೆದುಕೊಂಡು ತಮ್ಮ ಪ್ರಾಣಕ್ಕೇ ಸಂಚಕಾರ ತಂದುಕೊಳ್ಳುವ ಕೆಲಸ ಮಾಡುತ್ತಿದ್ದಾರೆ.
ಪುನೀತ್ ರಾಜ್ಕುಮಾರ್ ಸಾವಿನ ಬಳಿಕ ಹಿರಿಯ ಸಹೋದರ ರಾಘವೇಂದ್ರ ರಾಜ್ಕುಮಾರ್ ಮಾಧ್ಯಮದ ಮುಂದೆ ಬಂದು, "ಅಭಿಮಾನಿಗಳು ಶಾಂತ ರೀತಿಯಲ್ಲಿ ವರ್ತಿಸಬೇಕು. ಯಾವುದೇ ಕೆಡಕುಗಳಿಗೆ ಅವಕಾಶ ಮಾಡಬಾರದು. ಹಿಂದೆ ನಮ್ಮ ತಂದೆ ಡಾ.ರಾಜ್ಕುಮಾರ್ ನಿಧನರಾಧಾಗ ಏನೇನು ಘಟನೆಗಳಾಗಿವೆ ಎಂಬುದು ಎಲ್ಲರಿಗೂ ನೆನಪಿದೆ. ಅಭಿಮಾನಿಗಳು ಶಾಂತಿಯುತವಾಗಿ ಇರಬೇಕೆಂದು' ಮನವಿ ಮಾಡಿದ್ದರು.

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ರಾಹುಲ್ ಗಡಿವಡ್ಡರ ಎಂಬಾತ ಪುನೀತ್ ರಾಜ್ಕುಮಾರ್ ಅವರ ದೊಡ್ಡ ಅಭಿಮಾನಿ. ಪುನೀತ್ ಅಸುನೀಗಿದ ವಿಷಯ ತಿಳಿಯುತ್ತಿದ್ದಂತೆ ಪುನೀತ್ ರಾಜ್ಕುಮಾರ್ಗೆ ಶ್ರದ್ಧಾಂಜಲಿ ಕೋರುವ ಫ್ಲೆಕ್ಸ್ ಹಾಕಿಸಿ ಅದರ ಮುಂದೆ ಕರ್ನಾಟಕದ ಚಿತ್ರ ಬರೆದು ಅದಕ್ಕೆ ಪೂಜೆ ಸಲ್ಲಿಸಿ ಆ ನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ ಮುನಿಯಪ್ಪ (29) ಎಂಬಾತ ಪುನೀತ್ ರಾಜ್ಕುಮಾರ ನಿಧನವಾದ ಸುದ್ದಿ ಕೇಳಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಮುನಿಯಪ್ಪ ಪುನೀತ್ ರಾಜ್ಕುಮಾರ್ ಅಭಿಮಾನಿಯಾಗಿದ್ದ. ಹೊಲಕ್ಕೆ ಹೋಗಿದ್ದ ಮುನಿಯಪ್ಪ, ವಾಪಸ್ ಬಂದ ಕೂಡಲೇ ಮನೆಯವರಿಂದ ವಿಷಯ ತಿಳಿದು ಬಂದಿದ್ದು ಕೂಡಲೇ ಹೃದಯಾಘಾತದಿಂದ ಅಸುನೀಗಿದ್ದಾನೆ.
ಮೂವರಿಂದ ಆತ್ಮಹತ್ಯೆ ಯತ್ನ: ರಕ್ಷಣೆ
ಮತ್ತೊಂದು ಪ್ರಕರಣದಲ್ಲಿ, ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲ್ಲೂಕಿನ ಕಮಲಾಪುರದ ಬಂಡಿಕೇರಿ ನಿವಾಸಿ ಸಾದಪ್ಪ (40) ಎಂಬಾತ ಕಾಲುವೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈತ ಪುನೀತ್ ರಾಜ್ಕುಮಾರ್ ಅವರ ದೊಡ್ಡ ಅಭಿಮಾನಿಯಾಗಿದ್ದ ಎಂದು ಸ್ಥಳೀಯರು ಹೇಳಿದ್ದಾರೆ.
ಇನ್ನು ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಇಬ್ಬರು ಪುನೀತ್ ರಾಜ್ಕುಮಾರ್ ಅಭಿಮಾನಿಗಳು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. .ಆದರೆ ಸೂಕ್ತ ಸಮಯಕ್ಕೆ ಇದನ್ನು ಗಮನಿಸಿದವರು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಉಡುಪಿಯಲ್ಲಿ ಆಟೋ ಡ್ರೈವರ್ ಆಗಿರುವ ಸತೀಶ್ ಎಂಬಾತ ಪುನೀತ್ ರಾಜ್ಕುಮಾರ್ ಅಪಾರ ಅಭಿಮಾನಿಯಾಗಿದ್ದ. ಪುನೀತ್ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಇದನ್ನು ಅರಗಿಸಿಕೊಳ್ಳಲು ಸಾಧ್ಯವಾಗದೆ ತನ್ನ ಕೈಯನ್ನೇ ಜಜ್ಜಿಕೊಂಡು ಗಾಯ ಮಾಡಿಕೊಂಡಿದ್ದಾನೆ.
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777












Click it and Unblock the Notifications