SM Krishna: ಎಸ್ಎಂ ಕೃಷ್ಣ ಬರೆದಿದ್ದ ಕೊನೆಯ ಪತ್ರ ಇಲ್ಲಿದೆ
ಕರ್ನಾಟಕ ಮಾಜಿ ಸಿಎಂ, ಮಾಜಿ ವಿದೇಶಾಂಗ ಸಚಿವ ಎಸ್ಎಂ ಕೃಷ್ಣ ಮಂಗಳವಾರ ಮುಂಜಾನೆ ನಿಧನರಾಗಿದ್ದಾರೆ. ಎಸ್ಎಂ ಕೃಷ್ಣ ಅವರಿಗೆ 92 ವರ್ಷವಾಗಿತ್ತು, ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ ಶ್ವಾಸಕೋಶದಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಅನೇಕ ಬಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದರು. ಬೆಂಗಳೂರು ಸಿಲಿಕಾನ್ ವ್ಯಾಲಿ ಎನಿಸಿಕೊಳ್ಳಲು ಎಸ್ಎಂ ಕೃಷ್ಣ ಕೊಡುಗೆ ಅಪಾರ, ಮಾಜಿ ಸಿಎಂಗೆ ಕನ್ನಡ ನಾಡು, ನುಡಿ ಮೇಲೆ ಅಪಾರ ಪ್ರೀತಿ ಇತ್ತು. ತಮ್ಮ ಕೊನೆಯ ಪತ್ರದಲ್ಲಿ ಅದನ್ನು ವ್ಯಕ್ತಪಡಿಸಿದ್ದಾರೆ.
ಮಂಡ್ಯ ಜಿಲ್ಲೆಯವರಾದ ಎಸ್ಎಂ ಕೃಷ್ಣ ಅವರಿಗೆ ತಮ್ಮೂರು ಎಂದರೆ ತುಂಬಾ ಅಭಿಮಾನ, ಈ ಬಾರಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿ ನಡೆಯುತ್ತಿದ್ದು ಎಸ್ಎಂ ಕೃಷ್ಣ ಅವರ ಸಂತೋಷಕ್ಕೆ ಕಾರಣವಾಗಿತ್ತು. ಈ ಬಗ್ಗೆ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದ ಅವರು, ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ಸು ಕಾಣಲಿ ಎಂದು ಹಾರೈಸಿದ್ದರು.

ಎಸ್ಎಂ ಕೃಷ್ಣ ಪತ್ರದ ಸಾರಾಂಶ
ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನನ್ನ ಶುಭಾಶಯಗಳು. ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ದೂರದೃಷ್ಟಿಯ ಫಲವಾಗಿ ಉದಯವಾದ ಮಂಡ್ಯ ಜಿಲ್ಲೆ, ಕರ್ನಾಟಕದಲ್ಲೇ ಅತಿ ಹೆಚ್ಚು ಕನ್ನಡ ಮಾತನಾಡುವವರನ್ನು ಒಳಗೊಂಡಿರುವ ಜಿಲ್ಲೆ. ಮಂಡ್ಯದಲ್ಲಿ ಮೂರನೇ ಬಾರಿಗೆ ನಡೆಯುತ್ತಿರುವ ಕನ್ನಡದ ಸಿರಿಹಬ್ಬವು ಯಶಸ್ವಿಯಾಗಿ ಜರುಗಲಿ ಎಂದು ಶುಭಹಾರೈಸಿದ್ದಾರೆ.
ನಾಲ್ವಡಿ ಕೃಷ್ಣರಾಜ ಒಡೆಯರ್ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಲು ಕನ್ನಡ ಸಾಹಿತ್ಯ ಪರಿಷತ್ ಅನ್ನು ಸ್ಥಾಪಿಸಿದ್ದರು. ಅಂದಿನಿಂದ ಸರ್ಕಾರದ ನೇತೃತ್ವದಲ್ಲಿ ಕನ್ನಡದ ನುಡಿಹಬ್ಬ ವಿಜೃಂಭಣೆಯಿಂದ ನಡೆದುಕೊಂಡು ಬಂದಿದೆ. ಹಿರಿಯ ಸಾಹಿತಿಗಳು ಕನ್ನಡ ಭಾಷೆಯನ್ನು ಬೆಳೆಸುತ್ತಾ, ಕನ್ನಡದ ಉಳಿವಿಗೆ ಹಲವು ಸಲಹೆಗಳನ್ನು ಸರ್ಕಾರಕ್ಕೆ ನೀಡುತ್ತಾ ಬಂದಿದ್ದಾರೆ. ಸಾಹಿತ್ಯ ಸಮ್ಮೇಳನ ಜನಜಾತ್ರೆಗಳಾಗದೆ ಕನ್ನಡದ ಅಸ್ಮಿತೆಯನ್ನು ಸಾರುವ ಹಬ್ಬವಾಗಿದೆ.
ತಂತ್ರಜ್ಞಾನ ಮುಂದುವರೆದಂತೆ ಕನ್ನಡ ರಾಜ್ಯದ ಎಲ್ಲೆಯನ್ನು ಮೀರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಳಕೆಯನ್ನು ನೋಡುತ್ತಿದ್ದೇವೆ. ಅನೇಕ ಮಹನೀಯರು ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ನೀಡುವಲ್ಲಿ ಶ್ರಮಿಸಿದ್ದಾರೆ. ಅಂದಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಧಿಕಾರಾವಧಿಯಲ್ಲಿ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಕಲ್ಪಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದು ಬರೆದಿದ್ದಾರೆ.
ಮಂಡ್ಯ ಆತಿಥ್ಯಕ್ಕೆ ಹೆಸರಾಗಿರುವ ಜಿಲ್ಲೆ, ಕನ್ನಡ ಭಾಷೆಯನ್ನು ಗೌರವಿಸುವಲ್ಲಿ ಜಿಲ್ಲೆಯ ಜನ ಸದಾ ಮುಂದಿರುತ್ತಾರೆ. ಈ ಹಿಂದೆ ನಡೆದ ಸಾಹಿತ್ಯ ಸಮ್ಮೇಳನಗಳನ್ನು ಯಶಸ್ವಿಗೊಳಿಸಿದ್ದಾರೆ. 1994ರಲ್ಲಿ ನಾನು ಉಪಮುಖ್ಯಮಂತ್ರಿಯಾಗಿದ್ದಾಗ ಜಿ. ಮಾದೇಗೌಡರ ನೇತೃತ್ವದಲ್ಲಿ ಮಂಡ್ಯ ಜಿಲ್ಲೆಯಲ್ಲಿ ನಡೆದ ಸಾಹಿತ್ಯ ಸಮ್ಮೇಲೆ ಅವಿಸ್ಮರಣೀಯ. ಜಯದೇವಿ ತಾಯಿ ಲಿಗಾಡೆಯವರು ಪ್ರಥಮ ಮಹಿಳಾ ಸಮ್ಮೇಳನಾಧ್ಯಕ್ಷರಾಗಿದ್ದು ಐತಿಹಾಸಿಕ ದಾಖಲೆಯಾಗಿದೆ ಎಂದು ನೆನಪಿಸಿಕೊಂಡಿದ್ದಾರೆ.
ನಾಡಿನ ಶ್ರೀಮಂತ ಸಾಹಿತ್ಯ ಪರಂಪರೆಗೆ ಮಂಡ್ಯ ಜಿಲ್ಲೆಯ ಕೊಡುಗೆ ಅಪಾರವಾಗಿದೆ. ಪಿಟೀಲು ಚೌಡಯ್ಯ, ಪು.ತಿ. ನರಸಿಂಹಾಚಾರ್, ಕೆಎಸ್ ನರಸಿಂಹಸ್ವಾಮಿ, ಡಾ. ಎಚ್.ಎಲ್. ನಾಗೇಗೌರ, ಅಂಬರೀಶ್ ಇವರೆಲ್ಲ ಜಿಲ್ಲೆಯ ಕೀರ್ತಿಯನ್ನು ಬೆಳಗಿಸಿದವರು. ಕುವೆಂಪುರವರ ಸರ್ವಜನಾಂಗದ ಶಾಂತಿಯ ತೋಟದ ಸ್ತುತಿಯನ್ನು ನೆನೆಯುತ್ತಾ ಸಾಹಿತ್ಯ ಸಮ್ಮೇಳನಕ್ಕೆ ಶುಭವಾಗಲಿ ಎಂದು ಎಸ್ಎಂ ಕೃಷ್ಣ ತಮ್ಮ ಕೊನೆಯ ಪತ್ರದಲ್ಲಿ ಹಾರೈಸಿದ್ದಾರೆ.












Click it and Unblock the Notifications