KSRTC ಮತ್ತು BMTC ಬಸ್ ಹತ್ತುವ ಮುನ್ನ ಪ್ರಯಾಣಿಕರೇ ಗಮನಿಸಿ!
ಬೆಂಗಳೂರು, ಮೇ.19: ಕರ್ನಾಟಕದಲ್ಲಿ ಲಾಕ್ ಡೌನ್ 4.O ವಿಸ್ತರಣೆ ನಡುವೆಯೂ ಮಂಗಳವಾರದಿಂದ ಕೆಎಸ್ಆರ್ ಟಿಸಿ ಹಾಗೂ ಬಿಎಂಟಿಸಿ ಬಸ್ ಗಳು ಸಂಚಾರ ಆರಂಭಿಸಲಿದೆ. ಕೆಂಪು ವಲಯ ಮತ್ತು ಕಂಟೇನ್ಮೆಂಟ್ ಝೋನ್ ಗಳನ್ನು ಹೊರತುಪಡಿಸಿ ಎಲ್ಲ ಕಡೆಗಳಲ್ಲಿ ಬಸ್ ಸಂಚಾರಕ್ಕೆ ಅನುಮತಿ ಸಿಕ್ಕಿದೆ.
ಬಿಎಂಟಿಸಿ, ಕೆಎಸ್ ಆರ್ ಟಿ, ನೈರುತ್ಯ, ಈಶಾನ್ಯ ಸಾರಿಗೆಗೆ ಮಂಗಳವಾರ ಚಾಲನೆ ನೀಡಲಾಗುತ್ತದೆ. ಸರ್ಕಾರಿ ಬಸ್ ಗಳ ಜೊತೆಗೆ ಖಾಸಗಿ ಬಸ್ ಗಳ ಓಡಾಟಕ್ಕೂ ಅನುಮತಿ ನೀಡಲಾಗಿದೆ. ಆದರೆ ಒಂದು ಬಸ್ ನಲ್ಲಿ ಕೇವಲ 30 ಜನ ಪ್ರಯಾಣಿಕರ ಸಂಚಾರಕ್ಕೆ ಮಾತ್ರ ಅನುಮತಿ ನೀಡಲಾಗಿದೆ.
KSRTC ಮತ್ತು BMTC ಬಸ್ ಸಂಚಾರಕ್ಕೆ ಕರ್ನಾಟಕದಲ್ಲಿ ಗ್ರೀನ್ ಸಿಗ್ನಲ್.!
ಮಂಗಳವಾರ ಬೆಳ್ಳಂಬೆಳಗ್ಗೆ ಬೆಂಗಳೂರಿನ ಮೆಜೆಸ್ಟಿಕ್ ನತ್ತ ಪ್ರಯಾಣಿಕರು ಧಾವಿಸಿ ಬಂದರು. ತಮ್ಮ ತಮ್ಮ ಊರುಗಳಿಗೆ ತೆರಳಲು ಮಹಿಳೆಯರು ಮಕ್ಕಳು ಬಸ್ ನಿಲ್ದಾಣದಲ್ಲಿ ಕಾದು ನಿಂತಿದ್ದರು. ಆದರೆ ಬಸ್ ಏರುವ ಮುನ್ನ ಕೆಲವು ನಿಯಮಗಳನ್ನು ಪಾಲಿಸಬೇಕಾಗಿರುವುದು ಕಡ್ಡಾಯವಾಗಿದೆ.
ಮಂಗಳವಾರ 1,500 ಕೆಎಸ್ಆರ್ ಟಿಸಿ ಬಸ್ ಸಂಚಾರ
ಮಂಗಳವಾರದಿಂದ ರಾಜ್ಯದಲ್ಲಿ ಕೆಎಸ್ಆರ್ ಟಿಸಿ ಬಸ್ ಸಂಚಾರ ಆರಂಭವಾಗಲಿದ್ದು, 1,500 ಬಸ್ ಗಳು ಸಂಚಾರ ಆರಂಭಿಸಲಿವೆ. ಅಂತರ ರಾಜ್ಯದಿಂದ ಬರುವ ಪ್ರಯಾಣಿಕರು ಕಡ್ಡಾಯವಾಗಿ ಕ್ವಾರಂಟೈನ್ ಗೆ ಒಳಪಡಬೇಕು. ಆದರೆ ಮಹಾರಾಷ್ಟ್ರ, ಕೇರಳ, ತಮಿಳುನಾಡು ಹಾಗೂ ಗುಜರಾತ್ ಬಸ್ ಗಳಿಗೆ ರಾಜ್ಯ ಪ್ರವೇಶಿಸಲು ಅನುಮತಿ ನಿರಾಕರಿಸಲಾಗಿದೆ.
ಬಿಎಂಟಿಸಿ ಬಸ್ ಗಳಲ್ಲಿ ಟಿಕೆಟ್ ನೀಡುವುದಿಲ್ಲ
ಇನ್ನು, ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಸಂಚಾರ ಆರಂಭಿಸುವ ಮುನ್ನ ಕೆಲವು ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಈ ಮೊದಲಿನಂತೆ ಪ್ರಯಾಣಿಕರಿಗೆ ಟಿಕೆಟ್ ನೀಡಲಾಗುವುದಿಲ್ಲ. ಬದಲಿಗೆ ಪ್ರಯಾಣಿಕರು ಕಡ್ಡಾಯವಾಗಿ ಗುರುತಿನ ಚೀಟಿಯನ್ನು ತೋರಿಸಿ ದಿನದ ಅಥವಾ ತಿಂಗಳ ಪಾಸ್ ನ್ನು ಪಡೆಯಬೇಕು. ಹೀಗೆ ಪಾಸ್ ಉಳ್ಳವರಿಗೆ ಮಾತ್ರ ಸಂಚಾರಕ್ಕೆ ಅನುಮತಿ ನೀಡಲಾಗಿದೆ.
ಕೆಎಸ್ಆರ್ಟಿಸಿ ಮುಂಗಡ ಬುಕ್ಕಿಂಗ್ ಆರಂಭ; ಮಾರ್ಗದ ವಿವರಗಳು
60 ವರ್ಷದ ವೃದ್ಧರು, 10 ವರ್ಷದೊಳಗಿನ ಮಕ್ಕಳಿಗಿಲ್ಲ ಅನುಮತಿ
ಕೆಎಸ್ಆರ್ ಟಿಸಿ ಹಾಗೂ ಬಿಎಂಟಿಸಿ ಬಸ್ ಸಂಚಾರವೇನೋ ಆರಂಭವಾಗಿದೆ. ಆದರೆ ಆರಂಭಿಕ ಹಂತದಲ್ಲಿ 10 ವರ್ಷದೊಳಗಿನ ಮಕ್ಕಳು ಹಾಗೂ 60 ವರ್ಷದಿಂದ ಮೇಲ್ಪಟ್ಟವರು ಹಾಗೂ ಗರ್ಭಿಣಿಯರ ಪ್ರಯಾಣಕ್ಕೆ ಅನುಮತಿ ನಿರಾಕರಿಸಲಾಗಿದೆ. ಅನಗತ್ಯ ಪ್ರಯಾಣ ಮಾಡದಂತೆ ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೇ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಡ್ಡಾಯ
ಪ್ರಯಾಣಿಕರು ಬಸ್ ಗಳಲ್ಲಿ ಸಂಚರಿಸುವ ಸಂದರ್ಭದಲ್ಲಿ ನಿಯಮವನ್ನು ಪಾಲನೆ ಮಾಡಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸುವುದರ ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಬೆಳಗ್ಗೆ 7 ರಿಂದ ಸಂಜೆ ರಾತ್ರಿ 7 ಗಂಟೆವರೆಗೂ ಮಾತ್ರ ವಾಹನ ಸಂಚಾರಕ್ಕೆ ಅನುಮತಿ ನೀಡಲಾಗಿದೆ.