ತಮಿಳರು, ಜಯಲಲಿತಾ ನಿಂದನೆ ವಿಡಿಯೋ: ಮೂವರ ವಿರುದ್ಧ ಕೇಸ್
ಶಿವಮೊಗ್ಗ, ಅಕ್ಟೋಬರ್ 6: ಕಾವೇರಿ ವಿವಾದ ಕಳೆದ ಕೆಲವು ವಾರಗಳಿಂದ ಜೀವಂತವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಆಕ್ಪೇಪಾರ್ಹ ವಿಷಯಗಳನ್ನು ಹಾಕಿದ ಕಾರಣಕ್ಕೆ ಹಲವು ಬಳಕೆದಾರರು ಈಗ ಸಮಸ್ಯೆಗೆ ಸಿಲುಕಿದ್ದಾರೆ. ಇತ್ತೀಚಿನ ವಿಡಿಯೋ ಒಂದರಲ್ಲಿ ತಮಿಳರು, ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಬಗ್ಗೆ ಸದಭಿರುಚಿಯಲ್ಲದ ವಿಡಿಯೋ ಹಾಕಿ, ಸಮಸ್ಯೆ ಎದುರಿಸುವಂತಾಗಿದೆ.
ಜಯಲಲಿತಾ ಅವರನ್ನು ಅವಮಾನಿಸುವಂಥ ವಿಡಿಯೋ ಮಾಡಿ, ಇತರರಿಗೆ ಕಳಿಸಿದ ಆರೋಪದಲ್ಲಿ ಶಿವಮೊಗ್ಗದ ಮೂವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಅಶ್ವತ್, ಮುಕೇಶ್, ರಾಕೇಶ್ ಗೌಡ ಬಂಧಿತರು.[ಕಾವೇರಿ ವಿವಾದ: ಅ.17ಕ್ಕೆ ಸುಪ್ರೀಂ ಗೆ ತಜ್ಞರ ತಂಡದ ವರದಿ]

ಈ ಮೂವರು ಕಾವೇರಿ ನದಿ ಕರ್ನಾಟಕಕ್ಕೆ ಸೇರಿದ ಆಸ್ತಿ ಎಂದು ಬಿಂಬಿಸುವಂಥ ಹಾಡೊಂದನ್ನು ಮಾಡಿದ್ದರು. ಈ ಮೂವರಲ್ಲಿ ಇಬ್ಬರು ಎಂಜಿನಿಯರ್, ಒಬ್ಬರು ಮಾರ್ಕೆಟಿಂಗ್ ಎಕ್ಸ್ ಕ್ಯೂಟಿವ್ ಹಾಡಿಗೆ ಸಾಹಿತ್ಯ ಬರೆದು, ಅಭಿನಯಿಸಿ, ನಿರ್ದೇಶನ ಮಾಡಿದ್ದರು.
ಅವಮಾನ ಆಗುವಂಥ, ಸಮುದಾಯದ ಮಧ್ಯೆ ದ್ವೇಷ ಬಿತ್ತುವಂಥ ವಿಡಿಯೋವನ್ನು ಮಾಡಿದ್ದರು. ಸೋನಿ ವೇಗಾಸ್ ಎಡಿಟಿಂಗ್ ಸಾಫ್ಟ್ ವೇರ್ ಬಳಸಿ ಸೆಪ್ಟೆಂಬರ್ 14ರಂದು ಅಪ್ ಲೋಡ್ ಮಾಡಿದ್ದರು. ಆ ನಂತರ ಅದನ್ನು ಡೌನ್ ಲೋಡ್ ಮಾಡಿಕೊಂಡು, ವಾಟ್ಸ್ ಅಪ್ ಮೂಲಕ ಹಲವರಿಗೆ ಕಳಿಸಿದ್ದರು.[32 ವರ್ಷ ನೀವು ಕೊಟ್ಟ ಫೀ ವಾಪಸ್ ಮಾಡ್ತೀನಿ: ನಾರಿಮನ್]
ಐಪಿಸಿ ಸೆಕ್ಷನ್ 153A, 504, 506ರ ಅಡಿಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಹಿಂದೆ ತಮಿಳುನಾಡು ಮೂಲದ ಬೆಂಗಳೂರು ವಿದ್ಯಾರ್ಥಿ ಕನ್ನಡ ನಟರ ವಿರುದ್ಧ ಫೇಸ್ ಬುಕ್ ನಲ್ಲಿ ಆಕ್ಷೇಪಾರ್ಹ ಕಾಮೆಂಟ್ ಮಾಡಿದ್ದಕ್ಕೆ ಕನ್ನಡ ಪರ ಸಂಘಟನೆಗಳ ಸದಸ್ಯರು ಹಲ್ಲೆ ನಡೆಸಿದ್ದರು.












Click it and Unblock the Notifications