ಅಜ್ಞಾತ ಸ್ಥಳದತ್ತ ಹೊರಟ ಕಾಂಗ್ರೆಸ್ನ ಮೂವರು ಅತೃಪ್ತ ಶಾಸಕರು
ಬೆಂಗಳೂರು, ಸೆಪ್ಟೆಂಬರ್ 22: ರಾಜ್ಯ ರಾಜಕಾರಣದಲ್ಲಿ ಮತ್ತೆ ರೆಸಾರ್ಟ್ ರಾಜಕಾರಣ ಶುರುವಾಗುತ್ತದೆಯಾ ಎಂಬ ಅನುಮಾನ ಮೂಡಲಾರಂಭಿಸಿದೆ. ಕಾಂಗ್ರೆಸ್ನ ಮೂವರು ಶಾಸಕರು ಅಜ್ಞಾತ ಸ್ಥಳದತ್ತ ತೆರಳಿರುವುದೇ ಇಂತಹಾ ಅನುಮಾನಕ್ಕೆ ಕಾರಣ.
ಸಚಿವ ಸ್ಥಾನ ಸಿಗದೇ ತೀವ್ರ ಅತೃಪ್ತಿ ಹೊರಹಾಕಿದ್ದ ಹೊಸಕೋಟೆ ಶಾಸಕ ಎಂಟಿಬಿ ನಾಗರಾಜು ಅವರು, ಮತ್ತೊಬ್ಬ ಅತೃಪ್ತ ಶಾಸಕ ಚಿಕ್ಕಬಳ್ಳಾಪುರದ ಡಾ.ಸುಧಾಕರ್ ಅವರು ಮುಳಬಾಗಿಲಿನ ಶಾಸಕ ನಾಗೇಂದ್ರ ಅವರ ಜೊತೆ ಚೆನ್ನೈ ಕಡೆ ಪ್ರಯಾಣ ಬೆಳೆಸಿದ್ದಾರೆ.
ಮೊದಲಿಗೆ ಈ ಮೂವರು ಶಾಸಕರು ಬೆಂಗಳೂರಿನ ಒಂದು ಖಾಸಗಿ ಹೊಟೆಲ್ನಲ್ಲಿ ಸೇರಿದರು. ಅಲ್ಲಿ ಊಟ ಮುಗಿಸಿ ಒಂದೇ ಕಾರಿನಲ್ಲಿ ಚೆನ್ನೈನತ್ತ ತೆರಳಿದರು. ಅಲ್ಲಿಂದ ಅವರು ಮುಂಬೈಗೆ ಹೊರಡುತ್ತಾರೆ ಎಂದು ಹೇಳಲಾಗುತ್ತಿದೆ.

ಮೂವರು ಮಾತ್ರವಲ್ಲದೆ ಇನ್ನೂ ಕೆಲವು ಶಾಸಕರು ಇಂದು ತಡರಾತ್ರಿ ಮುಂಬೈಗೆ ಹೊರಡುತ್ತಾರೆ ಎಂಬ ಮಾತಿದೆ. ಅಲ್ಲಿಗೆ ಮತ್ತೆ ರಾಜ್ಯದಲ್ಲಿ ರೆಸಾರ್ಟ್ ರಾಜಕಾರಣ ಪ್ರಾರಂಭವಾಗುತ್ತಿರುವ ಮುನ್ಸೂಚನೆ ಕಾಣುತ್ತಿದೆ.
ಇನ್ನೆರಡು ದಿನಗಳಲ್ಲಿ ಮೈತ್ರಿ ಸರ್ಕಾರ ಬಿದ್ದು, ಹೊಸ ಸರ್ಕಾರ ಅಸ್ಥಿತ್ವಕ್ಕೆ ಬರಲಿದೆ ಎಂದು ಕೆಲವು ಬಿಜೆಪಿ ಮುಖಂಡರು ಹೇಳುತ್ತಿರುವುದು ರೆಸಾರ್ಟ್ ರಾಜಕಾರಣ ಪ್ರಾರಂಭಕ್ಕೆ ಇಂಬು ನೀಡುತ್ತಿದೆ.
ಅತೃಪ್ತ ಶಾಸಕರು ಪಕ್ಷ ಬದಲಾಯಿಸುತ್ತಿದ್ದಾರೆ ಎಂಬ ಸುದ್ದಿಯನ್ನು ಅಲ್ಲಗಳೆದಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು, ಎಂಟಿಬಿ ನಾಗರಾಜು ಅವರು ಇಂದು ಸಹ ನನ್ನೊಂದಿಗೆ ಮಾತನಾಡಿದ್ದಾರೆ. ನಿನ್ನೆಯೂ ಮಾತನಾಡಿದ್ದಾರೆ ಆ ರೀತಿಯ ಯಾವುದೇ ಕಾರ್ಯಕ್ಕೆ ಅವರು ಕೈಹಾಕುವುದಿಲ್ಲ ಎಂದು ಅವರು ಹೇಳಿದರು.












Click it and Unblock the Notifications