ಕನ್ನಡ ಭಾಷೆ ಉಳಿಸಲು ಕನ್ನಡಿಗರಲ್ಲಿ ಸಿಎಂ ಸಿದ್ದರಾಮಯ್ಯ ಮನವಿ ಹೇಗಿತ್ತು?
'ಮೈಸೂರು' ರಾಜ್ಯಕ್ಕೆ 'ಕರ್ನಾಟಕ' ಎಂದು ನಾಮಕರಣ ಮಾಡಿ ಬರೊಬ್ಬರಿ 50 ವರ್ಷ ಪೂರ್ಣವಾದ ಹಿನ್ನೆಲೆ ಸಿದ್ದರಾಮಯ್ಯ ಅವರ ಸರ್ಕಾರ ಅದ್ಧೂರಿಯಾಗಿ ವರ್ಷ ಪೂರ್ತಿ ಈ ಸಂಭ್ರಮ ಆಚರಿಸಲು ಸಿದ್ಧವಾಗಿದೆ. ಕನ್ನಡಿಗರ ಸಂಭ್ರಮದ ಮಧ್ಯೆ ಸಿಎಂ ಸಿದ್ದರಾಮಯ್ಯ ವಿಜಯನಗರ ಸಾಮ್ರಾಜ್ಯದ ಬಗ್ಗೆಯೂ ಮಾತನಾಡಿದ್ದಾರೆ. ಹಾಗಾದರೆ ಸಿಎಂ ವಿಜಯನಗರ ಅರಸರ ಕಾಲದ ವೈಭವದ ಬಗ್ಗೆ ಹೇಳಿದ್ದೇನು?
ಹೌದು ವಿಜಯನಗರ ಅರಸರ ಕಾಲದ ವೈಭವ ಮತ್ತು ಅಭಿವೃದ್ಧಿ ರಾಜ್ಯದಲ್ಲಿ ಮರಳಿಸುವುದು ನಮ್ಮ ಆದ್ಯತೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಂಪಿಯಲ್ಲಿ ಆಯೋಜಿಸಿದ್ದ 'ಕರ್ನಾಟಕ ಸಂಭ್ರಮ-50' ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಸವಣ್ಣನ ನಾಡು ಇದು. ಕಲ್ಯಾಣ ಕರ್ನಾಟಕ ಎಂದು ಕೇವಲ ಹೆಸರಿಟ್ಟರೆ ಸಾಲದು. ನಿಜವಾದ ಅರ್ಥದಲ್ಲಿ ಈ ಭಾಗದ ಜನರ ಕಲ್ಯಾಣ ಆಗಬೇಕು ಎಂದು, ಸರ್ಕಾರದ ಮುಂದಿನ ಯೋಜನೆಗಳ ಬಗ್ಗೆ ಮುನ್ಸೂಚನೆ ನೀಡಿದ್ದಾರೆ.

ನಾನು ಸಿಎಂ ಆದಾಗ 3,000 ಕೋಟಿ...
ತಮ್ಮ ಮಾತು ಮುಂದುವರಿಸಿದ ಸಿಎಂ ಸಿದ್ದರಾಮಯ್ಯ, ಕಲ್ಯಾಣ ಕರ್ನಾಟಕದ ಅಭಿವೃದ್ಧಿ ದೃಷ್ಟಿಯಿಂದ ಕೆಲಸ ಮಾಡುತ್ತಿದ್ದೇವೆ. ಈ ಉದ್ದೇಶದಿಂದಲೇ 371 (ಜೆ) ಜಾರಿ ಮಾಡಿದ್ದೆವು. ಮಲ್ಲಿಕಾರ್ಜುನ ಖರ್ಗೆಯವರೂ ಸೇರಿ ಹಲವರ ಹೋರಾಟದ ಫಲವಾಗಿ 371 ಜೆ ಜಾರಿಯಾಗಿದೆ. ಇದು ಜಾರಿ ಆಗಿದ್ದರಿಂದ ಈ ಭಾಗಕ್ಕೆ ಹೆಚ್ಚು ಅನುದಾನ ಮತ್ತು ಅವಕಾಶಗಳು ಸೃಷ್ಟಿಯಾಗಿವೆ. ನಾನು ಸಿಎಂ ಆದ ಬಳಿಕ ಬಾಕಿ ಇದ್ದ ಅನುದಾನದ ಜೊತೆಗೆ ಹೆಚ್ಚುವರಿಯಾಗಿ ಈ ಭಾಗಕ್ಕೆ 3000 ಕೋಟಿ ರೂಪಾಯಿ ಅನುದಾನ ನೀಡಿದ್ದೆ ಎಂದು ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ರು
ದೇವರ ಬಗ್ಗೆ ಸಿಎಂ ಹೇಳಿದ್ದೇನು?
ಹಾಗೇ ಮತ್ತೊಂದು ಕಡೆ, ಬಸವಣ್ಣನವರೂ ಸೇರಿ ಶರಣರು ಮೌಢ್ಯದ ವಿರುದ್ಧ ಹೋರಾಡಿ, ಜಾಗೃತಿ ಮೂಡಿಸಿದ್ದರು. ನಾನೂ ಕೂಡ ಮೌಢ್ಯ ಧಿಕ್ಕರಿಸಿ ಈ ನಾಡಿನ ಜನರ ಮೇಲೆ ನಂಬಿಕೆ ಇಟ್ಟಿದ್ದೇನೆ. ದೇವರಲ್ಲಿ ಹಾಗೂ ದೇವರು ಎನ್ನುವ ಶಕ್ತಿಯಲ್ಲಿ ನನಗೆ ನಂಬಿಕೆ ಇದೆ. ಆದರೂ ಮೌಢ್ಯದಲ್ಲಿ ನಂಬಿಕೆ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಇನ್ನೂ ಈ ಮೂಲಕ ಸಿಎಂ ತಮ್ಮ ವಿರುದ್ಧದ ಆರೋಪಗಳಿಗೂ ಸಿಎಂ ತಿರುಗೇಟು ನೀಡಿದ್ದಾರೆ.
ಹೋರಾಟಗಾರರನ್ನು ನೆನೆದ ಸಿಎಂ
ಕನ್ನಡಿಗರ ಬದುಕನ್ನು ಉನ್ನತೀಕರಿಸುವ ಆಶಯದಿಂದ ಏಕೀಕರಣ ಚಳವಳಿ ನಡೆದು ಹಲವರು ಪ್ರಾಣ ತ್ಯಾಗ ಮಾಡಿದ್ದರು. ಅವರೆಲ್ಲರ ತ್ಯಾಗದಿಂದ ವಿಶಾಲ ಕನ್ನಡ ನಾಡು ಉದಯವಾಗಿದೆ ಎಂದು ಇದೇ ವೇಳೆ ಕನ್ನಡ ನೆಲದ ಹೋರಾಟಗಾರರನ್ನ ಸಿಎಂ ಸಿದ್ದರಾಮಯ್ಯ ನೆನೆದರು. ಕರ್ನಾಟಕ ನಾಮಕರಣಗೊಂಡು 50 ನೇ ವರ್ಷಕ್ಕೆ ಬಿಜೆಪಿ ಇಡೀ ವರ್ಷ ಕನ್ನಡ ಸಂಭ್ರಮವನ್ನು ಆಚರಿಸಬೇಕಿತ್ತು. ಅವರು ಆಚರಿಸಲಿಲ್ಲ ಆದ್ರೆ ನಮ್ಮ ಸರ್ಕಾರ ಬಂದ ತಕ್ಷಣ ಮೊದಲ ಬಜೆಟ್ ವೇಳೆಯೇ 'ಕನ್ನಡ ಸಂಭ್ರಮ-50' ಕಾರ್ಯಕ್ರಮ ಘೋಷಿಸಿದ್ದೆವು. ನಾವು ಕರ್ತವ್ಯಲೋಪ ಮಾಡಲಿಲ್ಲ ಎಂದು ಕಮಲ ಪಾಳಯದ ವಿರುದ್ಧ ಇದೇ ವೇಳೆ ಸಿಎಂ ಹರಿಹಾಯ್ದರು.

ಐಎಎಸ್ ಅಧಿಕಾರಿಗಳಿಗೂ ಕನ್ನಡ ಪಾಠ!
ಕನ್ನಡ ಕಾವಲು ಸಮಿತಿ ಮೊದಲ ಅಧ್ಯಕ್ಷನಾಗಿ, ಆಡಳಿತದಲ್ಲಿ ಕನ್ನಡ ಪರಿಣಾಮಕಾರಿಯಾಗಿ ಜಾರಿ ಆಗಲು ರಾಜ್ಯಾದ್ಯಂತ ಸುತ್ತಾಡಿದ್ದೆ. ಎಲ್ಲಾ ಕಚೇರಿಗಳಿಗೆ ಕನ್ನಡ ಟೈಪಿಂಗ್ ಯಂತ್ರವನ್ನ ನೀಡಿ ಐಎಎಸ್ ಅಧಿಕಾರಿಗಳು ಕೂಡ ಆಡಳಿತ ಭಾಷೆಯಾಗಿ ಕನ್ನಡ ಬಳಸಲು ಪ್ರೇರೇಪಿಸಿದ್ದೆ. ಇತರೆ ಭಾಷೆಗಳನ್ನು ಕಲಿಯಿರಿ ಹಾಗೇ ಗೌರವಿಸಿರಿ. ಆದ್ರೆ ಕನ್ನಡದಲ್ಲೇ ವ್ಯವಹರಿಸಿರಿ, ಕನ್ನಡ ಜ್ಯೋತಿಯನ್ನ ಹೀಗೆ ರಾಜ್ಯಾದ್ಯಂತ ಸಂಭ್ರಮದಿಂದ ಸ್ವಾಗತಿಸಬೇಕು ಎಂದು ಜನರಲ್ಲಿ ಮನವಿ ಮಾಡುತ್ತೇನೆ ಅಂತಾ ಇದೇ ವೇಳೆ ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಒಟ್ನಲ್ಲಿ ಸಿಎಂ ಸಿದ್ದರಾಮಯ್ಯ ತಮ್ಮ ಸರ್ಕಾರವು ಕನ್ನಡ ಭಾಷೆ & ಕನ್ನಡ ಸಂಸ್ಕೃತಿಯ ಮೆರಗನ್ನು ಕಾಪಾಡಿಕೊಳ್ಳಲು ಕೈಗೊಂಡಿರುವ ಯೋಜನೆಗಳ ಬಗ್ಗೆ ವಿವರಿಸಿದ್ದಾರೆ. ಹಾಗೇ ಇದೇ ವೇಳೆ ಕನ್ನಡವನ್ನು ಹೆಚ್ಚೆಚ್ಚು ಬಳಸುವಂತೆ ಕನ್ನಡಿಗರಲ್ಲಿ ಮನವಿ ಮಾಡಿರುವುದು ವಿಶೇಷ.












Click it and Unblock the Notifications